Advertisement

ದೇಗುಲಗಳು ಸರಕಾರದ ಮುಷ್ಟಿಯಿಂದ ಹೊರಬರಲಿ

12:02 AM Oct 21, 2021 | Team Udayavani |

ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂಬ ವಿಚಾರ ಈಗ ಹೆಚ್ಚು ಚರ್ಚಿತ ವಾಗುತ್ತಿದೆ. ಸರಕಾರಿ ನಿಯಂತ್ರಣದಲ್ಲಿರುವ ದೇವಸ್ಥಾನಗಳಲ್ಲಿ ಸರಕಾರಗಳ ನಡವಳಿಕೆ ಮತ್ತು ಹಿಂದೂ ದೇವಸ್ಥಾನಗಳ ಪೂಜಾ ಸ್ಥಳಗಳ ದುರವಸ್ಥೆ ಇತ್ಯಾದಿಗಳು ಜನರ ಆತಂಕಕ್ಕೆ ಕಾರಣಗಳಾಗಿರುವ ಅಂಶಗಳನ್ನು ಗಮನಿಸಬೇಕಾಗುತ್ತದೆ. ಕರ್ನಾಟಕದ ದೇವಸ್ಥಾನಗಳ ಮತ್ತು ಹಿಂದೂ ಧಾರ್ಮಿಕ ಸ್ಥಳಗಳ ಬಗ್ಗೆ ಸರಕಾರ ಯಾವುದೇ ತೀರ್ಮಾನಕ್ಕೆ ಬರುವುದಕ್ಕಿಂತ ಮೊದಲು ಕೆಲವೊಂದು ಅಂಶಗಳನ್ನ ಗಮನಿಸಬೇಕಾಗಿರುತ್ತದೆ. ಕರ್ನಾಟಕದಲ್ಲಿ ಕೆಲವೊಂದು ದೇವಸ್ಥಾನಗಳು ಖಾಸಗಿ ಟ್ರಸ್ಟ್‌ಗಳ, ಮಠಗಳ ಮತ್ತು ಮನೆತನಗಳ ಆಡಳಿತದಲ್ಲಿ ಇರುತ್ತದೆ. ಸರ್ವೆಸಾಮಾನ್ಯವಾಗಿ ಇಂತಹ ದೇವಸ್ಥಾನಗಳು ಸುಸ್ಥಿತಿಯಲ್ಲಿವೆ. ಶ್ರೀಕ್ಷೇತ್ರ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆದಿಚುಂಚನಗಿರಿ, ಉಡುಪಿ ಮಠ ಮೊದಲಾದ ದೇವಸ್ಥಾನ, ಧಾರ್ಮಿಕ ಸ್ಥಳಗಳು ಪ್ರತ್ಯಕ್ಷ ಉದಾಹರಣೆಗಳಾಗಿವೆ.

