Advertisement

ಭೂ ತಾಪಮಾನ ನಿಯಂತ್ರಣ : ಬರೇ ಮಾತು-ಸಾಧನೆ ಶೂನ್ಯ

01:44 AM Jun 05, 2021 | Team Udayavani |

ಅತೀವೇಗ-ಅಪಘಾತಕ್ಕೆ ಆಹ್ವಾನ. ಇದು ಕೇವಲ ವಾಹನ ಚಾಲಕರಿಗೆ ಮಾತ್ರವಲ್ಲ ಇಡೀ ಜಗತ್ತಿಗೇ ಅನ್ವಯವಾಗುವ ಎಚ್ಚರಿಕೆಯಾಗಿದೆ. 1850ರಲ್ಲಿ ಇಂಗ್ಲೆಂಡ್‌ನ‌ಲ್ಲಿ ಕೈಗಾರಿಕಾ ಕ್ರಾಂತಿ ನಡೆಯಿತು. ಆ ಬಳಿಕ ಕಳೆದ 170 ವರ್ಷಗಳ ಕಾಲದಲ್ಲಿ ಜಗತ್ತು ಹಿಂದೆಂದೂ ಕಾಣದಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಅದರಲ್ಲೂ ಕಳೆದ 100 ವರ್ಷಗಳಲ್ಲಿ ಜಗತ್ತು ಅತ್ಯಂತ ವೇಗದ ಅಭಿವೃದ್ಧಿ ಸಾಧಿಸಿದೆ. ಈ ಅತೀ ವೇಗವೇ ಇಂದು ಜಗತ್ತನ್ನು ಪರಿಸರ ನಾಶದ ಭಾರೀ ವಿಪತ್ತಿಗೆ ಒಡ್ಡಿದೆ.

Advertisement

ನಮ್ಮ ಇಂದಿನ ಪ್ರಗತಿ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಇಂಧನಗಳ ಮೇಲೆ ಅತಿಯಾಗಿ ಅವಲಂಬಿಸಿದೆ. ಈ ಪಳೆಯುಳಿಕೆ ಇಂಧನಗಳನ್ನು ಉರಿಸಿದಾಗ ಇಂಗಾಲಾಮ್ಲ (cಟ2) ಉತ್ಪತ್ತಿ ಯಾಗುತ್ತದೆ. ಇದು ಭೂಮಿಯ ತಾಪಮಾನವನ್ನು ಹೆಚ್ಚಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೈಗಾರಿಕಾ ಕ್ರಾಂತಿಗೆ ಮೊದಲು ವಾತಾವರಣದಲ್ಲಿ ಇದ್ದ ಇಂಗಾಲಾಮ್ಲದ ಪ್ರಮಾಣ 280 ಪಿ.ಪಿ.ಎಂ. (ಪಾರ್ಟ್ಸ್ ಪರ್‌ ಮಿಲಿಯನ್‌) 2019ರ ಹೊತ್ತಿಗೆ ಅದು 415 ಪಿ.ಪಿ.ಎಂ. ಮುಟ್ಟಿತ್ತು. ವಿಜ್ಞಾನಿಗಳ ಪ್ರಕಾರ 350 ಪಿ.ಪಿ.ಎಂ. ಸುರಕ್ಷಿತ ಮಟ್ಟ. 1950ರಲ್ಲಿ ಜಗತ್ತಿನ ಇಂಗಾಲಾಮ್ಲದ ಉತ್ಸರ್ಜನೆ (ಎಮಿಷನ್‌) 150 ಕೋಟಿ ಟನ್‌ಗಳಾಗಿದ್ದರೆ 2016ರ ಹೊತ್ತಿಗೆ ಅದು 3,600 ಕೋಟಿ ಟನ್‌ಗಳಷ್ಟಾಗಿತ್ತು.

ಕೈಗಾರಿಕಾ ಕ್ರಾಂತಿಗೆ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೋ ಅದಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು (+2 ಡಿಗ್ರಿ ಸೆಲ್ಸಿಯಸ್‌) ಏರಿದರೆ ಮನುಷ್ಯನ ಸಹಿತ ಬಹುತೇಕ ಜೀವ ಸಂಕುಲಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. +1.5 ಡಿಗ್ರಿ ಏರುವ ಹೊತ್ತಿಗೆ ಸಾಗರಗಳು ಉಕ್ಕೇರಿ ಬಹುಪಾಲು ಸಣ್ಣ ದ್ವೀಪ ರಾಷ್ಟ್ರಗಳು ಮುಳುಗಿ ಹೋಗುತ್ತವೆ ಎಂದೂ ಎಚ್ಚರಿಸುತ್ತಿದ್ದಾರೆ. ಭೂ ತಾಪಮಾನ ಈಗಾಗಲೇ +1.2 ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗಿದೆ. ನಾವು ಇದೇ ಪ್ರಮಾಣದಲ್ಲಿ ವಾತಾವರಣಕ್ಕೆ ಇಂಗಾಲಾಮ್ಲವನ್ನು ತುಂಬುತ್ತಾ ಹೋದರೆ 2100 ಇಸವಿ ಹೊತ್ತಿಗೆ ಭೂ ತಾಪ ಮಾನ +2ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗಲಿದೆ. 2030ರ ಹೊತ್ತಿಗೆ +1.5 ಡಿಗ್ರಿ ತಲುಪಬಹುದು.

