Advertisement

ಆಡಳಿತ ಸುಗಮವಾಗಿ ಸಾಗಲಿ

11:01 PM Nov 28, 2019 | Team Udayavani |

ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರಲ್ಲೂ ತತ್ವ-ಸಿದ್ಧಾಂತಗಳು ಬೇರೆಯಾಗಿರುವ ಪಕ್ಷಗಳನ್ನೊಳಗೊಂಡಿರುವ ಸರಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆ ಎನ್ನುವುದಕ್ಕೆ ಕರ್ನಾಟಕದ್ದೇ ಇತ್ತೀಚೆಗಿನ ಉದಾಹರಣೆಯಿದೆ.

Advertisement

ಮಹಾರಾಷ್ಟ್ರದಲ್ಲಿ ಬಹುಮತದ ಸರಕಾರವೊಂದು ರಚನೆಯಾಗಿ ಚುನಾವಣೆ ಮುಗಿದ 35 ದಿನಗಳ ನೆಲೆಸಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಂತಾಗಿದೆ. ಶಿವಸೇನೆಯ ನೇತೃತ್ವದಲ್ಲಿ, ಎನ್‌ಸಿಪಿಯ ಮಧ್ಯಸ್ಥಿಕೆಯಲ್ಲಿ ರಚನೆಯಾಗಿರುವ ಮಹಾ ವಿಕಾಸ್‌ ಅಘಾಡಿ (ಎಂವಿಎ) ಎಂಬ ಹೊಸ ಮೈತ್ರಿಕೂಟದ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು, ಮುಖ್ಯಮಂತ್ರಿಯಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಕ್ರಮವಾಗಿ ದ್ವಿತೀಯ, ತೃತೀಯ ಮತ್ತು ಚತುರ್ಥ ಸ್ಥಾನಗಳನ್ನು ಗಳಿಸಿದ ಪಕ್ಷಗಳು ಜೊತೆಗೂಡಿ ಪ್ರಥಮ ಸ್ಥಾನ ಗಳಿಸಿದ ಪಕ್ಷವನ್ನು ಅಧಿಕಾರದಿಂದ ದೂರವಿಡುವಲ್ಲಿ ಸಫ‌ಲವಾಗಿವೆ. ಭಿನ್ನ ಸಿದ್ಧಾಂತಗಳುಳ್ಳ ಪಕ್ಷಗಳು ಎಂದು ಮಾತ್ರವಲ್ಲದೆ ಚುನಾವಣೆಯಲ್ಲಿ ಕಟ್ಟಾ ಎದುರಾಳಿಗಳಂತೆ ಕಾದಾಡಿದ ಪಕ್ಷ ಗಳು ಫ‌ಲಿತಾಂಶ ಪ್ರಕಟವಾದ ಬಳಿಕ ಪರಸ್ಪರ ಕೈಜೋಡಿಸಿದ ರಾಜಕೀಯ ಬೆಳವಣಿಗೆಯ ನೈತಿಕತೆಯ ಪ್ರಶ್ನೆಯೇನೆ ಇದ್ದರೂ ಈ ಮೈತ್ರಿಕೂಟ ಮಹಾ ರಾಷ್ಟ್ರದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ದೂರಗಾಮಿಯಾದ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಯಿದೆ.

