Advertisement

ಜಿಲ್ಲೆಯಲ್ಲಿ ಸರಳ ಸಪ್ತಪದಿಗೆ ಅಸಡ್ಡೆ !

03:30 PM Feb 22, 2020 | Suhan S |

ಚಿಕ್ಕಬಳ್ಳಾಪುರ: ಸರಳ ಮದುವೆಗೆ ಪ್ರೋತ್ಸಾಹ ಹಾಗೂ ಮದುವೆ ಹೆಸರಿನಲ್ಲಿ ನಡೆಯುವ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಇದೇ ಮೊದಲ ಬಾರಿಗೆ ಮುಜರಾಯಿ ದೇಗುಲಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜಿಸಲು ನಿರ್ಧರಿಸಿದೆ. ಆದರೆ, ಜಿಲ್ಲೆಯಲ್ಲಿ ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಸೂಕ್ತ ಪ್ರಚಾರದ ಕೊರತೆಯಿಂದ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಸೊರಗುವಂತಾಗಿದೆ.

Advertisement

ಹೌದು, ಎ ವರ್ಗದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಏ.26 ಹಾಗೂ ಮೇ 24 ರಂದು ಸರಳ ಸಾಮೂಹಿಕ ವಿವಾಹ ಆಯೋಜಿಸುವಂತೆ ಮುಜರಾಯಿ ಇಲಾಖೆ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಕ್ತ ಕ್ರಮಕ್ಕೆ ಸುತ್ತೋಲೆ ಹೊರಡಿಸಿದೆ. ಆದರೂ ಜಿಲ್ಲೆಯಲ್ಲಿ ಮಾತ್ರ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳ ಆಯೋಜನೆಗೆ ಯಾವುದೇ ಸಿದ್ಧತೆ ನಡೆ ಯದಿರುವುದು ಬಿಡಿ. ಕನಿಷ್ಠ ಅದರ ಬಗ್ಗೆ ಜಿಲ್ಲೆಯ ಜನ ಸಾಮಾನ್ಯರಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ.

ಜಿಲ್ಲೆಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರುವ ಎ ದರ್ಜೆ ದೇಗುಲಗಳ ಪೈಕಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ವಿಧುರಾಶ್ವತ್ಥದ ನಾರಾ ಯಣಸ್ವಾಮಿ ದೇವಾಲಯದಲ್ಲಿ ಮಾತ್ರ ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜನೆಗೆ ಸರ್ಕಾರ ಸೂಚಿಸಿದರೂ ಇದುವರೆಗೂ ಜಿಲ್ಲೆಯಲ್ಲಿ ಸರಳ ಸಾಮೂಹಿಕ ವಿವಾಹಗಳ ನೋಂದಣಿ ಬಗ್ಗೆ ಪ್ರಚಾರ ನಡೆದಿಲ್ಲ. ಹೀಗಾಗಿ ಸರ್ಕಾರ ಸೂಚಿಸಿರುವಂತೆ ಏಪ್ರಿಲ್‌ ಮೊದಲ ಹಂತದ ಕಾರ್ಯಕ್ರಮ ನಡೆ ಯುತ್ತಾ? ಇಲ್ಲವಾ ಎನ್ನುವುದು ಇನ್ನೂ ಗೊಂದಲ ದಲ್ಲಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಇದುವರೆಗೂ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಒಂದು ಜೋಡಿಯೂ ನೋಂದಣಿ ಮಾಡಿಸಿಲ್ಲ. ಏಪ್ರಿಲ್‌-ಮೇನಲ್ಲಿ ವಿವಾಹ ನಡೆಸಲು ನಿರ್ಧರಿಸಿದೆ. ಅದಕ್ಕಾಗಿ ಮುಜರಾಯಿ ಇಲಾಖೆ ಸಾಕಷ್ಟು ಕೆಲಸ ಮಾಡುತ್ತಿದೆ.

ಏನು ಸಪ್ತಪದಿ ವಿವಾಹ ಕಾರ್ಯಕ್ರಮ?:  ಇತ್ತೀಚಿನ ದಿನಗಳಲ್ಲಿ ಜನತೆ ಮದುವೆ ಹೆಸರಿನಲ್ಲಿ ದುಂದು ವೆಚ್ಚ ಮಾಡಿ ಆರ್ಥಿಕ ಹೊರೆ ಹೆಚ್ಚಿಸಿಕೊಂಡು ಜೀವನದ ಉದ್ದಕ್ಕೂ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆ ರೂಪಿಸಿ ಆ ಮೂಲಕ ಸರ್ಕಾರದಿಂದಲೇ ವಿವಾಹ ನಡೆಸಿ ಕೊಡುವ ವಿಶಿಷ್ಠ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿ ಪ್ರತಿ ಜೋಡಿಗೆ 55 ಸಾವಿರ ರೂ, ವೆಚ್ಚ ಮಾಡಲು ನಿರ್ಧರಿಸಿದೆ. ಕಲ್ಯಾಣಕ್ಕೆ ಬರುವ ಪೋಷಕರಿಗೆ ಊಟದ ಜೊತೆಗೆ ವಧು, ವರರಿಗೆ ಸಮವಸ್ತ್ರ, ತಾಳಿ ವಿತರಿಸುತ್ತಿದೆ. ಅನೇಕ ನಿಯಮಾವಳಿ ರೂಪಿಸಿ ಆಯಾ ದೇಗುಲಗಳ ಆಡಳಿತ ಮಂಡಳಿ ಉಸ್ತುವಾರಿಯಲ್ಲಿ ಮದುವೆಗಳನ್ನು ಪಾರದರ್ಶಕವಾಗಿ ಲೋಪವಿಲ್ಲದೆ ನಡೆಸಲು ಸೂಚಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲಾ ವರ್ಗದ ಜನರಲ್ಲಿ ಸರ್ಕಾರದ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಕಡೆ ಆಕರ್ಷಿಸುವ ಕಾರ್ಯ ಮಾಡಬೇಕಿದೆ.

