Advertisement

Left bank channel: ನಾಲೆ ಏರಿ ಮೇಲೆ ತ್ಯಾಜ್ಯ ಸುರಿದು ಬೆಂಕಿ

04:30 PM Sep 09, 2023 | Team Udayavani |

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆ ಏರಿ ಮೇಲೆ ಪದೇ ಪದೆ ಭುಗಿಲೇಳುವ ತ್ಯಾಜ್ಯ ಸಮಸ್ಯೆಯನ್ನು ಬೆಂಕಿಯ ಮೂಲಕ ಶಮನಗೊಳಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿರುವ ನೀರಾವರಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದರಿಂದ ಪರಿಸರ ಮಾಲಿನ್ಯ ದಿನೇ ದಿನೆ ಹೆಚ್ಚುತ್ತಿದೆ.

Advertisement

ನಿಯಮವೇನು?: ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯಿದೆ 1981ರ ಸೆಕ್ಷನ್‌ 19(5)ರ ಅಡಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಅದರಂತೆ ಜನವಸತಿ ಪ್ರದೇಶ ಅಥವಾ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಇಡುವಂತಿಲ್ಲ. ಸರ್ಕಾರದ ಆದೇಶ ಉಲ್ಲಂಘಿಸಿ ಕಸಕ್ಕೆ ಬೆಂಕಿ ಹಚ್ಚಿದರೆ 5 ಲಕ್ಷ ರೂ. ವರೆಗೆ ದಂಡ ತೆರಬೇಕು. ಇಲ್ಲವೇ 5 ವರ್ಷ ಜೈಲು ಮತ್ತು ದಂಡ ಪಾವತಿ ಶಿಕ್ಷೆ ವಿಧಿಸಬಹುದಾಗಿ ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಅರಿವಿಲ್ಲದೇ ಇರುವುದರಿಂದ ಅವರು ಇದನ್ನು ಜಾರಿಗೆ ತರುವ ಗೋಜಿಗೆ ಹೋಗುತ್ತಿಲ್ಲ.

ನಿತ್ಯವೂ ಪಟ್ಟಣದಲ್ಲಿ ವಾಯು ಮಾಲಿನ್ಯ: ಕಠಿಣ ಕಾನೂನು ಇದ್ದರೂ ಇದುವರೆಗೂ ಯಾರ ಮೇಲೂ ಪ್ರಯೋಗ ಮಾಡಿಲ್ಲ. ಹೀಗಾಗಲೆ ಕೆಲವರು ಕಸದ ರಾಶಿ ಕರಗಿಸಲು ಬೆಂಕಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೂ ದುಷ್ಟಪರಿಣಾಮ ಬೀರುತ್ತಿದೆ. ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಇರುವುದರಿಂದ ನಿತ್ಯವೂ ಪಟ್ಟಣದಲ್ಲಿ ವಾಯು ಮಾಲಿನ್ಯದಂತಹ ಘಟನೆಗಳು ಹೆಚ್ಚುತ್ತಿವೆ.

ಆರೋಗ್ಯಕ್ಕೆ ಮಾರಕ ಬೆಂಕಿ: ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ವಾರ್ಡ್‌ನ ಜನತೆ ದುರ್ವಾಸನೆ ತಾಳಲಾರದೆ ಬೆಂಕಿ ಇಟ್ಟು ಸುಟ್ಟು ಹಾಕುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪಾಲಿಕೆ ಅಧಿಕಾರಿಗಳು ಎಲ್ಲೆಂದರಲ್ಲಿ ಕಸ ಬಿಸಾಡುವ ವ್ಯಕ್ತಿ ಪತ್ತೆ ಹಚ್ಚುತ್ತಿಲ್ಲ. ಹೀಗಾಗಿ ಕಸಕ್ಕೆ ಬೆಂಕಿ ಹಾಕುವ ಪ್ರವೃತ್ತಿ ಪಟ್ಟಣದಲ್ಲಿ ನಡೆಯುತ್ತಿದೆ. ಕಸಕ್ಕೆ ಬೆಂಕಿ ಹಾಕುವುದರಿಂದ ವಿಷಕಾರಿ ಅನಿಲ ಹೊರಬರುತ್ತದೆ, ಇದು ಆರೋಗ್ಯಕ್ಕೆ ಮಾರಕವಾಗುತ್ತಿವೆ.

