Advertisement

Dharmasthala ಶೀಘ್ರದಲ್ಲೇ ಚಂದ್ರಯಾನ-4: ಇಸ್ರೋ ವಿಜ್ಞಾನಿ ರಾಮಕೃಷ್ಣ ಬಿ.ಎನ್‌.

12:37 AM Dec 13, 2023 | Team Udayavani |

ಬೆಳ್ತಂಗಡಿ: ಶಿವನಿಗೂ ಚಂದ್ರನಿಗೂ ಅವಿನಾಭಾವ ಸಂಬಂಧ. ಶಿವನ ಶಿರದಲ್ಲಿ ಚಂದ್ರನಿಗೆ ಸ್ಥಾನವಿದೆ. ಹಾಗಾಗಿ ಚಂದ್ರಯಾನ 3ರಲ್ಲಿದ್ದ ರೋವರ್‌ ಪ್ರಗ್ಯಾನ್‌ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ನಾಮಕರಣ ಮಾಡಿದರು. ಈ ಯಶಸ್ಸಿನ ಬೆನ್ನಲ್ಲೇ ಗಗನ ಯಾತ್ರಿಗಳನ್ನೊಳಗೊಂಡ ಚಂದ್ರಯಾನ -4 ಕಾಲಿಡಲಿದೆ ಎಂದು ಖ್ಯಾತ ವಿಜ್ಞಾನಿ ಹಾಗೂ ಬೆಂಗಳೂರಿನ ಇಸ್ರೋ ನಿರ್ದೇ ಶಕ ರಾಮಕೃಷ್ಣ ಬಿ.ಎನ್‌. ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಮಂಗಳ ವಾರ ಆಯೋಜಿಸಿದ ಸಾಹಿತ್ಯ ಸಮ್ಮೇಳ ನದ 91ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ಚಂದ್ರನಲ್ಲಿಂದ ಕಲ್ಲು ಮತ್ತು ಮಣ್ಣನ್ನುತಂದು ಇನ್ನೂ ಹೆಚ್ಚಿನ ವಿಶ್ಲೇಷಣೆ ಹಾಗೂ ಸಂಶೋಧನೆ ನಡೆಸಬೇಕೆಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಅದು ಚಂದ್ರಯಾನ-4ರಲ್ಲಿ ಈಡೇರಿಸ ಬೇಕಿದೆ. ಮುಂದೆ ಬಾಹ್ಯಾಕಾಶ ಯಾನ ದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ದೊರಕುವ ಮೂಲಕ ಮಗದೊಮ್ಮೆ ವಿಶ್ವವೇ ಚಕಿತಗೊಂಡು ಭಾರತದ ಕಡೆಗೆ ನೋಡುವಂತಾಗಲಿದೆ. ಇದು ದೈವ ಮತ್ತು ಮಾನವನ ಸಂಕಲ್ಪ ವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಗಮಕಿ ಡಾ| ಎ.ವಿ. ಪ್ರಸನ್ನ ಮಾತ ನಾಡಿ, ಗಮಕ ಕರ್ನಾಟಕದ ವಿಶೇಷ ಕಲೆಯಾಗಿದೆ. ಕಾವ್ಯಗಳು ಜನರಿಗೆ ತಲುಪುವಂತೆ ಮಾಧ್ಯಮವಾಗಬೇಕು. ಹಾಗಾದಲ್ಲಿ ಕವಿ ಶ್ರೇಷ್ಠನಾಗುತ್ತಾನೆ. ಧರ್ಮಸ್ಥಳದಲ್ಲಿ ಡಾ| ಹೆಗ್ಗಡೆಯವ ರಿಂದ ಕಳೆದ 50 ವರ್ಷಗಳಿಂದ ಪುರಾಣವಾಚನ ಪ್ರವಚನದ ಮೂಲಕ ಜನರನ್ನು ಮುಟ್ಟುವ ಕಾರ್ಯವಾಗಿದೆ. ಮುಂದೆ ಗಮಕಿಗಳಿಗೂ ಸ್ಥಾನ ಸಿಗಲಿ ಎಂದು ಆಶಿಸಿದರು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಿ, ಜಗತ್ತಿನಲ್ಲಿ ಎಲ್ಲ ಭಾಷೆಗಳ ಸಾಹಿತ್ಯಕ್ಕೂ ಜನಪದವೇ ಮೂಲ. ಯಕ್ಷಗಾನ ಮಂಡಳಿ ಮೂಲಕ ಕಲೆ, ಸಾಹಿತ್ಯದ ಮೂಲಕ ಧರ್ಮಪ್ರಭಾವನೆ ಮಾಡಲಾಗುತ್ತದೆ ಎಂದರು.

