Advertisement

ರಾಜಧಾನಿಗಳಲ್ಲಿ ಕೆರೆ ವೈಭವ

10:20 AM Oct 15, 2019 | Sriram |

ಒಂದು ರಾಜ್ಯದ ಆಡಳಿತದ ಕೇಂದ್ರವಾದ ರಾಜಧಾನಿ ಕಟ್ಟುವಾಗ ನೀರಿಗೆ ಮೊದಲ ಗಮನ. ರಾಜಪರಿವಾರ, ಅಧಿಕಾರಿಗಳು, ಸೈನಿಕರು, ಕುದುರೆ ಕಾಲಾಳುಗಳಿಗೆ ನೀರಿನ ಸೌಲಭ್ಯ ಬೇಕು. ನಗರ ಸೌಂದರ್ಯದ ಭಾಗವಾಗಿಯೂ ಕೆರೆಕಟ್ಟೆಗಳ ಜಲ ವಿನ್ಯಾಸ ಮೈದಳೆಯಬೇಕು. ಲಕ್ಷಾಂತರ ಜನ ಬಾಳಿ ಬದುಕಿದ ಸಾಮ್ರಾಜ್ಯಗಳ ಕೆರೆ ಕಾಯಕಗಳಿಂದ ನಾವು ಕಲಿಯುವುದು ಬಹಳವಿದೆ.

Advertisement

ನೀರಿಲ್ಲದೇ ಊರು ಕಟ್ಟಲಾಗದೆಂದು ಗೊತ್ತಿದೆ. ನದಿ, ಕೆರೆ, ಸರೋವರಗಳಂಚಿನಲ್ಲಿ ರಾಜ್ಯಗಳು ಉದುಸಿವೆ. ಕರ್ನಾಟಕದ ಸಂದರ್ಭದಲ್ಲಿ ಕದಂಬರ ಬನವಾಸಿಯೋ, ಜಯನಗರ ಸಾಮ್ರಾಜ್ಯದ ಹಂಪಿಯೋ, ಹೊಯ್ಸಳರ ಬೇಲೂರು- ಹಳೆಬೀಡು, ಚಾಲುಕ್ಯರ ಬದಾು, ಬಸವಕಲ್ಯಾಣ ಕೆರೆಗಳು ಅರಸುಯುಗದ ಕೆರೆ ವೈಭವದ ಅಪ್ಪಟ ಸಾಕ್ಷಿಗಳು. ನೀರಿನ ಬಗ್ಗೆ ನಾವೇನು ಹೇಳುವಾಗಲೂ ಇಲ್ಲಿನ ಜಲ ಚರಿತೆಯ ಉಲ್ಲೇಖವಿಲ್ಲದೇ ಮುಂದೆ ಹೋಗಲಾಗದು. ನೀರಿನ ಬೆಲೆ ಆಳುವ ರಾಜರಿಗೆ ಗೊತ್ತಿದ್ದರಿಂದ ನದಿ ಗಡಿಯ ನೆಲೆಯಲ್ಲಿ ಯುದ್ಧಗಳು ನಡೆದಿವೆ, ಕೋಟೆಗಳು ನಿರ್ಮಾಣಗೊಂಡಿವೆ. ಜಯನಗರ ಅರಸರು ಹಾಗೂ ಬಹಮನಿ ಸುಲ್ತಾನರ ನಡುವೆ ತುಂಗಭದ್ರಾ ಹಾಗೂ ಕೃಷ್ಣಾ ನದಿ ನಡುವಿನ ಫ‌ಲವತ್ತಾದ ರಾಯಚೂರು ಪ್ರದೇಶಕ್ಕಾಗಿ ಹಲವು ಯುದ್ಧಗಳಾಗಿದ್ದು ಗೊತ್ತೇ ಇದೆ.

