Advertisement

ಕೇಸರಿ ಹೊಲಗಳ ತುಂಬಾ ಹೊಂಗನಸನ್ನೇ ಬೆಳೆಸೋಣ

01:09 AM Oct 06, 2021 | Team Udayavani |

ಕಾಶ್ಮೀರ ಮೊದಲೇ ಸುಂದರ. ಒಂದೊಂದುಭೂ ದೃಶ್ಯಗಳೂ ನಮ್ಮೊಳಗೆ ಅಚ್ಚೊತ್ತಿ ಕುಳಿತುಬಿಡುತ್ತವೆ. ಪ್ರತೀ ಕ್ಷಣದಲ್ಲೂ ಬದಲಾಗುವ ರಂಗುಗಳು ಹೊಸ ಲೋಕವನ್ನೇ ತೆರೆದು ಬಿಡುತ್ತವೆ. ನಿಜಕ್ಕೂ ಕಾಶ್ಮೀರ ಸ್ವರ್ಗ. ಬದುಕಿನಲ್ಲಿ ಒಮ್ಮೆ ನೋಡಲೇಬೇಕಾದ ನಮ್ಮದೇ ಊರು.

Advertisement

ಪೂಂಪೊರ್‌. ಮೂಲ ಹೆಸರು ಪದಮ್‌ ಪುರ್‌. ಇಂಗ್ಲಿಷಿನ ಲೆಕ್ಕಾಚಾರದಲ್ಲಿ ಪೊಂಪೊರ್‌ ಎನ್ನುವುದೂ ಉಂಟು. ಝೇಲಂ ನದಿಯ ಪೂರ್ವದಲ್ಲಿರುವಂಥದ್ದು. ಜಮ್ಮು ರಾಷ್ಟ್ರೀಯ ಹೆದ್ದಾರಿ ಬದಿಗೆ ಅಂಟಿಕೊಂಡಿದೆ. ಸುಮಾರು 20 ಸಾವಿರ ಜನಸಂಖ್ಯೆಯ ಊರು. ಪ್ರತೀ ಅಕ್ಟೋಬರ್‌ಗೆ ಈ ಊರಿಗೆ ಜನ ಬರುವವರಿದ್ದಾರೆ. ಅರಳಿರುವ ಕೇಸರಿ ಹೊಲಗಳನ್ನು ನೋಡಲು. ಪ್ರವಾಸೋದ್ಯಮದ ಒಂದು ಭಾಗವೂ ಹೌದು.

ಕೇಸರ್‌ ಅಥವಾ ಕೇಸರಿ ಬೆಳೆ ಯನ್ನು ಪುಲ್ವಾಮಾ, ಬುಡ್ಗಾಂ, ಶ್ರೀನಗರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಸುಮಾರು 2,500 ವರ್ಷಗಳಿಂದ ಬೆಳೆಯುತ್ತಿ ರುವ ಬೆಳೆ. ಸುಮಾರು 3,500 ಎಕ್ರೆ ಪ್ರದೇಶದಲ್ಲಿ ಬೆಳೆಯಲಾಗು ತ್ತದೆ. ಇಷ್ಟೆಲ್ಲ ಇದ್ದರೂ ಪೂಂಪೊರ್‌ನ ಕೇಸರಿಗೆ ಹೆಚ್ಚು ಬೆಲೆ. ಏನೋ ಗೊತ್ತಿಲ್ಲ. ಈ ಊರಿನ ಸುತ್ತಮು ತ್ತಲೂ (ಇನ್ನೂ ಕೆಲವು ಊರುಗ ಳಿವೆ ಹೊಂದಿಕೊಂಡು) ಸೇರಿದಂತೆ ಒಟ್ಟೂ ಮೂವತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬದುಕಿಗೆ ನಂಬಿಕೊಂಡಿರುವುದು ಈ ಕೇಸರಿ ಯನ್ನೇ. ಇರಾನಿನಲ್ಲೂ ಯಥೇತ್ಛ ವಾಗಿ ಕೇಸರಿಯನ್ನು ಬೆಳೆಯು ತ್ತಾರೆ. ಜಗತ್ತಿಗೆ ಪೂರೈಕೆಯಾಗುವ ಬಹುತೇಕ ಕೇಸರಿ ಇರಾನಿನದ್ದೇ. ಆದರೆ ಕಾಶ್ಮೀರದ ಕೇಸರಿಯ ಖದರ್‌ ಬೇರೆ. ಹೀಗಾಗಿಯೇ ಅದಕ್ಕೆ ಹೆಚ್ಚಿನ ಮೌಲ್ಯ. ಕೆಂಪು ಚಿನ್ನವೆಂದೂ ಕರೆಯವುದೂ ಇದೇ ಕಾರಣಕ್ಕೆ. ಅಂದ ಹಾಗೆ ಅಸಲಿ ಕೇಸರಿಗೆ ಒಂದು ಗ್ರಾಂ ಗೆ 200 ರೂ. ಗಳಿಂದ 350 ರೂ.ಗಳ ವರೆಗೂ ಇದೆ. ಗುಣಮಟ್ಟದ ಮೇಲೆ ಇನ್ನೂ ಹೆಚ್ಚಿನ ಬೆಲೆಯೂ ಇದೆ.