Advertisement

ಹಿಂದಿನ 90 ಅಧಿವೇಶನಗಳನ್ನು ಅವಲೋಕಿಸಿದರೆ ನಮ್ಮ ಧರ್ಮಸ್ಥಳ ಕ್ಷೇತ್ರ ಕನ್ನಡ ಸಾಹಿತ್ಯ ಸಂವರ್ಧನೆಗೆ ನೀಡಿರುವ ಕೊಡುಗೆ ಅತ್ಯಾಶ್ಚರ್ಯ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ನಾಡಿನಾದ್ಯಂತ 2,121 ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಶ್ರೀ ಮಂ. ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಮೂಲಕ 5 ಸಾವಿರಕ್ಕೂ ಅಧಿಕ ಅಮೂಲ್ಯ ಹಸ್ತಪ್ರತಿಗಳನ್ನು ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.

ಬಾಲ ಬೋಧ ಪುಸ್ತಕವನ್ನು ಡಾ| ವಿ. ಪ್ರಸನ್ನ ಲೋಕಾರ್ಣೆಗೊಳಿಸಿದರು. ಸ್ವಾಗತ ಸಮಿತಿ ಖಜಾಂಚಿ ಡಿ. ಹರ್ಷೇಂದ್ರ ಕುಮಾರ್‌ ಉಪನ್ಯಾಸಕ ರನ್ನು ಸಮ್ಮಾನಿಸಿದರು. ಉದ್ಘಾಟಕರ ಸಮ್ಮಾನ ಪತ್ರವನ್ನು ಎಸ್‌ಡಿಎಂ ಪ್ರಾಜೆಕ್ಟ್ ಡೈರೆಕ್ಟರ್‌ ಡಿ. ಶ್ರೇಯಸ್‌ ಕುಮಾರ್‌ ಸಮ್ಮಾನ ಪತ್ರ ವಾಚಿಸಿದರು. ಅಧ್ಯಕ್ಷರ ಸಮ್ಮಾನ ಪತ್ರವನ್ನು ಎಸ್‌ಡಿಎಂ ಐ.ಟಿ. ಸೆಲ್‌ ಸಿಇಒ ಪೂರನ್‌ ವರ್ಮ ವಾಚಿಸಿದರು.

ಹೊನ್ನಾವರದ ವಿಶ್ರಾಂತ ಪ್ರಾಧ್ಯಾಪಕ ಡಾ| ಶ್ರೀಪಾದ ಶೆಟ್ಟಿ ಅವರು ಸಾಹಿತ್ಯ -ಸಂಸ್ಕೃತಿ ನೆಲೆ ವಿಷಯದಲ್ಲಿ ಹಾಗೂ ಬೆಂಗಳೂರು ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಅವರು ರಂಗಭೂಮಿ ಮತ್ತು ಸಾಹಿತ್ಯ ಸಿರಿ, ಬಂಟ್ವಾಳ ಲೇಖಕ ಮತ್ತು ಪ್ರಾಧ್ಯಾಪಕ ಡಾ| ಅಜಕ್ಕಳ ಗಿರೀಶ ಭಟ್‌ ಅವರು ಭಾಷೆ ಮತ್ತು ಸಾಹಿತ್ಯ ಪರಸ್ಪರ ಅವಲಂಬನೆ ವಿಚಾರದಲ್ಲಿ ಉಪನ್ಯಾಸ ನೀಡಿದರು.

ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಉಪಸ್ಥಿತರಿದ್ದರು.

ಬೆಳ್ತಂಗಡಿಯ ವಕೀಲ ಕೇಶವ ಗೌಡ ವಂದಿಸಿದರು. ಎಸ್‌ಡಿಎಂ ಕಾಲೇಜಿನ ಕನ್ನಡ ಉಪನ್ಯಾಸಕರಾದ ದಿವಾ ಕೊಕ್ಕಡ ಮತ್ತು ರಾಜಶೇಖರ ಹಳೇಮನೆ ನಿರ್ವಹಿಸಿದರು.