ನೆರೆ ನಿಯಂತ್ರಣಕ್ಕೂ ಕೆರೆ
ಬದಾಮಿಯನ್ನು ರಾಜಧಾನಿಯಾಗಿಸಿಕೊಂಡು ಆಳಿದ ಬದಾಮಿ ಚಾಲುಕ್ಯರು ಕೆರೆಗಳ ವ್ಯೂಹ ರಚನೆಗೆ ಮಹತ್ವ ನೀಡಿದವರು. ಮಲಪ್ರಭಾ ನದಿ ನೆಲೆಯ ರಾಜ್ಯದ ಕಟ್ಟಿಗೇರಿ ಪ್ರದೇಶ ಕಟ್ಟೆಗಳ ಸರಣಿಯೇ! ಕೋಟೆಯ ಪಶ್ಚಿಮದಲ್ಲಿ ಒಂದು ಕೆರೆ, ಇದರಿಂದ ಕೊಂಚ ಮೇಲುಮಟ್ಟದಲ್ಲಿ ದೊಡ್ಡಕೆರೆ, ನೈಋತ್ಯ ಭಾಗದಲ್ಲಿ ಇನ್ನೊಂದು, ದಕ್ಷಿಣದ ಗಡಿಯಲ್ಲಿ ಮತ್ತೂಂದು ಕೆರೆ ಕಟ್ಟುತ್ತ ಒಂದು ಭರ್ತಿಯಾದ ಬಳಿಕ ಇನ್ನೊಂದು ಕೆರೆ ತುಂಬಿಸುವ ಕಾರ್ಯ ಇವರದು. ಇದು ನೆರೆ ನಿಯಂತ್ರಣ ಹಾಗೂ ನೀರಾವರಿ ತಂತ್ರವಾಗಿದೆ. ಬಸವಕಲ್ಯಾಣವನ್ನು ರಾಜಧಾನಿಯಾಗಿಸಿಕೊಂಡು 350 ವರ್ಷ ಆಳ್ವಿಕೆ ನಡೆಸಿದ ಕಲ್ಯಾಣ ಚಾಲುಕ್ಯರು (973-1336) ಕರ್ನಾಟಕದ ಕೆರೆಗಳ ಸುವರ್ಣಯುಗದ ಪ್ರವರ್ತಕರು. ಕೆರೆಗಳ ಪಕ್ಕದಲ್ಲಿ ದೇವರ ಗುಡಿ ನಿರ್ಮಿಸಿ ಕೆರೆ ಒಡೆದಾಗ ಗುಡಿಯ ಹಣವನ್ನು ಬಳಸಲು ಕಲಿಸಿದ ಚಾಣಾಕ್ಷರು. ಇಮ್ಮಡಿ ತೈಲಪ(973-977), ಇಮ್ಮಡಿ ಜಯಸಿಂಹ(1015-1044), ಮೊದಲನೇ ಸೋಮೇಶ್ವರ(1068-1076)ರ ಕಾಲದಲ್ಲಿ ಅತಿಹೆಚ್ಚು ಕೆರೆ ನಿರ್ಮಾಣ ನಡೆದಿದೆ. ಮುಖ್ಯವಾಗಿ ರಾಜಧಾನಿಗೆ ನೀರು ಹರಿಯುವ ಚುಳಿR ನಾಲಾ “ಚಾಲುಕ್ಯ ನಾಲಾ’ ಎಂಬುದನ್ನು ಮರೆಯಬಾರದು. ನೀರಿನ ಮಹತ್ವ ಅರಿತ ಅರಸರ ಕಾರಣದಿಂದ ಧಾರವಾಡ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೆರೆಗಳಾಗಿವೆ.

ನೀರು ಸಂಗ್ರಹಿಸುವ ಮಹತ್ವ
ಕ್ರಿ.ಶ. 1558ರ ಶಾಸನದ ಪ್ರಕಾರ ಸೋದೆಯ ಅರಸಪ್ಪ ನಾಯಕನು ತನ್ನ ವಂಶಾಭಿವೃದ್ಧಿಯಾಗಲೆಂದು ಹಲವು ದೇಗುಲಗಳಿಗೆ ದತ್ತಿ ನೀಡಿದ್ದಾನೆ, ಕೆರೆಗಳನ್ನು ನಿರ್ಮಿಸಿದ್ದಾನೆ. ಶಿರಸಿ ತಾಲೂಕಿನ ಕಾಡು ಹಳ್ಳಿಗಳ ನಡುವೆ ಈಗಿನ ಸೋಂದಾ ಹಾಗೂ ಮಠದೇವಳ ಗ್ರಾಮಗಳು ಅರಸರ ರಾಜಧಾನಿ, ಶಾಲ್ಮಲಾ ನದಿ ತಟದಲ್ಲಿ ಸುಧಾಪುರ ನಗರ. ಕ್ರಿ.ಶ.1963ರ ಹೊತ್ತಿಗೆ ಒಂದು ಲಕ್ಷ ಜನ ವಾಸವಾಗಿದ್ದರೆಂಬ ಉಲ್ಲೇಖವಿದೆ. ನೀರಿನ ವ್ಯವಸ್ಥೆಗೆ ನದಿಯನ್ನು ಮಾತ್ರ ಅರಸರು ನಂಬಲಿಲ್ಲ , 3000 ಮಿಲಿ ಲೀಟರ್‌ ವಾರ್ಷಿಕ ಮಳೆ ಸುರಿಯುವ ಮಲೆನಾಡಿನ ಪ್ರದೇಶದಲ್ಲಿ ಮಳೆನೀರಿನ ಸಂಗ್ರಹಕ್ಕೆ ಕೆರೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ಹಯಗ್ರೀವ ಸಮುದ್ರ, ಮುತ್ತಿನಕೆರೆ, ಗೋಂದ ನಾಯಕನ ಕೆರೆ, ಗದ್ದುಗೆ ತಿಮ್ಮನಕೆರೆ, ಅಕ್ಕತಂಗಿಯರ ಕೆರೆ, ಮುಂಡಗೆ ಕೆರೆ, ನೀರುಳ್ಳೆ ಕೆರೆ, ಸ್ವರ್ಣವಲ್ಲಿ ಕೆರೆ, ಹೊಸತೋಟಕೆರೆ, ಮಂಗನಮಕ್ಕಿ ಕೆರೆ, ಬಾಡಲಕೊಪ್ಪಕೆರೆ ಹಲವು ಕೆರೆ ಕಟ್ಟಿದವರು. ಬದ್ರೆಡೆ ಬಾವಿ, ಎಣ್ಣೆಬಾವಿ, ನಕ್ಷತ್ರಬಾವಿ, ರಾಠಾಳ್‌ ಬಾವಿ ಮುಂತಾದ ಬಾವಿ ರೂಪಿಸಿದವರು. ಮಲೆನಾಡಿನ ಕೆಳದಿಯ ದೊರೆ ಸದಾಶಿವನಾಯಕನು (1512-46) ಕೂಡಾ ತನ್ನ ರಾಜಧಾನಿ ಕೆಳದಿಯ ಸುತ್ತ 14 ಕೆರೆ ಸರಣಿ ನಿರ್ಮಿಸಿದವರು.

