Advertisement

ಸಮೃದ್ಧವಾದ ಅರಣ್ಯಗಳು ಬೆಳೆಯಲಿ

04:21 PM Jun 05, 2020 | mahesh |

ಒಬ್ಬ ಮನುಷ್ಯ ಒಂದು ವರ್ಷ ಕಾಲ ನಿರಾಳವಾಗಿ ಉಸಿರಾಡಬೇಕಿದ್ದರೆ ಅದಕ್ಕಾಗಿ ಬರೋಬ್ಬರಿ ಎಂಟು ಮರಗಳು ಆಮ್ಲಜನಕ ಬಿಡುಗಡೆ ಮಾಡಿ ಅವನಿಗೆ ಒದಗಿಸಬೇಕು. ಅಂದರೆ ಒಬ್ಬ ವ್ಯಕ್ತಿಯ ಒಂದು ವರ್ಷದ ಜೀವಿತಾವಧಿ ಎಂಟು ಮರಗಳ ಮೇಲೆ ನಿರ್ಧರಿಸಲ್ಪಡುತ್ತದೆ! ಮರಕ್ಕೂ ಮನುಷ್ಯನ ಜೀವಕ್ಕೂ ಇರುವ ಅವಿನಾಭಾವ ಸಂಬಂಧ ಇದು.

Advertisement

ಆದರೆ ದುರಂತ ನೋಡಿ, ಕೈಗಾರೀಕರಣ, ನಗರೀಕರಣ ಎಂಬ ಆಧುನಿಕತೆಯತ್ತ ಧಾಪುಗಾಲು ಹಾಕುತ್ತಿರುವ ಭರದಲ್ಲಿ ಮನುಷ್ಯ ತನ್ನ ಪ್ರಾಣಪ್ರಾಯವೇ ಆದ ಮರಗಳನ್ನು ನಾನಾ ಕಾರಣಕ್ಕೆ ಕಡಿಯುತ್ತಿದ್ದಾನೆ. ಹೀಗೆ ಒಂದು ವರ್ಷಕ್ಕೆ ಕಡೆಯಲ್ಪಡುತ್ತಿರುವ ಮರಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ಇದು ಕೇವಲ ಒಂದು ಅಂದಾಜಿನ ಅಂಕಿ ಅಷ್ಟೇ! ಇದರ ಘೋರ ಪರಿಣಾಮವನ್ನು ಅರಿತರೆ ಎದೆ ಢವಗುಟ್ಟಿ, ಉಸಿರು ಕಟ್ಟಿದಂತಾಗುತ್ತದೆ.

ಹಾಗೆ ನೋಡಿದರೆ ಪ್ರಕೃತಿ ಸರ್ವ ಜೀವಕುಲಕ್ಕೂ ಜೀವ ಭಿಕ್ಷೆಯನ್ನು ಒದಗಿಸುವಂತದ್ದು. ಆದರೆ ಮನುಷ್ಯನ ಉದ್ದಟತನಕ್ಕೆ ಎಲ್ಲೆ ಎನ್ನುವುದೇ ಇಲ್ಲ. ಪ್ರಕೃತಿಯನ್ನು ದಿನೇ ದಿನೇ ಹಾಳುಗೆಡವುತ್ತಾ ತಾನೇ ವಿನಾಶಕ್ಕೆ ಎದುರಾಗಿ ಓಡುತ್ತಿದ್ದಾನೆ. ಇದರಿಂದಾಗಿ ವಾಯು ಮಾಲಿನ್ಯ, ಜಲ ಮಾಲಿನ್ಯ ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮವನ್ನು ಬೀರುತ್ತಿದೆ.

ಕೇವಲ ಮರಗಳಷ್ಟೇ ಅಲ್ಲದೇ, ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ತಳ ಬರಿದಾಗುವಂತೆ ಅಗಿಯುತ್ತಿರುವುದು, ಅಗತ್ಯಕ್ಕಿಂತ ಹೆಚ್ಚು ಬಳಸಿ ಹಾಳುಗೆಡುವುತ್ತಿರುವುದು ಆತಂಕಕಾರಿ. ಮುಂದಿನ ಪೀಳಿಗೆ ಬದುಕುಳಿಯಲು ಅತ್ಯವಶ್ಯಕವಾಗುವಷ್ಟು ಸಂಪನ್ಮೂಲವನ್ನು ಸಹ ನಾವು ಉಳಿಸಬಲ್ಲೆವು ಎಂಬ ಭರವಸೆಯೂ ಉಳಿದಿಲ್ಲ. ಅನೇಕ ಜೀವರಾಶಿ ಮತ್ತು ಅರಣ್ಯ ಸಂಪತ್ತಿಗೆ ಹೆಸರುವಾಸಿಯಾದ ನಮ್ಮ ಭಾರತದ ಪಶ್ಚಿಮ ಘಟ್ಟದ ಕಾಡುಗಳಂತೂ ಮೊದಲಿನ ವಿಸ್ತೀರ್ಣದಲ್ಲಿಲ್ಲ. ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ನಮ್ಮ ರಾಜಕೀಯ ವ್ಯವಸ್ಥೆಯತ್ತಲೇ ಬೆಟ್ಟು ಮಾಡಿ ತೋರಿಸಬೇಕಾದದ್ದು ನಾಚಿಕೆಯ ಸಂಗತಿ.