ಮುಂಜಾನೆ ವೇಳೆ ಬೆಂಕಿ ಹಾಕಲಾಗುತ್ತೆ: ಪಟ್ಟಣದಲ್ಲಿ ಅನೇಕ ಬಾರ್‌ ಅಂಡ್‌ ರೆಸ್ಟೋರೆಂಟ್‌, ವೈನ್‌ ಶಾಪ್‌ ನಲ್ಲಿ ಬೀಳುವ ಟೆಟ್ರಾಪ್ಯಾಕ್‌, ಪ್ಲಾಸ್ಟಿಕ್‌ ಲೋಟ ಸೇರಿದಂತೆ ಮಣ್ಣಿನಲ್ಲಿ ಕರಗದ ಕಸವನ್ನು ಆಯಾ ಅಂಗಡಿ ಮಾಲೀಕರೇ ಮುಂದೆ ನಿಂತು ತಮ್ಮ ಕೂಲಿ ಕಾರ್ಮಿಕರ ಮೂಲಕ ರಸ್ತೆಗೆ ಬದಿಗೆ ಸುರಿಸಿ ಬೆಂಕಿ ಹಾಕಿಸುತ್ತಾರೆ. ಇನ್ನು ಗ್ಯಾರೇಜ್‌ ಮಾಲೀಕರು, ಪ್ಲಾಸ್ಟಿಕ್‌ ವಸ್ತುಗಳಿಗೆ ಬೆಂಕಿ ಹಾಕುವುದು ಮಾಮೂಲಾಗಿದೆ. ಅಂಗಡಿ ಮುಂಗಟ್ಟುಗಳು, ಹೋಟೆಲ್‌ನಲ್ಲಿ ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಪುರಸಭೆ ವಾಹನಕ್ಕೆ ನೀಡಲು ಮುಂದಾಗುತ್ತಾರೆ. ಆದರೆ ಪುರಸಭೆ ಆಟೋ ಟಿಪ್ಪರ್‌ಗಳು ನಿತ್ಯವೂ ಕಸ ಸಂಗ್ರಹಣೆಗೆ ತೆರಳದೇ ಇರುವುದರಿಂದ ಅನ್ಯ ಮಾರ್ಗವಿಲ್ಲದೆ ರಾತ್ರಿ ವೇಳೆ ಅಂಗಡಿ ಬಾಗಿಲು ಹಾಕುವ ಸಮಯದಲ್ಲಿ ಕಸವನ್ನು ತಮ್ಮ ಅಂಗಡಿ ಮುಂದೆ ಸುರಿದು ಬೆಂಕಿ ಹಾಕುತ್ತಾರೆ. ಕೆಲವರು ನಾಲೆ ಏರಿ ಮೇಲಿ ಸುರಿದು ಬೆಂಕಿ ಹಾಕುತ್ತಾರೆ.

Advertisement

ನೀರಾವರಿ ಅಧಿಕಾರಿ ಬೇಜವಾಬ್ದಾರಿ: ನೀರಾವರಿ ಇಲಾಖೆಯಲ್ಲಿ ಉದ್ಯಾನವನ ನೋಡಿಕೊಳ್ಳಲು ಕಾವಲುಗಾರರನ್ನು ನೇಮಿಸಿ ಕೈ ತೊಳೆದುಕೊಂಡಿದ್ದಾರೆ. ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ವಿಚಾರಣೆ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಸರ್ಕಾರ ವೇತನದ ಅನೇಕ ಭತ್ಯಗೆಳನ್ನು ನೀಡಿ ಜೊತೆಗೆ ವಾಹನ ವ್ಯವಸ್ಥೆ ಕಲ್ಪಿಸಿದೆ. ಆದರೂ ಹೇಮಾವತಿ ನಾಲೆ ಮೇಲೆ ಆಗುತ್ತಿರುವ ವಾಯು ಮಾಲಿನ್ಯ ತಪ್ಪಿಸಲು ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ.

