Advertisement

ಮಾನವ- ವನ್ಯಜೀವಿ ಸಂಘರ್ಷ: ಇನ್ನೆಷ್ಟು ದುರಂತ ಸಂಭವಿಸಬೇಕು?

11:26 PM Feb 13, 2023 | Team Udayavani |

ರಾಜ್ಯದಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ಪ್ರಕರಣಗಳು ಪದೇ ಪದೆ ಸಂಭವಿಸು ತ್ತಿ ರುವುದು ಆತಂಕಕ್ಕೆ ಕಾರಣವಾಗಿದೆ. ಆನೆ, ಚಿರತೆ, ಹುಲಿ ದಾಳಿಗೆ ಅಮಾಯಕ ಜನರು ಬಲಿಯಾಗುತ್ತಿದ್ದು, ಒಂದು ರೀತಿಯಲ್ಲಿ ಕಾಡಂಚಿನಲ್ಲಿ ವಾಸಿಸುವವರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಲೆನಾಡು ಭಾಗದಲ್ಲಿ ಆನೆ ದಾಳಿ, ಹಳೇ ಮೈಸೂರು ಭಾಗದಲ್ಲಿ ಚಿರತೆ, ಕೊಡಗು, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಹುಲಿ ದಾಳಿ ಜನರನ್ನು ಬೆಚ್ಚಿ ಬೀಳಿಸಿದೆ. ರಾಜ್ಯ ಸರಕಾರ ಪ್ರತೀ ಬಾರಿ ಪ್ರಕರಣ ಆದಾಗಲೂ ಮಾನವ -ಪ್ರಾಣಿ ಸಂಘರ್ಷ ತಡೆಯಲು ಒಂದಷ್ಟು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿ ಪರಿಹಾರ ಘೋಷಿಸುತ್ತಿದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ.

ಕಾಡಿನಲ್ಲಿರಬೇಕಾದ ವನ್ಯ ಜೀವಿಗಳು ನಾಡಿಗೆ ಬಂದು ಬೆಳೆ ನಷ್ಟ ಉಂಟು ಮಾಡು ವುದು ಒಂದು ಕಡೆಯಾದರೆ, ಜನರ ಮೇಲೆ ಎರಗಿ ಪ್ರಾಣ ಹಾನಿ ಮಾಡುತ್ತಿರುವುದು ಮತ್ತೂಂದೆಡೆ. ಇದಕ್ಕೆ ಕೊನೆಯೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ.

ಅದರಲ್ಲೂ ಕೊಡಗಿನಲ್ಲಿ ಹುಲಿ ದಾಳಿಯಿಂದಾಗಿ 24 ಗಂಟೆಗಳಲ್ಲಿ ಅಜ್ಜ-ಮೊಮ್ಮಗ ಸಾವನ್ನಪ್ಪಿರುವುದು ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಜನರಂತೂ ತೀವ್ರ ಆತಂಕದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಸಾವಿಗೀಡಾದ ಮೇಲೆ ಕೊಡಗಿನ ಜನರ ಆಕ್ರೋಶದ ಕಟ್ಟೆಯೂ ಒಡೆದಿದೆ. ಈ ಅಜ್ಜ-ಮೊಮ್ಮಗನ ತವರು ಹುಣಸೂರಿನಲ್ಲಿ ಆಕ್ರೋಶ ಹೆಚ್ಚಾಗಿದ್ದು, ಹುಲಿಯನ್ನು ಕೊಂದು ಹಾಕುವಂತೆ ಆಗ್ರಹ ಮಾಡುತ್ತಿದ್ದಾರೆ.

