Advertisement

ಬಾವಿಗಳ ನಿರ್ವಹಣೆ ಕೊರತೆ ಪೊದೆಗಳಿಂದ ಮುಚ್ಚಿದ ಬಾವಿಗಳು, ಎಚ್ಚರ ತಪ್ಪಿದರೆ ಆಪತ್ತು

08:30 AM Dec 09, 2020 | mahesh |

ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿ ಯಲ್ಲಿರುವ ಸಾರ್ವಜನಿಕ ಬಾವಿಗಳು ನಿರ್ವಹಣೆ ಇಲ್ಲದೆ ಪೊದೆಗಳಿಂದ ಮುಚ್ಚಿಹೋಗಿದ್ದು, ನಿತ್ಯ ಸಂಚಾರಿ, ಜಾನುವಾರುಗಳಿಗೆ ಅಪಾಯಕಾರಿಯಾಗಿವೆ.

Advertisement

ಕಾರ್ಕಳ ಪುರಸಭೆಗೆ ಸಂಬಂಧಿಸಿದಂತೆ 12 ಬಾವಿ ಗಳಿವೆ. ಇವುಗಳ ನೀರು ಬಳಕೆಯಾಗುತ್ತಿದೆ. ಆದರೆ ಸುತ್ತಮುತ್ತ ಬೆಳೆದ ಪೊದೆಗಳನ್ನು ತೆಗೆದಿಲ್ಲ. 7-8 ಕಡೆಯ ಬಾವಿಗಳು ತೀವ್ರ ನಿರ್ವಹಣೆ ಕೊರತೆ ಎದುರಿಸುತ್ತಿವೆ. ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. ವಾರ್ಡ್‌ಗಳಿಗೆ ಪುರಸಭೆ ಸಾರ್ವಜನಿಕ ಬಾವಿಗಳಿಂದ ನೀರು ಹರಿಸುತ್ತಿದೆ.

ಮಾರುಕಟ್ಟೆ ರಸ್ತೆ, ಬಿಚ್ಚಂಗಿ ನಗರ, ಸಾಯಿರಾಂ ಮಂದಿರ ರಸ್ತೆ, ಫಿಶರೀಸ್‌ ರಸ್ತೆ ಕಾಲನಿ, ಜೋಗುಲ್‌ ಬೆಟ್ಟ ಬಳಿ, ಆನೆಕೆರೆ, ಹಿರಿಯಂಗಡಿ ಹೈವೇ ಸಹಿತ ಇನ್ನೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಬಾವಿಗಳಿದ್ದು ಸುರಕ್ಷತೆಯ ವಿಚಾರದಲ್ಲಿ ಹಿಂದುಳಿದಿವೆ. ಪುರಸಭೆ ವ್ಯಾಪ್ತಿಯ ಸಿಗಡಿಕೆರೆ ಬಾವಿಯಂತೂ ತೀರ ಅಪಾಯಕಾರಿ ಸ್ಥಿತಿಯಲ್ಲಿದೆ. ಬಾವಿ ಪಕ್ಕವೇ ಜನರು ನಡೆದಾಡು ತ್ತಾರೆ. ತುಸು ಎಚ್ಚರ ತಪ್ಪಿದರೆ ಬೀಳುವ ಅಪಾಯವಿದೆ.

ಬಾವಿ ನೀರು ಬಳಸುವವರೇ ಹೆಚ್ಚು
ಪುರಸಭೆಯ ಈ ಬಾವಿಗಳು ಸರ್ವ ಋತುವಿನಲ್ಲಿ ನೀರು ಒದಗಿಸಿ ಜನರ ದಾಹ ತೀರಿಸುತ್ತಿವೆ. ಬಾವಿಗಳ ಜಾಗಕ್ಕೆ ಈಗ ಕೊಳವೆ ಬಾವಿಗಳು ಬಂದಿದ್ದರೂ ಇಂದಿಗೂ ಬಾವಿ ನೀರು ಬಳಸುವವರೂ ಹೆಚ್ಚಿದ್ದಾರೆ.

ನೀರ ಸೆಲೆಯಿದ್ದರೂ ನಿರ್ವಹಣೆಯಿಲ್ಲ
ಕೆಲವು ಸಾರ್ವಜನಿಕ ಬಾವಿಗಳಲ್ಲಿ ನೀರ ಸೆಲೆ ಇದ್ದರೂ ಪಾಳುಬಿದ್ದಂತಿವೆ. ಕೆಲವು ಬಾವಿಗಳಲ್ಲಿ ಕಸ ತುಂಬಿವೆ. ಪೊದೆಗಳಿವೆ. ಇವುಗಳ ನಿರ್ವಹಣೆ ಮಾಡಿದಲ್ಲಿ ಕಡು ಬೇಸಗೆಯ ನೀರಿನ ತಾಪತ್ರಯಗಳ ಭಾರ ದೂರವಾಗುತ್ತವೆ. ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ಎಲ್ಲ ಬಾವಿಗಳು ಶುದ್ದಗೊಂಡರೆ ನೀರಿನ ಕೊರತೆ ನೀಗಲಿದೆ.

Advertisement

ಬಾವಿಗಳ ಶೀಘ್ರ ದುರಸ್ತಿ
ಸಾರ್ವಜನಿಕ ಬಾವಿಗಳನ್ನು ಕಳೆದ ಬೇಸಗೆಯಲ್ಲಿ ದುರಸ್ತಿಪಡಿಸಲಾಗಿತ್ತು. ಈ ಬಾರಿ ಇವುಗಳ ದುರಸ್ತಿ ಇನ್ನು ನಡೆಯಬೇಕಿದೆ. ಶೀಘ್ರ ಇದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಪಾಯಕಾರಿ ಬಾವಿಗಳ ಬಗ್ಗೆಯೂ ಗಮನಹರಿಸುತ್ತೇವೆ.
-ರೇಖಾ ಜೆ. ಶೆಟ್ಟಿ , ಮುಖ್ಯಾಧಿಕಾರಿ, ಪುರಸಭೆ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next