Advertisement

ನೀಲಗಿರಿ ಮರ ತೆರವುಗೊಳಿಸದಿದ್ದರೆ ಜಮೀನು ವಶಕ್ಕೆ

10:16 PM Jul 29, 2019 | Lakshmi GovindaRaj |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 85 ಸಾವಿರ ಎಕರೆಯಷ್ಟು ನೀಲಗಿರಿ ಮರಗಳಿದ್ದು ತೆರವುಗೊಳಿಸಲು ಮುಂದಾಗದಿದ್ದರೆ ಜಮೀನಿನ ಪಹಣಿಯಲ್ಲಿನ 9ನೇ ಕಾಲಂನಲ್ಲಿ ಸರ್ಕಾರದ್ದು ಎಂದು ನೋಂದಣಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ತಿಳಿಸಿದರು. ತಾಲೂಕಿನ ಜುಟ್ಟನಹಳ್ಳಿ ಗ್ರಾಮದ ಚನ್ನಪ್ಪ ಹಾಗೂ ಚೇತನ್‌ಗೌಡ ಅವರ ಜಾಗದಲ್ಲಿದ್ದ ನೀಲಗಿರಿ ಮರಗಳ ಆವರಣದಲ್ಲಿ ನೀಲಗಿರಿ ಮರ ತೆರವು ಅಭಿಯಾನ ನಡೆಸಿ ಮಾತನಾಡಿದರು.

Advertisement

ಎಲ್ಲೆಲ್ಲಿ ಎಷ್ಟೆಷ್ಟು ಹೆಕ್ಟೇರ್‌: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ 13,543 ಎಕರೆ, ದೊಡ್ಡಬಳ್ಳಾಪುರ 26,669, ನೆಲಮಂಗಲ 14,091, ಹೊಸಕೋಟೆ 31,171 ಎಕರೆಯಷ್ಟು ನೀಲಗಿರಿ ಮರಗಳು ಬೇರೂಣಿವೆ. ಇದರಿಂದ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹಿಂದೆ ತಿಳಿದೋ ತಿಳಿಯದೋ ನೀಲಗಿರಿ ಮರ ಬೆಳೆಸಿದ್ದಾರೆ. ಅನೇಕ ರೈತರು ನೀಲಗಿರಿ ಮರ ತೆರವುಗೊಳಿಸಲು ಮುಂದಾಗಿದ್ದಾರೆ. ಆರ್ಥಿಕ ಶಕ್ತಿ ಇಲ್ಲದ ರೈತರು ಬೆಳೆಸಿರುವ ನೀಲಗಿರಿ ಮರಗಳನ್ನು ಪ್ರಸ್ತುತ ದಾನಿಗಳಿಂದ ತೆರವು ಆಂದೋಲನ ಪ್ರಾರಂಭಗೊಂಡಿದೆ ಎಂದು ಹೇಳಿದರು.

ಅಂತರ್ಜಲ ಹೆಚ್ಚಿಸಿ: ವೈಜ್ಞಾನಿಕವಾಗಿ ದೃಢಪಟ್ಟಿರುವ ಮಾಹಿತಿ ಪ್ರಕಾರ ಎಲ್ಲಾ ಜಾತಿಯ ಮರಗಳಿಗಿಂತ ಅತೀ ಹೆಚ್ಚು ನೀರನ್ನು ಅಂತರ್ಜಲ ಮಟ್ಟದಿಂದ ಪಡೆಯುವ ಏಕೈಕ ಮರ ನೀಲಗಿರಿ. ಅದನ್ನು ಏಕೆ ಬೆಳೆಸಬೇಕು. ನೀಲಗಿರಿ ಬೆಳೆದ ಮರದ ಸುತ್ತ ಯಾವುದೇ ಗಿಡ ಬೆಳೆಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

3 ತಿಂಗಳಲ್ಲಿ ಕಟಾವು ಮಾಡಿ: ಇದೇ ರೀತಿ ರೈತರು ಮುಂದೆ ಬಂದರೆ ಅಂತರ್ಜಲ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇಲ್ಲವಾದರೆ ಪ್ರಸ್ತುತ 1600 ಅಡಿಗಳಿಗೆ ಬೋರ್‌ವೆಲ್‌ ಕೊರೆಸಿದರೂ ನೀರು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ 2600 ಅಡಿಗಳಷ್ಟು ಹೋಗುವ ಪರಿಸ್ಥಿತಿ ಬರುತ್ತದೆ. ಎಲ್ಲಾ ರೈತರು ದೃಢಸಂಕಲ್ಪ ಹೊಂದಿದರೆ 3 ತಿಂಗಳಲ್ಲಿ ನೀಲಗಿರಿ ಮುಕ್ತವಾಗಿಸಬಹುದು. ಯಾರು ತೆರವಿಗೆ ಮುಂದಾಗುವುದಿಲ್ಲವೋ ಅಂತಹ ಜಮೀನುಗಳಲ್ಲಿ ನೀಲಗಿರಿ ಮರಗಳಿದ್ದರೆ ಆ ಜಮೀನನ್ನು ಸರ್ಕಾರದ ವಶಕ್ಕೆ ಸೇರಿಸಲಾಗುತ್ತದೆ ಎಂದು ಎಚ್ಚರಿಸಿದರು.

