Advertisement

ಹೊಸ ವಿಮಾನ ನಿಲ್ದಾಣಕ್ಕೆ ಭೂ ಸರ್ವೇ

06:39 PM Mar 23, 2020 | Suhan S |

ಕೊಪ್ಪಳ: ಜಿಲ್ಲೆಯು ಭವಿಷ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ಕೇಂದ್ರದ ಸಮೀಪದಲ್ಲೇ ಹೊಸ ವಿಮಾನ ನಿಲ್ದಾಣದ ಮಂಜೂರಾತಿಗೆ ಸಂಸದ ಸಂಗಣ್ಣ ಕರಡಿ ಅವರು ಪ್ರಸ್ತಾವನೆ ಸಲ್ಲಿಸಿದ್ದು, ಈಗಾಗಲೇ 500 ಎಕರೆಯ ಭೂಮಿ ಸರ್ವೇ ಕಾರ್ಯವೂ ನಡೆದಿದೆ. ಉಡಾನ್‌ ಯೋಜನೆಗೆ ಎಂಎಸ್‌ಪಿಎಲ್‌ ಕಂಪನಿ ಇದಕ್ಕೆ ಒಪ್ಪದೇ ಇರುವುದಕ್ಕೆ ಪರ್ಯಾಯ ಸಿದ್ಧತೆ ಮಾಡಲಾಗಿದೆ.

Advertisement

ಹೌದು. ಜಿಲ್ಲೆಗೆ 2018ರಲ್ಲೇ 2ನೇ ಹಂತದಲ್ಲಿ ಕೇಂದ್ರ ಸರ್ಕಾರವು ಉಡಾನ್‌ ಯೋಜನೆಯನ್ನು ಘೋಷಣೆ ಮಾಡಿದೆ. ಆದರೆ 3 ಮತ್ತು 4ನೇ ಹಂತದಲ್ಲಿ ಘೋಷಣೆ ಮಾಡಿದ ಉಡಾನ್‌ ಯೋಜನೆಯ ವಿಮಾನಯಾನ ಕಾರ್ಯಾರಂಭವಾಗಿದ್ದರೂ ಕೊಪ್ಪಳದಲ್ಲಿ ಮಾತ್ರ ಉಡಾನ್‌ ಯೋಜನೆಯಡಿ ವಿಮಾನ ಹಾರಾಟ ನಡೆಸುತ್ತಿಲ್ಲ. ಎಂಎಸ್‌ಪಿಎಲ್‌ ಕಂಪನಿ ಒಪ್ಪದೇ ಇರುವುದು ಇಷ್ಟೆಲ್ಲ ಕಾರಣವಾಗಿದೆ.

ಉಡಾನ್‌ ಯೋಜನೆಯಡಿ ವಿಮಾನಯಾನ ಆರಂಭವಾದರೆ ಈ ಭಾಗದ ಜನರು ವೇಗವಾಗಿ ದೂರದ ಊರುಗಳಿಗೆ ತೆರಳಲು ನೆರವಾಗುತ್ತದೆ. ಎಂಎಸ್‌ಪಿಎಲ್‌ ಕಂಪನಿ ಭೂಮಿಯಿದೆ. ಆದರೆ ಸರ್ಕಾರದೊಂದಿಗೆ ಒಪ್ಪಂದಕ್ಕೆ ಮನಸ್ಸು ಮಾಡುತ್ತಿಲ್ಲ. ಇದರಿಂದ ಮುನಿಸಿಕೊಂಡ ಸಂಸದ ಸಂಗಣ್ಣ ಕರಡಿ ಅವರು, ಕಂಪನಿಗೆ ಸರ್ಕಾರದಿಂದ ನೀಡುವ ವಿವಿಧ ಸೌಲಭ್ಯ ಕಡಿತ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ರೈತರ ಭೂಮಿ ಪಡೆದು, ಇಲ್ಲಿನ ಜಲವನ್ನು ಬಳಕೆ ಮಾಡಿಕೊಂಡಿದೆ. ಅಲ್ಲದೇ, ಹೆಚ್ಚಿನ ಪ್ರಮಾಣದ ಭೂಮಿಯನ್ನು ಪಾಳುಗೆಡವಿದೆ. ಆದರೂ ಸರ್ಕಾರದೊಂದಿಗೆ ವಿಮಾನಯಾನಕ್ಕೆ ಒಪ್ಪಿಗೆ ಸೂಚಿಸಿದೇ ಇರುವುದಕ್ಕೆ ಇಷ್ಟೆಲ್ಲ ಕಾರಣವಾಗಿದೆ.

ಅಲ್ಲದೇ ಸರ್ಕಾರಿ ವಿಮಾನ ನಿಲ್ದಾಣವನ್ನೇ ಈ ಭಾಗದಲ್ಲಿ ಆರಂಭಿಸುವುದರಿಂದ ಸುತ್ತಲಿನ ಉದ್ಯಮಕ್ಕೆ, ಸರ್ವ ಜನತೆಗೂ ನೆರವಾಗಲಿದೆ ಎನ್ನುವ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹೊಸ ವಿಮಾನ ನಿಲ್ದಾಣ ಮಂಜೂರಾತಿಗೆ ಮನವಿ ಮಾಡಿದ್ದಾರೆ.

