Advertisement
ದ.ಕ. ಜಿ.ಪಂ. ಸಭಾಂಗಣದಲ್ಲಿ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಸಂದರ್ಭ ಪ್ರಸ್ತಾವಗೊಂಡ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಧರ್ಮಪ್ರಾಂತದ ಆಡಳಿತವು ಈ ಸ್ಪಷ್ಟೀಕರಣ ನೀಡಿದೆ.ಸೈಂಟ್ ಜೋಸೆಫ್ ಆಶ್ರಮ ವಲೇರಿಯನ್ ಟೆಕ್ಸೇರಾ ಮತ್ತು ವಿಕ್ಟರ್ ಪಾಯ್ಸ ವಿರುದ್ಧ ಒಕ್ಕಲೆಬ್ಬಿಸುವುದಕ್ಕೆ ಸಂಬಂಧಿಸಿದ ಕೇಸು ದಾಖಲಿಸಿದ್ದು, ಅದರ ವಿಚಾರಣೆ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಧರ್ಮಪ್ರಾಂತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಒತ್ತುವರಿ ಆರೋಪ ಹೊರಿಸಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸರಕಾರಿ ಜಮೀನು ಎಂಬುದಾಗಿ ವಾದಿಸುತ್ತಿದ್ದು, ಅದು ಸರಕಾರಿ ಜಮೀನೇ ಅಥವಾ ಈ ಭೂಮಿಯಲ್ಲಿ ದೂರುದಾರರಿಗೆ ಹಕ್ಕು ಇದೆಯೇ ಅಥವಾ ಬಿಷಪ್ ಅವರ ಖಾಸಗಿ ಹಕ್ಕುಗಳಿಗೆ ತೊಂದರೆಯಾಗದಂತೆ ದೂರುದಾರರ ಹಿತಾಸಕ್ತಿ ರಕ್ಷಿಸಲು ಜಿಲ್ಲಾಡಳಿತಕ್ಕೆ ಪರ್ಯಾಯ ಅವಕಾಶಗಳೇನಾದರೂ ಇವೆಯೇ ಎನ್ನುವ ಬಗ್ಗೆ ಕಡತಗಳನ್ನು ಪರಿಶೀಲಿಸಿ 20 ದಿನಗಳೊಳಗೆ ವರದಿ ಸಲ್ಲಿಸುವಂತೆ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರು ಮತ್ತು ಮಂಗಳೂರು ತಾಲೂಕು ತಹಶೀಲ್ದಾರರಿಗೆ ಲೋಕಾಯುಕ್ತರು ಆದೇಶ ನೀಡಿದ್ದಾರೆ ಎಂದು ಪ್ರಕಟನೆ ವಿವರಿಸಿದೆ. ವಾಸ್ತವವಾಗಿ ಇದು ದೂರುದಾರರ ವಿರುದ್ಧವೇ ನಡೆಯುವ ತನಿಖೆಯಾಗಿದೆ ಹಾಗೂ ಅವರು ತಮ್ಮ ಹಕ್ಕುಗಳನ್ನು ಸಾಬೀತುಪಡಿಸಬೇಕಾಗಿದೆ ಎಂದು ಪ್ರಕಟನೆ ತಿಳಿಸಿದೆ. ಬಿಷಪ್ ವಿರುದ್ಧ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರು ಯಾವುದೇ ಆದೇಶವನ್ನು ನೀಡಿಲ್ಲ. ಬಿಷಪ್ ಅವರು ಧರ್ಮ ಪ್ರಾಂತದ ಭೂಮಿ ಮತ್ತು ಆಸ್ತಿ ಪಾಸ್ತಿಗಳ ಬಗ್ಗೆ ಸೂಕ್ತ ದಾಖಲೆ ಪತ್ರಗಳನ್ನು ಹೊಂದಿದ್ದಾರೆ. ಮಂಗಳೂರು ಧರ್ಮ ಪ್ರಾಂತವು ಮಾನವೀಯ ನೆಲೆಯಲ್ಲಿ ವಾಸ್ತವ್ಯಕ್ಕಾಗಿ ಅತ್ಯಲ್ಪ ಬಾಡಿಗೆ ದರದಲ್ಲಿ ಒದಗಿಸಿದ ಜಾಗದಲ್ಲಿ ದೂರುದಾರರು ಹಲವಾರು ವರ್ಷಗಳಿಂದ ವಾಸವಾಗಿದ್ದಾರೆ. ಹಾಗಾಗಿ ಬಿಷಪ್ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.