Advertisement

ಪರೀಕ್ಷಾ ಅಕ್ರಮಗಳ ಬಗ್ಗೆ ಸರಕಾರ ಗಂಭೀರವಾಗಲಿ

12:48 AM Aug 24, 2022 | Team Udayavani |

ಪರೀಕ್ಷಾ ಅಕ್ರಮಗಳ ಬಗ್ಗೆ ಸರಕಾರ ಗಂಭೀರವಾಗಲಿರಾಜ್ಯದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ-ಅವ್ಯವ­ಹಾರ ಆರೋಪ ನಿರಂತರವಾಗಿ ಕೇಳಿಬರುತ್ತಿರುವುದು ಒಂದು ರೀತಿಯಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆ ಪ್ರಶ್ನೆ ಮಾಡುವಂತಾಗಿದೆ.

Advertisement

ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ, ಕೆಪಿಟಿಸಿಎಲ್‌ ಕಿರಿಯ ಸಹಾಯಕರ, ಶಿಕ್ಷಕರ ನೇಮಕಾತಿ ಪರೀಕ್ಷೆಗಳಲ್ಲಿ ಒಂದಲ್ಲ ಒಂದು ರೀತಿಯ ಅಕ್ರಮ, ಅವ್ಯವಹಾರ, ಲೋಪ ಆಗಿರುವುದು ಹೊರಬರುತ್ತಲೇ ಇದೆ.

ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಲೋಪ ಸರಿಪಡಿ­ಸುವ ಕಾರ್ಯಕ್ಕೆ ಮುಂದಾಗಲೇಬೇಕಾಗಿದೆ. ಇಲ್ಲದಿದ್ದರೆ ನೇಮಕಾತಿ ಎಂದರೆ ಅಕ್ರಮ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವಂತಾಗುತ್ತದೆ.

ಕರ್ನಾಟಕವಷ್ಟೇ ಅಲ್ಲದೆ ದೇಶದ ಹಲವೆಡೆಯೂ ಇದೇ ರೀತಿಯ ಅಕ್ರಮಗಳು ಆಗಿವೆ. ಆದರೂ ಕರ್ನಾಟಕದ ಮಟ್ಟಿಗೆ ಇತ್ತೀಚಿನ ನೇಮಕಾತಿ ಅಕ್ರಮದ ವಿದ್ಯಮಾನಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಅಭ್ಯರ್ಥಿಗಳ ಕನಸು, ಭವಿಷ್ಯಕ್ಕೆ ಮಾರಕ. ರಾಜ್ಯ ಸರಕಾರ ಪರೀಕ್ಷಾ ಅಕ್ರಮ ತಡೆಗಟ್ಟುವ ಬಗ್ಗೆ ಪ್ರತೀ ಸಂದರ್ಭದಲ್ಲೂ ಹೇಳುತ್ತಲೇ ಬಂದಿದೆ. ಆದರೆ ಸೂಕ್ತ ಹಾಗೂ ಕಠಿನ ಕ್ರಮಗಳ ಬಗ್ಗೆ ಹೆಚ್ಚು ಗಮನಹರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ವ್ಯವಸ್ಥೆ, ಜಾಮರ್‌ ಅಳವಡಿಕೆ, ತಪಾಸಣೆ, ನಿಗಾ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಏನೇ ಕ್ರಮ ಕೈಗೊಂಡರೂ ಅಕ್ರಮ ಎಸಗುವವರು ರಂಗೋಲಿ ಕೆಳಗೆ ನುಗ್ಗುವ ಪ್ರಯತ್ನ ಹಾಗೂ ಹಾದಿ ಕಂಡುಕೊಳ್ಳುತ್ತಿ­ದ್ದಾರೆ. ಮೊದಲು ನೇರ ಸಂದರ್ಶನ-ನೇಮಕಾತಿ ವ್ಯವಸ್ಥೆ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ ಪರೀಕ್ಷಾ ವ್ಯವಸ್ಥೆ ಜಾರಿಗೊಳಿಸಲಾಯಿತು. ಆದರೆ ಇದೂ ಸಹ ಅದೇ ಹಾದಿ ಹಿಡಿದಿರುವುದು ದುರಂತ.

Advertisement

ಪರೀಕ್ಷಾ ಅಕ್ರಮಗಳ ಅನುಭವದ ಆಧಾರದ ಮೇಲೆ ಅಕ್ರಮ ಎಸಗುವವರ ನಿಯಂತ್ರಣಕ್ಕೆ ರಾಜ್ಯ ಸರಕಾರ ಬದ್ಧತೆ ಪ್ರದರ್ಶನ ಮಾಡಬೇಕಾಗಿದೆ. ಇಚ್ಛಾಶಕ್ತಿ ತೋರಬೇಕಾಗಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಯಾವುದೇ ಪರೀಕ್ಷೆ ನಡೆದರೂ ಅಕ್ರಮ, ಅವ್ಯವಹಾರ ಆರೋಪ­ಗಳಿಂದಾಗಿ ಇಡೀ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಹುಟ್ಟಲು ಪ್ರಾರಂಭವಾಗುತ್ತದೆ.

ರಾಜ್ಯದಲ್ಲಿನ ಪರೀಕ್ಷಾ ಅಕ್ರಮಗಳ ಬಗ್ಗೆ ಕೇವಲ ಆರೋಪವಷ್ಟೇ ಅಲ್ಲ. ಅಕ್ರಮ ನಡೆದಿರುವುದು ಸಾಬೀತು ಆಗಿದೆ. ಅದಕ್ಕೆ ಪಿಎಸ್‌ಐ ಹಗರಣ ಸಾಕ್ಷಿ. ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳಲ್ಲಿ ಉತ್ತರಗಳನ್ನು ರಬ್‌ ಮಾಡುವುದಕ್ಕಾಗಿ ವೈಟ್‌ನರ್‌ ಬಳಸಿದ್ದಾರೆ ಎಂಬುದು ಪತ್ತೆಯಾಗಿದೆ.

ಇದೇ ಕಾರಣಕ್ಕೆ 61 ಮಂದಿಯ ಫ‌ಲಿತಾಂಶ ತಡೆ ಹಿಡಿಯಲಾಗಿದೆ. ಇದೆಲ್ಲವನ್ನೂ ನೋಡಿದರೆ ಅಕ್ರಮ ನಡೆಯುತ್ತಿರು­ವುದು ನಿಜ. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕ, ಕೆಪಿಟಿಸಿಎಲ್‌ ಕಿರಿಯ ಸಹಾಯಕ, ಶಿಕ್ಷಕರ ನೇಮಕಾತಿ, ಅದಕ್ಕೂ ಮುನ್ನ ಲೋಕೋಪಯೋಗಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಹುದ್ದೆಗಳ ನೇಮಕಾತಿ ವಿಚಾರದ­ಲ್ಲಿಯೂ ಇದೇ ರೀತಿ ಅಕ್ರಮದ ಬಗ್ಗೆ ಆರೋಪ ಕೇಳಿಬಂದಿತ್ತು.

ಕರ್ನಾಟಕ ಮೊದಲು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಹೆಸರಾ­ಗಿತ್ತು. ಆದರೆ ಇತ್ತೀಚೆಗಿನ ವಿದ್ಯಮಾನಗಳು ಕಳಂಕ ತರುವಂತಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಲೇಬೇಕು. ಸರಕಾರಿ ಹುದ್ದೆಗಳ ನೇಮಕಾತಿ­­ಗಾಗಿ ನಡೆಯುವ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next