Advertisement

ನಮ್ಮ ಕೆರೆ- ನಮ್ಮ ಹಕ್ಕು

12:17 PM Apr 29, 2017 | |

 ಕೆರೆಗೆ ನೀರಿಲ್ಲ. ಇದಕ್ಕೆ ಕಾರಣ ಊಳು, ಜಾಲಿ ಮುಳ್ಳು. ನಾನಂತು ಕ್ಲೀನ್‌ ಮಾಡ್ತಾ ಇದ್ದೀನಿ. ನೀವು ಬನ್ನೀ… ಅಂತ ಕೊಟ್ಟೂರಿನ ಅಂಚೆಯಣ್ಣ ಕೊಟ್ರೇಶ್‌ ಫೇಸ್‌ವಾಲ್‌ನಲ್ಲಿ ವಿಷಯ ನೇತು ಹಾಕಿದರು. 

Advertisement

ಇವತ್ತು ಕೊಟ್ಟೂರಿನ ಕೆರೆ ಹತ್ತಿರ ಬಂದು ನೋಡಿ. ಜನಸಾಗರ.ರೀ.. ಈಯಪ್ಪ ಏನೋ ರಾಜಕೀಯ ಉದ್ದೇಶ ಇಟ್ಟುಕೊಂಡು ಶುರುಮಾಡ್ತಾ ಇದ್ದಾನೆ’ ಅಂತ ಅನುಮಾನ ಪಟ್ಟವರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. 

 ಅಂಚೆ ಅಣ್ಣ ಹೀಗೂ ಉಂಟೇ ಅಂತ ಕೇಳಿದರೆ- ನಾನು ಈಜು ಕಲ್ತಿದ್ದು ಇದೇ ಕೆರೆಯಲ್ಲಿ. ನನ್ನ ಮಕ್ಕಳು ಈಜು ಕಲಿತಿದ್ದು ಇಲ್ಲೇ. ಇಂಥ ಕೆರೆನ ನೋಟಿದರೆ ಹೊಟ್ಟೆ ಕಿವುಚಿದಂತಾಗುತ್ತೆ. ಇದರಲ್ಲಿ ರಾಜಕೀಯ ಎಂಥದ್ದು. ನಾನೇನು ಎಲಕ್ಷನ್‌ಗೆ ನಿಂತ್ಕೊàಬೇಕಾ? ಅಂತಾರೆ ಕೊಟ್ರೇಶ್‌. 

  ಈ ಕೆರೆಗೆ ಶತಮಾನಗಳ ಇತಿಹಾಸ ಉಂಟು. ಪಟ್ಟಣಕ್ಕೆ ನೀರುಣಿಸುತ್ತಿದ್ದ ಕೆರೆ ಇದು. 

ಸುಮಾರು 304 ಹೆ (ಸುಮಾರು 760 ಎಕರೆ) ವಿಸ್ತಾರವಾದ ಕೆರೆ. ಈಗ ಫೇಸ್‌ಬುಕ್‌ನಿಂದ  ಪುನರುಜ್ಜೀವನ ಶುರುವಾಗಿದೆ. 

