Advertisement

ಜ್ಞಾನ ಗಂಗೋತ್ರಿಯಲ್ಲಿ ಇಂದಿನಿಂದ ‘ಭಾಷಾ ಕೌಶಲ್ಯ ಕಮ್ಮಟ’

09:46 AM Mar 19, 2022 | Team Udayavani |

ಚಿತ್ರದುರ್ಗ: ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಮಾ.19ರಿಂದ 28ರ ವರೆಗೆ ಗಿರಿಜನ ಉಪಯೋಜನೆಯಡಿ ಹತ್ತುದಿನಗಳ ‘ಭಾಷಾ ಕೌಶಲ್ಯ ಕಮ್ಮಟ’ (ಕನ್ನಡ ಶೈಲಿ-ಹಸ್ತಪ್ರತಿ ಸಿದ್ಧತೆ-ಕರಡು ತಿದ್ದುವಿಕೆ) ಜಿ.ಆರ್‌. ಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಜ್ಞಾನಗಂಗೋತ್ರಿಯಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್‌ ಹೇಳಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ 45 ಜನ ಶಿಬಿರಾರ್ಥಿಗಳು ಭಾಷಾ ಕೌಶಲ್ಯ ಕಮ್ಮಟದಲ್ಲಿ ಭಾಗವಹಿಸುವರು. ಭಾಷಾ ಕಮ್ಮಟದಲ್ಲಿ ಭಾಗವಹಿಸಲು 180 ಅರ್ಜಿಗಳು ಸಲ್ಲಿಕೆ ಆಗಿದ್ದವು. ಜಿಲ್ಲಾ ಪ್ರಾತಿನಿಧಿಕ ನೆಲೆಯಲ್ಲಿ 50 ಅರ್ಜಿ ಆಯ್ಕೆ ಮಾಡಲಾಯಿತು. ಇದರಲ್ಲಿ ಐದು ಶಿಬಿರಾರ್ಥಿಗಳು ಪರೀಕ್ಷ ಕಾರಣದಿಂದ ಕಮ್ಮಟದಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ 45 ಜನ ಶಿಬಿರಾರ್ಥಿಗಳಿಗೆ ಕಮ್ಮಟ ನಡೆಸಲಾಗುತ್ತಿದೆ ಎಂದರು.

ಭಾಷಾ ಕೌಶಲ್ಯ ಕಮ್ಮಟ ನಿರ್ದೇಶಕರಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ.ವೆಂಕಟೇಶ್‌, ಸಹ ನಿರ್ದೇಶಕರಾಗಿ ಡಾ| ಪ್ರೇಮಪಲ್ಲವಿ ಹಾಗೂ ಡಾ| ಎಂ.ಬಿ.ಕಟ್ಟಿ, ಸದಸ್ಯ ಸಂಚಾಲಕರಾಗಿ ಡಾ| ಮಾರ್ಷಲ್‌ ಶರಾಂ, ದೀಪ್ತಿ ಭದ್ರಾವತಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸಾಹಿತ್ಯ, ಸಂಸ್ಕೃತಿ, ಉದ್ಯೋಗ ಭಾಷಾ ಕೌಶಲ್ಯ ಕಮ್ಮಟದ ಆಶಯಗಳಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದಲ್ಲಿ ಸಾಹಿತ್ಯ, ಸಂಸ್ಕೃತಿ ಆಗಾಧವಾಗಿದೆ. ಈ ಸಮುದಾಯಗಳಿಗೆ ಉದ್ಯೋಗ ದೊರಕಬೇಕು. ಆರ್ಥಿಕ ಸ್ವಾವಲಂಬನೆಯಾಗಬೇಕು ಹಾಗೂ ಜಾಗತೀಕರಣ, ತಂತ್ರಜ್ಞಾನ ಬೆಳವಣಿಗೆಯ ಈ ಸಂದರ್ಭದಲ್ಲಿ ಹೊಸಕಾಲಕ್ಕೆ ಬೇಕಾದ ಕೌಶಲ್ಯ ಪಡೆದು ಉದ್ಯೋಗ ಪಡೆಯುವಂತಹ ಅವಕಾಶ ಕನ್ನಡ ಓದಿನ ಮಕ್ಕಳಿಗೆ ಸಿಗಬೇಕು ಎನ್ನುವುದು ಸಾಹಿತ್ಯ ಅಕಾಡೆಮಿಯ ಆಶಯ ಎಂದರು.