ಇಂತಹ ಬೆಳವಣಿಗೆಯ ಗಂಭೀರತೆಯನ್ನು ಮನಗಂಡ ಪರಿಸರವಾದಿ ಸಂಘ, ಸಂಸ್ಥೆಗಳು ಮರಗಳನ್ನು ಉಳಿಸಿ, ಬೆಳೆಸುವ ಪಣ ತೊಟ್ಟು ನಿಂತಿವೆ. ಅದರ ಒಂದು ಭಾಗವಾಗಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳನ್ನು ನೆಟ್ಟು ಸಾಮಾಜಿಕ ಪ್ರಜ್ಞೆಬೆಳೆಸುತ್ತಿದೆ. ಆದರೆ ಇದೊಂದೇ ಪರಿಸರವನ್ನು ರಕ್ಷಿಸಬಹುದಾ? ಖಂಡಿತ ಇಲ್ಲ. ಎಲ್ಲಿಯವರೆಗೆ ಪ್ರತಿಯೊಬ್ಬ ಮನುಷ್ಯ ಪ್ರಕೃತಿಯ ಬಗ್ಗೆ ವಿಶೇಷ ಕಾಳಜಿ ವಹಿಸಲಾರನೋ ಅಲ್ಲಿಯವರೆಗೂ ಪ್ರಕೃತಿಯ ಮೇಲಾಗುವ ಹಾನಿ ಕಡಿಮೆಯಾಗಲಾರದು.

Advertisement

ಕೇವಲ ಪರಿಸರ ದಿನಕಷ್ಟೇ ನಮ್ಮ ಕಾಳಜಿ ಸೀಮಿತವಾಗಿರದೇ ಜೀವನದ ವಿಧಾನವಾಗಿ ರೂಪುಗೊಳ್ಳಬೇಕು. ಮುಖ್ಯವಾಗಿ ಇಂದಿನ ಜನಾಂಗಕ್ಕೆ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ. ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸುವುದು, ಮರಗಳನ್ನು ಉಳಿಸುವುದು, ಪರಿಸರ ಮಾಲಿನ್ಯ ತಡೆಗಟ್ಟುವ ಉಪಾಯಗಳನ್ನು ತಿಳಿ ಹೇಳುವುದು ಅವಶ್ಯ.

ಕುಟುಂಬದವರ, ಆತ್ಮೀಯರ ಹುಟ್ಟು ಹಬ್ಬ ಮುಂತಾದ ವಿಶೇಷ ದಿನಗಳ ನೆನಪಿಗಾಗಿ ಮನೆಯ ಮುಂದೆ ಗಿಡ ನೆಟ್ಟು ಬೆಳೆಸುವುದು ಅಥವಾ ಗಿಡಗಳನ್ನು ದತ್ತು ಪಡೆದು ಬೆಳೆಸುವುದು ಚಂದದ ಆಚರಣೆಯಾಗಬಲ್ಲದು. ಈ ನೆಪದಲ್ಲಿ ಮನೆಗೊಂದು ಮರ ಎನ್ನುವ ಘೋಷಣೆಯೂ ಅರ್ಥವನ್ನು ಪಡೆಯುತ್ತದೆ. ಒಟ್ಟಾರೆ ಪರಿಸರ ಸಂರಕ್ಷಣೆ ಕೇವಲ ನಮ್ಮ ಉದ್ಘೋಷವಾಗಿ ಉಳಿಯದೇ ಕ್ರಿಯೆಯಾಗಿ ಚಾಲ್ತಿಗೆ ಬಂದಾಗ ಮಾತ್ರ ನಾವೇ ನಮ್ಮ ಅಳಿವನ್ನು ತಡೆಯಬಹುದೇನೋ.

ಕವಿತಾ ಭಟ್‌, ಮಾಸ್ತಿಕಟ್ಟೆ ಕುಮಟಾ

Advertisement

Udayavani is now on Telegram. Click here to join our channel and stay updated with the latest news.

Next