Advertisement

ತಿಂಗಳಾದರೂ ಪ್ರಗತಿ ಕಾಣದ ‘ಕಲಿಕಾ ಚೇತರಿಕೆ’

11:06 AM Jun 17, 2022 | Team Udayavani |

ದಾವಣಗೆರೆ: ಕೊರೊನಾ ಸಾಂಕ್ರಾಮಿಕದಿಂದ ಕಳೆದ 3 ವರ್ಷ ಮಕ್ಕಳ ಕಲಿಕೆಯಲ್ಲಾದ ಕೊರತೆ ಸರಿದೂಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ “ಕಲಿಕಾ ಚೇತರಿಕೆ’ ಕಾರ್ಯಕ್ರಮ ರಾಜ್ಯಾದ್ಯಂತ ತಿಂಗಳಾದರೂ ಚೇತರಿಕೆಯನ್ನೇ ಕಂಡಿಲ್ಲ!

Advertisement

ಪ್ರಸಕ್ತ ಸಾಲಿನ ನೂತನ “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಅನುಷ್ಠಾನಕ್ಕೆ ಬೇಕಾದ ಅಗತ್ಯ ಕಲಿಕಾ ಹಾಳೆಗಳು, ಶಿಕ್ಷಕರ ಕೈಪಿಡಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೈ ಸೇರದೇ ಇರುವುದರಿಂದ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಕ ವಿಘ್ನ ಎದುರಿಸುವಂತಾಗಿದ್ದು, ಕಲಿಕಾ ಚೇತರಿಕೆಗೆ ಭಾರೀ ಹಿನ್ನಡೆಯಾಗಿದೆ.

“ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ವಿದ್ಯಾರ್ಥಿಗಳಿಗೆ ನೀಡುವ ವಿಶೇಷ ಕಲಿಕಾ ಹಾಳೆಗಳು ಹಾಗೂ ಕಲಿಸಲು ಶಿಕ್ಷಕರಿಗೆ ನೀಡುವ ಕೈಪಿಡಿ ಅತ್ಯವಶ್ಯ. ಶಾಲೆ ಆರಂಭವಾಗಿ ಒಂದು ತಿಂಗಳಾದರೂ ಕಲಿಕಾ ಹಾಳೆಯೂ ಇಲ್ಲ. ಇತ್ತ ಶಿಕ್ಷಕರ ಕೈಪಿಡಿಯೂ ಇಲ್ಲದೆ ಶಾಲೆಗಳಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗೆ ಇನ್ನೂ ಅಧಿಕೃತ ಚಾಲನೆಯೇ ಸಿಕ್ಕಿಲ್ಲ.

ರಾಜ್ಯದ ಕೆಲವು ಕಡೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ನಿರ್ವಹಣಾ ಅನುದಾನ ಬಳಸಿಕೊಂಡು ಕಲಿಕಾ ಹಾಳೆ ಝೆರಾಕ್ಸ್‌ ಮಾಡಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ. ಆದರೆ ವಾಸ್ತವದಲ್ಲಿ ಶಾಲಾ ನಿರ್ವಹಣೆ ಅನುದಾನ ಈವರೆಗೆ ಖಾತೆಗೆ ಜಮೆಯೇ ಆಗಿಲ್ಲ. ಶಿಕ್ಷಕರು ಸ್ವಂತ ಖರ್ಚಿನಲ್ಲಿ ಈಗ ಝೆರಾಕ್ಸ್‌ ಮಾಡಿಸಿ ಶಾಲಾ ಅನುದಾನ ಬಂದ ಬಳಿಕ ಪಡೆದುಕೊಳ್ಳುವಂತೆ ಕೆಲವು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದರೂ ಬಹುತೇಕ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಕಲಿಕಾ ಹಾಳೆ ಝೆರಾಕ್ಸ್‌ ಮಾಡಿಸಲು ಮುಂದಾಗಿಲ್ಲ. ಹೀಗಾಗಿ “ಕಲಿಕಾ ಚೇತರಿಕೆ’ ಮೊದಲ ಹೆಜ್ಜೆಯನ್ನೇ ಇಟ್ಟಿಲ್ಲ.

