Advertisement

ಗ್ರಾಮೀಣರ ಬ್ಯಾಂಕ್‌ ಉಳಿಯಲಿ

09:57 AM Nov 20, 2019 | mahesh |

ಸಿಂಡಿಕೇಟ್‌ ಬ್ಯಾಂಕ್‌ ಅಪಾರವಾದ ಜನ ಬೆಂಬಲವನ್ನು ಸಂಪಾದಿಸಿತ್ತು. ನಮ್ಮ ಬ್ಯಾಂಕ್‌ ಎಂಬ “ಫೀಲಿಂಗ್‌’ ಅನ್ನು ಜನ ಹೊಂದಿದ್ದರು. ಆದರೆ ಈಗ ಬ್ಯಾಂಕ್‌ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮಾಜಿ ಉದ್ಯೋಗಿಗಳೂ ಸೇರಿ ಸಾಕಷ್ಟು ಮಂದಿ ಬ್ಯಾಂಕ್‌ ವಿಲೀನದ ಕುರಿತಾದ ಅಭಿಪ್ರಾಯವನ್ನು ಪತ್ರಿಕೆಯ ಜತೆಗೆ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ನೀಡಲಾಗಿದೆ.

Advertisement

ಜನಮಾನಸದಲ್ಲಿ ಬೆಳೆದ ಬ್ಯಾಂಕ್‌
ನಮ್ಮ ಜಿಲ್ಲೆ ಮಾತ್ರವಲ್ಲ, ಕರ್ನಾಟಕ ರಾಜ್ಯವಷ್ಟೇ ಅಲ್ಲ ಇಡೀ ಭಾರತ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗಳನ್ನು ಜನಸಾಮಾನ್ಯರ ಬಳಿಗೆ ಒಯ್ದು ಬಂದುದರ ಮಹತ್ತಾದ ಉದಾಹರಣೆಯೆಂದರೆ ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಜನಸಾಮಾನ್ಯರ ಹಿತಕ್ಕಾಗಿ ಅಹರ್ನಿಶಿ ದುಡಿದ ಬ್ಯಾಂಕ್‌ ಎಂಬುವುದು ಚಿರಕಾಲ ಉಳಿಯಬೇಕಾದ ಸಂಗತಿ. ಇದಕ್ಕಾಗಿ ಕೇಂದ್ರ ಸರಕಾರ ಇತರ ಬ್ಯಾಂಕ್‌ಗಳ ವಿಲೀನ ಮಾಡುವಾಗ ಸಾಮಾನ್ಯವಾಗಿ ಮಾಡಿದಂತೆ ಸಿಂಡಿಕೇಟ್‌ ಬ್ಯಾಂಕನ್ನು ವಿಲೀನ ಮಾಡದೇ ಸಿಂಡಿಕೇಟ್‌ ಬ್ಯಾಂಕ್‌ ಸ್ವತಂತ್ರವಾಗಿ ಇರುವಂತೆ ಮಾಡಬೇಕು. ಆಗ ಜನಸಾಮಾನ್ಯರ, ರೈತರ, ಸಣ್ಣ ಉದ್ದಿಮೆಗಳ ಏಳ್ಗೆಗಾಗಿ ಆ ಬ್ಯಾಂಕ್‌ ಕೊಟ್ಟ ಸೇವೆಗಳ ಭವ್ಯ ಪರಂಪರೆಯನ್ನು ದೇಶದ ಹಿತಕ್ಕಾಗಿ ಉಳಿಸಿ ಬೆಳೆಸುವಂತಾಗುತ್ತದೆ.