ಕೇಸರಿ ಬೆಳೆಗಾರರು, ಕನಿಷ್ಠ 1, 500-1,600 ಹೂಗ ಳನ್ನು (ಪ್ರತೀ ಹೂವಿನಲ್ಲೂ ಮೂರು ಕೇಸರಿ ಎಳೆಗಳು) ಸಂಗ್ರಹಿಸಿದರೆ ಒಂದು ಗ್ರಾಂ ಕೇಸರಿ ಸಿಗಬಹುದಂತೆ. ಒಂದು ಕೆ.ಜಿ.ಗೆ 1.50 ಲಕ್ಷ ಹೂವುಗಳು ಬೇಕು. ಹೂವು ಗಳಿಂದ ಕೇಸರಿ ಎಳೆಗಳನ್ನು ಬೇರ್ಪಡಿಸಲು ಯಂತ್ರಗಳು ಇಲ್ಲ. ಎಲ್ಲದಕ್ಕೂ ಮಾನವ ಕೂಲಿಯೇ ಅನಿವಾರ್ಯ. ಅದರಲ್ಲೂ ಮಹಿಳೆಯರದ್ದೇ ಪಾರುಪತ್ಯ.

“ಇದು ದೇವರು ಕೊಟ್ಟದ್ದು. ನಮಗೂ ಗೊತ್ತಿಲ್ಲ. ಬೇರೆಲ್ಲಿ ಬೆಳೆದರೂ ಇಷ್ಟೊಂದು ಗುಣಮಟ್ಟದ್ದು ಸಿಗದು.ಹಾಗಾಗಿಯೇ ದೇವರ ವರವ ಲ್ಲದೇ ಮತ್ತೇನೂ ಅಲ್ಲ’ ಎನ್ನುತ್ತಾರೆ ನಜೀರ್‌ ಅಹಮದ್‌.

Advertisement

ಈಗ ಇಂಥ ಕೆಂಪು ಚಿನ್ನದ ಮೇಲೂ ಹವಾಮಾನ ವೈಪರೀ ತ್ಯದ ಪರಿಣಾಮ ಬೀಳತೊಡಗಿದೆ. ನಿಧಾನವಾಗಿ ಕೇಸರಿ ಬೆಳೆಯೂ ಕಷ್ಟ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೊಸ ಸರಕಾರಗಳು, ಆಡಳಿತ ವ್ಯವಸ್ಥೆ ಇದರತ್ತ ಗಮನ ಹರಿಸಬೇಕು. ನಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಉಪಾಯ ಹುಡುಕಿ ಕೊಡಬೇಕು ಎನ್ನುತ್ತಾರೆ ಬೆಳೆಗಾರರು. ಕೇಸರಿ ಬಣ್ಣ ಕರಗದ ಹಾಗೆ ನೋಡಿಕೊಳ್ಳುವ ದೊಡ್ಡ ಹೊಣೆಗಾರಿಕೆ ಹೊಸ ಆಡಳಿತ ವ್ಯವಸ್ಥೆಯ ಮೇಲಿದೆ.

