Advertisement

ಸೈನಿಕರ ಮೇಲಿನ ಗೌರವ ಹೆಚ್ಚಾಗಲಿ: ಎಎಸ್‌ಪಿ ಕುಮಾರಚಂದ್ರ

12:43 AM Jul 28, 2019 | Team Udayavani |

ಉಡುಪಿ: ಸೈನಿಕರ ಮೇಲಿನ ಗೌರವ ಹೆಚ್ಚಾಗಬೇಕು ಎಂದು ನಿವೃತ್ತ ಸೇನಾಧಿಕಾರಿ, ಉಡುಪಿಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಹೇಳಿದ್ದಾರೆ.

Advertisement

ಜು. 27ರಂದು ಸಂಚಲನ ಟ್ರಸ್ಟ್‌ ಹಾಗೂ ಉನ್ನತಿ ಕ್ಯಾರಿಯರ್‌ ಅಕಾಡೆಮಿ ಸಹಯೋಗದಲ್ಲಿ ಮಣಿಪಾಲದ ಮಣ್ಣಪಳ್ಳದಲ್ಲಿ ಜರಗಿದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವ ಕೊಡುವುದು ಮಾತ್ರವೇ ತ್ಯಾಗವಲ್ಲ, 18 ವರ್ಷಕ್ಕೆ ಸೈನ್ಯ ಸೇರಿ 32 ವರ್ಷಗಳ ಕಾಲ ತನ್ನ ಕುಟುಂಬ, ಯೌವನವನ್ನು ದೇಶಕ್ಕಾಗಿ ತ್ಯಾಗ ಮಾಡುತ್ತಾನೆ. ಇದು ದೊಡ್ಡ ತ್ಯಾಗ. ದೇಶದ ಬಗ್ಗೆ ಗೌರವ ಇರುವವರು ಸೈನಿಕರಿಗೂ ಗೌರವ ನೀಡುತ್ತಾರೆ ಎಂದು ಕುಮಾರಚಂದ್ರ ಹೇಳಿದರು.

‘ರೈಲಿನಲ್ಲಿ ಜನರಿಂದಲೇ ಒದೆ’

ಜಮ್ಮುವಿನ ರೈಲು ನಿಲ್ದಾಣಗಳಲ್ಲಿ ಓಡಾಡುವುದೇ ಕಷ್ಟ. ಅಂದಿನ ದಿನಗಳಲ್ಲಿ ಅಲ್ಲಿ ರಾತ್ರಿ ಒಂದೇ ರೈಲಿನ ಓಡಾಟವಿತ್ತು. ಒಮ್ಮೆ ನಾವು 6 ಮಂದಿ ಸೈನಿಕರು ಟಾಯ್ಲೆಟ್‌ನಲ್ಲೇ ನಿಂತು ಜಮ್ಮುವಿನಿಂದ ಹೊಸದಿಲ್ಲಿವರೆಗೆ ಪ್ರಯಾಣ ಮಾಡಿದ್ದೆವು. ಇನ್ನೊಮ್ಮೆ ಖಾಲಿ ಜಾಗದಲ್ಲಿ ಪೇಪರ್‌ ಹಾಕಿ ಮಲಗಿದ್ದೆ. ನಾವು ಸಮವಸ್ತ್ರದಲ್ಲೇ ಇದ್ದೆವು. ಆದರೆ ಕುಟುಂಬ ಸಮೇತವಾಗಿ ಪ್ರಯಾಣಿಸುತ್ತಿದ್ದ ನಾಗರಿಕರೊಬ್ಬರು ನನ್ನನ್ನು ತುಳಿದು ಅಲ್ಲಿಂದ ಎಬ್ಬಿಸಿದ್ದರು. ಸೈನಿಕರ ಕಷ್ಟವನ್ನು ಹೇಳಿ ವಿವರಿಸುವಷ್ಟು ಸುಲಭವಿಲ್ಲ. ಅಂದು ಒಂದು ಪೋನ್‌ನಲ್ಲಿ 2 ನಿಮಿಷ ಮಾತನಾಡುವುದಕ್ಕಾಗಿ ಸೆಟ್ಲೈಟ್ ಪೋನ್‌ನ ಎದುರು ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಎಂದು ಎಎಸ್‌ಪಿ ಕುಮಾರಚಂದ್ರ ತಮ್ಮ ಅನುಭವ ಹಂಚಿಕೊಂಡರು.