ಮಹಾರಾಷ್ಟ್ರದ ರಾಜಕೀಯದಲ್ಲಿ ಸುಮಾರು ಅರ್ಧ ಶತಮಾನದಷ್ಟು ಕಾಲ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವ ಶಿವಸೇನೆಗೆ ಎರಡನೇ ಸಲ ರಾಜ್ಯ ಭಾರ ಮಾಡುವ ಅವಕಾಶ ಸಿಕ್ಕಿದೆ. ಇಷ್ಟು ಮಾತ್ರವಲ್ಲದೆ ಠಾಕ್ರೆ ಪರಿವಾರದ ಸದಸ್ಯರೊಬ್ಬರು ನೇರವಾಗಿಯೇ ಅಧಿಕಾರ ಸೂತ್ರವನ್ನು ಹಿಡಿಯುತ್ತಿರುವುದು ಈ ಸಲದ ವಿಶೇಷತೆಗಳಲ್ಲೊಂದು. ಈ ಮೂಲಕ ಠಾಕ್ರೆ ಪರಿವಾರದ ರಾಜ ಕೀಯ ಮಾತೋಶ್ರೀಯಿಂದ ಅಧಿಕಾರ ಕೇಂದ್ರವಾಗಿರುವ “ಮಂತ್ರಾಲಯ’ಕ್ಕೆ ವರ್ಗಾವಣೆಯಾದಂತಾಗಿದೆ. ಠಾಕ್ರೆ ಪರಿವಾರಕ್ಕೆ ರಾಜಕೀಯದ ಪಟ್ಟುಗಳು ಕರಗತವಾಗಿದ್ದರೂ ಆಡಳಿತ ನಡೆಸಿದ ನೇರ ಅನುಭವವಿಲ್ಲ. ಹೀಗಾಗಿ ಉದ್ಧವ ಠಾಕ್ರೆಯ ಆಡಳಿತ ಹೇಗಿರಬಹುದು ಎಂಬ ಕುತೂಹಲ ದೇಶಾದ್ಯಂತ ಇದೆ.

ಮಹಾರಾಷ್ಟ್ರ ಅತಿ ಹೆಚ್ಚು ಕೈಗಾರಿಕೀರಣಗೊಂಡಿರುವ ರಾಜ್ಯ ಮಾತ್ರವಲ್ಲದೆ ದೇಶದ ಆರ್ಥಿಕ ಚಟುವಟಿಕೆಗಳ ಕೇಂದ್ರ ಸ್ಥಾನವೂ ಹೌದು. ಮುಂಬಯಿಗೆ ವಾಣಿಜ್ಯ ರಾಜಧಾನಿ ಎಂಬ ಹಿರಿಮೆ ಇದೆ. ದೇಶದ ಜಿಡಿಪಿಗೆ ಶೇ. 15 ಕೊಡುಗೆ ಈ ರಾಜ್ಯದಿಂದ ಸಲ್ಲುತ್ತದೆ. ಇಂಥ ರಾಜ್ಯ ಬಹುಕಾಲ ರಾಜಕೀಯ ಅಸ್ಥಿರತೆ ಯಿಂದ ನಲುಗಿದರೆ ಅದರ ಪರಿಣಾಮ ಮಹಾರಾಷ್ಟ್ರದ ಮೇಲೆ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕತೆಯ ಮೇಲೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿರುವ ಪಕ್ಷಗಳು ಆಡಳಿತ ನಡೆಸುವಲ್ಲೂ ಇದೇ ಮಾದರಿಯನ್ನು ಮೇಲ್ಪಂಕ್ತಿಯಾಗಿರಿಸಿಕೊಂಡು ಮುಂದುವರಿಯಬೇಕು.

ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರಲ್ಲೂ ತತ್ವ-ಸಿದ್ಧಾಂತಗಳು ಬೇರೆಯಾಗಿರುವ ಪಕ್ಷಗಳನ್ನೊಳಗೊಂಡಿರುವ ಸರಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆ ಎನ್ನು ವುದಕ್ಕೆ ಕರ್ನಾಟಕದ್ದೇ ಇತ್ತೀಚೆಗಿನ ಉದಾಹರಣೆಯಿದೆ. ರಾಜಕೀಯ ವಿಶ್ಲೇಷಕರು ಇಂಥ ಮೈತ್ರಿಕೂಟವನ್ನು ಖೀಚಡಿ ಸರಕಾರ ಎಂದು ಕರೆಯುತ್ತಾರೆ. ಈ ಖೀಚಡಿ ಕೆಟ್ಟುಹೋಗದಂತೆ ನೋಡಿಕೊಳ್ಳುವ ಜಾಣ್ಮೆಯನ್ನು ಸರಕಾರದಲ್ಲಿ ಪಾಲು ದಾರಿಕೆ ಹೊಂದಿರುವ ಮೂರೂ ಪಕ್ಷಗಳು ತೋರಿಸಿದರೆ ಇಷ್ಟೆಲ್ಲ ಪರದಾಡಿ ಸರಕಾರ ರಚಿಸಿದ್ದಕ್ಕೆ ಸಾರ್ಥಕವಾಗಬಹುದು.