ಸಂಸದ ಸಂಗಣ್ಣ ಕರಡಿ ಅವರು, ಕರ್ನಾಟಕ ಮೂಲಸೌಕರ್ಯ ಮತ್ತು ಅಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇಲಾಖೆ ಸಿಎಂ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆಯಲ್ಲಿ 500 ಎಕರೆ ಭೂಮಿ ಗುರುತು ಮಾಡಿ ಸರ್ವೇ ಕೈಗೊಳ್ಳುವಂತೆ ಮಾಡಿದ್ದಾರೆ. ಪ್ರಸ್ತಾವನೆ ಸಲ್ಲಿಕೆ ಬೆನ್ನಲ್ಲೇ ಪೂರ್ವತಯಾರಿಯಾಗಿ ತಹಶೀಲ್ದಾರ್‌ ಜೆ.ಬಿ. ಮಜ್ಜಗಿ ಅವರು ಭೂಮಾಪನಾ ಅಧಿಕಾರಿಗಳಿಗೆ 500 ಎಕರೆ ಭೂಮಿ ಸರ್ವೇ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಎಡಿಎಲ್‌ಆರ್‌ ಅಧಿಕಾರಿಗಳ ತಂಡವೂ ಹತ್ತಾರು ದಿನಗಳಿಂದ ಸರ್ವೇ ನಡೆಸಿದ್ದಾರೆ.

Advertisement

ಟಣಕನಕಲ್‌-ಹಟ್ಟಿ ಕ್ರಾಸ್‌ವರೆಗೂ ಸರ್ವೇ: ತಾಲೂಕಿನ ಟಣಕನಕಲ್‌ ಮೊರಾರ್ಜಿ ವಸತಿ ಶಾಲೆಯ ಎಡಭಾಗದಿಂದ ಹಟ್ಟಿ ಕ್ರಾಸ್‌ವರೆಗೂ 500 ಎಕರೆ ಪ್ರದೇಶದಲ್ಲಿ ಭೂಮಿ ಗುರುತು ಮಾಡಿ ಸರ್ವೇ ಕಾರ್ಯ ಆರಂಭಿಸಲಾಗಿದೆ. ಇದೇ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ಆರಂಭಿಸುವುದರಿಂದ ಯಲಬುರ್ಗಾ, ಗಂಗಾವತಿ, ಕುಷ್ಟಗಿ, ಕಾರಟಗಿ, ಕನಕಗಿರಿ ತಾಲೂಕಿಗೂ ಹತ್ತಿರವಾಗಲಿದೆ. ಅಲ್ಲದೇ ಟಣಕನಕಲ್‌ ಸಮೀಪವೇ ದೇಶದ ಅತಿದೊಡ್ಡ ರಾಷ್ಟ್ರೀಯ ಹೆದ್ದಾರಿ ರಸ್ತೆ ಭಾರತ್‌ ಮಾಲಾ ಯೋಜನೆಯೂ ಇದೇ. ಮಾರ್ಗದಲ್ಲಿ ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ಹೆದ್ದಾರಿಗೆ ಸಮೀಪದಲ್ಲೇ ವಿಮಾನ ನಿಲ್ದಾಣಕ್ಕೂ ನೆರವಾಗಲಿದೆ.

ಹುಬ್ಬಳ್ಳಿ-ಗದಗ, ಬಳ್ಳಾರಿ ಭಾಗದಿಂದ ಬರುವ ಗಣ್ಯರಿಗೆ ತುಂಬ ನೆರವಾಗಲಿದೆ ಎನ್ನುವ ಉದ್ದೇಶಿದಿಂದ ಇಲ್ಲಿಯೇ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ಯೋಜನೆಗೆ ತಕ್ಕಂತೆ ಭೂಮಿ ಸಿಗದೇ ತೊಂದರೆ ಅನುಭವಿಸುವಂತಾಗಲಿದೆ. ಆದರೆ ಈ ಭಾಗದಲ್ಲಿ ಭೂಮಿಯೂ ದೊರೆಯಲಿದೆ. ಈ ಭಾಗದಲ್ಲಿ ಉದ್ಯಮಕ್ಕೂ ಒತ್ತು ನೀಡಿದಂತಾಗಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೂ ಅವಕಾಶ ದೊರೆತಂತಾಗಲಿದೆ ಎಂಬ ಉದ್ದೇಶದಿಂದ ಟಣಕನಕ್‌ ಭಾಗದಲ್ಲೇ ಸರ್ವೇ ನಡೆಸಲಾಗುತ್ತಿದೆ. ಲೆಕ್ಕಕ್ಕೆ 500 ಎಕರೆ ಎಂದಿದ್ದರೂ ಮುಂದೆ 1 ಸಾವಿರ ಎಕರೆ ಸರ್ವೇಗೂ ಯೋಜನೆ ಮಾಡಲಾಗಿದೆ.

ಸಂಸದ ಸಂಗಣ್ಣ ಕರಡಿ ಅವರು ಸಲ್ಲಿಸಿದ ಪ್ರಸ್ತಾವನೆ ರಾಜ್ಯ ಸರ್ಕಾರದ ಗಮನದಲ್ಲಿದ್ದು, ಸಿಎಂ ಅವರು ಹೊಸ ನಿಲ್ದಾಣಕ್ಕೆ ಸಮ್ಮತಿ ಸೂಚಿಸಿದರೆ ಮಾತ್ರ ಈ ಭಾಗದಲ್ಲಿ ಮುಂದಿನ ವರ್ಷಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಇಲ್ಲದಿದ್ದರೆ ಈ ಭಾಗದ ಜನರ ಗಗನಯಾನದ ಕನಸು ಕನಸಾಗಿಯೇ ಉಳಿಯಲಿದೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next