Advertisement

ಸೊರಗುತ್ತಿದೆ ಸಾವನದುರ್ಗ ಬೆಟ್ಟ

05:31 PM Nov 28, 2019 | Suhan S |

ಮಾಗಡಿ: ಚಾರಣಿಗರ ಸ್ವರ್ಗ ಎಂದೇ ಕರೆಯಲ್ಪಡುವ ಸಾವನ ದುರ್ಗದ ಬೆಟ್ಟ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪರಿಸರ ಪ್ರೇಮಿಗಳ ನೆಚ್ಚಿನ ತಾಣ, ಮೂಲ ಸೌಕರ್ಯವಿಲ್ಲದೆ, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಮಾಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗ ಅಭಿವೃದ್ಧಿ ಕಾಣದೆ ಸೊರುಗುತ್ತಿದೆ.ಏಕಶಿಲಾ ಬೆಟ್ಟ ಹಾಗೂ ಕೆಂಪೇಗೌಡ ವನಧಾಮ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

Advertisement

ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ವನಧಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದರಿಂದ ಅರಣ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಹ ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗ ಸೊರುಗುತ್ತಿದೆ. ವನ್ಯ ಸಂರಕ್ಷಣಾ ಸಮಿತಿ ನಿರ್ದೇಶಿಸಿರುವ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಣ್ಯ ಇಲಾಖೆ ಮೀನಾ ಮೇಷ ಏಣಿಸುತ್ತಿದೆ. ಅಲ್ಲದೆ ಇಲ್ಲಿ ಪ್ರವಾಸಿಗರಿಗೂ ರಕ್ಷಣೆ ಇಲ್ಲದಂತಾಗಿದ್ದು, ಚಾರಿಣಿಗರು ಬೆಟ್ಟ ಏರಿ ಕೆಳಗಿಳಿದನಂತರ ವಿಶ್ರಾಂತಿ ಪಡೆಯಲು ವನಧಾಮ ಅಗತ್ಯ ವಿದ್ದು, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಪ್ರವಾಸಿಗರ ಮತ್ತು ಚಾರಣಿಗರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ.

ಐತಿಹಾಸಿಕ ಹಿನ್ನೆಲೆ: ಪ್ರಸಿದ್ಧ ಪ್ರವಾಸಿ ತಾಣ ಸಾವನ ದುರ್ಗ ಹೆಸರೇ ಹೇಳುವಂತೆ ಈ ನೆಲ ನಿಜಕ್ಕೂ ದುರ್ಗಮಯವಾಗಿಯೇ ಗೋಚರಿಸದೆ ಇರದು. ಎಲ್ಲಿ ನೋಡಿದರೂ ಬೆಟ್ಟಗುಡ್ಡಗಳ ಸಾಲು, ದಟ್ಟ ಗಿಡಮರಗಳ ರಮ್ಯ ತಾಣ. ಸುಮಾರು 7 ಸಾವಿರ ಎಕರೆ ಪ್ರದೇಶ ಇರುವ ಈ ಕಾನನ ನಡುವೆ ಸಾವನದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವಿದ್ದು, ಹಲವು ವಿಸ್ಮಯ, ವೈಶಿಷ್ಟಗಳನ್ನು ಒಳಗೊಂಡಿರುವ ಏಕಶಿಲಾ ಬೆಟ್ಟಗಳಿಂದ ಕೂಡಿದೆ. ಬಿಳಿ ಬೆಟ್ಟ ಮತ್ತು ಕಪ್ಪು ಕಲ್ಲಿನ ಬೆಟ್ಟ ಎಂದೇ ಖ್ಯಾತಿ ಪಡೆದಿದೆ.

