Advertisement

Lalbagh Flower Show 2024: ನಾಳೆಯಿಂದ ಹೂವಿನ ಲೋಕ ನೋಡ ಬನ್ನಿ

08:45 AM Jan 17, 2024 | Team Udayavani |

ಬೆಂಗಳೂರು: ಬಣ್ಣ-ಬಣ್ಣದ ಹೂವುಗಳಿಂದ ಅರಳಲಿರುವ ಅನುಭವ ಮಂಟಪ, ಐಕ್ಯಮಂಟಪ, ಇಷ್ಟಲಿಂಗ ಕಲಾಕೃತಿ, ಬಸವಾದಿ ಶರಣರ ಪ್ರತಿಮೆ, ವರ್ಟಿಕಲ್‌ ಗಾರ್ಡನ್‌, ಪುಷ್ಪ ಜಲಪಾತ ತೆ ಇನ್ನಿತರೆ ಹೂವುಗಳ ಆಕರ್ಷಕ ಕಲಾಕೃತಿಗಳನ್ನು ಕಣ್ತುಂಬಿಕೊಂಡು ಆನಂದಿಸಬೇಕೆ, ಹಾಗಾದರೆ ನಾಳೆಯಿಂದ ಲಾಲ್‌ಬಾಗ್‌ಗೆ ಬನ್ನಿ…

Advertisement

ಹೌದು, ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ತೋಟಗಾರಿಕೆ ಇಲಾಖೆಯಿಂದ ಸಸ್ಯಕಾಶಿ ಲಾಲ್‌ ಬಾಗ್‌ನ ಗಾಜಿನ ಮನೆಯಲ್ಲಿ “ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ’ 215ನೇ ಫ‌ಲಪುಷ್ಪ ಪ್ರದರ್ಶನವನ್ನು ಏರ್ಪಡಿಸಿದ್ದು, ಜ.18ರಿಂದ 28ರವರೆಗೆ ಒಟ್ಟು 11ದಿನಗಳ ಕಾಲ ನಡೆಯಲಿದೆ.

ಇಂಡೋ-ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯು ಎಕ್ಸಾಟಿಕ್‌ ಆರ್ಕಿಡ್ಸ್‌ಗಳಾದ ಪೆಲನಾಪ್ಸಿಸ್‌, ಡೆಂಡ್ರೊಬಿಯಂ, ವಾಂಡಾ, ಮೊಕಾರಾ ಸೇರಿದಂತೆ 20 ಬಗೆಯ ಆಕರ್ಷಕ ಮಿನಿಯೇಚರ್‌ ಆಂಥೂರಿಯಂ ಹಾಗೂ ವಿವಿಧ ಬಗೆಯ ಎಕ್ಸಾಟಿಕ್‌ ಹೂವುಗಳಿಂದ ಕಲಾಕೃತಿಗಳನ್ನು ಅಲಂಕರಿಸಲಾಗಿದ್ದು, ವಿಶ್ವಗುರು ಬಸವಣ್ಣ ಅವರ ಪುತ್ಥಳಿಯು ಗಾಜಿನಮನೆಯ ಪ್ರವೇಶದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ. ಈ ಬಾರಿಯ ಫ‌ಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಕವಾಗಿರುವ ಅನುಭವ ಮಂಟಪದ ಪ್ರತಿರೂಪವು ಗಾಜಿನ ಮನೆಯ ಕೇಂದ್ರಭಾಗದಲ್ಲಿ ತಲೆ ಎತ್ತಲಿದೆ.

ವಚನ ವೇದಿಕೆ: 215ನೇ ಫ‌ಲಪುಷ್ಪ ಪ್ರದರ್ಶನ ಕುರಿತು ಲಾಲ್‌ಬಾಗ್‌ನ ಮಾಹಿತಿಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್‌. ರಮೇಶ್‌, ಫ‌ಲಪುಷ್ಪ ಪ್ರದರ್ಶನ ಜರುಗುವ 11 ದಿನಗಳ ಕಾಲ ನಿರಂತರವಾಗಿ ಬಸವಾದಿ ಶರಣರ ತತ್ವಾಧಾರಿತ ಮತ್ತು ವಚನ ಸಾಹಿತ್ಯಾಧಾರಿನ ವಿಷಯಕ್ಕೆ ಪೂರಕವಾದ ವಚನ ಕಮ್ಮಟ, ಬಸವ ತತ್ವಗಳ ನೃತ್ಯ ರೂಪಕ ಸೇರಿದಂತೆ ಇತರೆ ಕಾರ್ಯಗಳು ಗಾಜಿನ ಮನೆ ಬಳಿಯ ಡಿಎಚ್‌ಒ ಹುಲ್ಲುಹಾಸಿನ ನಡುವೆ 40 ಮತ್ತು 30 ಉದ್ದಗಲ ಅಳತೆಯ ಬೃಹತ್‌ “ವಚನ ವೇದಿಕೆ’ ನಿರ್ಮಿಸಲಾಗುತ್ತಿದೆ.

215ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ: “ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾ ಧಾರಿತ’ ಗಣರಾಜ್ಯೋತ್ಸವದ 215ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಗುರುವಾರ (ಜ.18) ಸಂಜೆ 6ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಈ ವೇಳೆ ಪ್ರತಿಷ್ಠಿತ ಏರ್‌ಫೋರ್ಸ್‌, ಬಿಎಸ್‌ಎಫ್ ಮತ್ತು ಎಂಇಜಿ ಬ್ಯಾಂಡ್‌ಗಳ ವಿಶೇಷ ವಾದನ ಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ, ರಾಮಲಿಂಗಾರೆಡ್ಡಿ, ನಾಡೋಜ ಡಾ. ಗೊ.ರು. ಚನ್ನಬಸಪ್ಪ, ಶಾಸಕ ಉದಯ್‌ ಬಿ. ಗರುಡಾಚಾರ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್‌, ತೋಟಗಾರಿಕೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌, ಉಪ ನಿರ್ದೇಶಕಿ (ಲಾಲ್‌ ಬಾಗ್‌) ಜಿ. ಕುಸುಮಾ ಸೇರಿದಂತೆ ಇತರೆ ತೋಟಗಾರಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

4.8 ಲಕ್ಷ ಹೂ ಬಳಸಿ ಅನುಭವ ಮಂಟಪ ನಿರ್ಮಾಣ

ಅನುಭವ ಮಂಟಪದ ಪ್ರತಿಕೃತಿ 34 ಅಡಿ ಅಗಲ ಹಾಗೂ 30 ಅಡಿ ಎತ್ತರವಿದ್ದು, ಕಡುಗೆಂಪು, ಹಳದಿ ಮತ್ತು ಕಿತ್ತಳೆವರ್ಣದ 1.5 ಲಕ್ಷ ಗುಲಾಬಿ, ಹಳದಿ, ಪಿಂಕ್‌ ಬಿಳಿ ಬಣ್ಣದ 1.55 ಲಕ್ಷ ಸೇವಂತಿಗೆ ಹಾಗೂ 1.85 ಲಕ್ಷ ಗುಂಡುರಂಗು ಸೇರಿದಂತೆ ಒಟ್ಟು 4.8 ಲಕ್ಷ ಹೂವುಗಳಿಂದ ನಿರ್ಮಿಸಲಾ ಗುತ್ತಿದೆ. ಇದರ ಮುಂಭಾಗ 10 ಅಡಿ ಎತ್ತರದ ವಚನ ರಚನಾನಿರತ ಭಂಗಿಯಲ್ಲಿರುವ ಬಸವಣ್ಣ ಅವರ ಬೃಹತ್‌ ಪ್ರತಿಮೆ ಆಕರ್ಷಣೆಯಾಗಿದ್ದು, 6 ಅಡಿ ಎತ್ತರದ ಪೀಠದ ಮೇಲೆ ಅನಾವರಣಗೊಳ್ಳಲಿದೆ.

ಬಸವೇಶ್ವರರ ಬೃಹತ್‌ ಪ್ರತಿಮೆ ತಯಾರಿ

ಅನುಭವ ಮಂಟಪದ ಹಿಂಬದಿಯ 2,200 ಚದರಡಿ ಪ್ರದೇಶದಲ್ಲಿ ಬಸವಣ್ಣ ಅವರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ 5 ಕಲಾಕೃತಿ,10 ಅಡಿ ಉದ್ದಗಲ ಮತ್ತು 16 ಅಡಿ ಎತ್ತರದಲ್ಲಿ ಐಕ್ಯ ಮಂಟಪದ ಮಾದರಿ ಸಿದ್ಧವಾಗುತ್ತಿದ್ದು, 75 ಸಾವಿರ ಗುಲಾಬಿ, 1 ಲಕ್ಷ ಸೇವಂತಿಗೆ ಬಳಸಲಾಗುತ್ತಿದೆ. ಇದರ 4 ಮೂಲೆಗಳಲ್ಲಿ ಇಂಗಳೇಶ್ವರ, ಬಾಗೇವಾಡಿ ಬಸವ ಸ್ಮಾರಕ, ಮಂಗಳವೇಡೆ ಕೋಟೆ ಹಾಗೂ ಬಸವಕಲ್ಯಾಣದ ಮಾದರಿಗಳನ್ನು ಕಾಣಬಹುದಾಗಿದೆ.