ಕಲಿಕಾ ಹಾಳೆ, ಕೈಪಿಡಿ ಇಲ್ಲದೇ ಇರುವುದರಿಂದ ಶಿಕ್ಷಕರು ಕಳೆದ ಒಂದು ತಿಂಗಳಿಂದ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಯ ಕೆಲವು ಪಾಠಗಳನ್ನೇ ಪುನರಾವಲೋಕನ ಮಾಡುತ್ತಿದ್ದಾರೆ. ಇನ್ನು ಕೆಲವು ಶಿಕ್ಷಕರು ಸಾಮಾನ್ಯ ಜ್ಞಾನದ ಸಂಗತಿಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೆ ಕೆಲ ಶಿಕ್ಷಕರು ಮಕ್ಕಳನ್ನು ಬೇರೆ ಬೇರೆ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳ ನಿರೀಕ್ಷೆಯಲ್ಲಿದ್ದಾರೆ.

Advertisement

ಕಲಿಕಾ ಚೇತರಿಕೆ ಕಾರ್ಯಕ್ರಮ ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿದ್ದ “ಸೇತುಬಂಧ’ ಮಾದರಿ ಯಲ್ಲೇ ಇದ್ದರೂ ಮೂರು ವರ್ಷಗಳ ಕಲಿಕಾ ಕೊರತೆ ನೀಗಿಸಲು ವಿಶೇಷ ಚಟುವಟಿಕೆ ಅಳವಡಿಸಿ ರೂಪಿಸಿದ ಕಾರ್ಯಕ್ರಮ ಇದಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ “ಸೇತುಬಂಧ’ ಕಾರ್ಯಕ್ರಮವನ್ನು ಒಂದು ತಿಂಗಳು ನಡೆಸಲಾಗುತ್ತದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಹಿಂದಿನ ಮೂರು ವರ್ಷಗಳ ಕಲಿಕಾ ಕೊರತೆ ಸರಿದೂಗಿಸ ಬೇಕಾಗಿರುವುದರಿಂದ “ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಒಂದೂವರೆ ತಿಂಗಳು ನಡೆಸಲು ಇಲಾಖೆ ಯೋಜನೆ ಹಾಕಿ ಕೊಂಡಿತ್ತು. ಆದರೆ ಒಂದು ತಿಂಗಳು ಕಳೆದರೂ ಶುರುವಾಗಿಲ್ಲ.

ಸಿದ್ಧವಾಗಿದೆ, ಪೂರೈಕೆಯಾಗಿಲ್ಲ: “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಕಲಿಕಾ ಕೊರತೆ ಯಾವ ರೀತಿ ಸರಿದೂಗಿಸಬೇಕು ಎಂಬ ಕುರಿತು ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶನದಂತೆ ಡಿಎಸ್‌ಇಆರ್‌ಟಿ ವತಿಯಿಂದ ಹೊಸ ಮಾರ್ಗಸೂಚಿ ಸಿದ್ಧಪಡಿಸುವ ಕಾರ್ಯ ಆಗಿದೆ. ಇದಕ್ಕೆ ಬೇಕಾದ ಕಲಿಕಾ ಹಾಳೆ, ಶಿಕ್ಷಕರ ಕೈಪಿಡಿಯೂ ಸಿದ್ಧವಾಗಿದೆ. ಇವುಗಳನ್ನು ಆನ್‌ಲೈನ್‌ ನಲ್ಲಿಯೂ ಪ್ರಕಟಿಸಲಾಗಿದೆ. ಆದರೆ ಅವುಗಳನ್ನು ಮುದ್ರಿಸಿ ಪೂರೈಸುವ ಕಾರ್ಯ ಆಗಿಲ್ಲ. ಹೀಗಾಗಿ ಕಲಿಕಾ ಚೇತರಿಕೆ’ ಕಾರ್ಯಕ್ರಮ ಆರಂಭಕ್ಕೂ ಮೊದಲೇ ಕಮರಿದಂತಾಗಿದೆ.