Advertisement

 ಪೋಸ್ಟ್‌ ಮಾಸ್ಟರ್‌ ಕೊಟ್ರೇಶ್‌ ಸಾಹಿತ್ಯ, ರಂಗಭೂಮಿ ಅಂತ ಓಡಾಡಿಕೊಂಡಿದ್ದವರು. ಈಗ ನೀರಿನ ಹಿಂದೆ ಬಿದ್ದು,  ಬಲವಾಗಿ ಬೇರೂರಿದ ಬಳ್ಳಾರಿ ಜಾಲಿಯ ಮರಗಳನ್ನು ಬೊಡ್ಡೆ ಸಹಿತ ಕಿತ್ತುಹಾಕಿದ್ದಾರೆ. ಈ ಕೆರೆ ತುಂಬಿದರೆ ಸಾವಿರಾರು ಎಕರೆ ಜಮೀನುಗಳಿಗೆ ನೀರು ಸಿಗುತ್ತದೆ  ಅನ್ನೋದು ದೂರದ ಉದ್ದೇಶ. ಇದಕ್ಕಾಗಿ ಸರ್ಕಾರದ ನೆರವಿಲ್ಲ. ಜನರ ಬಲದಿಂದಲೇ ಕೆರೆಯಂಗಳದ ಶುಚಿತ್ವ ನಡೆಯುತ್ತಿದೆ.  ಅಂಚೆ ಕೊಟ್ರೇಶ್‌ ನಮ್ಮ ಕೆರೆ- ನಮ್ಮ ಹಕ್ಕು ಹೆಸರಿನಲ್ಲಿ ಅಭಿಯಾನ ಶುರುವಾಡಿದ್ದಾರೆ. ಇವರ  ಈ ಮಹತ್ವದ ಕಾರ್ಯಕ್ಕೆ ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ 100ಕ್ಕೂ ಅಧಿಕ ಉತ್ಸಾಹಿ ಯುವಕರು, ವ್ಯಾಪಾರಿಗಳು, ಜನ ಸಾಮಾನ್ಯರು, ಗುತ್ತಿಗೆದಾರರು ಹೀಗೆ ವಿವಿಧ ಕ್ಷೇತ್ರಗಳ ಜನರು ಕೈ ಜೋಡಿಸಿದ್ದಾರೆ. 

ವಾರಾಂತ್ಯದಲ್ಲಿ ಮಾತ್ರ ಕೆರೆ ಅಂಗಳದ ಬೇಲಿ ತೆರವು ಕಾರ್ಯ ನಡೆಸುವ ಈ ಅಭಿನವ ಭಗೀರಥರು, ಇದುವರೆಗೆ ಸುಮಾರು ಭಾನುವಾರಗಳ ಕಾಲ ಬಿರು ಬಿಸಿಲಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರಮಿಸಿದ್ದಾರೆ. ಈಗಾಗಲೇ ಒಟ್ಟು 200 ತಾಸುಗಳ ಜೆಸಿಬಿ ಯಂತ್ರ ಬಳಸಿ 200 ಎಕರೆ ಪ್ರದೇಶದಲ್ಲಿ ಬೇಲಿ ತೆರವು ಮಾಡಿದ್ದಾರೆ.

ಈ ಕೆರೆ ನಗರ ಪ್ರದೇಶಕ್ಕೆ ಬರುವುದರಿಂದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಗಮನಿಸಿದ ಅಂಚೆ ಕೊಟ್ರೇಶ್‌ ಜನ ಸಾಮಾನ್ಯರ ಶ್ರಮದಾನದಿಂದ ಈ ಕೆರೆ ಪುನರುಜ್ಜೀವನ ಕಾರ್ಯಕ್ಕೆ ಕೈ ಹಾಕಿದ್ದಾರೆ. 

ದುರದೃಷ್ಟ ಎಂದರೆ ಈ ಕಾರ್ಯಕ್ಕೆ ಫ‌ಲಾನುಭವಿ ರೈತರು ಕೈಜೋಡಿಸುತ್ತಿಲ್ಲ. ಅಲ್ಲದೇ, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಕೆರೆಯ ಅಂಗಳ ಸ್ವತ್ಛಗೊಳಿಸಲು ಅನುದಾನವಿಲ್ಲ. ಅಲ್ಲದೇ, ಅನೇಕರು ಕೊಟ್ರೇಶರನ್ನು ಒಬ್ಬ ಅರೆ ಹುಚ್ಚ ಅಂದದ್ದು ಉಂಟು. 
 ಇಷ್ಟೆಲ್ಲಾ ಆರಂಭಿಕ ಪ್ರತಿರೋಧಗಳಿಗೆ ಧೃತಿಗೆಡದ ಕೊಟ್ರೇಶ್‌ ಮೊದಲ ಭಾನುವಾರ ತಾವು ಕೆರೆಯ ಏರಿಗೆ ಅಡ್ಡಲಾಗಿದ್ದ ಜಾಲಿ ಮರದ ತೆರವು ಕಾರ್ಯದ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಇದನ್ನು ಕಂಡ ಕೆಲ ಉತ್ಸಾಹಿ ಯುವಕರು ನಾವೂ ನಿಮ್ಮ ಕಾರ್ಯದಲ್ಲಿ ಕೈಜೋಡಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ. 