ಸಂಚಾರಿ ಗ್ರಂಥ ಉದ್ಘಾಟನೆ
ಮಕ್ಕಳಲ್ಲಿ ಸಂಸ್ಕಾರದ ಬದುಕು ಕಟ್ಟಿಕೊಡುವ ನೆಲೆಯಲ್ಲಿ ಹಾಗೂ ಮೊಬೈಲ್‌ ಮಾಧ್ಯಮದ ಮಧ್ಯೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂಬ ನೆಲೆಯಲ್ಲಿ ಡಾ| ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಕ್ಷೇತ್ರದಿಂದ ಕೊಡಮಾಡಿದ ನೂತನ ಯೋಜನೆಯಾದ ಜ್ಞಾನವಾಹಿನಿ ಡಿಜಿಟಲ್‌ ಸಂಚಾರಿ ಗ್ರಂಥಾಲಯವನ್ನು ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.

3 ಸಾವಿರ ಭಗವದ್ಗೀತೆ ವಿತರಣೆ
ಬೆಂಗಳೂರಿನ ಪಾಪಣ್ಣ ಗೆಳೆಯರ ಬಳಗದವರು ಮತ್ತು ಇಸ್ಕಾನ್‌ ಅರ್ಜುನ್‌ ಸಕಾದಾಸ್‌ ನೇತೃತ್ವದಲ್ಲಿ 3 ಸಾವಿರ ಭಗವದ್ಗೀತೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.

ತುಮಕೂರಿನಲ್ಲಿ ಅಧ್ಯಯನ ಪೀಠ
ಕುಮಾರವ್ಯಾಸನಂತೆ, ರಾಘವಾಂಕ, ಹರಿಹರ, ಜೈನಕಾಶಿ ಮೂಡಬಿದಿರೆಯ ಕವಿ ರತ್ನಾಕರವರ್ಣಿ ಪ್ರಸಿದ್ಧ ಗಮಕಿಗಳಾಗಿದ್ದಾರೆ. 2000ನೇ ಇಸವಿಯಲ್ಲಿ ತುಳುನಾಡಿನ ಪುತ್ತೂರು ತಾಲೂಕಿನ ಶಾಂತಿಗೋಡಿನಲ್ಲಿ ದೊರಕಿದ ಮಹಾಭಾಬಾರತೊ ತುಳು ಕಾವ್ಯವೊಂದು ಕುಮಾರವ್ಯಾಸನ ಕಾಲಘಟ್ಟವನ್ನು ನಿರ್ಣಯಿಸಲು ಸಾಧ್ಯವಾಗಿದೆ ಎಂಬುದು ತುಳು ಭಾಷೆಗೆ ಸಿಕ್ಕ ದೊಡ್ಡ ಗರಿಮೆಯಾಗಿದೆ. ಕುಮಾರವ್ಯಾಸ ಭಾರತ, ಪಂಪ ಭಾರತದ ಕುರಿತು ಜನಮಾನಸಕ್ಕೆ ತಲುಪಿಸಲು ತುಮಕೂರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಚಿಂತನೆಯಿದೆ ಎಂದು ಡಾ| ಎ.ವಿ. ಪ್ರಸನ್ನ ತಿಳಿಸಿದರು.

-ಮಂಗಳವಾರ ರಾತ್ರಿ ಭಕ್ತರ 21 ತಂಡದವರು 1 ಕೋಟಿ ರೂ. ವಿನಿಯೋಗಿಸಿ 2 ಲಕ್ಷ ಮಂದಿಗೆ ಉಪಾಹಾರ ಮತ್ತು ನೀರಿನ ವ್ಯವಸ್ಥೆ ಮಾಡಿರುತ್ತಾರೆ.
– ಬೆಂಗಳೂರಿನ ಮಂಜು, ರಾಮ ಮತ್ತು ರವೀಶ್‌ ಬಳಗದವರಿಂದ ದೇವಸ್ಥಾನಕ್ಕೆ ವಿಶೇಷ ಹೂವುಗಳಿಂದ ಅಕರ್ಷಕ ವಿನ್ಯಾಸದಲ್ಲಿ ಅಲಂಕಾರ ಸೇವೆ
– ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಸಂಚಾರಿ ಗ್ರಂಥಾಲಯ ಉದ್ಘಾಟನೆ.
– 1,525 ಜಾನಪದ ತಂಡಗಳಿಂದ ಅಹೋರಾತ್ರಿ ಕಲಾ ಸೇವೆ ಅರ್ಪಣೆ (ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ, ಯಕ್ಷಗಾನ ಇತ್ಯಾದಿ)

