Advertisement

Lack of rain: ಮಳೆ ಕೊರತೆ; ಕಬ್ಬು ಬಿತ್ತನೆ ಕುಸಿತ

02:46 PM Oct 09, 2023 | Team Udayavani |

ಮಂಡ್ಯ: ಸಕ್ಕರೆ ನಾಡು ಜಿಲ್ಲೆ ಎಂಬ ಹೆಸರು ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಪ್ರಸ್ತುತ ಸಾಲಿನಲ್ಲಿ ಕಬ್ಬು ಬಿತ್ತನೆಯಲ್ಲಿ ಕುಸಿತವಾಗಿದೆ. ಇದರಿಂದ ಮುಂದಿನ ಸಾಲಿನ ಕಬ್ಬು ಅರೆಯುವಿಕೆಗೆ ಕೊರತೆ ಎದುರಾಗುವ ಸಾಧ್ಯತೆ ಇದೆ.

Advertisement

ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೊರತೆಯಾದ ಹಿನ್ನೆಲೆ ಬಿತ್ತ ನೆಯೂ ಕುಂಠಿತವಾಗಿದೆ. ಅಲ್ಲದೆ, ಕೃಷ್ಣರಾಜ ಸಾಗರ ಜಲಾಶಯವೂ ಭರ್ತಿ ಯಾಗದ ಹಿನ್ನೆಲೆಯಲ್ಲಿ ಕಬ್ಬಿನ ಬೆಳೆ ಬಿತ್ತನೆಯಲ್ಲೂ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಎಲ್ಲ ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದು, ಕಾರ್ಖಾ ನೆಗೆ 2024ನೇ ಸಾಲಿಗೆ ಕಬ್ಬಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಶೇ.12ರಷ್ಟು ಕಬ್ಬು ಬಿತ್ತನೆ ಕುಸಿತ: ಜಿಲ್ಲಾದ್ಯಂತ ಶೇ.12ರಷ್ಟು ಕಬ್ಬು ಬಿತ್ತನೆ ಕೊರತೆಯಾಗಿದೆ.

ಕಳೆದ ಸೆ.30ರವವರೆಗೆ ಶೇ.88.8ರಷ್ಟು ಮಾತ್ರ ಬಿತ್ತನೆ ಯಾಗಿದೆ. ಕಟ್ಟು ಪದ್ಧತಿಯಲ್ಲಿ ನಾಲ್ಕು ತಿಂಗಳು ನೀರು ಹರಿಸಲಾ ಗುತ್ತಿದೆ. ಆದರೆ ನೀರನ್ನು ಜನ-ಜಾನುವಾರುಗಳ ಕುಡಿಯುವ ಬಳಕೆಗೆ ಹಾಗೂ ಇರುವ ಬೆಳೆ ಉಳಿಸಿಕೊಳ್ಳಲು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರಿಂದ ರೈತರು ಕಬ್ಬು ಸೇರಿದಂತೆ ಯಾವುದೇ ಹೊಸ ಬೆಳೆ ಹಾಕಲು ಮುಂದಾಗುತ್ತಿಲ್ಲ.