ಎರಡನೇ ವಾರ 50, ಮೂರನೇ ವಾರ 60 ನಾಲ್ಕನೇ ಭಾನುವಾರ 100ಕ್ಕೂ ಅಧಿಕ ಜನರು ಕೊಟ್ರೇಶರ ಬೆಂಬಲಕ್ಕೆ ನಿಂತರು.  ಕೆಲವರು ಜೆಸಿಬಿ ಯಂತ್ರದ ಬಾಡಿಗೆ (ಗಂಟೆ ಒಂದಕ್ಕೆ 750 ರೂನಂತೆ) ಪಾವತಿಸಿದ್ದಾರೆ.  ಮತ್ತೆ ಕೆಲವರು ಬೇಲಿಯನ್ನು ಒಟ್ಟು ಗೂಡಿಸುವ ಹಾಗೂ ಬೆಂಕಿ ಹಚ್ಚುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಇವರಿಗೆ ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಠದ ವತಿಯಿಂದ ಒಂದು ಗಂಟೆಯ ಜೆಸಿಬಿ ಬಾಡಿಗೆ ಹಾಗೂ ಕೆರೆ ಬೇಲಿ ತೆರವು ಕಾರ್ಯಕ್ಕೆ ಆಗಮಿಸುವವರಿಗೆಲ್ಲರಿಗೂ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗೂ ಮಜ್ಜಿಗೆ ವಿತರಿಸುವ  ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ಅಲ್ಲದೇ ಕೆಲ ಜೆಸಿಬಿ ಮಾಲೀಕರು ನಮಗೆ ಬಾಡಿಗೆ ಬೇಡ, ಬದಲಿಗೆ ಡೀಸೆಲ್‌ ಹಾಕಿಸಿಕೊಡಿ ಸಾಕು ಎಂದಿದ್ದಾರೆ.  ಕೆರೆಯ ಒಡ್ಡಿನ ಮೇಲಿರುವ ಜಾಲಿ ಮರಗಳನ್ನು ತೆರವುಗೊಳಿಸಲು ಹಿಟಾಚಿ ಪೊಕ್ಲೇನ್‌ ಯಂತ್ರವೇ ಬೇಕಾಗಿದ್ದು, ಸಾವಜ್ಜಿ ರಾಜೇಂದ್ರ ಪ್ರಸಾದರು ತಮ್ಮ ಪೊಕ್ಲೇನ್‌ ಯಂತ್ರ ನೀಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.

ಇವರಿಗೆ ನಂದೀಪುರದ ಶ್ರೀಗಳು, ಕುಮಾರ ಕುಲಕರ್ಣಿ, ಸುರೇಶ ದೇವರಮನಿ, ವಿಜಯ್‌ ಚೌಹಾಣ್‌, ತಾಲೂಕು ಪಂಚಾಯತ್‌ ಸದಸ್ಯ ಗುರುಪ್ರಸಾದ್‌, ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಅಶೋಕ್‌, ಎಂ.ಎಸ್‌.ಶಿವನಗುತ್ತಿ, ಅಜ್ಜಯ್ಯ, ಚಂದ್ರಪ್ಪ, ಸಸಿ, ಬೂದಿ ಕುಮಾರ್‌, ಖಾಜಾಸಾಬ್‌ ಬೆನ್ನಿಗೆ ನಿಂತಿರುವುದರಿಂದ ಕೆರೆ ನಿಜವಾದ ರೂಪ ಕಾಣತೊಡಗಿದೆ.