ಕಂಚಿ ಮಾರುಕಟ್ಟೆ ಉತ್ಸವ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ನಾಲ್ಕನೇ ದಿನದಂಗವಾಗಿ ಕಂಚಿ ಮಾರುಕಟ್ಟೆ ಉತ್ಸವವು ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನದ ಅಂಗಣದಲ್ಲಿ ರಂಗ ಪೂಜೆ ನಡೆಸಿ ಅಲಂಕೃತ ಪಲ್ಲಕ್ಕಿಯಲ್ಲಿ ದೇವರನ್ನು ಕುಳ್ಳಿರಿಸಿ 16 ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಬೆಳ್ಳಿ ನಂದಿಯ ಮೇಲೆ ವಿರಾಜಮಾನನಾದ ಶ್ರೀ ಮಂಜುನಾಥ ಸ್ವಾಮಿಯ ಲಾಲಕ್ಕಿಯನ್ನು ಕಂಚಿ ಮಾರುಕಟ್ಟೆಗೆ ಬರ ಮಾಡಿಕೊಂಡು ವಿಶೇಷ ಪೂಜೆ ನಡೆಸಲಾಯಿತು. ಅನಂತರ ದೇವರನ್ನು ದೇವಸ್ಥಾನದ ಬಳಿ ಕರೆತಂದು ಬೆಳ್ಳಿ ರಥದಲ್ಲಿ ಕೂರಿಸಿ ಮಂಗಳಾರತಿ ಬೆಳಗಲಾಯಿತು. ದೇವಸ್ಥಾನಕ್ಕೆ ಒಂದು ಸುತ್ತು ರಥ ಪ್ರದಕ್ಷಿಣೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.

ಗೌರಿಮಾರುಕಟ್ಟೆ ಉತ್ಸವ
ಕಾರ್ತಿಕ ಮಾಸದ ಕೊನೆಯ ದಿನ ಡಿ. 12ರಂದು ಲಕ್ಷದೀಪೋ ತ್ಸವದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಗೌರಿ ಮಾರುಕಟ್ಟೆ ಉತ್ಸವ ನೆರವೇರಿತು. ಅಪಾರ ಸಂಖ್ಯೆಯ ಭಕ್ತರು ಶಿವ ಪಂಚಾಕ್ಷರಿ ನಾಮ ಜಪಿಸುತ್ತ ಬೆಳ್ಳಿ ರಥ ವನ್ನೆಳೆದರು. ಡಾ| ಹೆಗ್ಗಡೆ ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು. ಪುಷ್ಪಾಲಂಕೃತ ನಂದಿ, ಡಮರುಗ
ಲಕ್ಷದೀಪೋತ್ಸವದ ಕೊನೆಯ ದಿನ ಬೆಂಗಳೂರಿನ ಭಕ್ತರು 15 ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರ ವನ್ನು ಹೂಗ ಳಿಂದ ಸಿಂಗರಿಸುವುದು ವಾಡಿಕೆ.

ಅಂತೆಯೇ ಈ ಬಾರಿ ಬೀಡು, ಅನ್ನಛತ್ರ ಸಹಿತ ದೇಗುಲದ ಮುಂಭಾಗವನ್ನು ಅಲಂಕರಿಸಲಾಗಿತ್ತು. ಬೃಹತ್‌ ನಂದಿ, ಡಮರುಗ, ತ್ರಿಶೂಲದ ಪ್ರತಿಕೃತಿ ಗಮನ ಸೆಳೆಯಿತು.

ಇಂದು ಸಮವಸರಣ ಪೂಜೆ
ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಡಿ. 13ರಂದು ಸಂಜೆ 6.30ರಿಂದ ನಡೆಯಲಿದೆ. ಬಾಹುಬಲಿ ಸೇವಾ ಸಮಿತಿಯ ಶ್ರಾವಕರು, ಶ್ರಾವಕಿಯರಿಂದ ಭಜನೆ, ಸ್ತೋತ್ರ, ಪೂಜಾಮಂತ್ರ ಪಠಣ, ಅಷ್ಟ ವಿಧಾರ್ಚನೆ ನಡೆಯಲಿದೆ. ಕನ್ನಡ ಭಕ್ತಾಮರ ಸ್ತೋತ್ರದಿಂದ ಆಯ್ದ ಶ್ಲೋಕಗಳ ವರ್ಣನೆ ಮತ್ತು ನೃತ್ಯ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next