ಹತ್ತು ದಿನಗಳ ಕಾಲ ನಡೆಯುವ ಈ ಭಾಷಾ ಕೌಶಲ್ಯ ಕಮ್ಮಟದಲ್ಲಿ ಕನ್ನಡ ಶೈಲಿ-ಹಸ್ತಪ್ರತಿ ಸಿದ್ಧತೆ-ಕರಡು ತಿದ್ದುವಿಕೆ ಈ ಮೂರು ಆಯಾಮಗಳನ್ನಿಟ್ಟುಕೊಂಡು ಕಮ್ಮಟ ಆಯೋಜಿಸಲಾಗಿದೆ. ಅಕಾಡೆಮಿ ಕಮ್ಮಟ ಕೇವಲ ಮಾಹಿತಿ ಆಗಬಾರದು. ಇದರೊಟ್ಟಿಗೆ ಒಂದು ಉತ್ತಮ ಅನುಭವವಾಗಬೇಕಿದೆ. ಪ್ರತಿನಿತ್ಯವೂ ಬೆಳಗ್ಗೆ 6.30ಕ್ಕೆ ಯೋಗ-ಧ್ಯಾನದೊಂದಿಗೆ ಪ್ರಾರಂಭವಾಗಿ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಗಲಿದೆ. ಇದರ ಮಧ್ಯೆಯಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ, ಗೋಷ್ಠಿಗಳು ನಡೆಯಲಿವೆ. ವಿಶೇಷವಾಗಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಪಠ್ಯದ ಓದು ಕಾರ್ಯಕ್ರಮ ಇರಲಿದೆ ಎಂದು ಹೇಳಿದರು.

Advertisement

ಮಾ.19ರಂದು ಬೆಳಿಗ್ಗೆ 10.30ಕ್ಕೆ ಕಮ್ಮಟದ ಉದ್ಘಾಟನಾ ಸಮಾರಂಭ ನಡೆಯಲಿದೆ. ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಡಾ| ಶರಣಪ್ಪ ವಿ.ಹಲಸೆ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಂಶೋಧಕ ಪ್ರೊ|ಲಕ್ಷ ಣ ತೆಲಗಾವಿ, ದಾವಣಗೆರೆ ವಿಶ್ವವಿದ್ಯಾನಿಲಯ ಕುಲಸಚಿವೆ ಡಾ| ಗಾಯತ್ರಿ ದೇವರಾಜ ಭಾಗವಹಿಸುವರು. ಕಮ್ಮಟದ ನಿರ್ದೇಶಕ ಪ್ರೊ| ಮಲ್ಲೇಪುರಂ ಜಿ.ವೆಂಕಟೇಶ್‌ ಪ್ರಾಸ್ತಾವಿಕ ನುಡಿಗಳನ್ನಾಡುವರು. ದಾವಣಗೆರೆ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಎಚ್‌.ವಿಶ್ವನಾಥ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ|ಮಾರ್ಷಲ್‌ ಶರಾಂ, ದೀಪ್ತಿ ಭದ್ರಾವತಿ, ರಿಜಿಸ್ಟ್ರಾರ್‌ ಎನ್‌.ಕರಿಯಪ್ಪ, ಅಧ್ಯಕ್ಷ ಬಿ.ವಿ.ವಸಂತಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4ರಿಂದ 5.30ರವರೆಗೆ ಚಿತ್ರದುರ್ಗದ ಡಾ| ಜೆ.ಕರಿಯಪ್ಪ ಮಾಳಿಗೆ ಅವರು ಕನ್ನಡ ಭಾಷೆ ಬೆಳೆದು ಬಂದ ಬಗೆ ವಿಷಯದ ಕುರಿತು ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.

