Advertisement

ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್, ಬಿಬಿಸಿ ಅರ್ಥ್ ವಾಹಿನಿ ಕನ್ನಡಲ್ಲಿ ಬರಲಿ: ಸಚಿವ ಸುನಿಲ್ ಪತ್ರ

03:12 PM Nov 29, 2022 | Team Udayavani |

ಬೆಂಗಳೂರು: ಜ್ಞಾನ ಪ್ರಸಾರ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುವಂತೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ್ ಠಾಕೂರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.

Advertisement

ಈ ವಾಹಿನಿಗಳು ತಮಿಳು, ತೆಲುಗು, ಹಿಂದಿಯಲ್ಲಿ ಡಬ್ಬಿಂಗ್ ಆಗಿ ಅಂದಿನಿಂದ ಪ್ರಸಾರವಾಗುತ್ತಿದ್ದು, ಭೂ ಜೀವ ಜಗತ್ತಿನ ಅದ್ಭುತ ಸುಂದರ ವಿಷಯಗಳೆಲ್ಲಾ ಅಲ್ಲಿನ ಜನಗಳಿಗೆ ಅವರ ಅವರ ಪ್ರಾದೇಶಿಕ ಭಾಷೆಗಳಲ್ಲಿ ದೊರಕುತ್ತಿವೆ. ಈ ಭೂಮಿಯ ಮೇಲಿನ ಜೀವಜಗತ್ತಿನ ಅದ್ಭುತ ವೈವಿಧ್ಯತೆಗಳನ್ನು ವೈಚಿತ್ರಗಳನ್ನು ಅವುಗಳ ನಿಗೂಢ ಜೀವನ ಕ್ರಮಗಳನ್ನು ಹಾಗೂ ಅವುಗಳೆಲ್ಲಾ ಅಳಿವಿನಂಚಿಗೆ ಹೋಗುತ್ತಿರುವ ಭೀಕರತೆಗಳನ್ನೆಲ್ಲ ಜಗತ್ತಿನ ಎಲ್ಲ ಜನಗಳು ಅವರವರ ಮಾತೃಭಾಷೆಗಳಲ್ಲಿ ಅರಿತುಕೊಳ್ಳುವ ಅನಿವಾರ್ಯತೆ ಇದೆ. ಆದರೆ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡ ಭಾಷೆಯಲ್ಲಿ ಪ್ರಸಾರವಾಗದೇ ಇರುವುದರಿಂದ ಅದರಲ್ಲಿ ಜೀವ ವೈವಿಧ್ಯದ ಜ್ಞಾನ ಕನ್ನಡಿಗರನ್ನು ತಲುಪುತ್ತಿಲ್ಲ. ಆದ್ದರಿಂದ ಈ ವಾಹಿನಿಗಳು ಕನ್ನಡದಲ್ಲಿ ಪ್ರಸಾರವಾಗಬೇಕೆಂದು ಕನ್ನಡಿಗರು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನದ ಹಲವು ಸ್ವರೂಪಗಳ ಆವಿಷ್ಕಾರದಿಂದಾಗಿ ಜಗತ್ತಿನಲ್ಲಿ ಅವರವರ ಭಾಷೆಯಲ್ಲಿಯೇ ಸೇವೆಗಳು ಮತ್ತು ಮಾಹಿತಿಗಳು ಲಭಿಸುತ್ತಿರುವ ಸಂದರ್ಭದಲ್ಲಿ ಈ ವಾಹಿನಿಗಳು ಕನ್ನಡದಲ್ಲಿ ಸೇವೆ ಒದಗಿಸ ಬಹುದಾಗಿದೆ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಹಾಗೂ ಆರು ಕೋಟಿಗೂ ಅಧಿಕ ಜನ ಮಾತಾನಾಡುವ, ಬಳಸುವ ಕನ್ನಡ ಭಾಷೆಯಲ್ಲಿ ವಾಹಿನಿಗಳು ಪ್ರಸಾರ ಮಾಡಿ ಕನ್ನಡಿಗರಿಗೆ ಭೂ ಜಗತ್ತಿನ ವಿಸ್ಮಯಗಳನ್ನು ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳುವ ಅವಕಾಶ ಒದಗಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next