ನಾಲೆ ಏರಿಮೇಲೆ ಹೆಚ್ಚು ಬೆಂಕಿ: ಹೇಮಾವತಿ ನಾಲೆ ಮೇಲೆ ಆಟೋದಲ್ಲಿ ಆಗಮಿಸುವವರು ಕಸವನ್ನು ತಂದು ಸುರಿಯುತ್ತಾರೆ. ನಿರುಪಯುಕ್ತ ವಸ್ತುಗಳಿಗೆ ಬೆಂಕಿ ಹಾಕಲಾಗುತ್ತಿದೆ, ಇದರಿಂದ ಹೇಮಾವತಿ ಉದ್ಯಾನವನದಲ್ಲಿ ವಾಯುವಿಹಾರ ನಡೆಸುವವರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ವಾಯು ಮಾಲಿನ್ಯದಲ್ಲಿಯೇ ವಾಯು ವಿಹಾರ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಇನ್ನೂ ಪಟ್ಟಣಕ್ಕೆ ಆಗಮಿಸುವ ನಾಗಸಮುದ್ರ ಹಾಗೂ ಬೆಲಸಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

ಹೇಮಾವತಿ ಉದ್ಯಾನವನದ ಸುತ್ತ ಕಸ ಸುರಿಯುವುದ್ದನ್ನು ತಡೆಗೆ ಕ್ರಮ ಕೈಗೊಳ್ಳಲಾಗುವುದು. ಸಿಸಿ ಕ್ಯಾಮೆರಾ ಅಳವಡಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲ್ಲಿ ಯಾರಾದರೂ ಕಸ, ತ್ಯಾಜ್ಯ ಸುರಿದರೆ ಸಿಸಿ ಕ್ಯಾಮೆರಾ ಮೂಲಕ ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ● ಸಿ.ಎನ್‌.ಬಾಲಕೃಷ್ಣ ಶಾಸಕ.

ಶ್ರವಣಬೆಳಗೊಳ ಕ್ಷೇತ್ರ ಪ್ಲಾಸ್ಟಿಕ್‌ ವಸ್ತುಗಳಿಗೆ ಬೆಂಕಿ ಹಾಕುವುದ ರಿಂದ ವಾಯು ಮಾಲಿನ್ಯವಾಗುತ್ತಿದೆ. ಅನೇಕ ರೋಗಗಳು ಬರುತ್ತವೆ. ದಯಾಮಾಡಿ ಪುರಸಭೆ ಅಧಿಕಾರಿಗಳು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗಿದೆ. ● ಅಶೋಕ್‌, ಪರಿಸರ ಪ್ರಶಸ್ತಿ ಪುರಸ್ಕೃತರು

ಹೇಮಾವತಿ ನಾಲೆ ಏರಿ ಮೇಲೆ ಸಂಗ್ರಹವಾಗಿದ್ದ ಕಸವನ್ನು ತೆರವು ಮಾಡಿ ಹಲವು ಬಾರಿ ಸ್ವತ್ಛತೆ ಮಾಡಲಾಗಿದೆ. ನೀರಾವರಿ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿ ಯಿಂದ ನಾಲೆ ಏರಿ ಮೇಲೆ ಪದೇ ಪದೆ ಕಸ ಸುರಿದು ಬೆಂಕಿ ಹಚ್ಚಲಾಗುತ್ತಿದೆ. ● ಹೇಮಂತ್‌, ಪುರಸಭೆ ಮುಖ್ಯಾಧಿಕಾರಿ

– ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next