ಇವರೆಲ್ಲರ ಸಹಕಾರದಿಂದ ಕೆರೆಯ ಬೇಲಿ ತೆರವುಗೊಳಿಸುವ ಕಾರ್ಯ ನಿರಾತಂಕವಾಗಿ ನಡೆಯುತ್ತಿದ್ದು, ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ಗಳು ಈ ಕಾರ್ಯವನ್ನು ಇನ್ನಷ್ಟು ವಿಸ್ತಾರಕ್ಕೆ ಕೊಂಡೊಯ್ದು, ಹೆಚ್ಚು ಹೆಚ್ಚು ಜನರನ್ನು ಈ ಕಾರ್ಯಕ್ಕೆ ಮುಂದಾಗುವಂತೆ ಮಾಡುತ್ತಿದೆ. ಅಲ್ಲದೇ ಕೊಟ್ರೇಶ್‌ ನಮ್ಮ ಕೆರೆ- ನಮ್ಮ ಹಕ್ಕು ಎಂಬ ಹೆಸರಿನ ವಾಟ್ಸ್‌ ಅಪ್‌ ಗುಂಪು ರಚಿಸಿ ಕೆರೆ ಸ್ವತ್ಛತೆಯ ಕುರಿತ ಬೆಳವಣಿಗೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೊಟ್ಟೂರು ಕೆರೆಗೆ 13 ಕಿಮೀ ದೂರದ ಜರಿಮಲೆ ತಿಪ್ಪಗೊಂಡನಹಳ್ಳಿ ಕೆರೆ ಜಲದ ಮೂಲ. ಅಲ್ಲಿಂದ ಹರಿಯುವ ಹಳ್ಳ ಬಸಾಪುರ, ಚಿರಬಿ, ರಾಂಪುರಗಳ ಮೂಲಕ ಕೊಟ್ಟೂರು ಕೆರೆ ತಲುಪುತ್ತವೆ. ಆದರೆ, ಈ  ಹಳ್ಳಗಳನ್ನು ಮರಳಿಗೆ ಹಾಗೂ ಮಣ್ಣಿಗೆ ಮತ್ತು ದುರ್ಬಳಕೆಗೆ ಕೆಡಿಸಲಾಗಿದೆ. ಕೆಲವು ಕಡೆ ಸಾಕಷ್ಟು ಬೇಲಿ ಬೆಳೆದು ಹಳ್ಳದ ಜಾಡು ಮರೆಯಾಗಿದೆ. ಇದರಿಂದ ಕೆರೆಯ ವರೆಗೆ ನೀರು ಹರಿಯದಂತಾಗಿದೆ.

ಈ ಹಳ್ಳಗಳ ಹದಿಮೂರು ಕಿಮೀ ಉದ್ದಕ್ಕೂ ನಡೆದಾಡಿರುವ ಕೊಟ್ರೇಶ್‌ ಎಲ್ಲೆಲ್ಲಿ ಹಳ್ಳ ಅತಿಕ್ರಮವಾಗಿದೆ, ಎಲ್ಲೆಲ್ಲಿ ದುರಸ್ತಿ ಆಗಬೇಕಿದೆ ಮುಂತಾದ ವಿಷಯಗಳನ್ನು ಟಿಪ್ಪಣಿ ಮಾಡಿಕೊಂಡು ಈ ನಿಟ್ಟಿನಲ್ಲಿಯೂ ಕಾರ್ಯ ಪ್ರವೃತ್ತರಾಗಿದ್ದಾರೆ. ಜೊತೆಗೆ ಅತಿಕ್ರಮಣ ತೆರವಿಗೆ ಕಾನೂನು ನೆರವನ್ನೂ ಅವರು ಪಡೆದಿದ್ದಾರೆ. ಹೀಗಾಗಿ ಮಳೆ ಬಂದರೆ ಕೆರೆ ಭರ್ತಿಯಾಗುವುದಂತು ಗ್ಯಾರಂಟಿ. 

ಎಂ.ಮುರಳಿ ಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next