ಸಮಾಜ ಸೇವಕ ಚೇತನ್‌ಗೌಡ ಮಾತನಾಡಿ, ನೀಲಗಿರಿ ಮರ ತೆಗೆಸಿ, ಹಲಸು, ಮಾವು, ಹೆಬ್ಬೇವು, ಮಾರ್ಗಣಿ, ಶ್ರೀಗಂಧ, ಇತರೆ ಸಸಿ ನೆಟ್ಟು ಪೋಷಿಸಿದರೆ ಅತಿ ಎತ್ತರಕ್ಕೆ ಬೆಳೆಯುತ್ತದೆ. ಜಿಲ್ಲಾಧಿಕಾರಿಗಳ ಆದೇಶದಂತೆ ನೀಲಗಿರಿ ಮರಗಳ ತೆರವು ಅತೀ ಮುಖ್ಯ ಎಂದು ಹೇಳಿದರು.

Advertisement

15 - 20 ಲೀ.ನೀರು ಬೇಕು: ಒಂದೊಂದು ನೀಲಗಿರಿ ಮರಗಳು ಪ್ರತಿದಿನ 15-20 ಲೀಟರ್‌ ನೀರು ಹೀರಿಕೊಳ್ಳುವ ಶಕ್ತಿ ಇದೆ. ಇದರಿಂದ ಅಂತರ್ಜಲ ಮಟ್ಟ ಪಾತಾಳಕ್ಕಿಳಿಯುತ್ತಿದೆ. ಇದನ್ನು ಮನಗಂಡು ರೈತರು ಜಿಲ್ಲಾಧಿಕಾರಿಗಳ ಆದೇಶದಂತೆ ಉತ್ತಮ ಕಾರ್ಯ ಮಾಡಲಾಗಿದೆ. 20 ಎಕರೆ ಪ್ರದೇಶದಲ್ಲಿ ನೀಲಗಿರಿ ಮರ ತೆಗೆಯಲು ಮುಂದಾಗಿದ್ದೇವೆ. ಇಡೀ ಜಿಲ್ಲೆಯಲ್ಲಿ ನೀಲಗಿರಿ ಮರ ತೆಗೆದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆ ಖಾಲಿ ಜಾಗದಲ್ಲಿ ಇತರೆ ಮರ ಬೆಳೆಸಿದರೆ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇಲ್ಲ. ತಾನಾಗಿಯೇ ಮೋಡ ಕಟ್ಟಿಕೊಂಡು ಮಳೆ ಬರುವುದರಲ್ಲಿ ಸಂದೇಹವಿಲ್ಲ.

ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ನೀಲಗಿರಿ ಮರ ತೆಗೆಸಬೇಕಾದರೆ ಜೆಸಿಬಿ, ಡೀಸೆಲ್‌ ಬಿಟ್ಟು ಅಂದಾಜು 10-12ಸಾವಿರ ರೂ. ಖರ್ಚು ಬರುತ್ತದೆ. ರೈತರು ಇಂತಹ ಕಾರ್ಯಗಳಿಗೆ ಮುಂದಾದರೆ ಮುಂದಿನ ದಿನಗಳಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಈ ಆಂದೋಲನ ಬಹಳ ಸಹಕಾರಿಯಾಗಲಿದೆ ಎಂದು ಹೇಳಿದರು. ಇದೇ ವೇಳೆ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಹಾಗೂ ರೈತ ಚನ್ನಪ್ಪ ನೀಲಗಿರಿ ಕಟಾವು ಆದ ಜಾಗದಲ್ಲಿ ಬೇರೊಂದು ಸಸಿ ನೆಟ್ಟು ಸಾಂಕೇತಿಕವಾಗಿ ನೀರು ಹಾಯಿಸಿದರು. ಸ್ಥಳದಲ್ಲಿ ಮಾಲಿಕ ಚನ್ನಪ್ಪ, ತಹಶೀಲ್ದಾರ್‌ ಕೇಶವಮೂರ್ತಿ, ಶಿರಸ್ತೇದಾರ್‌ ಬಾಲಕೃಷ್ಣ, ಆರ್‌ಐ ರಮೇಶ್‌, ಮುಖಂಡರಾದ ಪಟ್ಟಾಭಿ, ವೆಂಕಟೇಶ್‌, ಸಮಾಜ ಸೇವಕ ಪ್ರವೀಣ ರುದ್ಧಂ, ಗ್ರಾಮಸ್ಥರು ಇದ್ದರು.

ಬ್ಯಾಂಕ್‌ನಿಂದ ಸಾಲ ಸಿಗಲ್ಲ: ರೈತರು ಖಾಸಗಿಯಾಗಿ ಬೆಳೆಸಿರುವ ಮರಗಳನ್ನು ಬುಡಸಮೇತ ಕಿತ್ತು ಹಾಕಲೇಬೇಕು. ಇಲ್ಲದಿದ್ದಲ್ಲಿ ಜಮೀನಿನ ಪಹಣಿಯಲ್ಲಿನ 9ನೇ ಕಾಲಂನಲ್ಲಿ ಸರ್ಕಾರದ್ದು ಎಂದು ನೋಂದಣಿ ಮಾಡಲಾಗುತ್ತದೆ. ಈ ರೀತಿ ದಾಖಲೆಯಾದರೆ ಯಾವುದೇ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲವೆಂದು ಜಿಲ್ಲಾಧಿಕಾರಿ ಕರೀಗೌಡ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next