Advertisement

ಶಾಸಕರ ನಡೆ ಕ್ಷಮ್ಯವಲ್ಲ

02:16 AM Jul 09, 2019 | Sriram |

ಇತ್ತೀಚಿನ ವರ್ಷಗಳಲ್ಲಿ ಶಾಸಕರಾಗಿ ಬರುವವರ ಘನತೆಯೇ ಪ್ರಶ್ನಾರ್ಹವಾಗುತ್ತಿದೆ. ಕೊಳಕುತನದ ಮಾತುಗಳು, ಬಾಯೆ¤ರೆದರೆ ಪುಂಖಾನುಪುಂಖವಾಗಿ ಹೊರ ಹೊಮ್ಮುವ ಸಭ್ಯವಲ್ಲದ ಪ್ರತಿಕ್ರಿಯೆಗಳು ಉದ್ದುದ್ದ ಭಾಷಣ ಕೊರೆಯುವವರ ಬಾಯಿಂದಲೇ ಹೊರ ಹೊಮ್ಮುತ್ತಿದೆ.

Advertisement

ಅತೃಪ್ತ ಶಾಸಕರ ಮುನಿಸು, ಮುಖಂಡರಿಂದ ಸಮಾಧಾನ ಮಾಡುವ ಪ್ರಕ್ರಿಯೆ ಕರ್ನಾಟಕದ ಜನರಿಗೆ ಇತ್ತೀಚಿನ ದಿನಗಳಲ್ಲಿ ರೋಸಿ ಹೋಗುವಷ್ಟು ಸದ್ದು ಮಾಡುತ್ತಿರುವ ಸುದ್ದಿಯಾಗಿದ್ದರೆ ಸರಕಾರ ಬಿದ್ದು ಹೋದ ಕೂಡಲೇ ಮುಖ್ಯಮಂತ್ರಿಯಾಗಲು ಹೊಸ ಷರಾಯಿ ಸಿದ್ಧಪಡಿಸಿಕೊಂಡು ಹಣ್ಣು ಬೀಳುತ್ತದೆಂದು ಮರದ ಕೆಳಗೆ ಕಾಯುವ ನರಿಯ ಹಾಗೆ ದೃಷ್ಟಿ ನೆಟ್ಟಿರುವ ಪ್ರತಿ ಪಕ್ಷದವರು. ಇಲ್ಲಿ ಅವಧಿಗೆ ಮೊದಲು ರಾಜೀನಾಮೆಯ ಪ್ರಹಸನ ಮಾಡಿ ಪಕ್ಷತ್ಯಾಗ ಮಾಡುವ ಮಹಾನುಭಾವರ ನಡೆಯ ಹಿಂದೆ ಸ್ವಾರ್ಥ ಬಿಟ್ಟರೆ ಮತ ಹಾಕಿ ಗೆಲ್ಲಿಸಿದ ಪ್ರಜಾ ಪ್ರಭುವಿನ ಹಿತದ ಬಗೆಗೆ ಕಾಳಜಿಯೇ ಇಲ್ಲ. ತನ್ನ ಕ್ಷೇತ್ರದಲ್ಲಿ ತಾನು ನೀಡಿದ ಆಶ್ವಾಸನೆಗಳು ಈಡೇರಲಿಲ್ಲ, ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂಬ ಕುರಿತು ಕೂದಲಿನೆಳೆಯಷ್ಟು ಕೂಡ ಪಶ್ಚಾತ್ತಾಪವಿಲ್ಲದೆ ಸ್ವಹಿತ, ಸ್ವಪ್ರತಿಷ್ಠೆ, ಹಣದ ಆಮಿಷಗಳ ಕಾರಣದಿಂದ ಅವಧಿಗೆ ಮೊದಲೇ ಪದತ್ಯಾಗ ಮಾಡುವವನು ಮುಂದೆ ಯಾವ ಕಾಲದಲ್ಲಿಯೂ ಮತ್ತೆ ಗೆಲ್ಲದಂತೆ ಪ್ರಜ್ಞಾವಂತ ಮತದಾರರು ಬುದ್ಧಿ ಕಲಿಸಬೇಕಾಗಿದೆ.

