Advertisement

ಗುಟ್ಟೊಂದ ಹೇಳುವೆ…ನಿಮಗೆ ತಿಳಿಯದ ಹಣವಂತರ ಒಳ್ಳೆ ಅಭ್ಯಾಸಗಳು

08:33 PM Jan 12, 2020 | Sriram |

ಶ್ರೀಮಂತಿಕೆ ಎಂಬುದು ಒಂದು ಮನಸ್ಥಿತಿ. ಹಣವಂತರಾಗಲು ಬ್ಯಾಂಕಿನಲ್ಲಿ ಕೋಟಿ ರೂಪಾಯಿ ಇಟ್ಟರೆ ಸಾಲದು, ಕೆಲ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು!

Advertisement

ಶ್ರೀಮಂತರೆಂದರೆ ಹೀಗೇ ಇರುತ್ತಾರೆ ಎಂಬ ಸಿದ್ಧ ಅಭಿಪ್ರಾಯವೊಂದು ನಮ್ಮಲ್ಲಿದೆ. ಅವರು ಬಂಗಲೆಯಲ್ಲಿ ವಾಸಿಸುತ್ತಾರೆ, ತಮಗೆ ಬೇಕಾದುದನ್ನು ಯಾವಾಗ ಬೇಕಾದರೂ ಖರೀದಿಸುತ್ತಾರೆ, ಡಿಸೈನರ್‌ ದಿರಿಸುಗಳನ್ನು ತೊಡುತ್ತಾರೆ ಎಂಬಿತ್ಯಾದಿ ಅಭಿಪ್ರಾಯಗಳು ನಮ್ಮಲ್ಲಿವೆ. ಆದರೆ, ಶ್ರೀಮಂತಿಕೆ ಎಂಬುದು ಒಂದು ಮನಸ್ಥಿತಿ. ಹಣವಂತರಾಗಲು ಬ್ಯಾಂಕಿನಲ್ಲಿ ಕೋಟಿ ರೂಪಾಯಿ ಇಟ್ಟರೆ ಸಾಲದು, ಆ ಮನಸ್ಥಿತಿಯನ್ನು, ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಹಣವಂತರ ಒಳ್ಳೆ ಅಭ್ಯಾಸಗಳಲ್ಲಿ ಪ್ರಮುಖವಾದವನ್ನು ಆರಿಸಿ ರೂಪಿಸಿರುವ ಪಟ್ಟಿ ಇಲ್ಲಿದೆ.

1. ಮಕ್ಕಳಿಗಾಗಿ ಆಸ್ತಿ ಮಾಡಿಡುವುದಿಲ್ಲ
“ತಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು’ ಎಂಬ ಮೆಂಟಾಲಿಟಿ ನಮ್ಮಲ್ಲಿ ಬಹಳಷ್ಟು ಜನರಲ್ಲಿದೆ. ತಾವು ಜೀವನಪರ್ಯಂತ ಮಕ್ಕಳಿಗಾಗಿ ದುಡಿದು, ಮಕ್ಕಳು ಸುಖವಾಗಿರಲಿ ಎಂದು ಅವರು ಹಾರೈಸುತ್ತಾರೆ. ಆದರೆ ಶ್ರೀಮಂತರು ಹಾಗಲ್ಲ. ತಮ್ಮ ಮಕ್ಕಳು, ಸ್ವಂತ ಸಂಪಾದನೆ ಮೇಲೆ ಬದುಕು ಕಟ್ಟಿಕೊಳ್ಳಲಿ, ಪಿತ್ರಾರ್ಜಿತ ಆಸ್ತಿಯನ್ನು ನೆಚ್ಚಿಕೊಳ್ಳದಿರಲಿ ಎಂದು ಅಪೇಕ್ಷಿಸುತ್ತಾರೆ. ಬಿಲ್‌ ಗೇಟ್ಸ್‌, ಮಾರ್ಕ್‌ ಝಕರ್‌ಬರ್ಗ್‌, ಹಾಲಿವುಡ್‌ ನಟ ಜಾಕಿ ಚಾನ್‌ ಇವರುಗಳು ಅದೇ ಮಾತನ್ನು ಹೇಳಿಯೂ ಇದ್ದಾರೆ.