ಈ ಬಾರಿ 68 ಬಗೆಯ 32 ಲಕ್ಷ ಹೂ ಬಳಕೆ

ಈ ಬಾರಿ “ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ’ ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, 68 ವಿವಿಧ ಜಾತಿಯ ಒಟ್ಟು 32 ಲಕ್ಷ ಹೂವುಗಳನ್ನು ಬಳಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ರಮೇಶ್‌ ಡಿ.ಎಸ್‌. ತಿಳಿಸಿದರು. 10ರಿಂದ 15 ಜಾತಿಯ ಹೈಬ್ರಿಡ್‌ ಆರ್ಕಿಡ್‌ಗಳನ್ನು ಬಳಸಿರುವ ಈ ಸಲದ ವಿಶೇಷವಾಗಿದೆ. ಗಾಜಿನ ಮನೆಯ ಒಳಗೂ ಮತ್ತು ಹೊರಾಂಗಣದಲ್ಲಿ ಬಣ್ಣ-ಬಣ್ಣದ ಹೂವುಗಳು ನಿಮ್ಮನ್ನು ಕೈಬೀಸಿ ಕರೆಯಲಿವೆ. ಲಾಲ್‌ಬಾಗ್‌ನಾದ್ಯಂತ ವಚನ ಸಾಹಿತ್ಯ ಮೊಳಗಲಿದೆ ಎಂದು ಹೇಳಿದರು. ಲಾಲ್‌ಬಾಗ್‌ನಾದ್ಯಂತ 136 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆಯ್ದ 5 ಭಾಗಗಳಲ್ಲಿ ಎತ್ತರದ ಟವರ್‌ ವೇದಿಕೆಯಿಂದ ಪೊಲೀಸ್‌ ಕಣ್ಗಾವಲು, 38 ಪ್ರದೇಶಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳ ಅಳವಡಿಕೆ, ನಾಲ್ಕು ಪ್ರವೇಶ ದ್ವಾರಗಳ ಬಳಿ ಆ್ಯಂಬುಲೆನ್ಸ್‌ ಕಲ್ಪಿಸಲಾಗಿದೆ ಎಂದರು.

ಗಾರ್ಡನ್‌, ನೈಸರ್ಗಿಕ ಜಲಪಾತ, ಪುಷ್ಪ ಡೂಮ್ಸ್‌ ಕಂಬ,ಏರ್‌ ಪ್ಲಾಂಟ್ಸ್‌ ಕಲಾಕೃತಿ

ಪ್ರತಿವರ್ಷದಂತೆ ಗಾಜಿನ ಮನೆಯ ಆಯ್ದ 40 ಕಂಬಗಳಲ್ಲಿ ಪುಷ್ಪ ಡೂಮ್ಸ್‌ ಅರಳಲಿದ್ದು, ಶೀತವಲಯದ ಹೂವು, ಏರಾಯಿಡ್‌, ಏರ್‌ ಪ್ಲಾಂಟ್ಸ್‌, ವುಡ್‌ ಗಾರ್ಡ್‌ನ್‌, ನೈಸರ್ಗಿಕ ಜಲಪಾತದ ಕಿರುಮಾದರಿಯ ಪರಿಕಲ್ಪನೆ ಅನಾವರಣಗೊಳ್ಳಲಿದೆ. ಗಾಜಿನಮನೆ ಹೊರಭಾಗದಲ್ಲಿ ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ ನವಿಲು, ಹೃದಯಾಕಾರದ ಹೂವಿನ ಕಾಮಾನುಗಳು, ಮೆಗಾ ಫ್ಲೋರಲ್‌ ಫ್ಲೊ, ತೂಗುವ ಹೂವುಗಳ ಬಾಗುವ ಚೆಲುವೆಯನ್ನು ನಿರ್ಮಿಸಲಾಗುತ್ತಿದ್ದು, ಲಾಲ್‌ಬಾಗ್‌ನ 6 ಆಯ್ದ ಭಾಗಗಳಲ್ಲಿ ಎಲ್‌ಇಡಿ ಪರದೆಗಳ ಮೂಲಕ ಬಸವಣ್ಣ ಅವರ ತತ್ವದರ್ಶನ, ಬಸವಾದಿ ಶರಣರ ದರ್ಶನ, ವಚನ ಸಾಹಿತ್ಯಕ್ಕೆ ಪೂರಕವಾದ ಮಾಹಿತಿ ಪ್ರದರ್ಶಿಸಲಾಗುವುದು.