ಪ್ರಸಕ್ತ ವರ್ಷ ಆನೆ, ಚಿರತೆ, ಹುಲಿ ಸೇರಿ 28 ಪ್ರಾಣಿ ದಾಳಿ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ. ಅದಕ್ಕೆ ಈಗ ಕೊಡಗಿನ ಹುಲಿ ದಾಳಿಯೂ ಸೇರ್ಪಡೆಯಾಗಿದೆ. ಇದಂತು ಅತ್ಯಂತ ಮನಕಲಕುವ ಘಟನೆ. ಪ್ರಾಣಿ ಮತ್ತು ಮಾನವ ಸಂಘರ್ಷ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ಅಥವಾ ಬೆಳೆ ನಷ್ಟ ಅನುಭವಿಸಿದವರಿಗೆ ಸರಕಾರ ಹಣಕಾಸು ಪರಿಹಾರ ನೀಡುವುದು ಶಾಶ್ವತ ಪರಿಹಾರವಲ್ಲ. ಪ್ರಾಣಿ ಮತ್ತು ಮಾನವ ಸಂಘರ್ಷ ಪ್ರಕರಣಗಳಿಗೆ ಅಂತ್ಯ ಹಾಡಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದು. ಸರಕಾರ ಅಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ವನ್ಯ ಜೀವಿ ತಜ್ಞರು, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ಅಗತ್ಯ ಬಿದ್ದರೆ ತಂಡ ರಚಿಸಿ ಅಧ್ಯಯನ ವರದಿ ತರಿಸಿಕೊಂಡು ಮುಂದುವರಿಯುವುದು ಅಗತ್ಯ.
ಪ್ರಾಣಿ ಮತ್ತು ಮಾವನ ಸಂಘರ್ಷ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳ ಸ್ಥಿತಿಯೂ ತುಂಬಾ ಶೋಚನೀಯ ಸ್ಥಿತಿಯಲ್ಲಿದೆ. ಇತ್ತೀಚೆಗೆ ಕಂದಾಯ ಸಚಿವರು ಹಟ್ಟಿಯಲ್ಲಿ ವಾಸ್ತವ್ಯ ಹೂಡಲು ಹೋಗಿದ್ದಾಗ ಅವರ ಮುಂದೆ ಆನೆ ತುಳಿತಕ್ಕೆ ಒಳಗಾದ ಕುಟುಂಬ ನೋವು ತೋಡಿಕೊಂಡಿತ್ತು.ಇದೇ ರೀತಿ ಮಲೆನಾಡು ಭಾಗದಲ್ಲಿ ಆನೆ ದಾಳಿಯಿಂದ ಸಾಕಷ್ಟು ಪ್ರಾಣ ಹಾನಿ, ಬೆಳೆ ನಷ್ಟ ಆಗಿದೆ.

Advertisement

ಕೋಲಾರ, ರಾಮನಗರ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಭಾಗದಲ್ಲಿ ಚಿರತೆ ಹಾವಳಿಯೂ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಭಯ ಉಂಟು ಮಾಡಿತ್ತು. ರಾಜಧಾನಿ ಬೆಂಗಳೂರಿನ ಕೋಡಿಪಾಳ್ಯ, ತುರಹಳ್ಳಿ ಅರಣ್ಯ ಭಾಗದಲ್ಲೂ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟು ಮಾಡಿತ್ತು.

ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಇತ್ತೀಚೆಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲೂ ವನ್ಯ ಜೀವಿ ತಜ್ಞರು ಹಲವು ಸಲಹೆ ನೀಡಿದ್ದಾರೆ. ಯಾಕಾಗಿ ಪ್ರಾಣಿಗಳು ನಾಡಿನತ್ತ ಬರುತ್ತಿವೆ, ತಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.ಇದೆಲ್ಲ ಪರಿಗಣಿಸಿ ರಾಜ್ಯ ಸರಕಾರ ಪ್ರಾಣಿಗಳ ಹಾವಳಿ ನಿಯಂತ್ರಣ ವಿಚಾರದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಒಂದು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲೇಬೇಕು. ಇಲ್ಲವಾದರೆ ಮತ್ತಷ್ಟು ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next