Advertisement

ನಮ್ಮ ಬದುಕು ಇತರರಿಗೆ ಮಾದರಿಯಾಗಲಿ

02:10 PM Dec 17, 2018 | |

ಹುಟ್ಟು ಶ್ರೀಮಂತ ಮನೆತನದಲ್ಲಿ ಆಗದೇ ಇರಬಹುದು. ಆದರೆ ಕನಸುಗಳು ಶ್ರೀಮಂತವಾಗಿರಬೇಕು ಎಂದಿರುವ ಅಟಲ್‌ ಬಿಹಾರಿ ವಾಜಪೇಯಿ ಅವರು ಹುಟ್ಟಿದ್ದು ಕುಗ್ರಾಮದಲ್ಲಾದರೂ ಪ್ರಧಾನಿ ಗಾದಿ ವರೆಗಿನ ಅವರು ನಡೆದ ಹಾದಿ ಅವರನ್ನು ವಿಶ್ವಕ್ಕೆ ಪರಿಚಯಿಸಿತ್ತು. ಬದುಕುವುದಾದರೆ ಮಾದರಿಯಾಗಿ ಬದುಕಬೇಕು ಎನ್ನುತ್ತಿದ್ದ ಅವರು ತಮ್ಮ ಬದುಕಿನ ಮೂಲಕವೇ ಅದನ್ನು ನಿರೂಪಿಸಿ ಎಲ್ಲರಿಗೂ ಮಾದರಿಯಾದರು. 

Advertisement

ಬದುಕುವುದಾದರೆ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು. ದ್ವೇಷ ಎನ್ನುವುದು ನಾವೇ ಆಹ್ವಾನಿಸಿಕೊಳ್ಳುವಂಥ ಒಂದು ರೋಗ… ಹೀಗೆಂದವರು ಭಾರತ ಕಂಡ ಅತ್ಯುತ್ತಮ ರಾಜಕಾರಣಿ ಅಟಲ್‌ ಬಿಹಾರಿ ವಾಜಪೇಯಿ. ಶತ್ರುವನ್ನು ಹೃದಯ ಮತ್ತು ಮನಸ್ಸಿನಲ್ಲಿಟ್ಟುಕೊಂಡರೆ ಅದು ನಿರಾಶೆ ಹಾಗೂ ಅನುಮಾನವನ್ನು ಹುಟ್ಟು ಹಾಕುವಂಥ ಕ್ಯಾನ್ಸರ್‌ ಆಗುತ್ತದೆ ಎನ್ನುತ್ತಿದ್ದ ಅವರು, ಶತ್ರುಗಳನ್ನು ಕೂಡ ಪ್ರೀತಿಯಿಂದ ಕಾಣುತ್ತಿದ್ದರು. ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ 1924 ಡಿಸೆಂಬರ್‌ 25ರಂದು ಹುಟ್ಟಿದ ಅಟಲ್‌ ಬಿಹಾರಿ ವಾಜಪೇಯಿ ಅವರು ಕೃಷ್ಣ ಬಿಹಾರಿ ಹಾಗೂ ಕೃಷ್ಣ ದೇವಿಯವರ ಮಗ. ತಂದೆ ಕವಿ, ಉಪಾಧ್ಯಾಯರಾಗಿದ್ದರಿಂದ ಚಿಕ್ಕ ವಯಸ್ಸಿನಿಂದಲೇ ಕಥೆ, ಕವನಗಳಲ್ಲಿ ಆಸಕ್ತಿ ಹೊಂದುವಂತೆ ಮಾಡಿತು. ಬೆಳೆಯುತ್ತಾ ತನ್ನದೇ ಕಲ್ಪನೆಗಳಲ್ಲಿ ಕವನಗಳನ್ನು ಗೀಚುತ್ತಿದ್ದರು. ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ವಾಜಪೇಯಿ ಅವರು ಲಕ್ಷ್ಮೀ ಬಾಯಿ ಕಾಲೇಜಿನಲ್ಲಿ ಹಿಂದಿ, ಇಂಗ್ಲಿಷ್‌ ಹಾಗೂ ಸಂಸ್ಕೃತ  ಭಾಷೆಯಲ್ಲಿ ಪಾಂಡಿತ್ಯ ಗಳಿಸಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ. ಕಾಲೇಜಿನಿಂದ ಪಡೆದರು. ಬಹುಶಃ ಇದೇ ಅವರನ್ನು ಮುಂದೆ ರಾಜಕೀಯ ಹಾಗೂ ಪತ್ರಿಕೋದ್ಯಮದತ್ತ ಸೆಳೆಯಿತು. ಆರ್‌.ಎಸ್‌.ಎಸ್‌. ಸೇರಿದ ಮೇಲೆ ವೀರ ಅರ್ಜುನ ಹಾಗೂ ಪಾಂಚಜನ್ಯ ಎನ್ನುವ ಎರಡು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಕವಿಯಾಗಿ ಸೇವೆ ಸಲ್ಲಿಸಿದರು.

