Advertisement

ಹೆಸರಿಗಷ್ಟೇ ನಡೆದ ಪಾಲಿಕೆ ಸಭೆ

04:09 PM May 01, 2020 | Suhan S |

ಬೆಂಗಳೂರು: ಬಿಬಿಎಂಪಿಯ ಮಾಸಿಕ ಸಭೆಗೆ ಬಹುತೇಕರಿಗೆ ಮಾಹಿತಿ ನೀಡದೆ, ಕೋರಂ ಕೊರತೆ ಇದೆ ಎಂದು ಸಭೆ ಮುಗಿಸಿದ ಪ್ರಸಂಗ ಗುರುವಾರ ನಡೆಯಿತು.

Advertisement

ಬಿಬಿಎಂಪಿಯ ಮಾಸಿಕ ಸಭೆ ನಡೆಯುವ ಬಗ್ಗೆ ಮಾಧ್ಯಮಗಳಿಗೂ ಸೇರಿದಂತೆ ಪಾಲಿಕೆಯ ಹಲವು ಸದಸ್ಯರಿಗೆ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಇದರ ಹೊರತಾಗಿಯೂ ಗುರುವಾರ ಬೆಳಗ್ಗೆ 11ಕ್ಕೆ ಬಿಬಿಎಂಪಿಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಸಭಾಂಗಣದ ಕೌನ್ಸಿಲ್‌ ಸಭೆಗೆ ಬೆರಳೆಣಿಕೆಯ ಪಾಲಿಕೆ ಸದಸ್ಯರು ಭಾಗವಹಿಸಿದ್ದರು. ಆದರೆ, ಮಾಸಿಕ ಸಭೆಯ ನಡಾವಳಿಗಳನ್ನು ಪ್ರಸ್ತಾಪಿಸಲು ಬಿಬಿಎಂಪಿಯ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ಅವರೇ ಹಾಜರಿರಲಿಲ್ಲ. ಹೀಗಾಗಿ, ಪಾಲಿಕೆ ಸದಸ್ಯ ಉಮೇಶ್‌ಶೆಟ್ಟಿ ವಿಷಯ ಪ್ರಸ್ತಾಪಿಸಲು ಮುಂದಾದರು, ಈ ವೇಳೆ ಮೇಯರ್‌ ಎಂ.ಗೌತಮ್‌ಕುಮಾರ್‌ ಕೋರಂ ಕೊರತೆ ಇರುವ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿದೆ ಎಂದು ಘೋಷಣೆ ಮಾಡಿದರು. ಇದಕ್ಕೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಬಿಬಿಎಂಪಿಯ ಮಾಸಿಕ ಸಭೆ ಕರೆದಿರಲಿಲ್ಲ. ಪಾಲಿಕೆಯ 2020-21ನೇ ಸಾಲಿನ ಬಗ್ಗೆ ಬಜೆಟ್‌ ಅನ್ನು ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಮಾಡಲಾಯಿತು. ಬಜೆಟ್‌ ಮೇಲಿನ ಚರ್ಚೆಯೂ ವಿಡಿಯೋ ಕಾನ್ಫರೆನ್ಸ್‌ನ ಮೂಲಕ ನಡೆಯಿತು. ಇದರಲ್ಲಿ ವಲಯವಾರು ಕಚೇರಿಗಳಲ್ಲಿ ಸಭೆ ಸೇರಿದ್ದ ಪಾಲಿಕೆ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇನ್ನು ಏಪ್ರಿಲ್‌ ತಿಂಗಳಿನಲ್ಲಿಯೂ ಪಾಲಿಕೆ ಸಭೆ ನಡೆಸದೆ ಇದ್ದರೆ, ಸತತ ಮೂರು ತಿಂಗಳು ಪಾಲಿಕೆ ಸಭೆ ಆಗಿರಲಿಲ್ಲ ಎಂಬ ದಾಖಲೆ ಸೃಷ್ಟಿಯಾ ಗುತ್ತಿತ್ತು. ಈ ಕಳಂಕದಿಂದ ತಪ್ಪಿಸಿಕೊಳ್ಳಲು ಹೆಸರಿಗಷ್ಟೇ ಪಾಲಿಕೆ ಸಭೆ ಕರೆಯಲಾಗಿತ್ತು ಎನ್ನಲಾಗಿದೆ.

ಬಿಬಿಎಂಪಿಯ ಮಾಸಿಕ ಸಭೆಯಲ್ಲಿ ವಿಷಯ ಮಂಡನೆ ಮಾಡಬೇಕಾದ ಆಡಳಿತ ಪಕ್ಷದ ನಾಯಕರೇ ಗೈರು ಹಾಜರಾಗಿದ್ದಾರೆ. ಹೀಗಾಗಿ, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. –ಅಬ್ದುಲ್‌ ವಾಜಿದ್‌ ವಿಪಕ್ಷ ನಾಯಕ, ಬಿಬಿಎಂಪಿ

Advertisement

Udayavani is now on Telegram. Click here to join our channel and stay updated with the latest news.

Next