Advertisement

ಸರಕಾರದ ನಿಯಂತ್ರಣದಲ್ಲಿ ಇರುವಂತಹ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಕಾನೂನಿನ ಅನ್ವಯ ಇರುವ ಹೆಚ್ಚಿನ ದೇವಾಲಯಗಳ ಸ್ಥಿತಿಗತಿಗಳು, ದೇವಾಲಯಗಳ ಅರ್ಚಕರ ಮತ್ತಿತರ ಸಿಬಂದಿ ಸ್ಥಿತಿ, ಭಕ್ತರಿಗೆ ಕಲ್ಪಿಸಿರುವ ಮೂಲ ಸೌಕರ್ಯಗಳು ತೀರಾ ಕಳಪೆ ಮಟ್ಟದಲ್ಲಿದೆ. ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಕಾನೂನು 1997, ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಹಲವೊಂದು ವಿಧಿಗಳನ್ನು ಕಾನೂನಿನಲ್ಲಿ ಅಳವಡಿಸಿರುತ್ತದೆ. ಜಿಲ್ಲಾಮಟ್ಟದ ಧಾರ್ಮಿಕ ಪರಿಷತ್ತು ಮತ್ತು ರಾಜ್ಯಮಟ್ಟದ ಧಾರ್ಮಿಕ ಪರಿಷತ್ತುಗಳನ್ನು ರಚಿಸಿ ದೇವಸ್ಥಾನಗಳ ಆಡಳಿತವನ್ನು ನಡೆಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಎಲ್ಲ ಆಡಳಿತವನ್ನು ಧಾರ್ಮಿಕ ಪರಿಷತ್ತುಗಳ ಮೂಲಕ ನಡೆಸಲು ಈ ಕಾನೂನಿನಲ್ಲಿ ಸೂಚಿಸಲಾಗಿದೆ. ಧಾರ್ಮಿಕ ಪರಿಷತ್ತುಗಳ ರಚನೆಯ ಸಂದರ್ಭ ದಲ್ಲಿ ಕೆಲವೊಂದು ಸೂಕ್ಷ್ಮತೆಯ ವಿಧಿಗಳನ್ನು ಅಳ ವಡಿಸಲಾಗಿದೆ. ಸಮಗ್ರ ಹಿಂದೂ ಸಮಾಜವನ್ನು ಸ್ಥಳೀಯ ಮತ್ತು ರಾಜ್ಯಮಟ್ಟದಲ್ಲಿ ರಚಿಸಲು ಈ ಕಾನೂನಿನಲ್ಲಿ ಅವಕಾಶ ಗಳಿವೆ. ಅಲ್ಲದೆ ಕಾನೂನಿನಲ್ಲಿ ದೇವಸ್ಥಾನಗಳ ಆಡಳಿತಕ್ಕೆ ಪ್ರತ್ಯೇಕ ಸ್ಥಳೀಯ ಕಮಿಟಿಗಳನ್ನು ರಚಿಸುವ ಮಾರ್ಗಸೂಚಿ ಗಳಿವೆ. ದೇವಸ್ಥಾನದ ಆದಾಯವನ್ನು ಬಳಸುವ ಸಂದರ್ಭದಲ್ಲಿ ಸ್ಪಷ್ಟವಾದಂತಹ ಆದ್ಯತೆಗಳ ಪಟ್ಟಿಯನ್ನು ಮಾಡಲಾಗಿದೆ. ಉದಾತ್ತವಾದಂತಹ ವಿಧಿಗಳೊಂದಿಗೆ ಈ ಕಾನೂನನ್ನು ರಚಿಸಲಾಗಿದ್ದರೂ ದೇವಸ್ಥಾನಗಳನ್ನು, ದೇವಸ್ಥಾನಗಳ ಸ್ವತ್ತುಗಳನ್ನು, ಹುಂಡಿ ಹಣಗಳ ದುರುಪಯೋಗ ನಿರಂತರವಾಗಿ ನಡೆಯುತ್ತಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ದತ್ತಿಸಂಸ್ಥೆಗಳ ಕಾನೂನು, ವಕ್ಫ್ ಬೋರ್ಡ್‌ ಆಕ್ಟ್ ಗಿಂತ ತೀರ ಭಿನ್ನವಾಗಿದೆ. ಮುಸ್ಲಿಮರ ಧಾರ್ಮಿಕ ಸ್ಥಳಗಳ ಬಗ್ಗೆ ರಚಿತಗೊಂಡಿರುವಂತಹ ವಕ್ಫ್ ಬೋರ್ಡ್‌ ಆ್ಯಕ್ಟ್‌ನಲ್ಲಿ ಪರಮಾಧಿಕಾರ ವೆಲ್ಲವೂ ಮುಸ್ಲಿಂ ಮತೀಯರಿಂದ ರಚಿಸಲ್ಪಡುವ ಬೋರ್ಡ್‌ಗೆ ಸೇರಿರುತ್ತದೆ. ಆದರೆ ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾನೂನಿನಲ್ಲಿ ವ್ಯವಸ್ಥೆಗಳ ಸಂಪೂರ್ಣ ನಿಯಂತ್ರಣ ಸರಕಾರಿ ಅಧಿಕಾರಿಗಳ ಕೈಗೆ ಕೊಡಲಾಗಿದೆ. ವಕ್ಫ್ ಆ್ಯಕ್ಟ್‌ನಲ್ಲಿ ಮುಸ್ಲಿಂ ಧಾರ್ಮಿಕ ಸ್ಥಳಗಳ ರಕ್ಷಣೆಗೆ ಮತ್ತು ಸ್ಥಳಗಳ ಸರ್ವೇ ಇತ್ಯಾದಿಗಳನ್ನ ಸರಕಾರಿ ವೆಚ್ಚದಲ್ಲಿ ಮಾಡುವ ವಿಧಿಗಳಿವೆ. ಆದರೆ ಕರ್ನಾಟಕ ಹಿಂದೂ ಧಾರ್ಮಿಕ ಸ್ಥಳ ಮತ್ತು ದತ್ತಿ ಸ್ಥಳದ ಕಾನೂನಿನಲ್ಲಿ ಹಿಂದೂ ಧಾರ್ಮಿಕ ಸ್ಥಳಗಳ ರಕ್ಷಣೆ ಮತ್ತು ಸರ್ವೇಗಳಿಗೆ ಯಾವುದೇ ವಿಧಿಗಳನ್ನು ಅಳವಡಿಸಲಾಗಿಲ್ಲ.

