ಫೇಸ್ಬುಕ್ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂದವರಿಗೆ ಫೇಸ್ಬುಕ್ ಸ್ನೇಹಿತರೆಲ್ಲ ಸೇರಿಕೊಂಡು ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಆರಂಭಿಸಿ ತಕ್ಕ ಉತ್ತರ ಕೊಟ್ಟಿದ್ದಾರೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣದಿಂದಲೂ ಉತ್ತಮ ಕೆಲಸ ಮಾಡಬೇಕು
ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಫೇಸ್ಬುಕ್, ವಾಟ್ಸ್ಆ್ಯಪ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ವಿಚಾರಗಳ ಬಗ್ಗೆಯೇ ಹೆಚ್ಚು ಚರ್ಚೆ ಸಾಮಾನ್ಯ. ಇದಕ್ಕೆ ತಕ್ಕ ಉತ್ತರ ನೀಡಲು ಯುವ ಸ್ನೇಹಿತರು ಸೇರಿಕೊಂಡು ಪುಸ್ತಕ ಮಳಿಗೆ ಅರಂಭಿಸಿದ್ದು ಸ್ತುತ್ಯರ್ಹ.
ಯೋಚನೆ ಚಿಗುರೊಡೆದಿದ್ದು ಹೀಗೆ…: ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಅರಂಭಿಸುವ ಯೋಚನೆ ಮೊದಲು ಮೊಳೆತಿದ್ದು ಧಾರವಾಡದ ಸಪ್ತಾಪುರದಲ್ಲಿರುವ ಪುಸ್ತಕದಂಗಡಿ ಮಾಲೀಕ ರಾಜಕುಮಾರ ಮಡಿವಾಳರ ಅವರಿಗೆ. ಇದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಾಗ ರಾಜ್ಯದ ವಿವಿಧೆಡೆಗಳ 20 ಜನ ಯುವಕರು ಇದಕ್ಕೆ ಸ್ಪಂದಿಸಿದರು. ಲೇಖಕರಿಗೆ ಕೃತಿಗಳನ್ನು ಕಳುಹಿಸುವಂತೆ ಕೋರಿಕೊಂಡಾಗ ಹಿರಿಯ ಸಾಹಿತಿ ಡಾ. ಸಿದಟಛಿಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಆಲೂರು, ನಲ್ಲತಂಬಿ ಸೇರಿ 63 ಲೇಖಕರು 1300 ಪುಸ್ತಕಗಳನ್ನು ಕಳುಹಿಸಿಕೊಟ್ಟರು. ಅಲ್ಲದೆ ಕಿರುತೆರೆ ನಟಿ ಸೇತೂರಾಂ, ನಟಿ ಜಯಲಕ್ಷ್ಮೀ ಪಾಟೀಲ್ ಮತ್ತಿತರರು ಸಹಕಾರ ನೀಡಿದರು. ಫೇಸ್ಬುಕ್ ಗೆಳೆಯರು ಮಳಿಗೆ ಶುಲ್ಕವನ್ನಷ್ಟೇ ಪಾವತಿಸಿದ್ದಾರೆ. ಪುಸ್ತಕ ಮಾರಾಟದ ಹಣವನ್ನು ಮೂಲ ಲೇಖಕರಿಗೇ ನೀಡಲು ನಿರ್ಧರಿಸಿದ್ದಾರೆ. ಫೇಸ್ಬುಕ್ ಗೆಳೆಯರ ಬಳಗದ ಮೌನೇಶ ಕನಸುಗಾರ ಕಲಬುರ್ಗಿ ಹಾಗೂ ರಾಯಚೂರಿನ ಸೂಗೂರೇಶ ಹಿರೇಮಠ ಇಲ್ಲಿ ಪ್ರಮುಖರು.
ಕುಮಾರವ್ಯಾಸನ ಕಡೆಗಣಿಸಿದ್ದಕ್ಕೆ ಸಿಟ್ಟು: ಅಖಂಡ ಧಾರವಾಡ ಜಿಲ್ಲೆಯ ಮಹಾಕವಿ ಕುಮಾರವ್ಯಾಸನನ್ನು ಕಡೆಗಣಿಸಿದ್ದಕ್ಕೆ ಫೇಸ್ಬುಕ್ ಗೆಳೆಯರಲ್ಲಿ ಆಕ್ರೋಶ ಮಡುಗಟ್ಟಿದೆ. 84ನೇ ಸಮ್ಮೇಳನದಲ್ಲಿ ಕುಮಾರವ್ಯಾಸನನ್ನು ಪರಿಗಣಿಸದೆ ಆಯೋಜಕರು ಅವಮಾನ ಮಾಡಿದ್ದಾರೆ ಎಂಬ ಬೇಸರ ಹೊರ ಹಾಕಿದ್ದಾರೆ.
ಪ್ರತಿಭಟನಾರ್ಥವಾಗಿ ಕುಮಾರವ್ಯಾಸನ ಗದುಗಿನ ಭಾರತ ಕೃತಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ಮೂಲಕ ಕುಮಾರವ್ಯಾಸನಿಗೆ ಗೌರವ ನೀಡಿರುವುದಾಗಿ ತಿಳಿಸಿದರು