2. ಟಿ.ವಿ, ವಿಡಿಯೋ ಗೇಮ್‌ಗಳಿಂದ ದೂರ
ಶ್ರೀಮಂತರ ಮನೆಗಳಲ್ಲಿ ಹೈಕ್ವಾಲಿಟಿ ಟಿ.ವಿ ಇರಬಹುದು. ಆದರೆ, ಅವರು ಯಾವ ಪ್ಲ್ರಾನು ಹಾಕಿಸಿಕೊಂಡರೆ ಉತ್ತಮ, ಯಾವ ಯಾವ ಚಾನಲ್ಲುಗಳು ಬೇಕು ಅಥವಾ ಮೊಬೈಲುಗಳಲ್ಲಿ ಯಾವ ಗೇಮಿಂಗ್‌ ಆ್ಯಪ್‌ ಒಳ್ಳೆಯದು ಎಂದೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಅವರು ಮನರಂಜನೆಗಾಗಿ ಟಿ.ವಿ ಮತ್ತು ಮೊಬೈಲನ್ನು ಬಳಸುವುದು ಕಡಿಮೆ.

3. ಬ್ರ್ಯಾಂಡೆಡ್‌ ಗೀಳಿಲ್ಲ
ಹಣವಂತರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತೃಷ್ಟ ಗುಣಮಟ್ಟದ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅದರ ಅರ್ಥ ಅವರು ಡಿಸೈನರ್‌ ದಿರಿಸು, ಚಿನ್ನದ ವಾಚು, ಹೈಸ್ಪೀಡ್‌ ಕಾರುಗಳ ಮೇಲೆ ಖರ್ಚು ಮಾಡುತ್ತಿದ್ದಾರೆ ಎಂದಲ್ಲ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುವ ವಾರೆನ್‌ ಬಫೆಟ್‌ ಇನ್ನೂ ಪುಟ್ಟ ಮನೆಯಲ್ಲಿ ತುಂಬಾ ಸರಳವಾಗಿ ವಾಸಿಸುತ್ತಿರುವುದು, ಅಜೀಂ ಪ್ರೇಮ್‌ಜಿ, ನಾರಾಯಣ ಮೂರ್ತಿ, ರತನ್‌ ಟಾಟಾ ಸರಳತೆಗೆ ಉದಾಹರಣೆಯಾಗಿದ್ದಾರೆ. ದುಡ್ಡಿದೆ ಎಂದು ಚಿನ್ನದ ವಾಚನ್ನೇ ಖರೀದಿಸಬೇಕಿಲ್ಲ ಅಲ್ಲವೇ? 300 ರೂ. ವಾಚು ಕೂಡಾ ಸರಿಯಾದ ಟೈಮನ್ನೇ ಹೇಳುತ್ತೆ ಎನ್ನುವುದರ ಹಿಂದಿನ ಸರಳ ಸತ್ಯ ಅವರಿಗೆ ತಿಳಿದಿರುತ್ತದೆ.

Advertisement

4. ಕ್ರೆಡಿಟ್‌ ಕಾರ್ಡ್‌ ಬಳಕೆ ಕಡಿಮೆ
ದುಡ್ಡಿದ್ದ ಮಾತ್ರಕ್ಕೆ ಅವರು ಪರ್ಸಿನಲ್ಲಿ ನೋಟುಗಳ ಕಂತೆ ತುಂಬಿಕೊಂಡು ಓಡಾಡಲು ಇಚ್ಛಿಸುವುದಿಲ್ಲ ನಿಜ. ಹಾಗೆಂದು ಅವರ ಪರ್ಸಿನಲ್ಲಿ ಕ್ರೆಡಿಟ್‌ ಕಾರ್ಡುಗಳ ಅಟ್ಟಿಯೋ, ಮೊಬೈಲ್‌ ವ್ಯಾಲೆಟ್‌ನಲ್ಲಿ ತುಂಬಿ ತುಳುಕುತ್ತಿರುವ ಬ್ಯಾಲೆನ್ಸೋ ಇರುವುದಿಲ್ಲ. ಕ್ರೆಡಿಟ್‌ ಕಾರ್ಡನ್ನು ಶ್ರೀಮಂತ ವರ್ಗದವರಿಗಿಂತ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರೇ ಹೆಚ್ಚಾಗಿ ಬಳಸುತ್ತಿರುವುದು.

5. ಲೇಟ್‌ ಫೀ ಕಟ್ಟಲ್ಲ
ಕರೆಂಟ್‌ ಬಿಲ್‌, ವಾಟರ್‌ ಬಿಲ್‌, ಸ್ಕೂಲ್‌ ಫೀ ಏನೇ ಇರಬಹುದು ಎಲ್ಲವನ್ನೂ ನಿಗದಿತ ಅವಧಿಯ ಒಳಗೆ ಕಟ್ಟಿಬಿಡುತ್ತಾರೆ. ಯಾವುದೇ ಕಾರಣಕ್ಕೂ ತಡ ಮಾಡಿಕೊಂಡು ಲೇಟ್‌ ಫೀ, ದಂಡ ಕಟ್ಟಿಕೊಳ್ಳುವ ಹಾಗೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ತಮ್ಮ ಬ್ಯಾಂಕ್‌ ಖಾತೆಯಿಂದ ನೇರವಾಗಿ ಕಟ್‌ ಆಗುವ ಹಾಗೆ “ಆಟೋ ಪೇ’ ಸವಲತ್ತನ್ನು ಅವರು ಅಪೇಕ್ಷಿಸುತ್ತಾರೆ. ಲೇಟ್‌ ಫೀ ಎಷ್ಟೇ ಚಿಕ್ಕ ಮೊತ್ತವಾಗಿದ್ದರೂ ಅದು ನಿರ್ಲಕ್ಷ್ಯತನದ ಪ್ರತೀಕ. ಅಲ್ಲದೆ, ಹನಿಗೂಡಿದರೆ ಹಳ್ಳ ಎಂಬುದನ್ನು ಹಣವಂತರಿಗೆ ಹೇಳಿಕೊಡಬೇಕಿಲ್ಲ.

