Advertisement

ಅಧಿಕಾರಿಗಳ ಕೊರತೆ: ಸಭೆ ಬಹಿಷ್ಕಾರ

03:00 PM Jun 19, 2019 | Team Udayavani |

ಶಿರಹಟ್ಟಿ: ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ತಾಲೂಕು ಮಟ್ಟದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನಲ್ಲಿ 32 ಇಲಾಖೆಗಳ ಪ್ರಗತಿ ಮತ್ತು ಅಧಿಕಾರಿಗಳ ಕೊರತೆ ಆಕ್ಷೇಪಿಸಿ ಎಸ್‌ಸಿ, ಎಸ್‌ಟಿ ಸಮಾಜ ಮುಖಂಡರು ಸಭೆಯಿಂದ ಹೊರ ನಡೆದ ಘಟನೆ ಜರುಗಿತು.

Advertisement

ತಾಲೂಕಿನ ಯಾವೊಬ್ಬ ಅಧಿಕಾರಿಯೂ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಸರಕಾರದಿಂದ ಕೊಡಮಾಡಲ್ಪಟ್ಟ ಯೋಜನೆಗಳನ್ನು ಕೇವಲ ಕಾಗದದಲ್ಲಿ ಮಾತ್ರ ಅಭಿವೃದ್ಧಿಯಾಗಿದೆ. ನೈಜವಾಗಿ ಸಮಾಜದ ಯಾವ ಸ್ಥರವೂ ಅಭಿವೃದ್ಧಿಯಾಗಿಲ್ಲ. ಸರಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಯಾರನ್ನು ನಾವು ಕೇಳ ಬೇಕು. ಇದಕ್ಕಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳು ಎಸ್‌ಸಿಪಿ ಮತ್ತು ಎಸ್‌ಟಿಪಿಗೆ ಸಂಬಂಧಿಸಿದಂತೆ ಪ್ರತಿ ಇಲಾಖೆಗಳಲ್ಲಿ ಬೋರ್ಡ್‌ ರಚಿಸುವಂತೆ ನಿರ್ದೇಶನ ನೀಡಿದರೂ ಯಾವ ಇಲಾಖೆಯಲ್ಲಿ ಇಲ್ಲ. ಜೊತೆಗೆ ಮೂರು ತಿಂಗಳಿಗೊಮ್ಮೆ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿತವಾಗಿ ಇಲಾಖೆಗಳ ಮಾಹಿತಿ ನೀಡುವುದಿಲ್ಲ. ನಾವು ಸಭೆಗೆ ಬರುವುದು ಗಿಳಿ ಪಾಠ ಕೇಳುವುದಕ್ಕಲ್ಲ. ಅಭಿವೃದ್ಧಿ ಏನೇನು ಆಗಿದೆ ಎಂಬುದನ್ನು ತಿಳಿಬೇಕೋ ಬೇಡವೋ. ಅದಕ್ಕಾಗಿ ಮಹಿತಿ ಇಲ್ಲದ ಸಭೆಯನ್ನು ನಾವೆಲ್ಲ ಬಹಿಷ್ಕರಿಸುತ್ತೇವೆ. ಎಲ್ಲ ಇಲಾಖೆಗಳ ಮಾಹಿತಿಯೊಂದಿಗೆ ಮುಂದಿನ ಸಭೆ ನಿರ್ಧರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯ ನಾಗರಾಜ ಪೋತರಾಜ ಮತ್ತು ಮಾದಿಗ ಜಾಗೃತಿ ಜನಾಂದೋಲನ ವೇದಿಕೆ ರಾಜ್ಯಾಧ್ಯಕ್ಷ, ಪ್ರತಿ ಬಾರಿ ಸಭೆಯಲ್ಲಿ ಪ್ರಗತಿ ಮಾಹಿತಿ ನೀಡಿ ಎಂದು ಹೇಳಿದರೂ ಯಾವೊಬ್ಬ ಅಧಿಕಾರಿ ಮಾಹಿತಿ ನೀಡುತ್ತಿಲ್ಲ. ಸಭೆಗೆ ಹಾಜರಿರಬೇಕಾಗಿರುವ ಅಧಿಕಾರಿ ಹಾಜರಾಗದೇ ತಮ್ಮ ಆಧೀನ ಅಧಿಕಾರಿಯನ್ನು ಸಭೆಗೆ ಕಳುಹಿಸುತ್ತಾರೆ. ಇದರಿಂದ ಸಭೆಗೆ ಸಂಪೂರ್ಣ ಮಾಹಿತಿ ಲಭ್ಯವಾಗುವುದಿಲ್ಲ. ಇನ್ನು ಕೆಲ ಅಧಿಕಾರಿಗಳು ಯಾವುದೋ ನೆಪ ಹೇಳಿ ಸಭೆಗೆ ಗೈರಾಗುತ್ತಾರೆ. ಆದ್ದರಿಂದ ಎಲ್ಲ ಅಧಿಕಾರಿಗಳೊಂದಿಗೆ ಪ್ರಗತಿ ಮಾಹಿತಿ ಯೊಂದಿಗೆ ಮುಂದಿನ ಸಭೆ ನಿಗದಿಯಾಗಬೇಕೆಂದು ಹೇಳಿದರು.

ತಹಶೀಲ್ದಾರ್‌ ಯಲ್ಲಪ್ಪ ಗೋಣೆನ್ನವರ, ಇಒ ಆರ್‌.ವೈ. ಗುರಿಕಾರ, ಲಕ್ಷ್ಮೇಶ್ವರ ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟಿ, ಸಿಪಿಐ ಬಾಲಚಂದ್ರ ಲಕ್ಕಂ , ಬಿಇಒ ವಿ.ವಿ. ಸಾಲಿಮಠ, ತಾಪಂ ಅಧ್ಯಕ್ಷ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ತಾಪಂ ಸದಸ್ಯ ದೇವಪ್ಪ ಲಮಾಣಿ, ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ,ಫಕ್ಕಿರೇಶ ಮ್ಯಾಟಣ್ಣವರ, ಮುತ್ತುರಾಜ ಭಾವಿಮನಿ, ದೇವಪ್ಪ ತಳವಾರ, ಬಸಣ್ಣ ನಾಯ್ಕರ, ಶಿವನಗೌಡ ಪಾಟೀಲ, ತಿಪ್ಪಣ್ಣ ಲಮಾಣಿ, ದೇವರಾಜ ಕಟ್ಟಿಮನಿ, ಸುನೀಲ ತಳವಾರ, ಚಂದ್ರು ತಳವಾರ, ಮಾರುತಿ ತಳವಾರ, ದೇವಪ್ಪ ನೀಲಣ್ಣವರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next