Advertisement
ಅಪರೂಪಕ್ಕೆ ಒಂದ್ಸಲ ನಮ್ಮನೆಯವರು ಕೆಮ್ಮಣ್ಣುಗುಂಡಿಗೆ ಕರೆದು ಕೊಂಡು ಹೋಗಿದ್ರು. ಅಲ್ಲಿಯ ರಮಣೀಯ ದೃಶ್ಯಗಳು ತುಂಬಾ ಚೆನ್ನಾಗಿದ್ವು. ಆದ್ರೆ ನನ್ನ ಕಣ್ಣಿಗೆ ಅಲ್ಲಿನ ಸಸ್ಯರಾಶಿ, ಹೂಗಳು ಕಾಣ್ಸೇ ಇಲ್ಲ . “ರೀ ನೋಡ್ರಿ ಅಲ್ಲಿ, ಮಣ್ಣು ಎಷ್ಟು ಚೆನ್ನಾಗಿದೆ?’ ಅಂದೆ. ಅವರು ಸ್ವಲ್ಪ ಅಸಮಾಧಾನದಿಂದಲೇ “ಹೂಂ’ ಅಂದ್ರು. ಸ್ವಲ್ಪ ಮುಂದೆ ಹೋಗುವಾಗ ಗೊಬ್ಬರದ ರಾಶಿ ಕಂಡಿತು. “ರೀ.. ನೋಡ್ರಿ ಗೊಬ್ಬರ ಎಷ್ಟು ಚೆನ್ನಾಗಿದೆ’ ಅಂದೆ. ಆಗ ಅವರಿಗೆ ತಡೆದು ಕೊಳ್ಳಲು ಆಗ್ದೇ- “ಅಷ್ಟು ದೂರದಿಂದ ಬಂದು ನೀ ನೋಡ್ತಿರೋದು, ಮಣ್ಣು ಗೊಬ್ಬರನಾ? ಅಲ್ಲಿಂದ ಮೇಲೆ ಬಾ. ಅದು ಹಾಕಿದ್ರಿಂದ ಹೂ ಎಷ್ಟು ಚೆನ್ನಾಗಿ ಬಿಟ್ಟಿದೆ ನೋಡು! ತಲೆಯಲ್ಲಿ ಬರೀ ಸಗಣಿ, ಗೊಬ್ಬರನೇ ತುಂಬ್ಕೋ ಬೇಡ’ ಅಂತ ಬಯ್ದರು. ಅವರು ಹೇಳಿದ್ದೂ ಹೌದು ಅನ್ನಿಸಿ, ಅಲ್ಲಿ ಬೆಳೆದ ಹೂ ನೋಡಲು ಪ್ರಾರಂಭಿಸಿದೆ. ಅಲ್ಲಿಂದ ಕಾರಿಗೆ ಹಿಡಿವಷ್ಟು ಹೂವಿನ ಗಿಡ ತಂದೆ!
Related Articles
Advertisement
ಗಿಡ ಸೊಕ್ಕಿ ಬೆಳೀತು. ಮೊಗ್ಗು ಬಿಟ್ಟು ಹೂವಾಯ್ತು. ನೋಡಿದ್ರೆ 6 ಗಿಡದಲ್ಲೂ ಕಾಣಿಸಿಕೊಂಡಿದ್ದು ಒಂದೇ ಕಲರ್ನ ಹೂ.ನಮ್ಮ ಮನೆ ಇರೋದು ಪೇಟೆಯಲ್ಲಿ. ಸುತ್ತಲಿನ ಮಣ್ಣು ಸ್ವಲ್ಪ ಕೂಡ ಚೆನ್ನಾಗಿಲ್ಲ. ಹೂವಿನ ಗಿಡಕ್ಕಾಗಿ ಪ್ರತೀ ವರ್ಷವೂ ದುಡ್ಡು ಕೊಟ್ಟು ಹೊಸ ಮಣ್ಣು ತರಸ್ತೀನಿ. ಒಂದ್ಸಲ ಒಬ್ಬ- “ಅಮ್ಮ, ನಾ ಒಳ್ಳೇ ಮಣ್ಣು ತರ್ತೀನಿ, ನೀವು ಗೊಬ್ಬರ ಹಾಕದೂ ಬೇಡ’ ಅಂದ. ನನಗೆ ಖುಷಿ ಆಗೋಯ್ತು. ಗೊಬ್ಬರದ ಖರ್ಚು ಉಳಿಯುತ್ತೆ ಅಂತ. ಎರಡು ಲೋಡ್ ತರಲು ಹೇಳಿ ಬಿಟ್ಟೆ. ತಂದ, ಇಳಿಸ್ದ. ರಾಮಾ, ಗೋಡೆ ಕೆಡಗಿದ ಮಣ್ಣು. ನಾ ಕೇಳಿದ್ರೆ, “ಅಮ್ಮಾ ಘನಾಗೈತ್ರಿ, ಇದ್ರಲ್ಲಿ ತಲೆಕೆಳಗಾಗಿ ಗಿಡ ನೆಟ್ರೂ ಚೆನ್ನಾಗಿ ಆಗತೈತ್ರಿ’ ಅಂತ ಹೇಳಿ ನನಗೆ ರೈಲು ಹತ್ತಿಸ್ದ. ಮನೆಯವರು ಬ್ಯಾಂಕಿಂದ ಬರೋವರೆಗೂ ಕಾಯ್ತಾ ಕೂತೆ. ಅವರು ಬಂದು ನೋಡಿ, ಮಣ್ಣು ಹಾಕಿ ಹೋದವನಿಗೆ ಕಾಲ್ ಮಾಡಿ- “ಮೊದ್ಲು ಈ ಮಣ್ಣು ವಾಪಸ್ ತೆಗೆದುಕೊಂಡು ಹೋಗಿ’ ಅಂದ್ರು. “ಆಯ್ತು ಸರ್, ಮಣ್ಣು ತುಂಬ್ಕೊಂಡು ಹೋಗ್ತಿವಿ, ಆದ್ರೆ ಒಂದು ಲೋಡಿನ ದುಡ್ಡು ಕೊಡ್ಲೆಬೇಕು’ ಅಂತ ಹಠ ಹಿಡಿದ. ಅವರಿಗೆ ಸಿಟ್ಟು ಹತ್ತಿ ನನ್ನ ಕರೆದು, “ನೋಡು, ನಿನ್ನ ಗಿಡದ ಆಸೆಗೆ ನನ್ನ ಸ್ಥಿತಿ ನೋಡು’ ಅಂದ್ರು.. ನಾನು ಬೆಪ್ಪತಕ್ಕಡಿ ಹಾಂಗೆ ನಿಂತ್ಕೊಂಡೆ. ಅವರು ದುಡ್ಡು ಕೊಟ್ಟು ಮಣ್ಣು ವಾಪಸ್ ಕಳಿಸಿ, “ಮಾರಾಯ್ತಿ ನನಗೆ ನೋಟ್ ಬ್ಯಾನ್ ಆದಾಗ್ಲೂ ಇಷ್ಟು ಕಷ್ಟ ಆಗಿರ್ಲಿಲ್ಲ, ಆದ್ರೆ ನಿನ್ನ ಮಣ್ಣು, ಗಿಡದ ಕಾಲದಲ್ಲಿ ಸಾಕಾಗೋಯ್ತು’ ಅಂದ್ರು! ಪ್ರತೀ ವರ್ಷ ಇನ್ನು ಗಿಡ ಮಾಡೋದು ಬೇಡ ಅಂತ ಭೀಷ್ಮ ಪ್ರತಿಜ್ಞೆ ಮಾಡ್ತಿನಿ. ಆದ್ರೆ ಗಿಡದ ಆಸೆ ಅಷ್ಟು ಸುಲಭವಾಗಿ ಹೋಗಲ್ಲ. ಮತ್ತೆ ಮಾಡ್ತೀನಿ, ಮೋಸ ಹೋಗ್ತಿನಿ. ಅದರ ಮಧ್ಯೆನೂ ಕೆಲವೊಂದು ಒಳ್ಳೆ ಗಿಡ ಮಾಡಿದೀನಿ. ಮನೆಯವರು ಯಾವಾಗ್ಲೂ ಹೇಳ್ತಾರೆ: “ದಿನಾ ದುಡ್ಡು ಕೊಟ್ಟು ಹೂ ಕೊಂಡ್ರೂ ಇಷ್ಟು ದುಬಾರಿ ಆಗ್ತಾ ಇರ್ಲಿಲ್ಲ. ನೀ, ಮಣ್ಣು, ಗೊಬ್ಬರಕ್ಕೆ ಖರ್ಚು ಮಾಡುವ ಹಣದ ಸರಾಸರಿ ಲೆಕ್ಕ ಮಾಡಿದ್ರೆ, ಒಂದು ಹೂವಿಗೆ 150 ರಿಂದ ಇನ್ನೂರು ರೂಪಾಯಿ ಬೀಳುತ್ತದೆ.ಇದಕ್ಕಿಂತ ದೇವರ ಪೂಜೆಗೆ ದುಡ್ಡು ಕೊಟ್ಟು ಹೂ ಕೊಳ್ಳೋದು ವಾಸಿ’ ಅಂತಾರೆ..