ಮಕ್ಕಳಲ್ಲಿನ ಕಲಿಕಾ ಕೊರತೆ ತುಂಬುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ವರ್ಷ 15 ದಿನ ಮುಂಚಿತವಾಗಿಯೇ ಅಂದರೆ ಮೇ 15ರಿಂದಲೇ ಶಾಲೆಗಳನ್ನು ಪುನಾರಂಭಗೊಳಿ ಸಿತ್ತು. ಶಿಕ್ಷಕರು ಬೇಸಿಗೆ ರಜೆಯಲ್ಲಿರುವಾಗಲೇ ಅವರನ್ನು ಕರೆಸಿ “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಕುರಿತು ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಿತ್ತು.

ಆದರೆ ಸಕಾಲಕ್ಕೆ ಕಲಿಕಾ ಹಾಳೆ ಹಾಗೂ ಶಿಕ್ಷಕರ ಕೈಪಿಡಿ ಪೂರೈಕೆ ಮಾಡಲು ಆಸಕ್ತಿ ವಹಿಸದೇ ಇರುವುದರಿಂದ ಬಹು ನಿರೀಕ್ಷಿತ ಕಾರ್ಯಕ್ರಮಕ್ಕೆ ಭಾರೀ ಹಿನ್ನಡೆಯಾಗಿದೆ. ಇದು ಪರೋಕ್ಷವಾಗಿ ಮತ್ತೆ ಮಕ್ಕಳ ಕಲಿಕೆಯ ಮೇಲೆಯೇ ದುಷ್ಪರಿ ಣಾಮಕ್ಕೆ ದಾರಿಯಾಗಿರುವುದು ದುರಂತ.

ಮುದ್ರಣವೇ ಆಗಿಲ್ಲ?

ಕಲಿಕಾ ಕೊರತೆ ಸರಿದೂಗಿಸುವ “ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಕಲಿಕಾ ಹಾಳೆಗಳು, ಶಿಕ್ಷಕರ ಕೈಪಿಡಿ ಇನ್ನೂ ಮುದ್ರಣವೇ ಆಗಿಲ್ಲ. ಮುದ್ರಣಕ್ಕೆ ಕಾಗದದ ಸಮಸ್ಯೆ ಎದುರಾಗಿದೆ ಎಂದು ಕೆಲವು ಮೂಲಗಳು ಹೇಳಿದರೆ, ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದಿಂದಾಗಿ ಇಲಾಖೆ ಈ ಕಾರ್ಯಕ್ರಮ ಅನುಷ್ಠಾನದತ್ತ ಉದಾಸೀನ ಮಾಡಿದೆ ಎಂದು ಮತ್ತೆ ಕೆಲವರು ಆರೋಪಿಸುತ್ತಿದ್ದಾರೆ. ಇದಕ್ಕೆ ಇಲಾಖೆ ಮುಖ್ಯಸ್ಥರು ಹಾಗೂ ಇಲಾಖೆಯ ಸಚಿವರೇ ಸ್ಪಷ್ಟನೆ ನೀಡಬೇಕಿದೆ.

“ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಕಲಿಕಾ ಹಾಳೆ, ಶಿಕ್ಷಕರ ಕೈಪಿಡಿ ಇನ್ನೂ ಪೂರೈಕೆಯಾಗಿಲ್ಲ. ಸದ್ಯಕ್ಕೆ ಶಾಲಾನುದಾನ ಬಳಸಿಕೊಂಡು ಝೆರಾಕ್ಸ್‌ ಮಾಡಿಸಿಕೊಳ್ಳಬೇಕು. ಅನುದಾನ ಬಾರದೇ ಇದ್ದರೆ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಮಾಡಿಸಿಕೊಂಡು ಅನುದಾನ ಬಂದ ಬಳಿಕ ಹಣ ಪಡೆಯಲು ಶಾಲಾ ಮುಖ್ಯಾಧ್ಯಾಪಕರಿಗೆ ಸೂಚಿಸಿದ್ದೇವೆ. ●ನಿರಂಜನಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ದಾವಣಗೆರೆ       

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next