ಇನ್ನು ಸೇಬಿನ ಕಥೆ. ಅದಕ್ಕೂ ಈಗಲೇ ಕಾಲ. ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಸೇಬಿನ ಗಿಡಗಳೆಲ್ಲ ತೂಗುತ್ತಿರುತ್ತವೆ. ಇಡೀ ದೇಶಕ್ಕೇ ಕಾಶ್ಮೀರದ ಸೇಬುಗಳನ್ನು ಕಳುಹಿಸಲಾಗುತ್ತದೆ. ಬಹುತೇಕ ಬೆಳೆಗಾರರು ಸರಿ ಸುಮಾರು ಕನಿಷ್ಠ ನೂರು ಸೇಬಿನ ಗಿಡಗಳನ್ನಾದರೂ ಹೊಂದಿದ್ದಾರೆ. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಶೇಕ್‌ ಅಬ್ದುಲ್ಲಾ ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ.

ಅವರ ಅವಧಿಯಲ್ಲಿ ಜಾರಿಗೆ ಬಂದ “ಉಳುವವನೇ ಒಡೆಯ’ ಎಂಬ ನಿಯಮದಿಂದ ಹಲವರ ಬಾಳು ಬೆಳಗಿದೆ. ಸಿಕ್ಕ ಭೂಮಿಯಲ್ಲಿ ಸೇಬು ಸೇರಿದಂತೆ ಇತರ ತೋಟಗಾರಿಕೆ ಬೆಳೆಯನ್ನು ಬೆಳೆಯತೊಡಗಿದ್ದಾರೆ. ಇಲ್ಲಿಗೂ ಒಂದು ಸಮಗ್ರ ವ್ಯವಸ್ಥೆ ಬರಬೇಕು. ಇನ್ನಷ್ಟು ಬೆಳೆಯನ್ನು ಪ್ರೋತ್ಸಾಹಿಸುವ, ಬೆಳೆಗಾರರಿಗೆ ಸಹಾಯ ಸಿಕ್ಕರೆ ಒಳ್ಳೆಯದು ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ:ಚೀನಾ-ಪಾಕ್‌ ತಾಂತ್ರಿಕ ವಿನಿಮಯ ಕಳವಳಕಾರಿ‌: ಐಎಎಫ್ ಮುಖ್ಯಸ್ಥ

ಉಳಿದಂತೆ ಒಂದಿಷ್ಟು ಕುಟುಂಬಗಳು ಪ್ರವಾಸೋದ್ಯ ಮವನ್ನು ನೆಚ್ಚಿಕೊಂಡಿವೆ. ಅದು ಸೋನಾಮರ್ಗ್‌ ಇರಬಹುದು, ಪಹಲ್ಗಾಂ ಇರಬಹುದು, ಗುಲ್ಮಾರ್ಗ್‌ ಇರಬಹುದು, ಶ್ರೀನಗರವೇ ಇರಬಹುದು. ಇಲ್ಲೆಲ್ಲ ಜನರು ಪ್ರವಾಸಿಗರ ಬರುವಿಕೆಗೆ ಕಾಯುತ್ತಾರೆ. ಯಾವುದೇ ವ್ಯವಸ್ಥೆ ಬಂದರೂ ಪ್ರವಾಸೋದ್ಯಮವನ್ನು ಹಾಳುಮಾಡುವ ವ್ಯವಸ್ಥೆ ಬರಬಾರದು ಎಂಬುದಷ್ಟೇ ಹಲವರ ಕಾಳಜಿ.

“ನಾವು ನಂಬಿರುವುದು ಪ್ರವಾಸೋದ್ಯಮವನ್ನು. ಅದು ನಮಗೆ ಅನ್ನ ನೀಡುತ್ತದೆ. ಇವರ (ರಾಜಕಾರಣಿಗಳ) ಯಾವ ಅಭಿವೃದ್ಧಿಯೂ ಬೇಕಿಲ್ಲ. ಅದರಲ್ಲೂ ಇರುವು ದನ್ನು ಹಾಳು ಮಾಡುವಂಥದ್ದಂತೂ ಏನೂ ಬೇಡ. ಈಗ ನಿಧಾನವಾಗಿ ಪ್ರವಾಸಿಗರು ಬರತೊಡಗಿದ್ದಾರೆ. ಚಳಿಗಾಲ ದಲ್ಲಿ ನಮಗೆ ಯಾವ ಆಧಾರವೂ ಇಲ್ಲ. ಸುಮಾರು ಆರು ತಿಂಗಳು ಕಷ್ಟದಲ್ಲಿ ಜೀವನ ಸಾಗಿಸಬೇಕು. ಅದಕ್ಕೇ ನಾದರೂ ವ್ಯವಸ್ಥೆಯಾದರೆ ಸಾಕು’ ಎನ್ನುತ್ತಾರೆ ಪ್ರವಾಸಿ ಗರಿಗೆ ಕುದುರೆ ಸವಾರಿ ನಡೆಸುವ ಸೋನಾಮರ್ಗ್‌ನ ಮನ್ಸೂರ್‌ ಅಹಮದ್‌.