ಎಲ್ಲಿಯೇ ಆಗಲಿ, ಸಮ್ಮಿಶ್ರ ಸರಕಾರ ಆಡಳಿತ ಮಾಡುವುದೆಂದರೆ ಹಗ್ಗದ ಮೇಲಿನ ನಡಿಗೆಯೇ ನಿಜ. ಅಸಮಾಧಾನ, ಮುನಿಸು, ವಿರೋಧ ಪಕ್ಷದವರು ತಮ್ಮೆಡೆಗೆ ಸೆಳೆದುಕೊಳ್ಳಲು ಒಡ್ಡುವ ಹಣದ ಆಮಿಷದ ಆಡಿಯೋ ವೈರಲ್, ರೆಸಾರ್ಟ್‌ ವಾಸ ಇಷ್ಟರಲ್ಲಿಯೇ ಆಡಳಿತಾವಧಿ ಮುಗಿದು ಹೋಗುತ್ತದೆ ವಿನಃ ಮತದಾರರ ಹಿತ ಸಾಧನೆಯ ಗುರಿಯೇ ಇರುವುದಿಲ್ಲ. ಮಂತ್ರಿಗಿರಿ ಸಿಕ್ಕಿದವನು ಆರಾಮವಾಗಿ ಸುಖೋಪಭೋಗಗಳನ್ನು ಅನುಭವಿಸುತ್ತ ಮುಂದಿನ ಚುನಾವಣೆಯ ಖರ್ಚಿಗೂ ಹಣ ಗಳಿಸುತ್ತಾನಾದರೆ ಅರೆಹೊಟ್ಟೆ ಉಣ್ಣುವ ಶಾಸಕನಾದವನಿಗೆ ಹೊಟ್ಟೆಯುರಿಯದೆ ಇರುತ್ತದೆಯೆ? ಇಲ್ಲಿ ಯಾವುದೇ ಮೌಲ್ಯಗಳ ಬಗೆಗೆ ಸಂಘರ್ಷವುಂಟಾಗುವುದಿಲ್ಲ. ತನ್ನ ಕ್ಷೇತ್ರದ ಮತದಾರರಿಗೆ ನ್ಯಾಯ ಸಿಕ್ಕಿಲ್ಲವೆಂಬ ಪರಿತಾಪವೂ ಇಲ್ಲ. ಒಬ್ಬನಿಗೆ ಮೃಷ್ಟಾನ್ನದ ಚೌಕಿಯೂಟ. ಇನ್ನೊಬ್ಬನಿಗೆ ಸಾರ್ವಜನಿಕ ಸಮಾರಾಧನೆಯ ಅರೆಬೆಂದ ಅಕ್ಕಿಯ ಊಟವೆಂದಾದರೆ ಹೀಗಾಗದೆ ಇನ್ನೇನಾಗುತ್ತದೆ?

