Advertisement

ಮುಂಗಾರು ಮಾಯ: ಬತ್ತಿದ ತುಂಗಭದ್ರಾ

12:30 PM Jul 24, 2019 | Suhan S |

ಗಂಗಾವತಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತುಂಗಭದ್ರಾ ನದಿಯಲ್ಲಿದ್ದ ನೀರು ಬತ್ತಿ ಹೋಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಕೊರತೆಯುಂಟಾಗಿದೆ. ನದಿಯಲ್ಲಿ ನೀರು ಬತ್ತಿರುವುದರಿಂದ ಮೀನುಗಳು ಸಾವನ್ನಪ್ಪಿವೆ. ನದಿ ಪಾತ್ರದಲ್ಲಿರುವ ರೈತರು ಭತ್ತ ನಾಟಿ ಮಾಡಲು ಹಾಕಿದ್ದ ಸಸಿ(ಭತ್ತದ)ಮಡಿಗಳು ಸಂಪೂರ್ಣ ಒಣಗಿದ್ದು, ರೈತರು ಸಾವಿರಾರು ರೂ. ನಷ್ಟಕ್ಕೊಳಗಾಗಿದ್ದಾರೆ.

Advertisement

ನದಿ ಪಾತ್ರದ ಗ್ರಾಮಗಳಾದ ಉಳೇನೂರು ಬೆನ್ನೂರು, ಢಣಾಪೂರ, ಬೆನ್ನೂರು, ಕಕ್ಕರಗೋಳ, ಶಾಲಿಗನೂರು, ಜಮಾಪೂರ ಭಾಗದಲ್ಲಿರುವ ರೈತರ ಭೂಮಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಾವರಿ ಆಗುತ್ತಿದ್ದರೂ ಅನಧಿಕೃತ ಅಚ್ಚುಕಟ್ಟು ಪ್ರದೇಶ ಹೆಚ್ಚಾಗಿರುವುದರಿಂದ ಕೊನೆ ಭಾಗಕ್ಕೆ ಕಾಲುವೆ ನೀರು ತಲುಪುತ್ತಿಲ್ಲ. ರೈತರು ನದಿ ಮೂಲಕ ನೀರನ್ನು ಗದ್ದೆಗೆ ಹರಿಸಿ ಭತ್ತ ಬೆಳೆಯಲಾಗುತ್ತಿದ್ದು, ಕಳೆದ ವರ್ಷದಿಂದ ಮಳೆಯ ಕೊರತೆಯಿಂದಾಗಿ ನದಿಯಲ್ಲಿ ನೀರು ಇಲ್ಲದಂತಾಗಿದೆ. ನದಿಯಲ್ಲಿ ನೀರಿನ ಕೊರತೆಯಿಂದ ನೂರಾರು ಮೀನುಗಳು ಸಾವನಪ್ಪಿವೆ. ಸುತ್ತಲಿನ ಗ್ರಾಮಗಳ ಜನರು ಮೀನು ಹಿಡಿದು ಮಾರುತ್ತಿದ್ದಾರೆ. ನದಿ ಪಾತ್ರದ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ನದಿ ಬತ್ತಿದ್ದರಿಂದ ಕುಡಿಯುವ ನೀರಿಗೂ ತಾತ್ವರವಾಗಿದೆ. ಬೋರ್‌ವೆಲ್ಗಳೂ ಬತ್ತಿರುವುದರಿಂದ ಜನರಿಗೆ ದಿಕ್ಕು ತೋಚದಂತಾಗಿದೆ.