ಸೋನಾಮರ್ಗ್‌ನಲ್ಲಿ ಬಲ್ತಾಳ್‌ನಿಂದ ಮೀನಾ ಮಾರ್ಗದವರೆಗೆ ಸಂಪೂರ್ಣ ಪರ್ವತ ಪ್ರದೇಶ. 14 ಕಿ.ಮೀ. ಗಳಷ್ಟು ದೂರ 10 ಅಡಿಯಷ್ಟು ಹಿಮ ಶೇಖರಣೆಯಾಗುತ್ತದೆ. ತೆಗೆಯಲೂ ಆಗದು. ನವೆಂಬರ್‌ಗೆ ಹಿಮಪಾತ ಶುರುವಾದರೆ ಎಪ್ರಿಲ್‌ ಕೊನೆವರೆಗೂ ರಸ್ತೆಯೆಲ್ಲ ಬಂದ್‌. ಸೋನಾ ಮಾರ್ಗ್‌ ದಾಟಿ ಲೇಹ್‌ -ಲಡಾಖ್‌ಗೆ ಹೋಗಲಾಗದು. ಆಗ ಸುತ್ತಮುತ್ತಲಿನವರೆಲ್ಲ ಜಗತ್ತಿನ ಸಂಪರ್ಕವನ್ನೇ ಕಡಿದು ಕೊಳ್ಳುತ್ತಾರೆ. ವಾಸ್ತವವಾಗಿ ಕಾಶ್ಮೀರದಂಥ ಊರು ಚಳಿಗಾಲದಲ್ಲೇ ಚೆಂದ. ಭಾರತದ ಪ್ರವಾಸಿಗರೂ ಇಂಥ ಹಿಮದ ಸುಖ ಪಡೆಯಲೆಂದೇ ಯುರೋಪ್‌ಗೆ ಹೋಗುವುದುಂಟು. ಆದರೆ ನಮ್ಮಲ್ಲಿ ಹಿಮಪಾತ ವೆಂಬುದು ಬಿರುಗಾಳಿಯಂತಿರುತ್ತದೆ ಎನ್ನುತ್ತಾರೆ ಅಲ್ಲಿ ಸುರಂಗ ಮಾರ್ಗ ನಿರ್ಮಿಸುತ್ತಿರುವ ಎಂಇಐಎಲ್‌ನ ಎಂಜಿನಿಯರ್‌ ಒಬ್ಬರು.

