Advertisement

ಕೈ ನಾಯಕರ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷದ ನಾಯಕರು

07:33 PM Jan 12, 2022 | Team Udayavani |

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಹಿರಿಯ ಸಚಿವರು ಹಾಗೂ ಬಿಜೆಪಿ ಶಾಸಕರು ಕಾಂಗ್ರೆಸ್‌ ನಾಯಕರ ವಿರುದ್ಧ ಸಾಮೂಹಿಕ ವಾಗ್ಧಾಳಿ ನಡೆಸಿದ್ದಾರೆ.

Advertisement

ಬುಧವಾರ ಬೆಳಿಗ್ಗೆಯಿಂದಲೇ ಸಚಿವರು ಹಾಗೂ ಬಿಜೆಪಿ ಶಾಸಕರು ಮತ್ತು ಪಕ್ಷದ ನಾಯಕರು ಸರತಿಯಲ್ಲಿ ಕಾಂಗ್ರೆಸ್‌ನ ಪಾದಯಾತ್ರೆಯ ಕುರಿತು ಪತ್ರಿಕಾಗೋಷ್ಠಿ ನಡೆಸಿ, ಕೊರೋನಾ, ಒಮಿಕ್ರಾನ್‌ ವೈರಸ್‌ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌. ಅಶೋಕ್‌ ಪತ್ರಿಕಾ ಹೇಳಿಕೆ ನೀಡಿ, ಕಾಂಗ್ರೆಸ್‌ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿಯಮ ಮೀರಿ ಪಾದಯಾತ್ರೆ ನಡೆಸುತ್ತಿರುವುದಕ್ಕೆ ಹೈಕೋರ್ಟ್‌ ಚಾಟಿ ಬೀಸಿದರೂ, ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕರು ಸಂವಿಧಾನ ಮತ್ತು ನಾಡಿನ ಕಾನೂನಿಗೆ ಬೆಲೆ ಕೊಡದ ಭಂಡತನ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌, ಬುಧವಾರ ಬೆಳಿಗ್ಗೆಯೇ ಕಾಂಗ್ರೆಸ್‌ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿ, ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್‌ ಕೊರೊನಾ ಹಬ್ಬಿಸುವ ಪಾದಯಾತ್ರೆ ನಡೆಸುತ್ತಿದೆ. ಅಧಿಕಾರ ನಡೆಸಿರುವ ಕಾಂಗ್ರೆಸ್‌ ನಾಯಕರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ಬಂಧನ ಮಾಡುವುದು ದೊಡ್ಡದಲ್ಲ. ಕಾಂಗ್ರೆಸ್‌ ನಾಯಕರು ಜವಾಬ್ದಾರಿಯಿಂದ ನಡೆದುಕೊಳ್ಳುವುದು ಕಲಿಯಬೇಕು ಎಂದು ಹೇಳಿದರು.

Advertisement

ಇದನ್ನೂ ಓದಿ:ಮಲೈಕಾ ಜತೆಗಿನ ಬ್ರೇಕ್ ಅಪ್ ವದಂತಿ ತಳ್ಳಿಹಾಕಿದ ಅರ್ಜುನ್ ಕಪೂರ್

ನಂತರ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಾಲ್ವರು ಬೆಂಗಳೂರು ನಗರ ಶಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‌ನ ಬೇಜವಾಬ್ದಾರಿ ಪಾದಯಾತ್ರೆಯಿಂದ ಬೆಂಗಳೂರಿಗೆ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ.

ಸರ್ಕಾರ ಪಾದಯಾತ್ರೆ ಬೆಂಗಳೂರಿಗೆ ತಲುಪಲು ಅವಕಾಶ ನೀಡಬಾರದು. ಕಾಂಗ್ರೆಸ್‌ ನಾಯಕರನ್ನು ಬಂಧಿಸುವಂತೆ ಆಗ್ರಹಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ದೊಡ್ಡರಂಗೇಗೌಡ ಹಾಗೂ ನಟಿ ಶ್ರುತಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‌ನ ವಿಳಂಬ ದ್ರೋಹದಿಂದ ಮೇಕೆದಾಟು ಯೋಜನೆ ನೆನೆಗುದಿಗೆ ಬಿದ್ದಿದ್ದು, ಕೊವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಮೀರಿ ಪಾದಯಾತ್ರೆ ನಡೆಸುತ್ತಿರುವುದನ್ನು ನಾಡಿನ ಸಾಹಿತಿಗಳು, ಬುದ್ದಿಜೀವಿಗಳು ವಿರೋಧ ಮಾಡಬೇಕಿತ್ತು ಎಂದು ದೊಡ್ಡರಂಗೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

ನಟಿ ಶ್ರತಿ, ಕಾಂಗ್ರೆಸ್‌ನ ಚಿತ್ರಕಥೆಯೇ ಸರಿಯಿಲ್ಲ. ಅದೂ ನಡು ಬೀದಿಯಲ್ಲಿ ಬಹಿರಂಗಗೊಂಡಿದ್ದು, ಇದು ಯಶಸ್ವಿಯಾಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next