ಕಾನೂನಿನಲ್ಲಿ ಧಾರ್ಮಿಕ ಪರಿಷತ್ತುಗಳನ್ನು ರಚಿಸುವಂತಹ ಅವಕಾಶವಿದ್ದರೂ ಬಹಳಷ್ಟು ಸಂದರ್ಭದಲ್ಲಿ ರಾಜ್ಯ ಸರಕಾರವು ಈ ಸಮಿತಿಗಳನ್ನು ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಕೆಲವೊಮ್ಮೆ ಈ ರೀತಿ ಪರಿಷತ್ತುಗಳು ರಚನೆಗೊಂಡರೂ ಹೆಸರಿಗೆ ಮಾತ್ರ ದಾಖಲೆಯಲ್ಲಿದ್ದು, ಸರಕಾರಿ ಅಧಿಕಾರಿಗಳು ಈ ಪರಿಷತ್ತುಗಳನ್ನು ಉಪೇಕ್ಷಿಸಿ ಎಲ್ಲ ತೀರ್ಮಾನಗಳನ್ನು ತೆಗೆದುಕೊಂಡು ಸರಕಾರದ ಅನುಮೋದನೆಯನ್ನು ಪಡೆಯುತ್ತಿದ್ದಾರೆ.
ಸರ್ವೆಸಾಮಾನ್ಯವಾಗಿ ರೆವಿನ್ಯೂ ಜಿಲ್ಲಾಧಿಕಾರಿ, ರೆವಿನ್ಯೂ ತಹಶೀಲ್ದಾರ್‌ಗಳನ್ನೇ ಮುಜರಾಯಿ ಅಧಿಕಾರಿ ಗಳನ್ನಾಗಿ ಮಾಡಿರುವುದು ಹೆಚ್ಚಿನ ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟ ಕಡತಗಳು ನನೆಗುದಿಗೆ ಬೀಳುವುದು ಸ್ವಾಭಾವಿಕ ವಾಗಿರುತ್ತದೆ. ಹಲವು ಮುಜರಾಯಿ ಕಾನೂನಿನ ಕೆಳಗಡೆ ಇರುವಂತಹ ಹಿಂದೂ ದೇವಾಲಯಗಳು ಹೀನಾಯ ಸ್ಥಿತಿಯಲ್ಲಿದ್ದರೂ ಆ ದೇವಾಲಯದ ಪುನರುತ್ಥಾನ ಮತ್ತು ಜೀರ್ಣೋದ್ಧಾರದ ಕಾರ್ಯಗಳನ್ನು ಕೈಗೊಳ್ಳದೆ, ಸರಕಾರಿ ಸ್ವಾಮ್ಯದ ದೇವಾಲಯಗಳ ಅರ್ಚಕ ಮತ್ತಿತರ ಸಿಬಂದಿ ವರ್ಗಕ್ಕೆ ಸರಿಯಾದ ವೇತನವನ್ನು ಕೊಡದೆ, ರಾಜ್ಯ ಬೊಕ್ಕಸಕ್ಕೆ ಸೇರುವ ಹುಂಡಿ ಹಣವನ್ನು ಹಿಂದೂಯೇತರ ಸಂಸ್ಥೆಗಳಿಗೆ ಅನುದಾನವನ್ನು ಕೊಡುವ ಪ್ರಕ್ರಿಯೆ ನಡೆದುಬಂದಿದೆ.

ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

Advertisement

ಈ ಎಲ್ಲ ವಿಚಾರಗಳಿಗೆ ಅನುಗುಣವಾಗಿ ಸರಕಾರಿ ಅಧೀನ ದಲ್ಲಿರುವ ದೇವಾಲಯಗಳನ್ನು ಮುಕ್ತಗೊಳಿಸುವ ವಿಷಯದಲ್ಲಿ ಹಲವು ಸವಾಲುಗಳು ಇವೆ. ಸರಕಾರಿ ನಿಯಂತ್ರಣದಲ್ಲಿರುವ ಕೆಲವು ದೇವಸ್ಥಾನಗಳು ಅಥವಾ ಧಾರ್ಮಿಕ ಸಂಸ್ಥೆಗಳಾದ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂ ಬಿಕೆ ಮೊದಲಾದ ದೇವಾ ಲಯ ಗಳನ್ನು ಸಂಪೂರ್ಣ ವಾಗಿ ಖಾಸಗಿ ಒಡೆತನಕ್ಕೆ ಕೊಡಲು ಅಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಮುಜರಾಯಿ ದೇವಸ್ಥಾನ ಗಳನ್ನು ಸರಕಾರದ ನೇರ ಆಡಳಿತದಿಂದ ಮುಕ್ತಗೊಳಿಸಿ ಸಾರ್ವಜನಿಕರ ಹಿತಗಳನ್ನ ರಕ್ಷಿಸಿ ಹಿಂದೂ ಪರಂಪರೆಗಳನ್ನ ರಕ್ಷಿಸಿ, ದೇವಸ್ಥಾನಗಳ ಸಂರಕ್ಷಣೆ ಮತ್ತು ಬೆಳವಣಿಗೆಗಳ ಏಕಮಾತ್ರ ಸೂತ್ರವೇನೆಂದರೆ, ಹಿಂದೂ ಧಾರ್ಮಿಕ ದತ್ತಿ ಕಾಯ್ದೆಗೆ ಸಮಗ್ರವಾದ ತಿದ್ದುಪಡಿ ತಂದು ವಕ್ಫ್ ಆ್ಯಕ್ಟ್ 1995ರ ಸರಿ ಸಮಾ ನ ವಾದ ವಿಧಿಗಳನ್ನು ಒಳಗೊಂಡ ಕಾನೂನು ರಚಿಸಬೇಕು.