ಜೊಲ್‌ ಜಿಲಾ ಸುರಂಗ ಮಾರ್ಗದಂಥ ಹಲವು ಸುರಂಗ ಮಾರ್ಗಗಳು ನಿರ್ಮಾಣವಾಗುತ್ತಿವೆ. ಕಾಶ್ಮೀರ ಕಣಿವೆಯಲ್ಲಿ ರಸ್ತೆ ಮತ್ತು ಸುರಂಗ ಮಾರ್ಗಗಳು ಅಭಿವೃದ್ಧಿಗೆ ಪೂರಕ. ಯಾಕೆಂದರೆ ಜೊಲ್‌ ಜಿಲ ಸುರಂಗ ಮಾರ್ಗ ಬಲ್ತಾಳ್‌ ನಿಂದ ಮೀನಾ ಮಾರ್ಗದವರೆಗೆ ಆಗಲಿದೆ. ಆಗ ವರ್ಷಪೂರ್ತಿ ಪ್ರವಾಸಿಗರು ಬರಬ ಹುದು. ರಸ್ತೆ ಮುಚ್ಚುವುದು ತಪ್ಪುತ್ತದೆ. ಹೀಗೆಯೇ ಪ್ರಸ್ತುತ ನಾವು ಶ್ರೀನಗರಕ್ಕೆ ಹೋದರೆ ಉಳಿದೆಲ್ಲ ಪ್ರವಾಸಿ ತಾಣಗಳಿಗೆ ಹೋಗಬೇಕೆಂದರೆ ವಾಪಸು ಶ್ರೀನಗರಕ್ಕೆ ಬರ ಲೇಬೇಕು. ಒಂದು ಊರಿನಿಂದ ಮತ್ತೂಂದು ಊರಿಗೆ ಹೋಗುವ ಮಾರ್ಗಗಳೇ ಇಲ್ಲ. ಅವೆಲ್ಲದಕ್ಕೂ ಸಂಪರ್ಕ ಕಲ್ಪಿಸುವಂಥ ಪ್ರಯತ್ನಗಳೂ ನಡೆದಿವೆ ಎಂಬುದು ಸರಕಾರದ ಘೋಷಣೆಗಳು. ಇವೆಲ್ಲವೂ ಕಾರ್ಯರೂಪಕ್ಕೆ ಬಂದರೆ ಒಳ್ಳೆಯದು. ಇದನ್ನು ಜಾರಿಗೊಳಿಸುವಾಗ ಪ್ರಕೃತಿಯ ವ್ಯವಸ್ಥೆಯನ್ನೂ ಗಮನದಲ್ಲಿಟ್ಟುಕೊಳ್ಳ ಬೇಕಾದುದು ಅವಶ್ಯ.

ಕಾಶ್ಮೀರದ ಜನರು ಹೊಸ ಬದಲಾವಣೆಗಳಿಗೆ ಹೇಗೆ ಕಿವಿ-ಕಣ್ಣು ತೆರೆದುಕೊಂಡಿದ್ದಾರೆಂದರೆ, ಯಾವುದೇ ರಾಜಕಾರಣಿ ಬಂದು ಏನೇ ಘೋಷಣೆ ನೀಡಿದರೂ ಮರುದಿನವೇ ಪತ್ರಿಕೆಗಳಲ್ಲಿ ಸಂಬಂಧಪಟ್ಟ ಸಚಿವರ ಕಾರ್ಯಕ್ರಮದ ವರದಿಯನ್ನು ಹುಡುಕುತ್ತಾರೆ. ವಿಶ್ಲೇಷಿಸುತ್ತಾರೆ.
“ಅವರು ಹೇಳಿ ಹೋಗುತ್ತಾರೆ. ಆದ ಮೇಲೆಯೇ ಖಚಿತ. ಇತ್ತೀಚಿನ ಯಾರೂ ನಮಗೇನೂ ಒಳ್ಳೆಯದು ಮಾಡುವುದಿಲ್ಲ. ಎಲ್ಲರೂ ಅವರಿಗೆ ಬೇಕಾದದ್ದನ್ನು ಮಾಡಿಕೊಂಡಿದ್ದಾರೆ. ಸರಿ, ಈ ಹೊಸಬರನ್ನೂ (ಕೇಂದ್ರಾ ಡಳಿತ ಪ್ರದೇಶ) ನೋಡಿಬಿಡೋಣ. ಯಾವುದೇ ಭರವಸೆ ಇಲ್ಲ’ ಎಂದು ಹೇಳಿದವರು ಹೆಸರಿನ ಗುಟ್ಟು ಬಿಟ್ಟುಕೊಡದ ಒಬ್ಬ ಚಾಲಕರು.