ವಿಶ್ವಕ್ಕೇ ಮಾದರಿಯಾಗಿತ್ತು
ಹನ್ನೊಂದರಿಂದ ಹದಿನಾಲ್ಕನೇ ಶತಮಾನದ ಮಧ್ಯಭಾಗದವರೆಗೆ ಆಳಿದ ಹೊಯ್ಸಳರು ವಿಶಾಲ ಕೆರೆಗಳನ್ನು ರಾಜಧಾನಿಯ ಸುತ್ತ ಕಟ್ಟಿದವರು. ಯಗಚಿ ನದಿಯಿಂದ ನೀರು ಕಾಲುವೆ ಮಾಡಿ ಕೆರೆಗಳಿಗೆ ಭರ್ತಿ ಮಾಡುವ ವಿದ್ಯೆ ಅಳವಡಿಸಿದವರು. ವಿಷ್ಣುವರ್ಧನ( 1108-1152), ವೀರಬಲ್ಲಾಳ(1173-1227), ಮುಮ್ಮಡಿ ವೀರಬಲ್ಲಾಳ( 1282-1342) ಅರಸರು ಕೆರೆಗಳಿಗೆ ಹೆಚ್ಚು ಮಹತ್ವ ನೀಡಿದರು. ಹೊಯ್ಸಳ ಸಮುದ್ರ, ಬ್ರಹ್ಮ ಸಮುದ್ರ, ವಿಷ್ಣುಸಮುದ್ರ ಹೀಗೆ ರಾಜಧಾನಿಯ ಸುತ್ತ ವಿಶಾಲ ಕೆರೆಗಳು ಸಮುದ್ರವೆಂಬ ಹೆಸರಿನಿಂದ ಕರೆಯಲ್ಪಟ್ಟಿವೆ.

Advertisement

ದಕ್ಷಿಣ ಭಾರತದ ಇತಿಹಾಸದಲ್ಲಿ ಅತ್ಯಂತ ವಿಶಾಲವಾದ ವಿಜಯನಗರ ಸಾಮ್ರಾಜ್ಯ (1336-1565)ದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುತ್ತಿದ್ದರೆಂಬ ಮಾತಿದೆ. ಅತ್ಯುತ್ತಮ ನೀರಾವರಿ ವ್ಯವಸ್ಥೆಯಿಂದ ಸಮೃದ್ಧಿ ಪ್ರಾಪ್ತವಾಗಿತ್ತು. ನಗರದಲ್ಲಿ 70 ದೊಡ್ಡ ನಾಲೆಗಳು ಹರಿಯುತ್ತಿದ್ದವು, ಪ್ರತಿಯೊಬ್ಬ ಅಧಿಕಾರಿಗೂ ಸ್ತಾರವಾದ ತೋಟತ್ತು. ಬಗೆ ಬಗೆಯ ಹಣ್ಣುಗಳನ್ನು ಬೆಳೆಯಲಾಗುತ್ತಿತ್ತೆಂದು ದಾಖಲೆಗಳಿವೆ. ತುಂಗಭದ್ರಾ ನದಿ ಕಣಿವೆಯ ಹಂಪಿ ಕೇಂದ್ರೀಕೃತ ನೀರು ನಿರ್ವಹಣೆ ವ್ಯವಸ್ಥೆಗೆ ವಿಶ್ವದ ಅತ್ಯುತ್ತಮ ಮಾದರಿಯಾಗಿತ್ತೆಂದರೆ ನಗರ ಕಟ್ಟುವಲ್ಲಿ ನೀರು ನಿರ್ವಹಣೆಯ ಮಹತ್ವ ಅರಿಯಬಹುದು.