ಅವಧಿಗೆ ಮೊದಲು ರಾಜೀನಾಮೆ ನೀಡಿ ಒಬ್ಬನು ಹೊರಗೆ ಬರಬಹುದು. ಅವನ ಸ್ಥಾನಕ್ಕೆ ಮರು ಚುನಾವಣೆ ನಡೆದಾಗ ಪ್ರಜೆಗಳ ತೆರಿಗೆಯ ಹಣ ಎಷ್ಟು ದುವ್ಯರ್ಯವಾಗುತ್ತದೆಂದು ಸ್ವಾರ್ಥಕ್ಕಾಗಿ ಪದತ್ಯಾಗ ಮಾಡುವವರು ಲೆಕ್ಕ ಹಾಕುತ್ತಾರೆಯೆ? ಯಾರನ್ನೋ ಮುಖ್ಯಮಂತ್ರಿ ಗಾದಿಗೇರಿಸಲು ಅಸ್ತಿತ್ವದಲ್ಲಿರುವ ಸರಕಾರವನ್ನು ರಾಜೀನಾಮೆಯ ಮೂಲಕ ಪತನಗೊಳಿಸುವವರು ಸಾಧಿಸುವುದಾದರೂ ಏನು? ಸಮಯ ಸಾಧಕತನ, ಅಧಿಕಾರ ವ್ಯಾಮೋಹಗಳ ಮೂಲಕ ಐದು ವರ್ಷಕ್ಕೆ ಹರಸಿ ಕಳುಹಿಸಿದ ಮತದಾರರಿಗೆ ಬಗೆಯುವ ಪರಮ ದ್ರೋಹ ಇದಲ್ಲವೆ? ಒಂದು ಪಕ್ಷದ ಚಿಹ್ನೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಟಿಕೇಟಿಗಾಗಿ ತಿಪ್ಪರಲಾಗ ಹಾಕಿ ಅದನ್ನು ಪಡೆದು ವಿರೋಧ ಪಕ್ಷವನ್ನು ಬಾಯಿಗೆ ಬಂದಂತೆ ಅವಹೇಳನ ಮಾಡಿ ಗೆದ್ದು ಬರುವವನಿಗೆ ವರ್ಷದೊಳಗೆ ಈ ಪಕ್ಷ ಸರಿಯಿಲ್ಲವೆಂದು ತೋರುವುದು, ವಿರೋಧ ಪಕ್ಷದ ಶ್ರೇಷ್ಠತೆ ಗೋಚರಿಸುವುದು ಮತಿಭ್ರಮಣೆಯೆ ಅಲ್ಲ ಬೌದ್ಧಿಕ ಸಾಮರ್ಥ್ಯದ ಕೊರತೆಯೇ ಎಂದು ಪ್ರಶ್ನಿಸಬೇಕಾಗಿದೆ.

ಮತದಾನ ಮಾಡುವುದು ನಮ್ಮ ಹಕ್ಕು,ಮತದಾನದಲ್ಲಿ ಭಾಗಿಯಾಗದಿರುವುದು ಅಕ್ಷಮ್ಯ ಅಪರಾಧ ಎಂದು ಮತದಾರನಿಗೆ ಮತ್ತೆ ಮತ್ತೆ ಬೋಧಿಸಲಾಗುತ್ತಿದೆ. ಗೆದ್ದು ಬಂದು ಸಂವಿಧಾನದ ಗೌರವವನ್ನು ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದನು ಮನ ಬಂದಂತೆ ಸ್ಥಾನ ತ್ಯಾಗ ಮಾಡಿ ಇನ್ನೊಂದು ಪಕ್ಷಕ್ಕೆ ಹಾರುವ ಲಜ್ಜೆಗೇಡಿತನದ ವರ್ತನೆಗೆ ಯಾವ ಶಿಕ್ಷೆಯೂ ಇಲ್ಲವೆ? ಇವರಿಗೆ ಬೇಕಾದ್ದು ಅಧಿಕಾರದ ಸುಖ ಹೊರತು ಪ್ರಜಾಹಿತವಲ್ಲ. ಈಗ ಶಾಸಕತ್ವವೆಂಬುದು ಲಾಭದಾಯಕ ಹುದ್ದೆಯಾಗಿ ಪರಿಣಮಿಸಿದೆ. ಜನ ಸೇವೆಯ ಕಲ್ಪನೆ ಕೂಡ ಇಲ್ಲದ ಅಸಮರ್ಥರು, ಅಧಿಕಾರ ಲಾಲಸಿಗಳು ಗೆದ್ದು ಬಂದು ರಾಜೀನಾಮೆ ಪ್ರಹಸನದಲ್ಲೇ ವರ್ಷಗಳನ್ನು ಕಳೆಯುತ್ತಿದ್ದಾರೆ. ಮತ್ತೆ ಮತ್ತೆ ಚುನಾವಣೆಗೆ ಹೋಗುವ ಆಟದಲ್ಲಿ ಮರಳಿ ಇನ್ನೊಂದು ಪಕ್ಷದ ಚಿಹ್ನೆ ಹೊತ್ತು ಬರುವ ಅವರಿಗೆ ಮತ ಹಾಕುವುದೆಂದರೆ ಮತದಾರನೂ ಇವರಂತೆ ಭ್ರಷ್ಟನಾಗಬೇಕು ಎಂಬುದೇ ಇದರರ್ಥವಲ್ಲವೆ? ಹುಲಿ ಚರ್ಮ ಹೊದ್ದು ಬಂದರೂ ಕತ್ತೆ ಹುಲಿಯಾಗುವುದಿಲ್ಲ, ಕೆನೆಯುತ್ತದೆ ವಿನಃ ಗರ್ಜಿಸುವುದಿಲ್ಲ.