ಪ್ಯಾರಿಸ್‌ ಒಪ್ಪಂದ ಒಂದು ವಂಚನೆ
ಜೀವ ಜಗತ್ತಿನ ಸರ್ವನಾಶವನ್ನು ತಡೆಗಟ್ಟಲು ಇಂಗಾ ಲಾಮ್ಲದ ಉತ್ಸರ್ಜನೆಯನ್ನು ಎಲ್ಲ ದೇಶಗಳೂ ತೀವ್ರ
ವಾಗಿ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ 2015ರಲ್ಲಿ ಪ್ಯಾರಿಸ್‌ನಲ್ಲಿ ಹವಾಮಾನ ಸಮ್ಮೇಳನ ನಡೆಯಿತು. ಸಮ್ಮೇಳನ
ದಲ್ಲಿ ಅಂಕಿತ ಹಾಕಲಾದ ಪ್ಯಾರಿಸ್‌ ಒಪ್ಪಂದವನ್ನು ರಾಜಕಾರಣಿ ಗಳು ಹಾಗೂ ಜಾಗತಿಕ ಮಾಧ್ಯಮಗಳು ಐತಿಹಾಸಿಕ, ಕ್ರಾಂತಿಕಾರಕ ಒಪ್ಪಂದ ಎಂದೆಲ್ಲ ಬಣ್ಣಿಸಿದವಾ ದರೂ ಕೆಲವೇ ದಿನಗಳಲ್ಲಿ ವಿಜ್ಞಾನಿಗಳು ಇದೊಂದು ವಂಚನೆ ಎನ್ನುವ ಮೂಲಕ ಅದರ ಬಣ್ಣ ಬಯಲು ಮಾಡಿದರು.

2100ರ ಹೊತ್ತಿಗೆ ಭೂ ತಾಪಮಾನವನ್ನು +2ಡಿಗ್ರಿ ಸೆಲ್ಸಿ ಯಸ್‌ಗೆ ಮಿತಿಗೊಳಿಸಲು ಉಷ್ಣವರ್ಧಕ ಅನಿಲಗಳ ಉತ್ಸರ್ಜ ನೆಯನ್ನು ಕಡಿತಗೊಳಿಸುವ ಗುರಿಗಳು ತೀರಾ ದುರ್ಬಲ ವಾಗಿವೆ. ಎಲ್ಲ ರಾಷ್ಟ್ರಗಳೂ ತಾವು ನೀಡಿರುವ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದರೂ ಸಹ 2100ರ ಹೊತ್ತಿಗೆ ತಾಪಮಾನ +3ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗಿರುತ್ತದೆ ಎನ್ನುವುದು ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ.

Advertisement

2020ರ ಡಿಸೆಂಬರ್‌ 20ರಂದು ಬಿಡುಗಡೆ ಮಾಡಲಾದ U.N.E.P. (United Nations Environment Programme) Emission Gap Report ಪ್ಯಾರಿಸ್‌ ಒಪ್ಪಂದದ ವೈಫ‌ಲ್ಯದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತದೆ. 2016ರಿಂದ 2020ರ ಕಾಲಾವಧಿಯಲ್ಲಿ ಶಾಖವರ್ಧಕ ಅನಿಲ ಗಳ ಉತ್ಸರ್ಜನೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾ ಗಿದೆ. ಭರವಸೆ ಈಡೇರಿಸುವುದರಲ್ಲಿ ವಿಫ‌ಲವಾದ ದೇಶಗಳ ಪಟ್ಟಿಯಲ್ಲಿ ಮೊದಲು ಇರುವುದು ಅಮೆರಿಕ, ರಷ್ಯಾ, ಚೀನ, ಜಪಾನ್‌, ಆಸ್ಟ್ರೇಲಿಯಾ ಹಾಗೂ ಕೆನಡಾದಂಥ ಅತೀ ಶ್ರೀಮಂತ ಹಾಗೂ ಅತೀ ಮಾಲಿನ್ಯಕಾರಕ ರಾಷ್ಟ್ರಗಳೇ. ಶ್ರೀಮಂತ ದೇಶಗಳು ಕಲ್ಲಿದ್ದಲು ಹಾಗೂ ಪೆಟ್ರೋ ಲಿಯಂ ಉತ್ಪಾದನೆಯನ್ನು ಶೇ.130ರಷ್ಟು ಹೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿವೆ. ಇದು ವಿಪರ್ಯಾಸ ಮಾತ್ರವಲ್ಲದೆ ಬಲುದೊಡ್ಡ ದುರಂತ. ಜಗತ್ತಿನ ಶೇ. 1ರಷ್ಟು ಅತ್ಯಂತ ಶ್ರೀಮಂತರು ಶೇ.50ರಷ್ಟು ಬಡವರಿಗಿಂತ ಎರಡು ಪಟ್ಟು ಹೆಚ್ಚು ಉಷ್ಣವರ್ಧಕ ಅನಿಲಗಳನ್ನು ಉತ್ಸರ್ಜಿಸುತ್ತಾರೆ ಎಂದು ವರದಿ ತಿಳಿಸುತ್ತದೆ. ಅಭಿವೃದ್ಧಿಶೀಲ ದೇಶಗಳಿಗೆ ಉತ್ಸರ್ಜನೆ ಕಡಿಮೆ ಮಾಡಲು ನೆರವು ನೀಡುವ ಗ್ರೀನ್‌ ಕ್ಲೈಮೆಟ್‌ ಫ‌ಂಡ್‌ಗೆ ಯಾವ ಶ್ರೀಮಂತ ದೇಶಗಳೂ ದೇಣಿಗೆ ನೀಡುತ್ತಿಲ್ಲ. ಅಲ್ಲದೆ ಅಗತ್ಯ ತಂತ್ರಜ್ಞಾನಗಳನ್ನೂ ಬಡ ದೇಶಗಳಿಗೆ ನೀಡುವ ಭರ ವಸೆಯೂ ಹುಸಿಯಾಗಿದೆ.

-ಪ್ರೊ| ಬಿ.ಎಂ. ಕುಮಾರಸ್ವಾಮಿ, ಶಿವಮೊಗ್ಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next