ತಾಲೂಕುವಾರು ವಿವರ: ಜಿಲ್ಲೆಯಲ್ಲಿ ತನಿ ಹಾಗೂ ಕೂಳೆ ಕಬ್ಬು ಎಂಬ ಎರಡು ವಿವಿಧ ಕಬ್ಬು ಬೆಳೆಯ ಲಾಗುತ್ತದೆ. ಮಂಡ್ಯ ತಾಲೂಕಿನ ತನಿ ಕಬ್ಬು 2838 ಹೆಕ್ಟೇರ್‌, ಕೂಳೆ ಕಬ್ಬು 3799 ಹೆಕ್ಟೇರ್‌ ಬಿತ್ತನೆ ಮಾಡ ಲಾಗಿದೆ. ಮದ್ದೂರಿನಲ್ಲೂ ತನಿ 5049 ಹೆಕ್ಟೇರ್‌, ಕೂಳೆ 3766 ಹೆಕ್ಟೇರ್‌, ಮಳವಳ್ಳಿ ತನಿ 526 ಹೆಕ್ಟೇರ್‌, ಕೂಳೆ 1995 ಹೆಕ್ಟೇರ್‌, ಶ್ರೀರಂಗಪಟ್ಟಣದಲ್ಲಿ ತನಿ 535, ಕೂಳೆ 3532 ಹೆಕ್ಟೇರ್‌, ಪಾಂಡವಪುರ ತನಿ 1890 ಹೆ ಕ್ಟೇರ್‌, ಕೂಳೆ 2900 ಹೆಕ್ಟೇರ್‌, ಕೆ.ಆರ್‌. ಪೇಟೆಯಲ್ಲಿ ತನಿ 5038 ಹೆಕ್ಟೇರ್‌, ಕೂಳೆ 1061 ಹೆಕ್ಟೇರ್‌, ನಾಗಮಂಗಲದಲ್ಲಿ ತನಿ 48 ಹೆಕ್ಟೇರ್‌, ಕೂಳೆ 143 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಕಳೆದ ಶೇ.98.1ರಷ್ಟು ಬಿತ್ತನೆ: ಕಳೆದ ವರ್ಷ ಇದೇ ಸೆ.30ರ ವೇಳೆಗೆ ಜಿಲ್ಲಾದ್ಯಂತ ಶೇ.98.1ರಷ್ಟು ಕಬ್ಬು ಬಿತ್ತನೆಯಾಗಿತ್ತು. 35,244 ಹೆಕ್ಟೇರ್‌ ಪ್ರದೇಶದ ಗುರಿ ಯಲ್ಲಿ 34,581 ಹೆಕ್ಟೇರ್‌ ಪ್ರದೇಶ ಬಿತ್ತನೆ ಮಾಡ ಲಾಗಿತ್ತು. ಇದರಲ್ಲಿ ತನಿ ಕಬ್ಬು 19556 ಹೆಕ್ಟೇರ್‌, ಕೂಳೆ ಕಬ್ಬು 15,025 ಹೆಕ್ಟೇರ್‌ ಪ್ರದೇಶ ಬಿತ್ತನೆ ಯಾಗಿತ್ತು. ಆದರೆ ಈ ಬಾರಿ ಶೇ.88.8ರಷ್ಟು ಮಾತ್ರ ಬಿತ್ತನೆಯಾಗಿದೆ. 35,244 ಹೆಕ್ಟೇರ್‌ ಪ್ರದೇಶದ ಗುರಿ ಹೊಂದಲಾಗಿತ್ತು. ಅದರಂತೆ 34,581 ಹೆಕ್ಟೇರ್‌ ಪ್ರದೇಶದ ಬಿತ್ತನೆಯಾಗಿತ್ತು.

Advertisement

2002ರ ನಂತರ ಮುಂಗಾರು ಕೊರತೆ: ಜಿಲ್ಲೆಯಲ್ಲಿ 2002ರಲ್ಲಿ ಮುಂಗಾರು ಮಳೆ ಕೊರತೆಯಾಗಿತ್ತು. ಅಲ್ಲಿಂದ ಇದುವರೆಗೂ ಸರಾಸರಿ ಮಳೆಯಾಗುತ್ತಿತ್ತು. ಅದಾದ ಬಳಿಕ ಮತ್ತೆ 2023ರಲ್ಲಿ ತೀವ್ರ ಮುಂಗಾರು ಮಳೆ ಕುಸಿತವಾಗಿದೆ. ಆದರೂ ಹಿಂಗಾರು ಮಳೆ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ. ಜೂನ್‌ನಿಂತ ಸೆಪ್ಟಂಬರ್‌ 30ವರೆಗೂ ಮಳೆ ಕೊರತೆಯಾಗಿದೆ. ಜೂನ್‌ನಲ್ಲಿ ಶೇ.19.9ರಷ್ಟು, ಜುಲೈನಲ್ಲಿ ಶೇ.2.3ರಷ್ಟು, ಆಗಸ್ಟ್‌ನಲ್ಲಿ ಶೇ.60.04ರಷ್ಟು, ಸೆಪ್ಟಂಬರ್‌ನಲ್ಲಿ ಶೇ.36ರಷ್ಟು ಮಳೆ ಕುಸಿತ ಕಂಡಿದೆ.

