Advertisement

ಮುಂಗಾರು ಕೊರತೆ; ಕಾಣುತ್ತಿಲ್ಲ ಕಲ್ಲಣಬೆ

12:01 PM Jul 02, 2019 | sudhir |

ಅಜೆಕಾರು: ಪ್ರತೀ ವರ್ಷ ಜೂನ್‌ ತಿಂಗಳ ಪ್ರಾರಂಭದ ಮಳೆಗೆ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತಿದ್ದ ಕಲ್ಲಣಬೆ (ಸ್ಟೋನ್‌ ಮಶ್ರೂಮ್ಸ್‌) ಈ ಬಾರಿ ಜೂನ್‌ ಮುಗಿದರೂ ಕಾಣುತ್ತಿಲ್ಲ.

Advertisement

ಮಳೆ ಕೊರತೆಯಿಂದಾಗಿ ಆರೋಗ್ಯದಾಯಕ ಕಲ್ಲಣಬೆ ಶೇ.50ರಷ್ಟು ಕೊರತೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕಳೆದ ಬಾರಿ ಬೇಸಗೆಯಲ್ಲೇ ಸಾಕಷ್ಟು ಮಳೆ ಸುರಿದಿದ್ದರಿಂದ ಮಳೆಗಾಲ ಶುರುವಾಗುವ ಮೊದಲೇ ಕಲ್ಲಣಬೆ ಮಾರುಕಟ್ಟೆ ಪ್ರವೇಶಿಸಿತ್ತು. ಸತತ ಮಳೆ ಸುರಿದು ಭೂಮಿ ತಂಪಾದರೆ ಮಾತ್ರ ಕಲ್ಲಣಬೆಗಳು ಹುಟ್ಟುತ್ತವೆ. ಆದರೆ ಈ ಬಾರಿ ಹಾಗಾಗಿಲ್ಲ. ಗ್ರಾಮೀಣ ಭಾಗಗಳಲ್ಲಿ ದೊರೆಯುವ ಕಲ್ಲಣಬೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು ಕಲ್ಲಣಬೆ ಕೊರತೆಯಿಂದಾಗಿ ಬೆಲೆ ಗಗನಕ್ಕೇರಿದೆ.

ಕೆ.ಜಿ.ಗೆ 800 ರೂ.

ಕಳೆದ ವರ್ಷ ಕಲ್ಲಣಬೆ ಕೆ.ಜಿ.ಯೊಂದಕ್ಕೆ ಸುಮಾರು 400ರಿಂದ 600 ರೂ.ಗಳವರೆಗೂ ಮಾರಾಟವಾಗಿತ್ತು ಆದರೆ ಈ ಬಾರಿ ಸ್ಥಳೀಯ ಮರುಕಟ್ಟೆಯಲ್ಲಿ 800 ರೂ ವರೆಗೂ ಬೆಲೆ ಇದೆ. ಮಳೆಗಾಲ ಪ್ರಾರಂಭಗೊಂಡ ಅನಂತರ ಕೆಲವೇ ದಿನಗಳವರೆಗೆ ಮಾರುಕಟ್ಟೆಯಲ್ಲಿ ಇವುಗಳು ಸಿಗುತ್ತವೆ. ಈಗ ಕಲ್ಲಣಬೆ ಸಿಗದೇ ಇರುವುದರಿಂದ ಅಣಬೆ ಪ್ರಿಯರಿಗೆ ನಿರಾಸೆಯಾಗಿದೆ. ಅಲ್ಪ ಪ್ರಮಾಣದಲ್ಲಿ ಅಣಬೆ ಸಿಕ್ಕಿದರೂ ಅವುಗಳು ಬೆಂಗಳೂರು, ಮುಂಬಯಿಗೆ ರವಾನೆಯಾಗುತ್ತವೆ. ಅಲ್ಲಿನ ಗ್ರಾಹಕರು 1,000-1,300 ರೂ.ವರೆಗೆ ಪಾವತಿಸಿ ಬೇಡಿಕೆ ಇಡುತ್ತಾರೆ ಎಂದು ವರ್ತಕರು ಹೇಳುತ್ತಾರೆ.

Advertisement

ಅತೀ ರುಚಿಕರವಾದ ಕಲ್ಲಣಬೆಗಳಲ್ಲಿ ಪೌಷ್ಟಿಕಾಂಶ ಹೇರಳವಾಗಿದ್ದು ದೇಹದಲ್ಲಿನ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ಸೇವಿಸುವ ಮುನ್ನ ಎಚ್ಚರ ಅಗತ್ಯ

ಕಲ್ಲಣಬೆಗಳನ್ನು ಆಹಾರವಾಗಿ ಸೇವಿಸುವ ಮುನ್ನ ಎಚ್ಚರವೂ ಅಗತ್ಯ. ಸಾಮಾನ್ಯವಾಗಿ ಕಲ್ಲಣಬೆಗಳು ಬಿಳಿ ಬಣ್ಣದಿಂದ ಕೂಡಿರುತ್ತವೆ. ಅಲ್ಲದೆ ತಿಳಿಕಂದು ಬಣ್ಣ ಅಥವಾ ಮಣ್ಣಿನ ಬಣ್ಣದಲ್ಲಿಯೂ ದೊರೆಯುತ್ತವೆ. ಇವುಗಳು ಆರೋಗ್ಯವರ್ಧಕ. ಕೆಲವೊಮ್ಮೆ ಬಣ್ಣದ ಅಣಬೆಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಕೆಲವೊಂದು ವಿಷಕಾರಿಯೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next