ಒಂದು ಜೋಡಿಯೂ ನೋಂದಣಿ ಆಗಿಲ್ಲ :  ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ಇದುವರೆಗೂ ಒಂದು ಜೋಡಿಯೂ ನೋಂದಣಿ ಮಾಡಿಸಿಲ್ಲ. ಕಾರ್ಯಕ್ರಮದ ಕುರಿತು ಜಿಲ್ಲಾದ್ಯಂತ ಪ್ರಚಾರ ನಡೆಸಬೇಕು. ಆದರೆ ಯಾರೂ ಗಮನ ಕೊಡುತ್ತಿಲ್ಲ. ವಿಧುರಾಶ್ವತ್ಥದಲ್ಲಿ ಮಾತ್ರ ಮುಜರಾಯಿ ದೇಗುಲದಲ್ಲಿ ಕರಪತ್ರ ವಿತರಿಸುತ್ತಿರುವುದು ಬಿಟ್ಟರೆ ಜಿಲ್ಲೆಯ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಥಯಾತ್ರೆ ಅಥವ ಆಟೋ ಪ್ರಚಾರ ನಡೆಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಬಗ್ಗೆ ರಥಯಾತ್ರೆ ನಡೆಯುತ್ತಿದೆ. ಸಿದ್ಧತೆಗಳ ಬಗ್ಗೆ ಪದೇ ಪದೇ ಪೂರ್ವಭಾವಿ ಸಭೆಗಳನ್ನು ಹಿರಿಯ ಅಧಿಕಾರಿಗಳು ನಡೆಸುತ್ತಿದ್ದರೂ ಜಿಲ್ಲೆಯಲ್ಲಿ ಮಾತ್ರ ಇದರ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿ ಕೆಲಸ ಮಾಡದಿರುವುದು ವಿಷಾದಕರ.

Advertisement

ಶಾಸಕರು ಸಿಗಲ್ಲ  ಎಂದುಮೇ ತಿಂಗಳಿಗೆ ಮುಂದೂಡಿಕೆ! :  ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಜಿಲ್ಲೆಯಲ್ಲಿ ಏಪ್ರಿಲ್‌ ಹಾಗೂ ಮೇ ನಲ್ಲಿ ಒಟ್ಟು ಎರಡು ಹಂತದಲ್ಲಿ ನಡೆಸಬೇಕು. ಆದರೆ ಏಪ್ರಿಲ್‌ ತಿಂಗಳಲ್ಲಿ ಸ್ಥಳೀಯ ಗೌರಿಬಿದನೂರು ಕ್ಷೇತ್ರದ ಶಾಸಕರು ಇರುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಅಧಿಕಾರಿ ಗಳು ಏಪ್ರಿಲ್‌ ಬಿಟ್ಟು ಮೇ ನಲ್ಲಿಯೇ ನಡೆಸಲು ಸಿದ್ಧತೆ ನಡೆಸುತ್ತಿದ್ದಾ ರೆಂದು ಮುಜರಾಯಿ ಇಲಾಖೆ ಸಿಬ್ಬಂದಿ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಈಗಾಗಲೇ ಕರಪತ್ರ ಮುದ್ರಿಸಿ ಹಂಚಿಕೆ ಮಾಡಲಾಗುತ್ತಿದೆ. ಆದರೆ, ಇದುವರೆಗೂ ಯಾರೂ ಸರಳ ವಿವಾಹಕ್ಕೆ ನೋಂದಣಿ ಮಾಡಿಸಿಕೊಂಡಿಲ್ಲ. ಏಪ್ರಿಲ್‌ ಬದಲು ಮೇ ನಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ವಿಧುರಾಶ್ವತ್ಥದಲ್ಲಿ ಆಯೋಜಿಸಲಾಗುವುದು. – ರಾಜಣ್ಣ, ತಹಶೀಲ್ದಾರ್‌, ಗೌರಿಬಿದನೂರು, ವಿಧುರಾಶ್ವತ್ಥದ ನೋಡಲ್‌ ಅಧಿಕಾರಿ

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next