ರಾಯಚೂರಿಗೆ ಮಾತ್ರ ನೀರು: ಕುಡಿಯುವ ನೀರು ಇಲ್ಲದೇ ತೊಂದರೆಯಾಗಿರುವ ರಾಯಚೂರು ಜಿಲ್ಲೆಯ ತಾಲೂಕುಗಳಿಗೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ 1.5 ಟಿಎಂಸಿ ಅಡಿ ನೀರನ್ನು ಹರಿಸಲಾಗುತ್ತಿದೆ. ಜು. 31ರ ವರೆಗೆ ನೀರನ್ನು ಹರಿಸಲು ಕಲಬುರ್ಗಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಯಚೂರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಎಡದಂಡೆ ಕಾಲುವೆಯುದ್ಧಕ್ಕೂ ಕೊಪ್ಪಳ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೇರಿದ್ದಾರೆ. ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳಲ್ಲೂ ಮಳೆ ಕೊರತೆಯಿದ್ದು, ಇಲ್ಲಿಯೂ ಕುಡಿಯುವ ನೀರಿನ ಅಭಾವವುಂಟಾಗಿದೆ. ನದಿಯ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ನದಿ ಸಂಪೂರ್ಣ ಬತ್ತಿದೆ. ಸ್ವಲ್ಪ ಪ್ರಮಾಣದ ನೀರನ್ನು ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದ ಕೆರೆ, ಕೃಷಿ ಹೊಂಡ ಹಾಗೂ ಎಡದಂಡೆ ಮತ್ತು ಉಪಕಾಲುವೆಗಳ ಮೂಲಕ ನದಿಗೆ ಹರಿಸಬೇಕು. ಜಲಾಶಯದಲ್ಲಿ ಸಂಗ್ರಹವಾಗಿರುವ ಸುಮಾರು 18 ಟಿಎಂಸಿ ಅಡಿ ನೀರಿನಲ್ಲಿ ಕೊಪ್ಪಳ ಜಿಲ್ಲೆಯ ತಾಲೂಕುಗಳಿಗೆ ಕುಡಿಯಲು ಹಾಗೂ ಇಲ್ಲಿರುವ ಕೆರೆ, ಕೃಷಿಹೊಂಡ ಭರ್ತಿ ಮಾಡುವ ಮೂಲಕ ಜನಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಹೈನುಗಾರಿಕೆ ಮೂಲಕ ರೈತರು ಉತ್ತಮ ಹಣ ಪಡೆಯುತ್ತಿದ್ದು, ನೀರಿನ ಕೊರತೆಯಿಂದ ಹೈನುಗಾರಿಕೆ ಲಾಭ ಕಡಿಮೆಯಾಗಿದೆ. ಕಾಲುವೆ ಮೂಲಕ ಕುಡಿಯುವ ನೀರನ್ನು ಹರಿಸಿದರೆ ಹೈನುಗಾರಿಕೆ ಮಾಡುವವರಿಗೂ ಅನುಕೂಲ ಮಾಡಿದಂತಾಗುತ್ತದೆ.

ಜಿಲ್ಲೆಯ ಕೆರೆಗಳಿಗೂ ನೀರು ಹರಿಸಿ: ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಎಡದಂಡೆ ಮೂಲಕ ರಾಯಚೂರಿಗೆ ನೀರು ಹರಿಸಲಾಗುತ್ತಿದೆ. ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ತೊಂದರೆ ತಲೆದೋರಿದ್ದು, ಇಲ್ಲಿರುವ ಕೆರೆ, ಕೃಷಿ ಹೊಂಡಗಳಿಗೆ ಎಡದಂಡೆ ಉಪಕಾಲುವೆ ಮೂಲಕ ನೀರನ್ನು ಹರಿಸಬೇಕಿದೆ. ಕಲಬುರಗಿ ಪ್ರಾದೇಶಿಕ ಆಯುಕ್ತರು ಈ ಮೊದಲು ಹೊರಡಿಸಿ ಆದೇಶ ಮರುಪರಿಶೀಲಿಸಿ ಕೊಪ್ಪಳ ಜಿಲ್ಲೆಗಳ ತಾಲೂಕುಗಳಿಗೂ ಕುಡಿಯುವ ನೀರನ್ನು ಹರಿಸಲು ಸೂಚನೆ ನೀಡಬೇಕಿದೆ.
ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಸಾವಿರಾರು ಮೀನುಗಳು ಸಾವನ್ನಪ್ಪಿವೆ. ನದಿ ನೀರು ಅವಲಂಬಿಸಿ ಕೃಷಿ ಮಾಡುವ ರೈತರ ಸಸಿ(ಭತ್ತದ)ಮಡಿಗಳು ಸಂಪೂರ್ಣ ಒಣಗಿದ್ದು, ಸಾವಿರಾರು ರೂ.ಗಳು ನಷ್ಟವಾಗಿದೆ. ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ಕಾಲುವೆ ಮೂಲಕ ನದಿಗೆ ಹರಿಸಬೇಕಿದೆ. ಈಗಾಗಲೇ ಭತ್ತದ ಸಸಿ ಮಡಿಯಿಂದ ನಷ್ಟವಾಗಿರುವ ರೈತರಿಗೆ ಸರಕಾರ ಪರಿಹಾರ ನೀಡಬೇಕು. •ಯಮನೂರಪ್ಪ ಬೆನ್ನೂರು, ರೈತ
ನದಿ ಪಾತ್ರದ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ನದಿ ಸಂಪೂರ್ಣ ಬತ್ತಿರುವುದರಿಂದ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಜಲಾಶಯದಿಂದ ನದಿ ಮತ್ತು ಕೆರೆ, ಕೃಷಿ ಹೊಂಡಗಳಿಗೆ ನೀರು ಹರಿಸುವಂತೆ ಮನವಿ ಮಾಡಲಾಗುತ್ತದೆ. ತುರ್ತಾಗಿ ಅಗತ್ಯವಿದ್ದ ಕಡೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. •ಕವಿತಾ, ಕಾರಟಗಿ ತಹಶೀಲ್ದಾರ್‌
•ಕೆ.ನಿಂಗಜ್ಜ
Advertisement

Udayavani is now on Telegram. Click here to join our channel and stay updated with the latest news.

Next