ಡಾ| ಟಿ. ಎಂ. ಎ. ಪೈಗಳ ಪಿಗ್ಮಿ ಡಿಪಾಜಿಟ್‌ ಯೋಜನೆ ಮತ್ತು ಮುಂದೆ ಕೇಂದ್ರ ಸರಕಾರದ ಅಥವಾ ರಿಸರ್ವ್‌ ಬ್ಯಾಂಕಿನ ಕಾನೂನುಗಳ ಮಿತಿಗಳನ್ನು ಮೀರಿ, ಟಿ. ಎ. ಪೈ ಯವರು ಪ್ರಾರಂಭಿಸಿದ ರೈತರಿಗೆ ಸಾಲ ಯೋಜನೆಗಳು ಭಾರತದಲ್ಲಿನ ಅಂದಿನ ಪರಿಸ್ಥಿತಿಯಲ್ಲಿ ಅತ್ಯಧಿಕ ಧೈರ್ಯದ ಮತ್ತು ಜನಸಾಮಾನ್ಯರನ್ನು ನೇರವಾಗಿ ಬ್ಯಾಂಕಿಂಗ್‌ ವ್ಯವಸ್ಥೆಗಳಲ್ಲಿ ತರುವ ಸಾಧನಗಳಾದವು. ಮುಂದೆ ಕೇಂದ್ರ ಸರಕಾರ ಮತ್ತು ರಿಸರ್ವ್‌ ಬ್ಯಾಂಕುಗಳು, ದೇಶದ ಇನ್ನಿತರ ಬ್ಯಾಂಕುಗಳು ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಬ್ಯಾಂಕಿಂಗ್‌ ಕಾನೂನುಗಳನ್ನು ತಿದ್ದುಪಡಿ ಮಾಡುವಂತಾಯಿತು. ಅಲ್ಲದೇ ಬ್ಯಾಂಕ್‌ ರಾಷ್ಟ್ರೀಕರಣ ಬಳಿಕ ರಿಸರ್ವ್‌ ಬ್ಯಾಂಕಿನವರು ಇತರ ಬ್ಯಾಂಕುಗಳಿಗೆ ನಿಯಮಿತವಾಗಿ ಇಂತಿಷ್ಟೇ ಶೇಕಡಾವಾರು ಸಾಲಗಳನ್ನು ರೈತರಿಗೆ ನೀಡುವಂತೆ ಒತ್ತಾಸೆ ಮಾಡುವಂತಾಯಿತು. ಈ ವಿಷಯಗಳಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಮುಂಚೂಣಿಯಲ್ಲಿತ್ತು ಎಂಬುವುದು ನಿರ್ವಿವಾದ.

ಬಸ್ತಿ ವಾಮನ ಶೆಣೈ, ನಿವೃತ್ತ ಸಿಂಡಿಕೇಟ್‌ ಬ್ಯಾಂಕ್‌ ಮ್ಯಾನೇಜರ್‌
ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ ಮಂಗಳೂರು

ಸಿಂಡಿಕೇಟ್‌: ಭಾವನಾತ್ಮಕ ಸಂಬಂಧ
1969ರಲ್ಲಿ ರಾಷ್ಟ್ರೀಕರಣಗೊಂಡ 14 ಬೃಹತ್‌ ಬ್ಯಾಂಕ್‌ಗಳಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಕೂಡಾ ಒಂದು. ಬ್ಯಾಂಕ್‌ನ ಸ್ಥಾಪಕರಲ್ಲಿ ಓರ್ವರಾದ ಡಾ| ಟಿ. ಎಂ. ಎ. ಪೈ ಪ್ರಾರಂಭಿಕ ಹಂತದಿಂದಲೂ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರೀತಿ ತಂದೆ-ಮಗಳ ಸಂಬಂಧದಂತೆ ಇತ್ತು. ರಾಷ್ಟ್ರೀಕರಣಗೊಂಡ ಆರಂಭಿಕ ದಿನಗಳಲ್ಲಿ ಡಾ| ಪೈಯವರ ನಿಕಟವರ್ತಿಗಳು ರಾಷ್ಟ್ರೀಕರಣದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ “ಈ ಬ್ಯಾಂಕನ್ನು ಮಗಳಂತೆ ಮಮತೆಯಿಂದ ಬೆಳೆಸಿದ್ದೇನೆ. ಮಗಳು ಬೆಳೆದು, ಮದುವೆಗೆ ಅರ್ಹ ವಯಸ್ಸಿನವಳಾದಾಗ ಅವಳು ಗಂಡನ ಮನೆಗೆ ಹೋಗುವುದು ಸಹಜ. ಮಗಳನ್ನು ಗಂಡನ ಮನೆಗೆ ಕಳುಹಿಸಿದ ಸಂತೃಪ್ತಿ ನನಗಾಗಿದೆ’ ಎಂದಿದ್ದರು. ನಮ್ಮ ಜಿಲ್ಲೆಯ ಗಣ್ಯರನೇಕರು ಬ್ಯಾಂಕಿನ ಹೆಸರು, ಗುರುತು ಉಳಿಯುವಂತಾಗಲಿ ಎಂಬ ತಮ್ಮ ಅನಿಸಿಕೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರೊಂದಿಗೆ ನಾನೂ ಧ್ವನಿಗೂಡಿಸುತ್ತೇನೆ.