ಪಂಪ್‌ಸೆಟ್‌ ರೈತರಿಂದ ಬಿತ್ತನೆ: ಜಿಲ್ಲೆಯಲ್ಲಿ ಪಂಪ್‌ಸೆಟ್‌ ಇರುವ ರೈತರು ಮಾತ್ರ ಬಿತ್ತನೆಗೆ ಮುಂದಾಗಿ ದ್ದಾರೆ. ಆದರೆ ಅತಿ ಹೆಚ್ಚು ಕೃಷ್ಣರಾಜ ಸಾಗರ ಜಲಾಶಯದ ನಾಲೆ ನೀರ ನ್ನೇ ನಂಬಿಕೊಂಡಿರುವ ರೈತರ ಸಂಖ್ಯೆ ಹೆಚ್ಚಾಗಿದೆ. ನಾಲೆ ನೀರು ನಂಬಿ ರುವ ರೈತರು ಈ ಬಾರಿ ಕಬ್ಬು, ಭತ್ತದ ಬಿತ್ತನೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇತ್ತ ಮಳೆಯೂ ಇಲ್ಲ, ಅತ್ತ ಜಲಾಶಯವೂ ತುಂಬಿಲ್ಲ. ಮಳೆ ಕೊರತೆಯಿಂದ ಸಾಕಷ್ಟು ರೈತರು ಬಿತ್ತನೆ ಮಾಡದೆ ವರುಣನ ಕೃಪೆಗೆ ಕಾದು ಕುಳಿತ್ತಿದ್ದಾರೆ.

ಕಾರ್ಖಾನೆಗಳಿಗೆ ಕಬ್ಬಿನ ಕೊರತೆ: ಜಿಲ್ಲೆಯಲ್ಲಿ ಐದು ಕಾರ್ಖಾನೆಗಳು ಚಾಲನೆಯಲ್ಲಿವೆ. ಆದರೆ ಅಗತ್ಯದಷ್ಟು ಕಬ್ಬು ಸಿಗುತ್ತಿಲ್ಲ. ಮೈಷುಗರ್‌, ಚಾಮುಂಡೇಶ್ವರಿ, ಎನ್‌ಎಸ್‌ಎಲ್‌, ಕೋರಮಂಡಲ್‌, ಪಿಎಸ್‌ಎಸ್‌ಕೆ ಕಾರ್ಖಾನೆಗಳು ಕಬ್ಬು ಅರೆಯುತ್ತಿವೆ. ಈ ಬಾರಿ ಯಥೇತ್ಛವಾಗಿ ಕಬ್ಬು ದೊರೆತಿದೆ. ಆದರೆ ಮುಂದಿನ ಸಾಲಿಗೆ ಕಬ್ಬಿನ ಕೊರತೆಯಾಗುವ ಸಾಧ್ಯತೆ ಇದೆ. ನಿಗದಿತ ಗುರಿಗಿಂತ ಕಡಿಮೆ ಬಿತ್ತನೆಯಾಗಿದೆ. ಇದರಿಂದ ಮುಂದಿನ ವರ್ಷ ಕಬ್ಬು ಅರೆಯಲು ಕಾರ್ಖಾನೆಗಳು ಕಬ್ಬಿನ ಕೊರತೆ ಎದುರಿಸಲಿವೆ.

ಈ ಬಾರಿ ಸರಾಸರಿ ಮಳೆಯಾಗುವ ನಿರೀಕ್ಷೆಯಲ್ಲಿದ್ದೆವು. ಆದರೆ ಅದು ಹುಸಿಯಾಗಿದೆ. ಹೊಸದಾಗಿ ಕಬ್ಬಿನ ಬಿತ್ತನೆಯನ್ನು ರೈತರು ನಿಲ್ಲಿಸಿದ್ದಾರೆ. ಉಳಿದಿರುವ ಕೂಳೆ ಕಬ್ಬಿಗೂ ಈಗ ನೀರಿಲ್ಲದಂತಾಗಿದೆ. ಇದರಿಂದ ಮುಂದಿನ ಸಾಲಿನ ಕಬ್ಬು ಅರೆಯುವಿಕೆಗೆ ಎಲ್ಲ ಕಾರ್ಖಾನೆಗಳಿಗೂ ಕಬ್ಬಿನ ಕೊರತೆ ಉಂಟಾಗಲಿದೆ. ಪಂಪ್‌ಸೆಟ್‌ ಇರುವ ರೈತರು ಬಿತ್ತನೆ ಮಾಡುತ್ತಿದ್ದಾರೆ. ಆದರೆ ನಾಲೆ ನೀರು ನಂಬಿರುವ ರೈತರಿಗೆ ಹಿಂಗಾರು ಮಳೆಯೇ ಅನಿವಾರ್ಯವಾಗಿದೆ. -ಸಾತನೂರು ವೇಣುಗೋಪಾಲ್‌, ಅಧ್ಯಕ್ಷ, ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಒಕ್ಕೂಟ

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next