Advertisement

ಕದ್ರಿ, ಕೇಂದ್ರ ವಲಯ ಕಚೇರಿ ಕೈ ಬಿಟ್ಟ ಪಾಲಿಕೆ

10:06 AM Jul 06, 2018 | Team Udayavani |

ಮಹಾನಗರ : ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಮಹಾನಗರ ಪಾಲಿಕೆಯನ್ನು 3 ವಲಯಗಳನ್ನಾಗಿ ವಿಂಗಡಿಸಿ
ವಲಯ ಕಚೇರಿಗಳನ್ನು ಮಾಡುವ ಮಹತ್ವದ ಯೋಜನೆಯನ್ನು ಪಾಲಿಕೆ ಸದ್ಯ ಕೈಬಿಟ್ಟಿದೆ. ಈಗ ಸುರತ್ಕಲ್‌ ವಲಯ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮಂಗಳೂರು ಕೇಂದ್ರ ಕಚೇರಿ ವಲಯ ಹಾಗೂ ಕದ್ರಿ ವಲಯ ರಚನೆಗೆ ಇನ್ನೂ ಕಾಲ ಕೂಡಿಬಂದಿಲ್ಲ.

Advertisement

ಪಾಲಿಕೆಯನ್ನು ಸುರತ್ಕಲ್‌, ಕೇಂದ್ರ ಕಚೇರಿ ವಲಯ ಹಾಗೂ ಕದ್ರಿ ವಲಯಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಪಾಲಿಕೆ ಹೊಂದಿತ್ತು. ಆಯಾಯ ಭಾಗದ ಸಾರ್ವಜನಿಕರಿಗೆ ಆಯಾ ವ್ಯಾಪ್ತಿಯ ಲ್ಲಿಯೇ ಪಾಲಿಕೆ ಕೆಲಸಗಳನ್ನು ನಡೆಸುವಂತಾಗಬೇಕು ಎಂಬ ಇರಾದೆಯಿಂದ ಈ ಯೋಜನೆಗೆ ಉದ್ದೇಶಿಸಲಾಗಿತ್ತು. ಇದರಿಂದಾಗಿ ನಗರದ ಹೊರವಲಯ ದಲ್ಲಿರುವವರು ಎಲ್ಲ ಕೆಲಸಗಳಿಗೆ ಪಾಲಿಕೆಗೆ ಬರುವ ಪ್ರಮೇಯ ತಪ್ಪಿಸುವ ಗುರಿ ಹೊಂದಲಾಗಿತ್ತು.

ಸುರತ್ಕಲ್‌ ಕಚೇರಿ ಕಾರ್ಯಾಚರಣೆ
ಸುರತ್ಕಲ್‌ ಕಚೇರಿಯನ್ನು ಈಗಾಗಲೇ ರಚನೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಕೇಂದ್ರ ಕಚೇರಿ ವಲಯ ಹಾಗೂ ಕದ್ರಿ ವಲಯ ಕಚೇರಿಯಾಗಿ ವಿಂಗಡಿಸುವ ಯೋಜನೆ ಇತ್ತು. ಈ ಸಂಬಂಧ ಅಂತಿಮ ಪ್ರಕ್ರಿಯೆಯನ್ನು ನಡೆಸಿದ್ದ ಪಾಲಿಕೆ, ವಾರ್ಡ್‌ಗಳ ಹಂಚಿಕೆ ಕೂಡ ನಡೆಸಿತ್ತು. ಹರಿನಾಥ್‌ ಅವರು ಮೇಯರ್‌ ಆಗಿದ್ದ ಕಾಲದಲ್ಲಿ ಈ ಯೋಜನೆಗೆ ರೂಪ ನೀಡಲಾಗಿತ್ತು. ಆದರೆ, ಆ ಬಳಿಕ ಈ ವಿಚಾರವನ್ನೇ ಮಹಾನಗರ ಪಾಲಿಕೆ ಮರೆತು ಬಿಟ್ಟಿದೆ.