Advertisement

ನಿಸ್ವಾರ್ಥ ಸೇವೆ

ನಿವೃತ್ತ ಸೇನಾಧಿಕಾರಿಗಳ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷಡಾ| ಎಫ್.ಇ.ಎ ರೋಡ್ರಿಗಸ್‌ ಮಾತನಾಡಿ ಸೈನಿಕರ ಸೇವೆ ಶ್ರೇಷ್ಠವಾದುದು. ಅಂತೆಯೇ ಪೊಲೀಸ್‌, ಅರಣ್ಯ ಇಲಾಖೆಯವರು ಸೇರಿದಂತೆ ಯಾರು ತಮ್ಮ ಕೆಲಸವನ್ನು ನಿಸ್ವಾರ್ಥವಾಗಿ ನಿಷ್ಠೆಯಿಂದ ಮಾಡುತ್ತಾರೋ ಅದು ಕೂಡ ದೇಶ ಸೇವೆಯೇ ಎಂದು ಹೇಳಿದರು.

ನಿವೃತ್ತ ಸೇನಾಧಿಕಾರಿ ಮೇಜರ್‌ ಸುಬೇದಾರ್‌ ಗಣಪಯ್ಯ ಶೇರಿಗಾರ್‌, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನಿವೃತ್ತ ಸೇನಾನಿ ಜಗದೀಶ್‌ ಪ್ರಭು ಹಿರಿಯಡಕ, ನಿರ್ಮಿತಿ ಕೇಂದ್ರದ ಇಂಜಿನಿಯರ್‌ ವಿಜಯ ಕುಮಾರ್‌ ಶೆಟ್ಟಿ, ಉನ್ನತಿ ಅಕಾಡೆಮಿಯ ನಿರ್ದೇಶಕಿ ಪೌರ್ಣಮಿ ಪ್ರೇಮಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು. ಸಂಚಲನ ಟ್ರಸ್ಟ್‌ ಅಧ್ಯಕ್ಷ ಪ್ರೇಮ ಪ್ರಸಾದ್‌ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಶ್ರಾವ್ಯಾ ಎಸ್‌.ಬಾಸ್ರಿ ಅವರು ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದಂತೆ ಪ್ರದೀಶ್‌ ಅವರು ವಿಜಯ್‌ ದಿವಸ್‌ ಸಂದೇಶ ಸಾರುವ ಚಿತ್ರ ಬಿಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಣಿಪಾಲ ಮೀಡಿಯಾ ನೆಟ್ವರ್ಕ್‌ ಲಿ.ನ ಸಿಇಒ ವಿನೋದ್‌ ಕುಮಾರ್‌ ಅವರು ಮಾತನಾಡಿ, ಸ್ವಾತಂತ್ರ್ಯ ಅನಂತರ ನಡೆದ ಯುದ್ಧಗಳಲ್ಲಿ ಕಾರ್ಗಿಲ್ ಯುದ್ದ ವಿಶಿಷ್ಟ ಮತ್ತು ಮಹತ್ವವಾದುದು. ಸೈನಿಕರಿಗೆ ದೇಶದ ಭದ್ರತೆಯೊಂದೇ ಗುರಿ. ಸೈನಿಕರು ಯುವಜನರಿಗೆ ಸ್ಫ್ಪೂರ್ತಿ. ನಮ್ಮ ದೈನಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಕೂಡ ಯಶಸ್ವಿಯಾಗಿ ಎದುರಿಸಲು ಸೈನಿಕರ ಹೋರಾಟ ನಮಗೆ ಪ್ರೇರಣೆಯಾಗಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next