ಕಾರ್ಕಳ: ಅತ್ತೂರು ಚರ್ಚ್ನ ಆಡಳಿತ ಮಂಡಳಿ ಭೂ ಒತ್ತುವರಿ ಮಾಡಿರುವ ಬಗ್ಗೆ ಹಿಂದೂ ಸಂಘಟನೆಯಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರ ಸೂಚನೆಯಂತೆ ತಹಶೀಲ್ದಾರ್ ನೇತೃತ್ವದಲ್ಲಿ ಡಿಜಿಟಲ್ ಸರ್ವೇ ಕಾರ್ಯ ಆರಂಭವಾಗಿದೆ.
ಚರ್ಚ್ ಆಡಳಿತ ಮಂಡಳಿಯವರು ಸುತ್ತಲ ಪರ್ಪಲೆಗುಡ್ಡದಲ್ಲಿ ಸರಕಾರಿ ಜಮೀನನ್ನು ಕಬಳಿಕೆ ಮಾಡಿದೆ. ಇಲಾಖೆ ಅನುಮತಿಯಿ ಪಡೆಯದೇ ಚರ್ಚ್ ಸಮೀಪದ ಗುಡ್ಡವನ್ನು ಅತಿಕ್ರಮಿಸಿಕೊಂಡು ಗುಡ್ಡೆವನ್ನು ಸಮತಟ್ಟುಗೊಳಿಸಿದ ಬಗ್ಗೆ ಹಿಂದೂ ಜಾಗರಣ ವೇದಿಕೆಯವರು ಶಾಸಕರು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರುಗೆ ಸ್ಪಂದಿಸಿದ ಶಾಸಕ ವಿ. ಸುನಿಲ್ ಕುಮಾರ್ ಕಂದಾಯ ಇಲಾಖೆಗೆ ಸರ್ವೇ ಕಾರ್ಯ ನಡೆಸಲು ಮತ್ತು ಸರಕಾರಿ ಜಾಗ ಕಬಳಿಕೆ ಮಾಡದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಭೂಮಿ ಸಮತಟ್ಟುಗೊಳಿದ ಸಂದರ್ಭ ಗಡಿ ಗುರುತು ಕಲ್ಲು ನಾಶವಾಗಿದ್ದು, ಸರ್ವೇ ಕಾರ್ಯ ನಡೆಸಿದ ವೇಳೆ ಗಡಿಕಲ್ಲು ನಾಶವಾದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಾಸಕರು ಕುಂದಾಪುರ ಸಹಾಯಕ ಆಯುಕ್ತ ರಾಜು, ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಜತೆ ಸಭೆ ನಡೆಸಿ ಡಿಡಿಎಲ್ ಸರ್ವೇಗೆ ಸೂಚಿಸಿದ್ದರು. ಅತ್ತೂರು ಪಟ್ಟಾ ಜಾಗದ ಮಾಹಿತಿ, ಸುತ್ತಲ ಸರಕಾರಿ ಜಾಗದ ವಿವರ, ಡೀಮ್ಡ್ ಫಾರೆಸ್ಟ್ ಕುರಿತ ನಕ್ಷೆ ಸಹಿತ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಸೆ. 30ರಂದು ಕಂದಾಯ ಇಲಾಖೆ ಅಧಿಕಾರಿಗಳು ಅತ್ತೂರು ಚರ್ಚ್ ವಠಾರದಲ್ಲಿ ಡಿಜಿಟಲ್ ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಜಿಟಲ್ ಸರ್ವೇ ನಡೆಸಿರುವ ಕಾರಣ ಸಮರ್ಪಕ, ಸಮಗ್ರ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಅತ್ತೂರು ಬಸಿಲಿಕಾ ಖ್ಯಾತಿಯ ಅತ್ತೂರು ಚರ್ಚ್ ಪೌರಾಣಿಕ ಹಿನ್ನೆಲೆ ಹೊಂದಿದೆ. ಜಾಗ ಕಬಳಿಸಿದ್ದ ಬಗ್ಗೆ ಹಿಂದೂ ಸಂಘಟನೆಗಳು ಅಲ್ಲದೆ ಸಾರ್ವಜನಿಕರಿಂದ, ಹಲವು ಸಂಘ-ಸಂಸ್ಥೆಗಳಿಂದ ದೂರುಗಳು ಬಂದಿದ್ದವು.