6. ರಿಪೇರಿಗೆ ಆದ್ಯತೆ
ಯಾವುದೇ ವಸ್ತು ಹಾಳಾದಾಗ, ಅದನ್ನು ರಿಪೇರಿ ಮಾಡಿಸುವುದು ಹೆಚ್ಚು ಸಮಯ ಮತ್ತು ಶ್ರಮ ಬೇಡುವ ಕೆಲಸ. ನಾವೇ ಎಷ್ಟೋ ಸಲ ಅಂದುಕೊಳ್ಳುತ್ತೇವೆ: ಹಣ ಇದ್ದಿದ್ದರೆ ರಿಪೇರಿ ಮಾಡಿಸುವ ಗೊಡವೆಗೇ ಹೋಗದೆ ಹೊಸ ವಸ್ತುವನ್ನೇ ಖರೀದಿಸಬಹುದಿತ್ತೆಂದು. ಸಮಯ ಉಳಿಸುವ ಮಾರ್ಗ ಯಾವತ್ತೂ ಜೇಬಿಗೆ ಹೊರೆ ನೀಡುತ್ತೆ ಎನ್ನುವುದು ಹಣವಂತರ ಅಭಿಪ್ರಾಯ. ಶಾಶ್ವತವಾಗಿ ಬಾಳಿಕೆ ಬರದ ವಸ್ತುಗಳ ಮೇಲೆ ಅವರು ಹಣ ತೊಡಗಿಸುವುದಿಲ್ಲ.

7. ರಿಟೈರ್‌ವೆುಂಟ್‌ ಪ್ಲ್ರಾನ್‌ ಇಲ್ಲ
ಆರವತ್ತರ ತನಕ ಕೆಲಸ ಆಮೇಲೆ ನಿವೃತ್ತಿ ಬದುಕನ್ನು ಎಂಜಾಯ್‌ ಮಾಡಬಹುದು ಅಂತ ನಾವೆಲ್ಲಾ ದುಡಿಯುತ್ತೇವಲ್ಲ, ದುಡಿದು ರಿಟೈರ್‌ವೆುಂಟ್‌ ಫ‌ಂಡ್‌ಗೆ ಹಣ ಹಾಕಿ ಕೂಡಿಡುತ್ತೇವಲ್ಲ, ಹಣವಂತರು ಆ ರೀತಿ ಮಾಡುವುದೇ ಇಲ್ಲ. ಏಕೆಂದರೆ, ಹಣವಂತರಿಗೆ ನಿವೃತ್ತಿಯಾಗುವ ಪ್ಲ್ರಾನೇ ಇರೋದಿಲ್ಲ. ಜೀವನಪೂರ್ತಿ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದೇ ಅವರು ಅಪೇಕ್ಷಿಸುತ್ತಾರೆ.

8. ಜೂಜು ಆಡುವುದಿಲ್ಲ
ಜೂಜು, ಲಾಟರಿಯಂಥ ಅದೃಷ್ಟದ ಆಟಕ್ಕೆ ಹಣವಂತರು ಬಲಿಬೀಳುವುದಿಲ್ಲ. ಅವರಿಗೆ ಲಾಟರಿಯ ಅಗತ್ಯವೇ ಇಲ್ಲ ಎಂಬುದೇನೋ ನಿಜ, ಆದರೆ ಜೂಜು ಅಂದರೆ ಲಾಟರಿಯೊಂದೇ ಅಲ್ಲ. ಅದೃಷ್ಟದ ನೆರವನ್ನು ಬೇಡುವ ಯಾವುದೇ ನಿರ್ಧಾರಗಳೂ ಜೂಜಿಗೆ ಸಮನಾದುದು ಎಂದವರು ತಿಳಿಯುತ್ತಾರೆ. ಅವರು, ಅದೃಷ್ಟಕ್ಕಿಂತ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇರಿಸುತ್ತಾರೆ.

– ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next