ಪ್ರವೇಶ ದರ

ಲಾಲ್‌ಬಾಗ್‌ನ ನಾಲ್ಕುದ್ವಾರಗಳಲ್ಲಿ ಟಿಕೆಟ್‌ ಕೌಂಟರ್‌ ನಿರ್ಮಿಸಲಾಗಿದ್ದು, ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ ತಲಾ 80 ಹಾಗೂ ರಜಾದಿನಗಳಲ್ಲಿ 100 ರೂ. ಇರಲಿದೆ. ಮಕ್ಕಳಿಗೆ (12 ವರ್ಷದೊಳಗಿನ) ಎಲ್ಲಾ ದಿನಗಳಲ್ಲಿ 30 ರೂ. ಹಾಗೂ ಶಾಲಾ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ಮುಂಚಿತವಾಗಿ ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ

ಶಾಂತಿನಗರದ ಬಸ್‌ನಿಲ್ದಾಣದ ಬಳಿಯ ಬಹುಮಹಡಿ ವಾಹನ ನಿಲುಗಡೆ, ಹಾಪ್‌ ಕಾಮ್ಸ್‌ ಆವರಣ, ಜೆಸಿ ರಸ್ತೆಯಲ್ಲಿನ ಬಿಬಿ ಎಂಪಿ ಬಹುಮಹಡಿ ವಾಹನ ನಿಲುಗಡೆ, ದ್ವಿಚಕ್ರ ವಾ ಹನಗಳನ್ನು ಲಾಲ್‌ಬಾಗ್‌ ಮುಖ್ಯ ದ್ವಾರದ ಬಳಿಯ ಅಲ್‌ ಅಮೀನ್‌ ಕಾಲೇಜು ಆವರಣದಲ್ಲಿ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ. ಆದರೆ, ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವವರು ಸಾಧ್ಯವಾದಷ್ಟು ಮೆಟ್ರೋ, ಬಿಎಂಟಿಸಿಯಂತಹ ಸಾರ್ವಜನಿಕ ಸಾರಿಗೆ ಗಳನ್ನು ಬಳಸಿ ಎಂದು ಮನವಿ ಮಾಡಲಾಗಿದೆ.

ಅಕ್ಕಮಹಾದೇವಿ ಸೇರಿ 10 ಶರಣರ ಕಲಾಕೃತಿ ನಿರ್ಮಾಣ

ಗಾಜಿನ ಮನೆಯ ಹಿಂಬದಿಯಲ್ಲಿ ನಗರದ ಬಸವ ಸಮಿತಿ ಆಯ್ಕೆ ಮಾಡಿದ ಅಕ್ಕಮಹಾದೇವಿ, ಅಂಬಿಗರಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ ಸೇರಿದಂತೆ ವಿವಿಧ ಶರಣರ 10 ಪ್ರತಿಮೆಗಳನ್ನು ಪ್ರದರ್ಶಿಸಲಾಗುತ್ತಿದೆ. ಗಾಜಿನ ಮನೆಯ ಎಡಭಾಗದಲ್ಲಿ 18 ಅಡಿ ಉದ್ದ, 3 ಅಡಿ ಎತ್ತರ ಹಾಗೂ 12 ಅಡಿ ಅಗಲವಿರುವ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಿ, ಅದರ ಮೇಲೆ ಕರಸ್ಥಲದಲ್ಲಿರುವ ಇಷ್ಟಲಿಂಗದ ಕಲಾಕೃತಿಯನ್ನು ಇರಿಸಲಾಗುತ್ತದೆ. ಹೀಗೆ ಗಾಜಿನ ಮನೆ ಎಲ್ಲೆಡೆ ವಚನ ಸಾಹಿತ್ಯವೇ ಕಾಣಲಿದೆ.

ಉದಯವಾಣಿ ಸಮಾಚಾರ

 

Advertisement

Udayavani is now on Telegram. Click here to join our channel and stay updated with the latest news.

Next