Advertisement

ಪಾಲಿಕೆ ಸ್ಪರ್ಧಾ ಕಣದ ಅಭ್ಯರ್ಥಿಗಳಿಂದ ಕೊನೆ ಕ್ಷಣದ ಕಸರತ್ತು

10:31 PM Oct 30, 2019 | Team Udayavani |

ಮಹಾನಗರ: ಮನಪಾ ಚುನಾವಣೆಗೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾದ ಹಿನ್ನೆಯಲ್ಲಿ ಕೊನೇ ಕ್ಷಣದಲ್ಲಿ ನಾಮಪತ್ರ ಸಲ್ಲಿಸುವ ತರಾತುರಿ ನಗರದ 12 ಚುನಾವಣಾಧಿಕಾರಿ ಕಚೇರಿಯಲ್ಲಿ ಬುಧವಾರ ಕಂಡು ಬಂತು.

Advertisement

ನಾಮಪತ್ರ ಸಲ್ಲಿಕೆಗೆ ಅ. 31 ಕೊನೆಯ ದಿನವಾಗಿರುವುದರಿಂದ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವವರ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಲಿದೆ. 60 ವಾರ್ಡ್‌ಗಳಿಗೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿ ಬುಧವಾರ ರಾತ್ರಿ ಪ್ರಕಟಿಸಿದ ಹಿನ್ನೆಲೆಯಲ್ಲಿ 60 ಅಭ್ಯರ್ಥಿಗಳು ಗುರುವಾರವೇ ನಾಮಪತ್ರ ಸಲ್ಲಿಸಬೇಕಿದೆ. ಜತೆಗೆ ಬಿಜೆಪಿಯ ಕೆಲವರು, ಜೆಡಿಎಸ್‌ ಹಾಗೂ ಇತರ ಪಕ್ಷದ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಬುಧವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜೋರಾಗಿತ್ತು. ಬೆಳಗ್ಗೆಯಿಂದಲೇ ಪಾಲಿಕೆ ಆವರಣ ಹಾಗೂ ನಗರದ ವಿವಿಧೆಡೆಗಳ ಚುನಾವಣಾಧಿಕಾರಿ ಕಚೇರಿಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಧಾವಂತದಲ್ಲಿದ್ದರು. ಈ ಮಧ್ಯೆ ನಾಮಪತ್ರಗಳ ಸಂಖ್ಯೆಯಲ್ಲಿ ಬುಧವಾರ ಏರಿಕೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದರ ಪರಿಶೀಲನೆಯಲ್ಲಿ ಹೆಚ್ಚು ನಿಗಾ ವಹಿಸಿದ್ದಾರೆ. ಪಾಲಿಕೆ ಆವರಣ ಹಾಗೂ ವಿವಿಧ ಚುನಾವಣಾ ಅಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಚುನಾವಣೆ ಹಿನ್ನಲೆಯಲ್ಲಿ 12 ಚುನಾವಣಾಧಿಕಾರಿ, ಸಹಾಯಕ ಚುನಾ ವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಅವರಿಗೆ ಅಭ್ಯರ್ಥಿಗಳು ಬುಧವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮಹಾನಗರಪಾಲಿಕೆ ವಲಯ ಕಚೇರಿ ಸುರತ್ಕಲ್‌ನಲ್ಲಿ ರವಿಚಂದ್ರ ನಾಯಕ್‌, ವೆಂಕಟೇಶ್‌, ಜಿಲ್ಲಾ ಪಂಚಾಯತ್‌ ಉಪನೀರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾ| ಯೋಗೀಶ್‌ ಎಸ್‌.ಬಿ., ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡದಲ್ಲಿ 1ನೇ ಮಹಡಿಯಲ್ಲಿ ಭಾನು ಪ್ರಕಾಶ್‌, ಯೆಯ್ನಾಡಿ ಕೈಗಾರಿಕಾ ವಸಾಹತು ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಗೋಕುಲ್‌ ದಾಸ್‌ ನಾಯಕ್‌, ಆನೆಗುಂಡಿ ರಸ್ತೆ, ಬಿಜೈ ಕಾಪಿಕಾಡ್‌ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಚಿನ್‌ ಕುಮಾರ್‌, ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿಯಲ್ಲಿ ಉಸ್ಮಾನ್‌ ಎ., ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿಯಲ್ಲಿ ಉದಯ ಶೆಟ್ಟಿ, ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿಯಲ್ಲಿ ಡಾ| ಎಂ. ದಾಸೇಗೌಡ, ಬಂದರು ಮೀನುಗಾರಿಕೆ ಉಪನಿರ್ದೇಶಕರ ಕಚೇರಿ, ಮಾಹಿತಿ ಕೇಂದ್ರ ಕಟ್ಟಡ, 1ನೇ ಮಹಡಿಯಲ್ಲಿ ತಿಪ್ಪೇಸ್ವಾಮಿ, ವೆಲೆನ್ಸಿಯಾ ಮಹಾನಗರಪಾಲಿಕೆ ಮಂಗಳೂರು ವಾರ್ಡ್‌ ಕಚೇರಿಯಲ್ಲಿ ಅಪ್ಪಾಜಿ ಗೌಡ, ಮಿನಿ ವಿಧಾನಸೌಧದ 2ನೇ ಮಹಡಿಯ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಎಸ್‌.ಕೆ. ಚಂದ್ರಶೇಖರ್‌ ಅವರು ನಾಮಪತ್ರ ಸ್ವೀಕರಿಸಿದ್ದಾರೆ.

ಒಟ್ಟು 45 ನಾಮಪತ್ರ ಸಲ್ಲಿಕೆ
ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ವಿವಿಧ ಪಕ್ಷಗಳ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿದೆ. ಕಾಂಗ್ರೆಸ್‌ ಪಕ್ಷದಿಂದ 7, ಬಿಜೆಪಿಯಿಂದ 10, ಜೆಡಿಎಸ್‌ನಿಂದ 5, ಸಿಪಿಐನಿಂದ 1, ಸಿ.ಪಿ.ಐ.(ಎಂ)6, ಎಸ್‌.ಡಿ.ಪಿ.ಐ. 5, ವೆಲ್ಫೆàರ್‌ ಪಾರ್ಟಿ ಆಫ್‌ ಇಂಡಿಯಾದಿಂದ 3, ಪಕ್ಷೇತರರಿಂದ 8 ನಾಮಪತ್ರ ಸಲ್ಲಿಕೆಯಾಗಿದೆ.

Advertisement

ಪೊಲೀಸ್‌ ಭದ್ರತೆ
ನಾಮಪತ್ರ ಸಲ್ಲಿಕೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ನಾಮಪತ್ರ ಸಲ್ಲಿಸುವ ಸಂದರ್ಭ ಮೆರವಣಿಗೆ ಮಾಡಲು ಅವಕಾಶ ನೀಡಬಾರದು ಎಂದು ಪೊಲೀಸ್‌ ಇಲಾಖೆಯು ಪಾಲಿಕೆಗೆ ಮನವಿ ಮಾಡಿರುವ ಪರಿಣಾಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next