Advertisement

ಭೂಮಿ ಹದ; ಬಿತ್ತನೆಗೆ ಸಜ್ಜುಗೊಂಡ ರೈತ

02:11 PM May 25, 2022 | Team Udayavani |

ರಬಕವಿ-ಬನಹಟ್ಟಿ: ತಾಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಂಡಿದ್ದು, ಭೂಮಿ ಹದಗೊಳಿಸುವುದರ ಜತೆಗೆ ಕೃಷಿ ಪರಿಕರಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

Advertisement

ರೈತರ ನಂಬಿಗಸ್ತ ಮಳೆ ರೋಹಿಣಿ 25ರಿಂದ ಆರಂಭವಾಗುತ್ತಿದ್ದು, ಈ ರೋಹಿಣಿ ಮಳೆ ಕೈ ಹಿಡಿದರೆ ಬದುಕು ಬಂಗಾರವಾಗುತ್ತದೆ ಎಂಬುದು ಅನ್ನದಾತರ ಆಸೆ. ಈ ಬಾರಿ ಪೂರ್ವಭಾವಿಯಾಗಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಬೇಕಾದ ಕುಂಟೆ, ಪಲಗಾ, ಕೂರಿಗೆ, ನೊಗ, ಬುಕ್ಕಾ ಸಿದ್ಧತೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಡಿಗೇರ ಹಾಗೂ ಕಮ್ಮಾರರ ಬಳಿ ತಮ್ಮ ಪರಿಕರಗಳ ದುರಸ್ತಿ ಮಾಡಿಸಿಕೊಂಡು ಬಿತ್ತನೆಗೆ ಸಿದ್ಧವಾಗಿದ್ದಾರೆ.

ಕೆಲವು ಭಾಗ ಕೃಷ್ಣಾ ನದಿ ನೀರನ್ನು ಅವಲಂಬಿಸಿದರೆ ಕೆಲವು ಭಾಗ ಮಳೆ ಹಾಗೂ ಘಟಪ್ರಭಾ ಎಡದಂಡೆ ಕಾಲುವೆ ಅವಲಂಬಿಸಿದ್ದಾರೆ.

ಮುಂಗಾರು ಬೆಳೆಗಳಾದ ಸೋಯಾಬೀನ್‌, ಬೆಳೆ, ಉದ್ದು, ಹೆಸರು, ಮಡಿಕೆಕಾಳು ಸೇರಿದಂತೆ ವಿವಿಧ ಬೆಳೆಗಳ ಜತೆ ವಾಣಿಜ್ಯ ಬೆಳೆಗಳಾದ ಕಬ್ಬು-ಅರಿಷಿಣ ಬಿತ್ತನೆ ಮಾಡಲು ಅಣಿಯಾಗಿದ್ದಾರೆ.

ಕೂಲಿ ಕಾರ್ಮಿಕರ ಕೊರತೆ: ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಂಡು ಬಂದಿದೆ. ಬಹುತೇಕ ರೈತರು ಕೃಷಿ ಯಂತ್ರಗಳತ್ತ ಮುಖ ಮಾಡಿದ್ದಾರೆ. ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಉತ್ತಮ ಬೆಳೆ ತೆಗೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Advertisement

ಸಲಕರಣೆ ಬಾಡಿಗೆ: ಭೂಮಿ ಉಳುಮೆಗೆ ಟ್ರ್ಯಾಕ್ಟರ್ ಹಾಗೂ ಎತ್ತುಗಳಿಗೆ ಭಾರಿ ಬೇಡಿಕೆ ಬಂದಿದೆ. ಟ್ರ್ಯಾಕ್ಟರ್ ಉಳುಮೆ ಮಾಡಲು ಎಕರೆಗೆ 2100ರೂ. ಹಾಗೂ ಎತ್ತುಗಳ ಉಳುಮೆಗೆ ಒಂದು ಎಕರೆ 1600 ರೂ.ಗಳಷ್ಟು ಬೇಡಿಕೆ ಇದೆ. ಒಂದು ಎಕರೆ ನೆಲ ರೆಡಿ ಮಾಡಲು ಸುಮಾರು 7000ರಿಂದ 8000 ರೂ. ವರೆಗೆ ಬಾಡಿಗೆ ಆಗುತ್ತದೆ.

ರೈತರು ಸದ್ಯ ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮಳೆ ಸಮೃದ್ಧಿಯಾಗಿ ಬಂದರೆ ರೈತನ ಬದುಕು ಬಂಗಾರವಾಗುವುದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ಯಾವುದೇ ಬಿತ್ತನೆ ಮಾಡಿದರೂ ಬರುವ ರೋಗಗಳು ಕಡಿಮೆ. ಬೆಳೆಯೂ ಸಮೃದ್ಧಿಯಾಗಿ ಬರುತ್ತದೆ. –ಸದಾಶಿವ ಬಂಗಿ, ಸಾವಯವ ಕೃಷಿಕರು, ಜಗದಾಳ

-ಕಿರಣ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next