ಇದು ಸಮುದ್ರ ಮಟ್ಟದಿಂದ ಸುಮಾರು 4024 ಸಾವಿರ ಅಡಿ ಎತ್ತರವಿರುವ ಈ ಬೆಟ್ಟಚಾರಿಣಗರಿಗೆ ಅಚ್ಚುಮಚ್ಚು. ಈ ದುರ್ಗದ ಮಡಿಲಲ್ಲಿ ಶ್ರೀಗಂಧ, ಬೀಟೆ, ತೇಗ, ಇತರೆ ಜಾತಿಗಳ ಮರ ಹಾಗೂ ಗಿಡಮೂಲಿಕೆಗಳು ಹೇರಳವಾಗಿದ್ದು, ನಿರ್ವಹಣೆ ಇಲ್ಲದೆ ವಿನಾಶದ ಹಂಚಿನಲ್ಲಿವೆ. ಸರ್ಕಾರ ಇಲ್ಲಿನ ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿಗೆ ಸೂಕ್ತ ಕ್ರಮ ಕೈಕೊಳ್ಳಬೇಕಾದ ಅಗತ್ಯವಿದೆ ಎಂಬುದು ಇಲ್ಲಿನ ಚಾರುಣಿಗರ, ಪರಿಸರ ಪ್ರಿಯರ ಹಾಗೂ ಭಕ್ತರ ಆಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಈ ನೆಲವನ್ನು ಆಳಿದ್ದಾರೆ. ಇಲ್ಲಿನ ನಾಯಕನಪಾಳ್ಯದ ಪಾಳೇಗಾರ ಸಾವನದುರ್ಗದ ಬೆಟ್ಟದ ಮೇಲೆ ಏಳು ಸುತ್ತಿನ ಕಲ್ಲಿನ ಕೋಟೆ ಕಟ್ಟಿದ್ದಾರೆ. ಬೆಟ್ಟದ ಮೇಲೆ ಸುಂದರವಾದ ನಂದಿ ವಿಗ್ರಹವನ್ನು ಸ್ಥಾಪಿಸಲಾಗಿದೆ ಜೊತೆಗೆ ಗುಡಿ, ಗೋಪುರಗಳು, ಅರಮನೆ ಕಟ್ಟಿ ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಇಲ್ಲಿನ ಅವಶೇಷಗಳೆ ಸಾಕ್ಷಿ ಈ ಸಾವನದುರ್ಗವನ್ನು ವಶಪಡಿಸಿಕೊಳ್ಳಲು ಲಾರ್ಡ್‌ ಕಾರ್ನ್ ವಾಲಿಸ್‌ ಪಟ್ಟಪಾಡುನ್ನು ಕಣ್ಣಾರೆ ಕಂಡ ಕರ್ನಲ್‌ ವಿಲ್ಸ್‌ ಈ ದುರ್ಗ ಎಚ್ಚರ ತಪ್ಪಿದರೆ ಸಾವಿನ ದುರ್ಗವೆಂದಿದ್ದರು.

Advertisement

ಮೈಸೂರು ವಶದಲ್ಲಿದ್ದಾಗ ಕೃಷ್ಣರಾಜಗಿರಿ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶ ಪ್ರಾನ್ಸಿಸ್‌ ಬುಕನನ್‌ ಪ್ರಕಾರ ಸವರನ್‌ ದುರ್ಗ ದಕ್ಷಿಣ ಭಾರತದಲ್ಲೇ ಪ್ರಸಿದ್ಧ ವನದುರ್ಗ ಎಂದು ಗುರುತಿಸಲಾಗಿತ್ತು. ಈ ದುರ್ಗದ ಬುಡದಲ್ಲಿರು ನೆಲಪಟ್ಟಣದಿಂದ ಮುಖ್ಯ ದುರ್ಗಕ್ಕಿರುವ ಏಕೈಕ ರಹಸ್ಯ ಕಾಲುದಾರಿ ಬಲು ಅಪಾಯಕಾರಿ. ಇಕ್ಕಾಟದ ಈ ಕಾಲುದಾರಿಯಲ್ಲಿ ನಡೆಯುವಾಗ ದಾರಿ ಮಧ್ಯದಲ್ಲಿ ಪಾತಳವಿದೆ. ಈ ಕಂದಕದ ಅಳ ಅರಿತವರಿಲ್ಲ. ಹಿಂದೆ ಇದನ್ನು ದಾಟುವಾಗ ಮರದ ದಿಮ್ಮಿಗಳನ್ನು ಬಳಸುತ್ತಿದ್ದರಂತೆ. ಒಮ್ಮೆ ಈ ಕಂದಕಕ್ಕೆ ಬಿದ್ದವರು ಮತ್ತೆ ಬದುಕುಳಿಯುವ ಮಾತಿಲ್ಲ. ಸಾಹಸಿಗರಿಗೆ ಈ ದುರ್ಗ ನಿಜಕ್ಕೂ ಸವಾಲಾಗಿದೆ. ಆದರೂ ಇಂದಿಗೂ ಎಷ್ಟೋ ಪ್ರವಾಸಿಗರು ಈ ಬೆಟ್ಟ ಹತ್ತವ ಸಾಹಸದ ಪ್ರಯತ್ನ ನಡೆಯುತ್ತಲೇ ಇದೆ.