ಬೆಂಗಳೂರು ತುಂಬಾ ಕೆರೆಗಳು
ಬೆಂಗಳೂರು ಕೆರೆಗಳ ನಗರ, ನಾಡಪ್ರಭು ಕೆಂಪೇಗೌಡರು ಕ್ರಿ.ಶ. 1537ರಲ್ಲಿ ನಗರ ನಿರ್ಮಾಣಕ್ಕೆ ಅಡಿಯಿಟ್ಟಾಗ ದಟ್ಟ ಕಾಡಿನ ಬೆಂಗ(ರಕ್ತಹೊನ್ನೆ) ಮರಗಳ ಊರು. ಕೆಂಪೇಗೌಡರ ವಂಶದ ಮುಂದಿನ ರಾಜರುಗಳು ಕಾವಲುಗೋಪುರ ಕಟ್ಟಿ ಸಾವಿರಾರು ಕೆರೆ ನಿರ್ಮಿಸಿದವರು. ಧರ್ಮದೇವತೆಯ ಹೆಸರಿನಲ್ಲಿ ಧರ್ಮಾಂಬುದಿ ಕೆರೆ, ಮನೆ ದೇವತೆ ಹೆಸರಿನ ಕೆಂಪಾಬುದಿ ಕೆರೆ, ಹಲಸೂರು ಕೆರೆ, ಸಂಪಂಗಿ ಕೆರೆ, ಕಾರಂಜಿ ಕೆರೆ, ಪ್ರಭು ಜಕ್ಕರಾಯನ ನೆನಪಿಗೆ ಜಕ್ಕರಾಯನ ಕೆರೆ, ಉಯ್ನಾಲೆಯಾಡಿಸಿದ ನೆನಪಿಗೆ ವಯ್ನಾಲಿಕಾವಲ್‌ ಕೆರೆ, ಸೋಲೆಕೆರೆ, ಸಹೋದರನ ನೆನಪಿಗೆ ಕೆರೆ, ಅಗ್ರಹಾರ ಕೆರೆ, ಮಾವಿನ ತೋಟ ಬೆಳಸಲೆಂದು ಮಾವಳ್ಳಿ ಕೆರೆ ಹೀಗೆ ಕೆರೆಗಳ ಮೂಲಕ ಊರು ಕಟ್ಟುವ ಕೆಲಸಗಳು ನಡೆದಿತ್ತು. ಕ್ರಿ.ಶ. 1896 ರಲ್ಲಿ 1.8 ಲಕ್ಷ ಜನರಿದ್ದ ಬೆಂಗಳೂರು ಇಂದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ. ಕ್ರಿ.ಶ. 1933 ರಲ್ಲಿ 28 ಕಿಲೋ ಮೀಟರ್‌ ದೂರದ ತಿಪ್ಪಗೊಂಡನಹಳ್ಳಿ ಜಲಾಶಯ ನಂಬಿ ಬದುಕಿದ ಊರು ಕ್ರಿ.ಶ. 1974 ರಿಂದ ಕಾವೇರಿಯನ್ನು ವಿವಿಧ ಹಂತಗಳಲ್ಲಿ ಕುಡಿದು ಮುಗಿಸಿ ವೃಷಭಾವತಿ ನದಿಯನ್ನು ಚರಂಡಿಯಾಗಿ ಪರಿವರ್ತಿಸಿದೆ. ಜಲದಾಹದಿಂದ ಶರಾವತಿ, ನೇತ್ರಾವತಿ ನದಿಗಳತ್ತ ನೋಡುತ್ತಿದೆ.

ನಿಜ, ಐದು ನೂರು ಆರು ನೂರು ವರ್ಷಗಳ ಹಿಂದೆ ಹುಟ್ಟಿದ ರಾಜಧಾನಿಗಳ ಸುತ್ತಲಿನ ಜನ ಒತ್ತಡ, ನೀರಿನ ಬಳಕೆ, ತ್ಯಾಜ್ಯ ಸಮಸ್ಯೆಗಳಿಗೂ ಇಂದಿಗೂ ವ್ಯತ್ಯಾಸವಿದೆ. ಬೆನ್ನಿಗೆ ಕಟ್ಟಿಕೊಂಡ ಪ್ಲಾಸ್ಟಿಕ್‌, ಡಿಟರ್ಜೆಂಟ್‌, ರಾಸಾಯನಿಕಗಳು ಕೆರೆ ನೀರನ್ನು ಹಾಳು ಮಾಡಿವೆ. ಬೆಳೆಯುತ್ತಿರುವ ಜನಸಂಖ್ಯೆ ಕೆರೆ, ಕಾಲುವೆಗಳನ್ನು ಕಬಳಿಸುತ್ತ ಅಣೆಕಟ್ಟೆಯ ಕೇಂದ್ರೀಕೃತ ನೀರಾವರಿಯತ್ತ ಹೋಗುವಂತಾಗಿದೆ. ಸಾರಾರು ಅಡಿ ಆಳಕ್ಕೆ ಅಂತರ್ಜಲ ಕುಸಿತದಿಂದ ನವ ನಗರಗಳು ಕಂಗಾಲಾಗಿವೆ. ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು, ಪರಂಪರೆಯ ನೀರ ನಡೆ ಅರ್ಥಮಾಡಿಕೊಳ್ಳದ ಆಡಳಿತದ ನಿರ್ಲಕ್ಷ್ಯ ಅರಸುಯುಗದ ರಾಜ್ಯದ ಕೆರೆ ಪರಂಪರೆಯನ್ನೇ ಹೊಸಕಿ ಹಾಕುತ್ತಿದೆ.