ಎಲ್ಲಿ ಹುಟ್ಟುತ್ತೇವೆ ಎನ್ನುವುದು ಮುಖ್ಯವಲ್ಲ
ನಾವು ಹುಟ್ಟಿದ ಊರು ನಮ್ಮ ಭವಿಷ್ಯವನ್ನು ನಿರ್ಧರಿಸಲಾರದು ಎಂಬುದಕ್ಕೆ  ಸಾಕ್ಷಿ ಅಟಲ್‌. ಸಾಧಕರಾಗಲು ದೊಡ್ಡ ಪಟ್ಟಣಗಳಲ್ಲೇ ಹುಟ್ಟಬೇಕೆಂದೇನಿಲ್ಲ. ಕುಗ್ರಾಮದಲ್ಲಿ ಹುಟ್ಟಿ, ಬೆಳೆದರೂ ಸಾಧಕರಾಗಬಹುದು. ತಂದೆ ತಾಯಿ ಶ್ರೀಮಂತರಾಗಿರಬೇಕಿಲ್ಲ. ನಮ್ಮ ಕನಸುಗಳಿಂದ ತಂದೆ ತಾಯಿಯರನ್ನು ಶ್ರೀಮಂತರನ್ನಾಗಿಸಬಹುದು ಎನ್ನುವುದು ಅಟಲ್‌ ಬಿಹಾರಿ ವಾಜ ಪೇಯಿ ಅವರ ಬದುಕಿನಿಂದ ಎಲ್ಲರೂ ಅರಿಯಬಹುದು. ಕುಗ್ರಾಮದಲ್ಲಿ ಹುಟ್ಟಿ ಬೆಳೆದ ವಾಜಪೇಯಿ ಅವರ ಪ್ರಧಾನಿ ಗಾದಿ ವರೆಗಿನ ಹಾದಿ ಸುಗಮವಾಗಿರಲಿಲ್ಲ. ಆದರೆ ದೃಢತೆ ಮತ್ತು ನಂಬಿಕೆಯೊಂದಿಗೆ ಸಾಧಕರಾಗಬೇಕು ಎನ್ನುವ ಛಲ ಅವರನ್ನು ಇಂದು ಎಲ್ಲರ ಮನದಲ್ಲೂ ನೆಲೆಯೂರುವಂತೆ ಮಾಡಿದೆ.

ಟೀಕೆಗಳತ್ತ ಗಮನ ಬೇಡ
ನಂಬಿಕೆ ಎನ್ನುವುದು ಬದುಕಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ವಾಜಪೇಯಿ ಅವರ ಮಾತುಗಳಿಂದ ಬಿಂಬಿತವಾಗುತ್ತದೆ. ಎಂತಹ ಕಷ್ಟಗಳಲ್ಲೂ ನಗುನಗುತ್ತಾ ಕವಿತೆಗಳ ಮೂಲಕ ಉತ್ತರಿಸುತ್ತಾ ಪ್ರತಿ ಸಂದರ್ಭವನ್ನೂ ಮುಂದಿನ ಗೆಲುವಿಗೆ ಮೀಸಲಿರಿಸುತ್ತಿದ್ದ ಅವರು ಬೇರೆಯವರ ಟೀಕೆಗಳಿಗೆ ಗಮನವೇ ನೀಡುತ್ತಿರಲಿಲ್ಲ. ಹೀಯಾಳಿಸಿ ಮಾತನಾಡುವವರ ಮೇಲೆ ರೇಗಾಡದೇ ಮೌನದಿಂದ ಉತ್ತರಿಸುವ ವ್ಯಕ್ತಿಯ ಗುಣ ಇಂದಿನ ಒತ್ತಡ ಜೀವನವನ್ನು ಕೋಪದಲ್ಲೇ ಕಳೆಯುವ ಜನರು ಕೂಡ ಅಳವಡಿಸಿಕೊಳ್ಳಬೇಕು. ನಮ್ಮಿಂದ ಎದುರಿಸಲಾಗದ ಸಮಸ್ಯೆಗಳನ್ನು ಬಿಟ್ಟು ಪಲಾಯನ ಮಾಡುವುದು ಹೇಡಿತನ ಅದನ್ನು ಬಗೆಹರಿಸಿಕೊಳ್ಳಬೇಕು ಎನ್ನುವ ಅವರ ಮನ ಃಸ್ಥಿತಿ ಪ್ರತಿಯೊಬ್ಬ ಯಶಸ್ವಿ ನಾಯಕನು ಕೂಡ ರೂಢಿಸಿಕೊಳ್ಳಬೇಕು. ಹಿಂದಿನ ಘಟನೆಗಳು ಮುಂದಿನ ಬಾರಿ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ನಿಮಗಾದ ಅನುಭವ ಇನ್ನೊಮ್ಮೆ ಅದೇ ತಪ್ಪಾಗದಂತೆ ಎಚ್ಚರ ವಹಿಸುವಂತೆ ಮಾಡುತ್ತದೆ ಎನ್ನುವುದಕ್ಕೆ ಅವರು ಸೋಲು ಕಂಡು ಅನಂತರ ಗೆದ್ದ ಉದಾಹರಣೆ ಎಲ್ಲರ ಬದುಕಿಗೂ ಪ್ರೇರಣೆ ನೀಡುವಂಥದ್ದು.