ಉಯ್ನಾಲೆ ಕಂಬ: ಸಾವನದುರ್ಗದಲ್ಲಿನ ಭವರೋಗ ನಿವಾರಕ ಲಕ್ಷ್ಮೀ ನರಸಿಂಹಸ್ವಾಮಿ ಆಕರ್ಷಿಣಿಯವಾಗಿದ್ದು, ವೀರಭದ್ರಸ್ವಾಮಿ ದೇವಾಲಯದ ಹಾಗೂ ಮುಂದೆ ಬೃಹತ್‌ ದೀಪಸ್ತಂಭ ಮತ್ತು ಉಯ್ಯಲೆ ಕಲ್ಲು ಕಂಭ ಪ್ರವಾಸಿಗರನ್ನು ಆಕರ್ಷಿಸಿದೆ. ಚೋಳರ ಪ್ರಸಿದ್ಧ ದೊರೆ ಚೋಳರಾಜ ಇಲ್ಲಿನ ಪ್ರಸಿದ್ಧ ವೀರಭದ್ರಸ್ವಾವಿ ದೇವಾಲಯ ಮತ್ತು ಕಾಶಿ ವಿಶ್ವೇಶ್ವರಸ್ವಾಮಿ ಹಾಗೂ ವೈದ್ಯನಾಥಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ. ಇಮ್ಮಡಿ ಕೆಂಪೇಗೌಡ ಇಲ್ಲಿನ ಕೋಟೆ ಕೊತ್ತಲುಗಳನ್ನು ದುರಸ್ತಿ ಪಡಿಸಿ, ದರ್ಬಾರ್‌ ಹಾಲ್‌ ನಿರ್ಮಿಸಿದ್ದರು. ಮೈಸೂರಿನ ಯದುಕುಲವಂಶದ ನಾಲ್ವಡಿ ಕೃಷ್ಣರಾಜು ಒಡೆಯರ್‌ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಪರಕಾಲ ಮಠ ಇತರೆ ದೇಗುಲಗಳನ್ನು ಜೀಣೋದ್ಧಾರಗೊಳಿಸಿ ದಾನ, ದತ್ತಿ ನೀಡಿದ್ದಾರೆ. ಈ ಪ್ರವಾಸಿ ತಾಣ ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ ಎಂಬುದು ಭಕ್ತರ ಆಶಯವಾಗಿದೆ.

ಬಸ್‌ ಸೌಲಭ್ಯ: ಪ್ರವಾಸಿಗರು, ಭಕ್ತರು ಭೇಟಿ ನೀಡಲು ಬೆಂಗಳೂರಿನ ಕಲಾಸಿಪಾಳ್ಯ, ಕೆಂಪೇಗೌಡ ಬಸ್‌ ನಿಲ್ದಾಣದಿಂದ ಸರ್ಕಾರಿ ಬಸ್‌ ಸಂಚಾರವಿದೆ. ಸುಂಕದಕಟ್ಟೆ, ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ಮಾಗಡಿ ಬಂದರೆ ಮಾಗಡಿಯಿಂದ ರಾಮನಗರ ಮಾರ್ಗದ ಮಧ್ಯೆ ಕೇವಲ 12 ಕಿ.ಮೀ ಇರುವ ಸಾವನದುರ್ಗಕ್ಕೆ ಪ್ರಯಾಣಿಸಬಹುದು. ರಾಮನಗರ ಮತ್ತು ಕುಣಿಗಲ್‌, ತುಮಕೂರುಗಳಿಂದಲೂ ಬಸ್‌ ಗಳ ಸಂಚಾರ ಸೌಲಭ್ಯವಿದೆ.

ಧಾರ್ಮಿಕ ದತ್ತಿ ಇಲಾಖೆ ಹಾಗೂ ಮುಜರಾಯಿ ಇಲಾಖೆ ಸಾವನದುರ್ಗವನ್ನು ಸುಂದರವಾದ ದುರ್ಗವನ್ನಾಗಿಸಲು ವಿಶೇಷ  ಯೋಜನೆಗಳನ್ನು ಹಾಕಿಕೊಂಡಿದೆ. ಆದಷ್ಟು ಬೇಗ ಸಮರೋಪಾಧಿಯಲ್ಲಿ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಿದೆ. – ಎಚ್‌.ಕೆ.ರಘು. ಧಾರ್ಮಿಕ ದತ್ತಿ ಇಲಾಖೆ ಸಿಇಒ

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next