ಸುರತ್ಕಲ್‌ನಲ್ಲಿದ್ದ ಉಪ ಕಚೇರಿ ಮೇಲ್ದರ್ಜೆಗೇರಿಸಿ ವಲಯ 1 ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವಲಯ-2 ಹಾಗೂ ವಲಯ-3 ಕದ್ರಿ ಕಚೇರಿಗಳು ಪಾಲಿಕೆಯ ಕಟ್ಟಡದಲ್ಲೇ ಕಾರ್ಯಾಚರಿಸಲಿದೆ ಎಂಬ ಯೋಜನೆ ರೂಪಿಸಲಾಗಿತ್ತು. ಪ್ರತೀ ವಲಯ ಕಚೇರಿಗೆ ಉಪ ಆಯುಕ್ತರ ನೇಮಕ ಮಾಡಬೇಕಾಗಿತ್ತು. ಜತೆಗೆ ಇತರ ಇಲಾಖೆಗೆ ಅಧಿಕಾರಿಗಳ ನೇಮಕ ಮಾಡಬೇಕಾಗಿತ್ತು. ಆದರೆ ಸಿಬಂದಿ ಕೊರತೆಯಿಂದ ನಲುಗಿದ ಪಾಲಿಕೆಗೆ ನೇಮಕವೇ ಕಗ್ಗಂಟಾದ ಕಾರಣದಿಂದ ವಲಯ ಕಚೇರಿಯ ಉಸಾಬರಿಯೇ ಬೇಡ ಎಂದು ನಿರ್ಧರಿಸಿದಂತಿದೆ.

ವಲಯ ಕಚೇರಿಗಳಿಗೆ ನೀಡಲಾಗಿದ ಅಧಿಕಾರ 
ನಗರ ಯೋಜನೆ : 500 ಚದರ ಮೀಟರ್‌ವರೆಗಿನ ವಾಸ, ವಾಣಿಜ್ಯ ಕಟ್ಟಡಗಳಿಗೆ ಕಟ್ಟಡ ನಿರ್ಮಾಣ ಪರವಾನಿಗೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ, ಪ್ರವೇಶ ಪತ್ರ ಹಾಗೂ ಪರವಾನಿಗೆ ನವೀಕರಣ ನೀಡುವ ಅಧಿಕಾರ ನೀಡಲಾಗಿತ್ತು. ಕಂದಾಯ ಶಾಖೆ : ಆಸ್ತಿ ಮೌಲ್ಯ 1 ಕೋ.ರೂ.ವರೆಗಿನ ಖಾತಾ ನೋಂದಣಿ, ವರ್ಗಾವಣೆ / ವಾಸ, ವಾಣಿಜ್ಯ ಆಸ್ತಿಗಳ ಕರಪಾವತಿ ಹೊಣೆಗಾರಿಕೆ, ವಿಭಾಗ ಖಾತೆ, ಪೌತಿ ಖಾತೆ, ವಾಸ ಸ್ಥಳ ಧೃಡೀಕರಣ ಪತ್ರ, ನಮೂನೆ-9 ಖಾತಾ ಧೃಡೀಕರಣ, ಖಾತಾ ಎಕ್ಸ್‌ಟ್ರಾಕ್‌ ನೀಡುವುದು, 2500 ಚ. ಅಡಿವರೆಗೆ ಕಟ್ಟಡ ನಂಬ್ರ ನೀಡುವ ಅಧಿಕಾರ ನೀಡಲಾಗಿತ್ತು. ಆರೋಗ್ಯ ಶಾಖೆ : 200 ಚದರ ಅಡಿವರೆಗಿನ ಜನರಲ್‌ ಲೈಸೆನ್ಸ್‌, ಆರೋಗ್ಯ, ವಾಣಿಜ್ಯ, ಉದ್ದಿಮೆ, ಕೈಗಾರಿಕೆಗಳಿಗೆ ಉದ್ದಿಮೆ ಪರವಾನಿಗೆ ನೀಡುವುದು ಹಾಗೂ ನವೀಕರಿಸುವ ಜವಾಬ್ದಾರಿ ನೀಡಲಾಗಿತ್ತು.

Advertisement

 ವಲಯ ಕಚೇರಿ ವಿಳಂಬ
ವಲಯ ಕಚೇರಿ ಪ್ರಕ್ರಿಯೆಯನ್ನು ಈ ಹಿಂದೆ ಅಂತಿಮ ಗೊಳಿಸಲಾಗಿತ್ತು. ಆದರೆ, ಸದ್ಯ ವಿವಿಧ ಕಾರಣದಿಂದ ವಲಯ ಕಚೇರಿ ಸ್ಥಾಪನೆ ಸಾಧ್ಯವಾಗಿಲ್ಲ. ಆದರೆ, ಮುಂದಿನ ದಿನದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಶಶಿಧರ ಹೆಗ್ಡೆ,
ಮುಖ್ಯಸಚೇತಕರು, ಮನಪಾ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next