ಮಾ.28ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಮಾರೋಪ ನುಡಿಗಳನ್ನಾಡುವರು. ಕಮ್ಮಟದ ಫಲಶ್ರುತಿಯನ್ನು ಕಮ್ಮಟದ ನಿರ್ದೇಶಕ ಮಲ್ಲೇಪುರಂ ವೆಂಕಟೇಶ್‌ ನಡೆಸಿಕೊಡುವರು. ಮುಖ್ಯಅತಿಥಿಗಳಾಗಿ ದಾವಣಗೆರೆ ವಿವಿ ಕುಲಪತಿ ಡಾ|ಶರಣಪ್ಪ ವಿ. ಲಹಸೆ, ಹಿರಿಯ ಸಂಶೋಧಕ ಡಾ|ಬಿ. ರಾಜಶೇಖರಪ್ಪ, ಹಿರಿಯ ಸಾಹಿತಿ ಪ್ರೊ|ಎಚ್‌.ಶ್ರೀಶೈಲ ಆರಾಧ್ಯ, ಕುವೆಂಪು ವಿವಿ ಪ್ರಾಧ್ಯಾಪಕ ಡಾ|ಜಿ.ಪ್ರಶಾಂತ ನಾಯಕ, ದಾವಣಗೆರೆ ವಿವಿ ಕುಲಸಚಿವೆ ಡಾ| ಗಾಯತ್ರಿದೇವರಾಜ್‌, ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರ ನಿರ್ದೇಶಕ ಡಾ| ಎಚ್‌.ವಿಶ್ವನಾಥ್‌ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಏಪ್ರಿಲ್‌-ಮೇನಲ್ಲಿ ತರಾಸು ಜನ್ಮ ಶತಮಾನೋತ್ಸವ

ಏಪ್ರಿಲ್‌-ಮೇ ತಿಂಗಳಲ್ಲಿ ಚಿತ್ರದುರ್ಗದಲ್ಲಿ ತರಾಸು ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಅಕಾಡೆಮಿ ಅಧ್ಯಕ್ಷ ಡಾ|ಬಿ.ವಿ.ವಸಂತಕುಮಾರ್‌ ತಿಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ವಿಶೇಷವಾಗಿ ತರಾಸು ಅವರ ಸಮಗ್ರ ಸಾಹಿತ್ಯ ಒಳಗೊಂಡ 20 ಸಂಪುಟಗಳನ್ನು ಹೊರತರುವ ಕೆಲಸ ನಡೆಯುತ್ತಿದೆ. ಶಾ.ಮ.ಕೃಷ್ಣರಾಯರು ಅವರು ಸಂಪಾದನೆ ಮಾಡಿಕೊಡುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ರೂ.18.5 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಹೆಚ್ಚುವರಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದ್ದು, ಅಕಾಡೆಮಿ ವತಿಯಿಂದ ತರಾಸು ಸಮಗ್ರ ಸಂಪುಟ ಹೊರತರಲಿದೆ ಎಂದು ಹೇಳಿದರು. ತರಾಸು ಸಮಗ್ರ ಸಂಪುಟ ಹೊರತರುವ ನಿಟ್ಟಿನಲ್ಲಿ ತರಾಸು ಕಾದಂಬರಿಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಕಾದಂಬರಿಗಳ ವರ್ಗೀಕರಣ ಮಾಡುವ ಸಿದ್ಧತೆ ನಡೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ|ಎಚ್‌.ವಿಶ್ವನಾಥ್‌, ಕಮ್ಮಟದ ಸಹ ನಿರ್ದೇಶಕಿ ಡಾ|ಪ್ರೇಮ ಪಲ್ಲವಿ, ಜಿಲ್ಲಾ ವಾರ್ತಾಕಾರಿ ಬಿ.ಧನಂಜಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next