Advertisement

ದಂಡ ಮನ್ನಾಗಾಗಿ ಸುಪ್ರೀಂ ಪೀಠಗಳ ತಲೆ ತಿಂದ ವಕೀಲ! ಕೊನೆಗೆ ಜಡ್ಜ್ ವಿರುದ್ಧವೇ ಸಿಜೆಐಗೆ ದೂರು

09:47 PM Jul 09, 2024 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ ಮಂಗಳವಾರ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಪುಣೆ ಮೂಲದ ವಕೀಲರೊಬ್ಬರು ತಮ್ಮ ಮೇಲೆ ಕೋರ್ಟ್‌ಗಳು ವಿಧಿಸಿರುವ ದಂಡ ಹಿಂಪಡೆಯುವಂತೆ ಕೋರಿ ವಿವಿಧ ಪೀಠಗಳಲ್ಲಿ ಒಂದೇ ದಿನ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಕೋರ್ಟ್‌ ಒಪ್ಪದ ಕಾರಣ ನ್ಯಾಯಮೂರ್ತಿಗಳ ವಿರುದ್ಧ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ್ದಾರೆ.

Advertisement

ಸುಪ್ರೀಂಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಿಸಬೇಕು ಎಂದು ವಕೀಲ ಅಶೋಕ್‌ ಪಾಂಡೆ ಕಳೆದ ವರ್ಷ ಪಿಐಎಲ್‌ ಸಲ್ಲಿಸಿದ್ದರು. ತಿರಸ್ಕರಿಸಿದ್ದ ನ್ಯಾಯಪೀಠ 50,000ರೂ. ದಂಡ ವಿಧಿಸಿತ್ತು. ಇದನ್ನು ಹಿಂಪಡೆಯುವಂತೆ ಕೋರಿ ಮಂಗಳವಾರ ನ್ಯಾ|ಅಭಯ್‌ ಓಕಾ ಮತ್ತು ನ್ಯಾ|ಮನೀಶ್‌ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕೋರ್ಟ್‌ ತೀರ್ಪು ನೀಡಿದ ಬಳಿಕ ನೀವು ವಿದೇಶ ಪ್ರಯಾಣ ಮಾಡಿದ್ದೀರಿ. ಈಗ ಹಣ ಕಟ್ಟಲಾಗುವುದಿಲ್ಲ ಎನ್ನುವಂತಿಲ್ಲ. 2 ವಾರದೊಳಗೆ ದಂಡ ಕಟ್ಟಿ ಎಂದು ತಾಕೀತು ಮಾಡಿತು.

ಈ ವೇಳೆ ನಾನು ಬಡವ, ಯಾವುದೇ ಪ್ರಕರಣಗಳು ನನ್ನ ಕೈಲಿಲ್ಲ ಹೀಗಾಗಿ ಕೋರ್ಟ್‌ ದಂಡ ಹಿಂಪಡೆಯಬೇಕು ಎಂದು ಕೈ ಮುಗಿದು ಪಾಂಡೆ ಬೇಡಿಕೊಂಡರು. 1 ಲಕ್ಷ ರೂ. ದಂಡದ ಪ್ರಕರಣದಲ್ಲಿ ನ್ಯಾ|ಬಿ.ಆರ್‌.ಗವಾಯಿ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಸಿದ ಪಾಂಡೆ, ನೀವು ಮುಂದಿನ ಸಿಜೆ ಆಗಲಿದ್ದೀರಿ. ನನ್ನ ದಂಡ ಹಿಂಪಡೆಯಿರಿ ಎಂದು ಮನವಿ ಮಾಡಿದರು. ಕೋಪಗೊಂಡ ನ್ಯಾ|ಗವಾಯಿ, ಹೊರಹೋಗದಿದ್ದರೆ ಸೆಕ್ಯುರಿಟಿಯನ್ನು ಕರೆಯಲಾಗುವುದು ಎಂದರು.

ತಕ್ಷಣ ಸಿಜೆಐ ಬಳಿ ಧಾವಿಸಿದ ಪಾಂಡೆ, ನನ್ನ ಲೈಸೆನ್ಸ್‌ ರದ್ದು ಮಾಡುವುದಾಗಿ ಜಡ್ಜ್ ಬೆದರಿಕೆ ಒಡ್ಡಿದ್ದಾರೆಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಚಂದ್ರಚೂಡ್‌, ಕೋರ್ಟ್‌ ಸಮಯ ವ್ಯರ್ಥ ಮಾಡದಂತೆ ಪಾಂಡೆಗೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next