ದೇವಾಲಯಕ್ಕೆ ಸಂಬಂಧಪಟ್ಟ ಎಲ್ಲ ತೀರ್ಮಾನಗಳನ್ನು ಧಾರ್ಮಿಕ ಪರಿಷತ್ತುಗಳು ತೆಗೆದುಕೊಳ್ಳುವಂತೆ ಆಗಬೇಕು. ಸರಕಾರಿ ಅಧಿಕಾರಿಗಳ ಪ್ರಭುತ್ವವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಮುಜರಾಯಿ ಇಲಾಖೆಯನ್ನು ಕಂದಾಯ ಇಲಾಖೆಯಿಂದ ಪ್ರತ್ಯೇಕಿಸಿ, ಪ್ರತ್ಯೇಕ ಅಧಿಕಾರ ವರ್ಗಗಳನ್ನು ನೇಮಿಸಬೇಕು. ಹಿಂದೂ ದೇವಾಲಯಗಳ ಆದಾಯವನ್ನು ವೆಚ್ಚ ಮಾಡುವಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಉಡುಪಿಯ ಅಂಬಲಪಾಡಿ ಮಹಾಕಾಳಿ ದೇವಸ್ಥಾನದ ವಿಷಯ ದಲ್ಲಿ ಕೊಟ್ಟಿರುವ ತೀರ್ಮಾನದ ಅನ್ವಯ ವಿನಿ ಯೋಗಿಸ ಬೇಕಾಗಿರುತ್ತದೆ. ದೇವಸ್ಥಾನಗಳ ಕಾಣಿಕೆ ಹಣವನ್ನು ವಿನಿಯೋಗಿಸುವ ಬಗ್ಗೆ ಅಂಬಲಪಾಡಿ ದೇವಸ್ಥಾನದ ಖಟ್ಲೆಯಲ್ಲಿ ಸ್ಪಷ್ಟವಾದ ನಿರ್ದೇಶನಗಳಿವೆ. ದೇವಸ್ಥಾನಗಳ ಸ್ವತ್ತುಗಳ ಸಂರಕ್ಷಣೆ ಮತ್ತು ಆದಾಯದ ಸದ್ವಿನಿಯೋಗದ ಜತೆ ದೇವಸ್ಥಾನಗಳ ಮೂಲಕ ಹಿಂದೂ ಧರ್ಮ ರಕ್ಷಣೆ, ಪ್ರಸಾರಕ್ಕೆ ವಕ್ಫ್ ಆ್ಯಕ್ಟ್ 1995ರಲ್ಲಿ ವಕ್ಫ್ ಬೋರ್ಡಿಗೆ ಕೊಟ್ಟಿರುವಂತಹ ಸ್ವಾತಂತ್ರÂಗಳನ್ನು ಧಾರ್ಮಿಕ ಪರಿಷತ್ತುಗಳಿಗೆ ಕೊಡಬೇಕು. ದೇವಸ್ಥಾನ ಹಾಗೂ ದೇವಸ್ಥಾನದ ಸ್ವತ್ತುಗಳ ರಕ್ಷಣೆ ಹಾಗೂ ಉಳಿಸಿ, ಬೆಳೆಸುವಲ್ಲಿ ಧಾರ್ಮಿಕ ಪರಿಷತ್ತುಗಳ ತೀರ್ಮಾನವೇ ಅಂತಿಮವಾಗಬೇಕು. ಇದರಲ್ಲಿ ಸರಕಾರ ಅಥವಾ ಅಧಿಕಾರಿಗಳ ಹಸ್ತಕ್ಷೇಪ ನಿಲ್ಲಬೇಕು.

ಹಿಂದೂ ಧಾರ್ಮಿಕ ಪರಿಷತ್ತನ್ನು ರಚಿಸುವ ವೇಳೆ ಹಿಂದೂ ಧಾರ್ಮಿಕ ಸ್ವತ್ತುಗಳ ವಿವಾದದ ಬಗ್ಗೆ ನ್ಯಾಯ ತೀರ್ಮಾನಕ್ಕೆ ವಕ್ಫ್ ಆ್ಯಕ್ಟ್ ಮಾದರಿಯಲ್ಲಿ ಪ್ರತ್ಯೇಕ ನ್ಯಾಯಾಲಯಗಳನ್ನು ರಚಿಸಬೇಕು. ಹಿಂದೂ ಧಾರ್ಮಿಕ ಪರಿಷತ್ತನ್ನು ರಚಿಸುವ ವೇಳೆ ಧರ್ಮಶ್ರದ್ಧೆಯ ಹಿಂದೂಗಳನ್ನು ಮಾತ್ರ ಸೇರಿಸಬೇಕು. ಈ ರೀತಿ ಕಾನೂನಿನ ತಿದ್ದುಪಡಿ ಮತ್ತು ಅನುಷ್ಠಾನದಿಂದ ಮಾತ್ರ ಸಾರ್ವಜನಿಕ ಹಿಂದೂ ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆ ಸಾಧ್ಯವಾಗುತ್ತದೆ.

-ಒ. ಶಾಮಭಟ್‌
ಹಿರಿಯ ವಕೀಲರು

Advertisement

Udayavani is now on Telegram. Click here to join our channel and stay updated with the latest news.

Next