Advertisement

ಎನ್‌. ಯೋಗೀಶ್‌ ಭಟ್‌, ಮಾಜಿ ಶಾಸಕರು, ಮಾಜಿ ಉಪಸಭಾಧ್ಯಕ್ಷರು

ಪ್ರಥಮ ಜನಪರ ಬ್ಯಾಂಕ್‌
ದೇಶದ ಆರ್ಥಿಕ ಸುಧಾರಣೆಗಾಗಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಬಗ್ಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ವಿರೋಧವಿಲ್ಲ. ಆದರೆ ಜನರಿಗೆ ಉತ್ತಮ ಸೇವೆ ನೀಡುತ್ತಾ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಸಿಂಡಿಕೇಟ್‌ ಬ್ಯಾಂಕ್‌ ವಿಲೀನದ ಬಗ್ಗೆ ಬೇಸರವಿದೆ. 1960ರಲ್ಲೇ ಕೃಷಿಕರಿಗೆ ಸಾಲ, ಪಿಗ್ಮಿ ಯೋಜನೆಯ ಮೂಲಕ ಹಣ ಸಂಗ್ರಹ, ಕೌಶಲಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಆರಂಭಿಸಿದ್ದು ಸಿಂಡಿಕೇಟ್‌ ಬ್ಯಾಂಕ್‌. ಇಂತಹ ಜನಪರ ಯೋಜನೆಗಳನ್ನು ಆರಂಭಿಸಿದ ಬ್ಯಾಂಕ್‌ ಇಂದು ವಿಲೀನವಾಗುತ್ತಿರುವ ಬಗ್ಗೆ ವಿಷಾದವಿದೆ. ಮಣಿಪಾಲದಂತಹ ಗ್ರಾಮೀಣ ಭಾಗದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ಬ್ಯಾಂಕ್‌ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಟ್ಟಿದೆ. ಅವಿಭಜಿತ ದ.ಕ. ಜಿಲ್ಲೆಯ ಜನರು ಭಾವನಾತ್ಮಕವಾಗಿ ನಂಟನ್ನು ಹೊಂದಿರುವ ಈ ಬ್ಯಾಂಕ್‌ ಬಗ್ಗೆ ಇಲ್ಲಿನ ಜನರಿಗೆ ಹೆಮ್ಮೆ ಇದೆ. ಹಾಗಾಗಿ ಇಲ್ಲಿನ ಜನರ ಭಾವನೆಗಳಿಗೆ ಬೆಲೆ ಕೊಟ್ಟು ನಿರ್ಧಾರವನ್ನು ಬದಲಾಯಿಸುವ ಕೆಲಸವಾಗಬೇಕಾಗಿದೆ.

ಕೆ.ಟಿ. ರೈ, ನಿವೃತ್ತ ಜನರಲ್‌ ಮ್ಯಾನೇಜರ್‌, ಸಿಂಡಿಕೇಟ್‌ ಬ್ಯಾಂಕ್‌

ಪುನಃಪರಿಶೀಲನೆ ಅಗತ್ಯ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆ ಎನಿಸಿರುವ ಸಿಂಡಿಕೇಟ್‌ ಬ್ಯಾಂಕ್‌ನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರ ಖಂಡನೀಯ. ತೋನ್ಸೆ ಉಪೇಂದ್ರ ಪೈ, ಡಾ| ಟಿ.ಎಂ.ಎ. ಪೈಯವರಿಂದ ಸ್ಥಾಪಿಸಲ್ಪಟ್ಟು ಬಳಿಕ ಟಿ.ಎ.ಪೈ, ಕೆ.ಕೆ ಪೈಯವರಿಂದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ ಸಿಂಡಿಕೇಟ್‌ ಬ್ಯಾಂಕ್‌ನ ಅಸ್ತಿತ್ವವನ್ನೇ ಇಲ್ಲವಾಗಿಸಲು ಮುಂದಾಗಿರುವುದು ಸರಿಯಲ್ಲ. ಗ್ರಾಮಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಪ್ರದೇಶಾಭಿವೃದ್ಧಿಗೆ ತನ್ನದೇ ಕೊಡುಗೆಯನ್ನು ನೀಡಿದೆಯಲ್ಲದೆ ಲಕ್ಷಾಂತರ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶ ನೀಡಿದೆ. ಸಣ್ಣ ಉಳಿತಾಯ ಕ್ಷೇತ್ರದಲ್ಲಿ ಪಿಗ್ಮಿ ಸಂಗ್ರಹ ಎಂಬ ಪರಿಕಲ್ಪನೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇದರದ್ದು.ಲಕ್ಷಾಂತರ ಕುಟುಂಬಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿ ಬದುಕು ಕಲ್ಪಿಸಿದ ಮತ್ತು ಉದ್ಯೋಗ ನೀಡಿದ ಸಿಂಡಿಕೇಟ್‌ ಬ್ಯಾಂಕ್‌ನ ಸಾರ್ವಭೌಮತೆಗೆ ಧಕ್ಕೆಯಾಗುವುದನ್ನು ಸಹಿಸಲಾಗದು. ಕೇಂದ್ರ ಸರಕಾರ ಕೂಡಲೇ ತನ್ನ ನಿರ್ಧಾರವನ್ನು ಪುನಃ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಇಬ್ಬರು ಸಂಸದರ ವಿರುದ್ಧ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ.

ಯು.ಆರ್‌. ಸಭಾಪತಿ, ಮಾಜಿ ಶಾಸಕರು,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next