ಕೆಲಸದ ಮೇಲೆ ಇರಲಿ ಶ್ರದ್ಧೆ
ನಾವು ನಮ್ಮ ಗೆಳೆಯರನ್ನು ಬದಲಿಸಬಹುದು ಆದರೆ ನೆರೆಹೊರೆಯವರನ್ನಲ್ಲ. ನೆರೆಹೊರೆಯವರನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದ ಅವರ ಮಾತುಗಳು ಅದು ದೇಶದ ವಿಚಾರವಾಗಿರಬಹುದು ಅಥವಾ ನಮ್ಮ ಮನೆಯ ವಿಷಯವೇ ಆಗಿರಬಹುದು. ನಾವು ಅವರನ್ನು ಬದಲಿಸುವ ವಿಷಯ ಬಿಟ್ಟು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಅದು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ವಾಜಪೇಯಿ ಅವರು ಮಾತುಗಳಲ್ಲಿ ಮಾತ್ರವಲ್ಲ ತಮ್ಮ ಕರ್ತವ್ಯದಲ್ಲೂ ಮಾಡಿ ತೋರಿಸಿದರು. ಇದರಿಂದಾಗಿ ಅವರು ಇಂದಿಗೂ ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲೂ ಶಾಶ್ವತ ಸ್ಥಾನಗಳಿಸಿದ್ದಾರೆ.  ಭಯದಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದನ್ನು ಯಾರಾದರೂ ಹೊರ ತಂದೇ ತರುತ್ತಾರೆ.

Advertisement

ನಿರ್ಧಾರ ದೃಢವಾಗಿರಲಿ
ದೃಢ ನಿರ್ಧಾರಗಳು ನಮ್ಮನ್ನು ಅಜರಾಮರಗೊಳಿಸುತ್ತವೆ ಎಂಬುದನ್ನು ವಾಜಪೇಯಿ ತಮ್ಮ ಬದುಕಿನ ಮೂಲಕವೇ ನಿರೂಪಿಸಿದರು. ಅವರು ನ್ಯೂಕ್ಲಿಯರ್‌ ಪರೀಕ್ಷೆ ವಿಚಾರದಲ್ಲಿ ಕೈಗೊಂಡ ನಿರ್ಣಯ ಜಗತ್ತಿಗೆ ಸವಾಲೊಡ್ಡುವಂತೆ ಮಾಡಿತ್ತು. ಮಾತ್ರವಲ್ಲ ನಮ್ಮ ದೇಶದ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿತ್ತು. ಎಲ್ಲರ ಒತ್ತಡಕ್ಕೆ ಮಣಿದು ಒಂದು ವೇಳೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದರೆ ಇವತ್ತಿಗೂ ನಮ್ಮ ದೇಶ ಇತರೆ ದೇಶಗಳ ದಾಳಿಯ ಆತಂಕದಿಂದಲೇ ಇರಬೇಕಾಗಿತ್ತು ಎಂಬುದು ಕೂಡ ಅಷ್ಟೇ ಸತ್ಯ. ಅದ್ದರಿಂದ ಬದುಕಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ದೃಢವಾಗಿದ್ದರೆ ಒಂದೋ ನಾವು ಬದಲಾಗುತ್ತೇವೆ ಇಲ್ಲವಾದರೆ ನಮ್ಮ ಸಮಾಜವೇ ಬದಲಾಗುತ್ತದೆ. ನಿರ್ಧಾರಗಳು ನಮ್ಮ ಬದುಕಿಗೆ ಅಮೂಲ್ಯ ಪಾಠವನ್ನು ಕಲಿಸುತ್ತದೆ ಎಂಬುದು ಇದರಿಂದ ತಿಳಿದುಕೊಳ್ಳಬಹುದು

ನಮ್ಮ ಗುರಿ ಅಂತ್ಯವಿಲ್ಲದ ಆಕಾಶದಷ್ಟು ಹೆಚ್ಚಿರಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಕೈ ಕೈ ಹಿಡಿದು ನಡೆಯಲು ಪ್ರಯತ್ನಪಟ್ಟಾಗ ಮಾತ್ರ ಗೆಲುವು ನಮ್ಮದಾಗುತ್ತದೆ. 

ಸ್ವಾತಂತ್ರ್ಯವೆನ್ನುವುದು ನ್ಯಾಯವಿಲ್ಲದೆ ಸಂಪೂರ್ಣವಾಗದು. 

ಗೆಲುವು ಮತ್ತು ಸೋಲು ಜೀವನದ ಒಂದು ಭಾಗ. ಅವುಗಳೆರಡು ಸಮಚಿತ್ತತೆಗೆ ಒಳಪಡುತ್ತವೆ.

ಗನ್‌ ಗಳಿಂದಲ್ಲ ಕೇವಲ ಭ್ರಾತೃತ್ವದಿಂದ ಮಾತ್ರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ

ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next