Advertisement

ಇತ್ತೀಚಿನ ವರ್ಷಗಳಲ್ಲಿ ಶಾಸಕರಾಗಿ ಬರುವವರ ಘನತೆಯೇ ಪ್ರಶ್ನಾರ್ಹವಾಗುತ್ತಿದೆ. ಕೊಳಕುತನದ ಮಾತುಗಳು, ಬಾಯ್ತೆರೆದರೆ ಪುಂಖಾನುಪುಂಖವಾಗಿ ಹೊರ ಹೊಮ್ಮುವ ಸಭ್ಯವಲ್ಲದ ಪ್ರತಿಕ್ರಿಯೆಗಳು ದೇಶ ಗೌರವದ ಬಗೆಗೆ ಉದ್ದುದ್ದ ಭಾಷಣ ಕೊರೆಯುವವರ ಬಾಯಿಂದಲೇ ಹೊರ ಹೊಮ್ಮುತ್ತಿರುವುದು ಆಘಾತಕಾರಿಯಾಗಿದೆ. ಪವಿತ್ರವಾದ ಸ್ಥಾನ ಅಲಂಕರಿಸುವ ಅವರ ಯೋಗ್ಯತೆಗೆ ಅದು ಮಾನದಂಡವಾಗುತ್ತಿದೆ. ಇನ್ನು ಮಾತೆತ್ತಿದರೆ ಅತೃಪ್ತಿ. ಏನಿದರ ಅರ್ಥ? ಸ್ವಕೀಯ ಸಾಧನೆಗೆ ಇಂಬು ಸಿಗುವುದಿಲ್ಲ ಎಂಬುದರ ಹೊರತು ಮತದಾರನಿಗೆ ನ್ಯಾಯ ಸಿಗಲಿಲ್ಲವೆಂಬ ಭಾವ ಖಂಡಿತ ಅಲ್ಲವಲ್ಲ!

ಇಂತಹ ನಡೆಯುಳ್ಳ ಶಾಸಕರು ಸರ್ವಥಾ ಕ್ಷಮ್ಯರಲ್ಲ. ಅವಧಿ ಮುಗಿಯುವ ಮೊದಲು ಮರು ಚುನಾವಣೆಗೆ ಸ್ಪರ್ಧಿಸಲು ಅಂಥವರಿಗೆ ಅರ್ಹತೆಯಿಲ್ಲ ಎಂದು ಪ್ರಜಾಹಿತದಲ್ಲಿ ಕಳಿಕಳಿಯಿರುವ ಯಾರೇ ಆಗಲಿ ಒಂದು ಶಾಸನ ಜಾರಿಗೆ ತಂದರೆ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತೆತ್ತ ಮಹಾನುಭಾವರ ದಿವ್ಯಾತ್ಮಗಳಿಗೆ ಶ್ರದ್ಧಾಪೂರ್ವಕ ಗೌರವ ಸಲ್ಲಿಸಿದಂತಾಗುತ್ತದೆ, ಇಂತಹ ಬಯಲಾಟಗಳಿಗೆ ವಿರಾಮವೂ ಸಿಗುತ್ತದೆ.

-ಪ. ರಾಮಕೃಷ್ಣ ಶಾಸ್ತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next