ನೀರಿನಿಂದ ನೆಮ್ಮದಿ
ಕ್ರಿ.ಶ.1815ರಲ್ಲಿ ಕ್ಯಾಪ್ಟನ್‌ ಸೈಕ್‌ ವಿಜಾಪುರದಲ್ಲಿ ಬಿಡಾರ ಹೂಡಿದ್ದಾಗ ಆದಿಲ್‌ಶಾ( ಕ್ರಿ.ಶ. 1449-1686)ಗಳ ನೆಲೆಯ ಕೋಟೆಯ ಒಳಗಡೆಯಲ್ಲಿ ಏಳು ನೂರು ಮೆಟ್ಟಿಲುಗಳ ಬಾಗಳನ್ನೂ, ಮೂರುನೂರು ಸೇದುಬಾವಿಗಳನ್ನು ಗುರುತಿಸಿ ದಾಖಲಿಸುತ್ತಾರೆ. ಅಲೀಖಾನ ಬಾವಡಿ, ಇಬ್ರಾಮ್‌ಪುರ ಬಾವಡಿ, ಇಲಾಲ ಬಾವಡಿ, ಅಂಧೇರಿ ಬಾವಡಿ, ಗುಮ್ಮಟ ಬಾವಡಿ, ಚಾಂದಬಾವಡಿ, ತಾಜಬಾವಡಿ, ದೌಲತ್‌ ಕೋಠಿ ಬಾವಡಿ, ನವಾಬ್‌ ಬಾವಡಿ, ಸೋನಾರ ಬಾವಡಿ ಹೀಗೆ ಇಲ್ಲಿನ ಪಟ್ಟಿ ಬೆಳೆಯುತ್ತದೆ. ಕರ್ನಾಟಕದ ಅತಿ ಹೆಚ್ಚು ಬರ ಕಂಡ ಜಿಲ್ಲೆ ಕೂಡಾ ಇದು. ಕ್ರಿ.ಶ. 1791ರಲ್ಲಿ ಡೌಗಿ ಬರವೆಂದು ಹೆಸರಾದ ಭಯಾನಕ ಬರಗಾಲದ ನೆಲೆ ಇದಾಗಿತ್ತು. ಬರ ಗೆಲ್ಲಿಸಿದ ಬಾವಡಿಗಳ ರಚನೆ, ಕಲಾವಿನ್ಯಾಸ ನೀರಿನ ಮೂಲಕ ಮನಕ್ಕೆ ನೆಮ್ಮದಿ ಹುಡುಕಿದ ಸಾಧ್ಯತೆಯನ್ನು ಹೇಳುತ್ತದೆ.

-ಶಿವಾನಂದ ಕಳವೆ

ಮುಂದಿನ ಭಾಗ – ಕರುನಾಡಿನ ಕೆರೆ ಯಾತ್ರೆ- 7.
ಕೋಟೆ ಕೆರೆಗಳಲ್ಲಿ ಜಲಜಯ

Advertisement

Udayavani is now on Telegram. Click here to join our channel and stay updated with the latest news.

Next