Advertisement

 ಹುಣ್ಸೆಮಕ್ಕಿ: ಬಾವಿಗೆ ಬಿದ್ದ  ಚಿರತೆ ರಕ್ಷಣೆ

10:26 AM Aug 11, 2018 | Team Udayavani |

ಕುಂದಾಪುರ: ಹೊಂಬಾಡಿ ಮಂಡಾಡಿ ಗ್ರಾ. ಪಂ. ವ್ಯಾಪ್ತಿಯ ಹುಣ್ಸೆಮಕ್ಕಿಯಲ್ಲಿ ಗುರುವಾರ ತಡರಾತ್ರಿ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ರಾತ್ರಿಯೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಆಗಮಿಸಿದರು. ಆದರೆ 15 ಅಡಿ ಆಳದಿಂದ ಚಿರತೆಯನ್ನು ಮೇಲೆತ್ತುವ ಕಾರ್ಯಾಚರಣೆ ರಾತ್ರಿ ನಡೆಸುವುದು ಸಾಧ್ಯವಾಗಿರಲಿಲ್ಲ. ಚಿರತೆ ಬಾವಿಗೆ ಅಳವಡಿಸಿದ ರಿಂಗ್‌ನಲ್ಲಿ ಸುರಕ್ಷಿತವಾಗಿ ಇದ್ದ ಕಾರಣ ಬೆಳಗಾದ ಬಳಿಕ ಕಾರ್ಯಾಚರಣೆ ನಡೆಸಲು ನಿರ್ಧರಿಸಿದರು.

Advertisement

ಬೆಳಗ್ಗೆ ಹಗ್ಗ ಕಟ್ಟಿ ಬೋನನ್ನು ಬಾವಿಗೆ ಇಳಿಬಿಟ್ಟು ಚಿರತೆ ಅದರೊಳಗೆ ಕೂರುವಂತೆ ಮಾಡಿ ಮೇಲಕ್ಕೆತ್ತಲಾಯಿತು. ಚಿರತೆ ಆರೋಗ್ಯವಾಗಿದ್ದು, ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಡಲಾಯಿತು. ವಲಯ ಅರಣ್ಯಾಧಿಕಾರಿ ಶರತ್‌ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಉದಯ್‌, ಸಂತೋಷ್‌, ಅರಣ್ಯ ರಕ್ಷಕರಾದ ವಿ. ಮಂಜು, ಶಂಕರ್‌, ಸಂತೋಷ್‌, ಶಿವು, ಬಂಗಾರಪ್ಪ, ಚಾಲಕ ಅಶೋಕ್‌ ಪಾಲ್ಗೊಂಡಿದ್ದರು.
 
ನಾಯಿಯ ಬೆನ್ನಟ್ಟಿ ಬಂದಿತ್ತು
ಹುಣ್ಸೆಮಕ್ಕಿಯ ಬಾಬಿ ಕುಲಾಲ್‌ ಮನೆಯ ನಾಯಿಯನ್ನು ಹಿಡಿ ಯಲು ಚಿರತೆ ಬಂದಿದ್ದು, ಬೆನ್ನಟ್ಟುವಾಗ ನಾಯಿ ಸಹಿತ ಬಾವಿಗೆ ಬಿದ್ದಿತ್ತು. ಚಿರತೆಯ ಗರ್ಜನೆ ಕೇಳಿ ಮನೆಯವರಿಗೆ ಎಚ್ಚರವಾಯಿತು. ಬಾವಿಗೆ ಇಣುಕಿದಾಗ ನಾಯಿ ಹಾಗೂ ಚಿರತೆ ಇರುವುದು ಕಂಡುಬಂತು.  ಬುಟ್ಟಿ ಇಳಿಬಿಟ್ಟು ನಾಯಿಯನ್ನು ತತ್‌ಕ್ಷಣ ಮೇಲೆತ್ತಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next