Advertisement

ರೈತರ ಏಳ್ಗೆಗೆ ವರ್ತಕರು ಕೈ ಜೋಡಿಸಲಿ

03:21 PM Sep 29, 2018 | Team Udayavani |

ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೇ ರೈತರ ಏಳ್ಗೆಗೆ ಸರ್ಕಾರದೊಂದಿಗೆ ವರ್ತಕರು ಕೈಜೋಡಿಸಬೇಕೆಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್‌. ಪ್ರಕಾಶ ಕಮ್ಮರಡಿ ಹೇಳಿದರು. 

Advertisement

ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಮತ್ತು ಗುಲಬರ್ಗಾ ದಾಲ್‌ ಮಿಲ್ಲರ್ ಅಸೋಸಿಯೇಷನ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಎಪಿಎಂಸಿ ವರ್ತಕರ ಹಾಗೂ ರೈತರ “ಭಾವಾಂತರ ಯೋಜನೆ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಅವರು
ಮಾತನಾಡಿದರು.

ರೈತರೊಂದಿಗೆ ಸದಾ ಇರುವಂತದ್ದು ವರ್ತಕರ ವರ್ಗ. ಈ ನಿಟ್ಟಿನಲ್ಲಿ ವರ್ತಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತೂಂದು ಸುತ್ತಿನ ಸಭೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ರೈತರು ಅನೇಕ ಸಮಸ್ಯೆಗಳಿಂದ ದಿನದಿಂದ ದಿನಕ್ಕೆ ತತ್ತರಿಸುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆಯಲ್ಲಿ ರೈತ ಬೆಳೆದಂತಹ ಬೆಳೆಗಳನ್ನು ಖರೀದಿಸುತ್ತದೆ. ಸರ್ಕಾರ ನಿಗದಿ ಮಾಡುವ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ವರ್ತಕರು ರೈತರ ಬೆಳೆಗಳನ್ನು ಖರೀದಿಸುವುದು ಮಾರುಕಟ್ಟೆಯ ಧರ್ಮವಾಗಿದೆ. ಮಾರುಕಟ್ಟೆಗೆ ಬಂದ ಅನ್ನದಾತನ ಉತ್ಪನ್ನ ಖರೀದಿಸುವ ಮೂಲಕ ರೈತರ ರಕ್ಷಣೆಗೆ ಸರ್ಕಾರದ ಜೊತೆಗೆ ವರ್ತಕರು ಕೈಜೋಡಿಸುವುದು ಅತ್ಯಗತ್ಯವಾಗಿದೆ ಎಂದರು. 

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರ್ಕಾರ 257 ಲಕ್ಷ ಕ್ವಿಂಟಲ್‌ ದ್ವಿದಳ ಧಾನ್ಯಗಳನ್ನು ಖರೀದಿಸಲಾಗಿದ್ದು, ಇದರಲ್ಲಿ 6 ಸಾವಿರ ರೂ. ಬೆಂಬಲ ಬೆಲೆಯಲ್ಲಿ 1.20 ಲಕ್ಷ ರೈತರಿಂದ 32 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇದೊಂದು ದಾಖಲೆಯಾಗಿದೆ ಎಂದರು.

Advertisement

ಭಾವಾಂತರ ಯೋಜನೆ ಶೀಘ್ರ ಜಾರಿ: ಬೆಂಬಲ ಬೆಲೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗುವ ನಡುವಿನ ವ್ಯತ್ಯಾಸದ ಹಣ ರೈತರ ಬ್ಯಾಂಕ್‌ ಖಾತೆಗೆ ತುಂಬುವ ಕೇಂದ್ರ ಸರ್ಕಾರದ ಭಾವಾಂತರ ಯೋಜನೆ ರಾಜ್ಯದಲ್ಲಿ ಶೀಘ್ರದಲ್ಲೇ ಅನುಷ್ಠಾನಕ್ಕೆ
ತರಲಾಗುವುದು ಎಂದರು. 