Advertisement

ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆಗೆ ಕೈಜೋಡಿಸುವ ಮೂಲಕ ಶಿವಸೇನೆ ರಾಜಕೀಯವಾಗಿ ದೊಡ್ಡ ರಿಸ್ಕನ್ನೇ ತೆಗೆದುಕೊಂಡಿದೆ. ಈ ಮೈತ್ರಿಯಿಂದ ದೊಡ್ಡ ಮಟ್ಟದ ಲಾಭ ಅಥವಾ ನಷ್ಟ ಆಗುವುದಿದ್ದರೆ ಅದು ಶಿವಸೇನೆಗೆ. ಉಳಿದಂತೆ ಎನ್‌ಸಿಪಿ ಕಿಂಗ್‌ಮೇಕರ್‌ ಆಗಿ ಮೆರೆಯಬಹುದು. ಕಾಂಗ್ರೆಸ್‌ಗೆ ಆದದ್ದೆಲ್ಲ ಲಾಭವೇ. ನಾಲ್ಕನೇ ಸ್ಥಾನಗಳಿಸಿಯೂ ಸರಕಾರದಲ್ಲಿ ಪಾಲುದಾರ ಪಕ್ಷವಾ ಗಲು ಅವಕಾಶ ಸಿಕ್ಕಿದ್ದು ಅದರ ಅದೃಷ್ಟವೆಂದೇ ಹೇಳಬೇಕು. ಬಿಜೆಪಿ ಕಟ್ಟುವ ದ್ರೋಹದ ಹಣೆಪಟ್ಟಿ, ಅಧಿಕಾರಕ್ಕಾಗಿ ಹಿಂದುತ್ವ ಕಾರ್ಯಸೂಚಿಯನ್ನು ಬಲಿ ಕೊಟ್ಟ ಆರೋಪ ಇತ್ಯಾದಿ ಟೀಕೆಗಳನ್ನು ಎದುರಿಸುವ ಸವಾಲು ಉದ್ಧವ ಠಾಕ್ರೆ ಮೇಲೆ ಇದೆ.

ಸರಕಾರ ರಚಿಸಲು ಎಲ್ಲ ಪಕ್ಷಗಳಿಗೆ ಇದ್ದದ್ದು ಬಿಜೆಪಿಯ ಭಯ ಎನ್ನುವುದು ರಹಸ್ಯ ಸಂಗತಿಯೇನಲ್ಲ. ಹಾಗೆಂದು ಈ ವಿಚಾರವನ್ನು ಅಭಿವೃದ್ಧಿಯ ವಿಚಾರಕ್ಕೆ ಎಳೆದು ತರುವುದು ಸರಿಯಾಗುವುದಿಲ್ಲ. ಹಿಂದಿನ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಹಲವಾರು ಬೃಹತ್‌ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಮುಂದುವರಿಸಲು ರಾಜಕೀಯ ವೈರ ಅಡ್ಡಿಯಾಗಬಾರದು. ಈಗಾಗಲೇ ಬುಲೆಟ್‌ ಟ್ರೈನ್‌ ಯೋಜನೆಗೆ ಹಣ ಕೊಡುವುದಿಲ್ಲ ಎಂಬಂಥ ಮಾತುಗಳನ್ನು ಮೈತ್ರಿಕೂಟದ ನಾಯಕರು ಹೇಳುತ್ತಿದ್ದಾರೆ. ಬುಲೆಟ್‌ ಟ್ರೈನ್‌ ಬಿಜೆಪಿಯ ಯೋಜನೆಯಲ್ಲ ಬದಲಾಗಿ ದೇಶಕ್ಕಾಗಿ ಇರುವ ಯೋಜನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಪರಸ್ಪರ ಸಹಕಾರ ಮನೋಭಾವ ಇರುವುದು ಬಹಳ ಅಗತ್ಯ. ಈ ನೆಲೆಯಲ್ಲಿ ಹೇಳುವುದಾದರೆ ಉದ್ಧವ ಠಾಕ್ರೆ ನೀಡುವ ಆಡಳಿತ ದೇಶದ ಮುಂದಿನ ರಾಜಕೀಯಕ್ಕೂ ದಿಕ್ಸೂಚಿಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next