ಅಲ್ಲಿನ ಜನರಿಗೆ ಆಡಳಿತ ವ್ಯವಸ್ಥೆ ಕುರಿತು ಬಂದಿರುವ ಬೇಸರಕ್ಕೆ ಒಂದು ಕಾರಣ ಕಾಣುತ್ತದೆ. ಅದರ ವಿವರ ಇಂತಿದೆ. ಇದು ಜನರಿಂದಲೇ ಬಂದ ಮಾತಿನ ಸಾರಾಂಶ. ಎಲ್ಲ ರಾಜಕಾರಣಿಗಳೂ ಅವರವರ ಸಂಪತ್ತು ವೃದ್ಧಿಗೆ ಯೋಚಿಸಿದ್ದಾರೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ರಾಜಕಾರಣಿಗಳ, ಅವರ ಸಂಬಂಧಿಕರ, ಪ್ರಮುಖ ಅಧಿ ಕಾರಿಗಳ, ಕಾರ್ಯದರ್ಶಿ ಮತ್ತಿತರ ಮಟ್ಟದ ಅಧಿಕಾರಿಗಳ ಹೊಟೇಲ್‌ಗ‌ಳು, ರೆಸಾರ್ಟ್‌ಗಳು ಆಯಕಟ್ಟಿನ ಜಾಗ ದಲ್ಲಿವೆ. ಇದಕ್ಕೆ ಯಾವ ನಿಯಮವೂ ಇಲ್ಲ. ಅದರಲ್ಲೂ ಪ್ರವಾಸೋದ್ಯಮ ಇತ್ತೀಚೆಗೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಬೇನಾಮಿ ಕಟ್ಟಡಗಳು ಹೆಚ್ಚುತ್ತಿವೆ. ನಿಜ, ಸೋನಾಮರ್ಗ್‌ ನಲ್ಲಿ ಹಲವು ಕಟ್ಟಡಗಳು ಪ್ರಗತಿಯಲ್ಲಿವೆ. ಅವೆಲ್ಲವನ್ನೂ ಕಂಡರೆ ಜನರ ಮಾತು ನಿಜವೆನ್ನಿಸುತ್ತದೆ. ಹೊಸ ವ್ಯವಸ್ಥೆ ಈ ಕುರಿತೂ ಗಮನಹರಿಸಬೇಕಿದೆ.

ಸುಂದರ ಕಾಶ್ಮೀರದ ಸಹಜ ಸೌಂದರ್ಯವನ್ನು ಹಾಳುಗೆಡವದೇ ಮುಗ್ಧತೆಯನ್ನೂ ಉಳಿಸುವ ಕೆಲಸವಾಗ ಬೇಕು. ಭೂ ದೃಶ್ಯಗಳಿಗೆಂದೇ ಮೀಸಲಾಗಿರುವುದು ಕಾಶ್ಮೀರ. ಆ ಭೂ ದೃಶ್ಯಗಳು ಅಂದ ಕಳೆದುಕೊಂಡರೆ ಕಾಶ್ಮೀರದ ಬಣ್ಣ ಮಸುಕಾಗುತ್ತದೆ. ಇದಕ್ಕೇ ಒತ್ತು ಕೊಟ್ಟಷ್ಟೂ ಒಳ್ಳೆಯದು. ಬೇರಾವ ಕೈಗಾರಿಕೆ ಬಾರದಿದ್ದರೂ ಪರವಾಗಿಲ್ಲ, ನಮ್ಮೂರಿನ ಸೊಗಸು ಮಾಯವಾಗದಿದ್ದರೆ ಸಾಕು. ಇದು ಪ್ರತೀ ಕಾಶ್ಮೀರಿಗನ ಕಳಕಳಿ.

ಕೇಸರಿಯ ಗಾಢತೆ ಕರಗದಿರಲಿ, ಸೇಬಿನ ಕೆಂಪು ಕಪ್ಪಾ ಗದಿರಲಿ, ಕಾಶ್ಮೀರಿಗರ ಕನಸುಗಳು ವಿವರ್ಣವಾಗ ದಿರಲಿ. ಹತ್ತು ವರ್ಷಗಳಲ್ಲಿ ಕೇಳಿಬರುತ್ತಿದ್ದ ಪ್ರಕ್ಷುಬ್ಧ ಕಾಶ್ಮೀರ ಈಗ ದಾಲ್‌ ಸರೋವರದಂತೆ ಪ್ರಶಾಂತವಾ ಗುತ್ತಿದೆ. ನಮ್ಮ ದೇಶದ ಮುಕುಟಮಣಿಯಿದು. ದಾಲ್‌ ಸರೋವರದ ದಂಡೆಯ ಮೇಲೆ ಕುಳಿತು, ದೋಣಿ ಮನೆಯ ವರಾಂಡದಲ್ಲಿ ಚಹಾ ಹೀರುತ್ತಾ, ದೋಣಿ ನಡೆಸುವ ಅಂಬಿಗರೊಂದಿಗೆ ಹರಟುತ್ತಾ ಬದುಕನ್ನು ತುಂಬಿಕೊಳ್ಳೋಣ. ಒಮ್ಮೆ ಕಾಶ್ಮೀರ ನೋಡಿಬರೋಣ.

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next