ಕೇಂದ್ರದಿಂದ ಹೊಸ ಫಾರ್ಮುಲಾ: ಕೇಂದ್ರ ಸರ್ಕಾರ ಎಲ್ಲ ಯೋಜನೆಗಳ ಹೊರತಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಹೊಸ ಫಾರ್ಮುಲಾ ತಂದಿದ್ದು, ಉತ್ಪನ್ನಗಳನ್ನು ಸರ್ಕಾರ 40ರಷ್ಟು ಖರೀದಿಸಿದರೆ, ವರ್ತಕರು ಶೇ.60ರಷ್ಟು ಉತ್ಪನ್ನಗಳನ್ನು ಖರೀದಿಸಬೇಕೆಂಬುವುದಾಗಿದೆ. ಇದರ ಪ್ರಕಾರ ವರ್ತಕರು ಖರೀದಿಸುವ ಉತ್ಪನ್ನಗಳಿಗೆ ಶೇ.15ರಷ್ಟು ಕಮಿಷನ್‌ ಸರ್ಕಾರದಿಂದಲೇ ಸಿಗುತ್ತದೆ. ಇದಕ್ಕೆ ಯಾವುದೇ ಷರತ್ತುಗಳು ಇರುವುದಿಲ್ಲ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ನೇರ ಮಾರುಕಟ್ಟೆಯಿಂದ ರೈತರು ಮತ್ತು ವರ್ತಕರಿಗೂ ಅನ್ಯಾಯವಾಗುತ್ತಿದೆ. ರೈತರ ಎಲ್ಲ ಉತ್ಪನ್ನಗಳು ಮಾರುಕಟ್ಟೆಗೆ ನೇರ ಸರಬರಾಜು ಆಗಬೇಕಿದ್ದು,
ಯಾವುದೇ ಉತ್ಪನ್ನ ಮಾರುಕಟ್ಟೆ ಮೂಲಕವೇ ಮಾರಾಟವಾಗಬೇಕು. ಆಗ ಮಾತ್ರ ರೈತರ ಉತ್ಪನ್ನದ ಬಗ್ಗೆ ಸರಿಯಾದ ಲೆಕ್ಕ ಸಿಗುತ್ತದೆ ಎಂದರು.

ಆಮದಿಗೆ ಕಡಿವಾಣ ಹಾಕಬೇಕು: ವಿದೇಶಗಳಿಂದ ಬೇಳೆ ಕಾಳು ಆಮದು ಮಾಡಿಕೊಳ್ಳುತ್ತಿರುವುದು ರೈತರ ಸಮಸ್ಯೆಯ ಮೂಲ ಎಂದು ರೈತ ಮುಖಂಡ ಮಾರುತಿ ಮಾನ್ಪಡೆ ಹೇಳಿದರು. 

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಅಧ್ಯಕ್ಷ ಬಸವರಾಜ ಜವಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್‌, ಎಪಿಎಂಸಿ ಕಾರ್ಯದರ್ಶಿ ಎಂ.ಎಸ್‌.ರಾಜಶ್ರೀ, ಶರಣ ಬಸಪ್ಪ ಪಪ್ಪಾ, ಬಸವರಾಜ ಇಂಗಿನ್‌, ಸೋಮನಾಥ ಜೈನ್‌, ಚಿದಂಬರ ಪಾಟೀಲ್‌, ಶಿವಕುಮಾರ ಘಂಟಿ, ಸಿದ್ದರಾಮಪ್ಪ ಪಾಟೀಲ್‌, ಬಿ.ಬಿ. ಶೆಟಗಾರ, ಎಸ್‌.ಎಸ್‌. ಪಾಟೀಲ ಹಾಗೂ ಕಲಬುರಗಿ, ರಾಯಚೂರು, ಗದಗ, ಬೀದರ್‌, ಯಾದಗಿರಿ, ಕೊಪ್ಪಳ ಜಿಲ್ಲೆಗಳ ರೈತರು ಹಾಗೂ ವರ್ತಕರು ಪಾಲ್ಗೊಂಡಿದ್ದರು.

ದೂರದ ಬೆಟ್ಟ ಕಣ್ಣಿಗೆ ಚೆಂದ ಭಾವಾಂತರ ಯೋಜನೆ ಎನ್ನುವುದು ದೂರದ ಬೆಟ್ಟವಿದ್ದಂತೆ. ಅದು ಕಣ್ಣಿಗೆ ಚೆಂದ ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ಹೇಳಿದರು. ಭಾವಾಂತರ ಯೋಜನೆ ಜಾರಿಗೆ ತರಬೇಕೆಂದೇ ಒತ್ತಾಯಿಸಲು ನಡೆದ ಸಮಾವೇಶದಲ್ಲಿ ಭಾವಾಂತರ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಮಧ್ಯಪ್ರದೇಶದಲ್ಲಿ ಶೇ.25ರಷ್ಟು ರೈತರಿಂದ ಮಾತ್ರ ಉತ್ಪನ್ನ
ಖರೀದಿಸಲಾಗಿದೆ. ಬೆಂಬಲ ಬೆಂಬಲ ಯೋಜನೆ ಮತ್ತು ಭಾವಾಂತರ ಯೋಜನೆಗೆ ಹೋಲಿಕೆ ಆಗೋದಿಲ್ಲ. ಈ ಯೋಜನೆ ಬಗ್ಗೆ ಸೂಕ್ತ ಅಧ್ಯಯನ ಮಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next