ಮಂಗಳೂರು: ರಾಜ್ಯದ 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್ನಿಂದ ಹೊರಗಿಡುವ ಮೂಲಕ ಬಹುಜನರ ಸುದೀರ್ಘ ಕಾಲದ ಬೇಡಿಕೆ ಈಡೇರಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ ಹಾಗೂ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 374.71 ಕೋ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಮೂಡುಬಿದಿರೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಡೀಮ್ಡ್ ಫಾರೆಸ್ಟ್ ಕಾರಣದಿಂದ ಬಹಳಷ್ಟು ಜನರು ಕಿರುಕುಳ ಅನುಭವಿಸುತ್ತಿದ್ದಾರೆ. ಸುದೀರ್ಘ ಕಾಲದ ಈ ಸಮಸ್ಯೆ ಪರಿಹಾರವನ್ನೇ ಕಂಡಿಲ್ಲ. ಆದರೆ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇದೇ ರೀತಿ ಕರಾವಳಿ ಭಾಗದ ಬಹುಕಾಲದ ಸಮಸ್ಯೆ ಕುಮ್ಕಿ, ಕಾನ ಬಾಣೆ, ಸೊಪ್ಪಿನ ಬೆಟ್ಟ ಸಮಸ್ಯೆಯನ್ನೂ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಅಭಿವೃದ್ಧಿ ಪರ್ವ: ರಾಜ್ಯದಲ್ಲಿ ಈ ವರ್ಷ ಅಭಿವೃದ್ಧಿ ಪರ್ವ. ಬದಲಾವಣೆಗೆ ಭದ್ರ ಬುನಾದಿಯ ವರ್ಷವಿದು. ಕರಾವಳಿಯು ಅದಕ್ಕೆ ನಾಯಕತ್ವ ವಹಿಸಬೇಕು. ಈ ಮೂಲಕ ಕರ್ನಾಟಕಕ್ಕೆ ಪ್ರೇರಣೆ ಸಿಗಲಿದೆ. ಆ ಕಾರಣಕ್ಕಾಗಿಯೇ ಕರಾವಳಿಗೆ ಬಂದಿದ್ದೇನೆ. ಜನರ ಆಶೀರ್ವಾದ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಹಾಗೂ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಶಾಸಕ ಎ. ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ವಿ. ಸುನಿಲ್ ಕುಮಾರ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸೋಮಣ್ಣ, ಬಿ.ಸಿ.ನಾಗೇಶ್, ಡಾ| ಕೆ.ಸುಧಾಕರ್, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಇತರರಿದ್ದರು.
ನಮ್ಮ ದು ಪೀಪಲ್ಸ್ ಪಾಲಿಟಿಕ್ಸ್! ಜನರ ಸಮಸ್ಯೆಗಳನ್ನು ಹಾಗೆಯೇ ಇರಿಸಿ ಕೊಂಡು ಅದರ ಮೂಲಕವೇ ರಾಜಕಾರಣ ಮಾಡುವವರು ಹಲವರಿದ್ದಾರೆ. ಯಾಕೆಂದರೆ ಸಮಸ್ಯೆ ಪರಿಹಾರವಾದರೆ ಅವರ ಜತೆಗೆ ಯಾರೂ ಇರಲ್ಲ. ಸಮಸ್ಯೆ ಇದ್ದರೆ ಮಾತ್ರ ಜನರು ಜತೆಗೇ ಅಲೆದಾಡು ತ್ತಿರುತ್ತಾರೆ ಎಂಬುದು ಅವರ ಅನಿಸಿಕೆ. ಅಂತಹ ಪವರ್ ಪಾಲಿಟಿಕ್ಸ್ ನಮ್ಮದಲ್ಲ; ಬದಲಾಗಿ ನಮ್ಮದು ಪೀಪಲ್ಸ್ ಪಾಲಿಟಿಕ್ಸ್. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ನಮ್ಮ ಕಾಯಕ. ಶುದ್ಧ ರಾಜಕಾರಣ ಮಾಡು ವವರು ನಾವು ಎಂದು ಸಿಎಂ ಹೇಳಿದರು.