ಉಡುಪಿ: ಉತ್ತಮ ಕೃತಿಗಳ ಮೂಲಕ ಸಮಾಜಕ್ಕೆ ಬೆಳಕು ನೀಡುವ ಕೆಲಸ ಆಗಬೇಕು. ಕಲೆ ಮತ್ತು ಶಿಕ್ಷಣದ ಮೂಲಕ ಮಕ್ಕಳು ಉತ್ತಮ ಸಾಧನೆ ಮಾಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ರವಿವಾರ ಯಕ್ಷಗಾನ ಕಲಾರಂಗದ ವತಿಯಿಂದ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಮಹಾದೇವ ಯಂಕ ಹಳ್ಳೇರ್ ಹೇಳಿದ ಕಥೆಯ ನ್ನಾಧರಿಸಿ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ “ಲೀಲಾವತಿ ಪರಿಣಯ’ ಯಕ್ಷಗಾನ ಪ್ರಸಂಗ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹೊಸ್ತೋಟ ಮಂಜುನಾಥ ಭಾಗವತರು ಮಾತನಾಡಿ, ಹಳ್ಳಿಯಲ್ಲಿರುವ ವ್ಯಕ್ತಿಗೆ ರಾಷ್ಟ್ರೀಯ ಪ್ರಜ್ಞೆ, ಸಾಮಾಜಿಕ ಚಿಂತನೆ ಬರುವುದು ತುಂಬಾ ಕಷ್ಟ. ಇಂತಹ ಅಪರೂಪದ ವಿಚಾರವಂತ, ಕ್ರಿಯಾಶೀಲ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಅಭಿನವ ಪ್ರಕಾಶನದ ರವಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನ ಉಳಿಸಿ, ಬೆಳೆಸುವ ಕೆಲಸ ಆಗಬೇಕು. ಕಾದಂಬರಿ, ಪ್ರವಾಸೋದ್ಯಮದಂತೆ ಯಕ್ಷಗಾನ ಪ್ರಸಂಗಗಳೂ ಪಠ್ಯರೂಪದಲ್ಲಿ ಪ್ರಕಟಗೊಳ್ಳಬೇಕು. ಇದರಿಂದ ಯಕ್ಷಗಾನದ ಬೆಳವಣಿಗೆ ಸಾಧ್ಯ ಎಂದರು.
ರಂಗಕರ್ಮಿ ಪ್ರೊ| ಉದ್ಯಾವರ ಮಾಧವ ಆಚಾರ್ಯ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಇದ್ದ ಸಮರ್ಥ ನಿರ್ದೇಶನದ ಕೊರತೆಯನ್ನು ನೀಗಿಸಿದವರು ಹೊಸ್ತೋಟ ಮಂಜುನಾಥ. ಯಕ್ಷಗಾನ ಕ್ಷೇತ್ರದ ಬೆಳವಣಿಗೆಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ವರದೇಶ ಹಿರೇಗಂಗೆ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.