Advertisement

ಕೊಳೆ ನಗರಕ್ಕೆ ಕಸಮುಕ್ತ ನಗರ ಗರಿ!

03:47 PM Jan 03, 2020 | Suhan S |

ಬಾಗಲಕೋಟೆ: ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ ನಗರ ಸಮೀಕ್ಷೆಯ ತ್ರಿಸ್ಟಾರ್‌ ರ್‍ಯಾಂಕಿಂಗ್‌ ಗೆ ಬಾಗಲಕೋಟೆ ಆಯ್ಕೆಯಾಗಿದ್ದು, ಇದೀಗ ಇಡೀ ನಗರವನ್ನು ಕಸಮುಕ್ತ ನಗರವನ್ನಾಗಿ ಘೋಷಿಸಲು ನಗರಸಭೆ ಮುಂದಾಗಿದೆ. ಆದರೆ, ಸ್ವಚ್ಛತೆಯೇ ಇಲ್ಲದ ನವನಗರವನ್ನು ಅದರಲ್ಲಿ ಅಳವಡಿಸಿರುವುದಕ್ಕೆ ಸಾರ್ವಜನಿಕರಿಂದ ಅಪಸ್ವರ ಎದ್ದಿದೆ.

Advertisement

ಹೌದು. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್ ಗಳಿದ್ದು, ಅದರಲ್ಲಿ 28 ವಾರ್ಡ್‌ಗಳು ನಗರಸಭೆ ವ್ಯಾಪ್ತಿಯಲ್ಲಿವೆ. ಉಳಿದ 7 ವಾರ್ಡ್‌ಗಳು ಮಾತ್ರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಡಿ ಇವೆ. ನವನಗರವನ್ನೂ ನಗರಸಭೆಗೆ ಹಸ್ತಾಂತರಿಸಿ ಇಡೀ ನಗರಸಭೆಯಿಂದ ನಿರ್ವಹಣೆ ಮಾಡಬೇಕೆಂಬ ಪ್ರಕ್ರಿಯೆ ನಡೆದಿತ್ತಾದರೂ ಅದಕ್ಕೆ ಪ್ರಬಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. ಆದರೆ, ನವನಗರದ ಏಳು ವಾರ್ಡ್‌ ವ್ಯಾಪ್ತಿಯ ಸೆಕ್ಟರ್‌ಗಳನ್ನು ನಿರ್ವಹಣೆ ಮಾಡಬೇಕಾದ ಬಿಟಿಡಿಎ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಟಿಡಿಎ ನಿರ್ಲಕ್ಷéದಿಂದ ನಗರಸಭೆಯ ಹಲವು ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಮಾತೂ ಕೇಳಿ ಬಂದಿದೆ.

 

ಕೊಳೆ ನಗರ ಆಗುತ್ತಿದೆ ನವನಗರ:  ಇಡೀ ನವನಗರ ಯೂನಿಟ್‌-1ರ ಚರಂಡಿ, ರಸ್ತೆಗಳು ಸಂಪೂರ್ಣ ಹಾಳಾಗಿವೆ. ಬಿಟಿಡಿಎ ಬಳಿ ತಲಾ 85 ಜನರಂತೆ ಎರಡು ಪ್ಯಾಕೇಜ್‌ನಲ್ಲಿ 170 ಜನ ಪೌರ ಕಾರ್ಮಿಕರಿದ್ದಾರೆ. ಆದರೆ, ಅಷ್ಟೂ ಜನರು ನಿತ್ಯ ನವನಗರ ಸ್ವಚ್ಛತೆಯಲ್ಲಿ ತೊಡಗಲ್ಲ. ಕೇವಲ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯ ಮಾತ್ರ ನಡೆಯುತ್ತಿದ್ದು, ರಸ್ತೆ, ಚರಂಡಿ ಸ್ವಚ್ಛತೆಯನ್ನೇ ಬಿಟಿಡಿಎ ಮರೆತಂತಿದೆ ಎಂಬ ಆಕ್ರೋಶ ನವನಗರದ ನಿವಾಸಿಗಳಿಂದ ಕೇಳಿ ಬರುತ್ತಿದೆ. ಒಂದೊಂದು ಚರಂಡಿಗಳೂ ಕಸದಿಂದ ತುಂಬಿಕೊಂಡಿದ್ದು, ಸ್ವಚ್ಛಮಾಡಿಲ್ಲ. ರಸ್ತೆಯ ಅಕ್ಕ-ಪಕ್ಕದಲ್ಲಿಯೇ ರಾಶಿ ರಾಶಿ ಕಸ ಬಿದ್ದರೂ ಬಿಟಿಡಿಎ ಅದನ್ನು ಬೇರೆಡೆ ಸಾಗಿಸುವುದಿಲ್ಲ. ನವನಗರದ ಸ್ವತ್ಛತೆಗೂ ನಿತ್ಯ ನಗರಸಭೆಗೆ ನೂರಾರು ಕರೆಗಳು ಬರುತ್ತಿವೆ. ಜನರ ಹಿತದೃಷ್ಟಿಯಿಂದ ತನ್ನ ವ್ಯಾಪ್ತಿಗೆ ಬಾರದಿದ್ದರೂ ನಗರಸಭೆ ಸ್ವಚ್ಛತೆ (ಒತ್ತಡ ಬಂದ ಮೇಲೆ) ಕೈಗೊಳ್ಳುತ್ತಿದೆ. ಬಿಟಿಡಿಎ ಮಾಡಬೇಕಾದ ಕೆಲಸದ ಹೊರೆ ನಗರಸಭೆ ಮೇಲೆ ಬಿದ್ದಿದೆ. ಆದರೂ, ನವನಗರ, ಈಚಿನ ದಿನಗಳಲ್ಲಿ ಕೊಳೆ ನಗರವಾಗಿ ಪರಿವರ್ತನೆಯಾಗುತ್ತಿದೆ ಎಂಬ ಬೇಸರ ಜನ ವ್ಯಕ್ತಪಡಿಸುತ್ತಿದ್ದಾರೆ.

 

Advertisement

1521 ಎಕರೆ ವಿಸ್ತಾರ:  ನವನಗರ ಯೂನಿಟ್‌-1 ಸುಮಾರು 1521 ಎಕರೆ ವಿಸ್ತಾರವಿದೆ. ಅಲ್ಲದೇ 1,333 ಎಕರೆ ವಿಸ್ತಾರದಲ್ಲಿ ಯೂನಿಟ್‌-2 ನಿರ್ಮಾಣಗೊಳ್ಳುತ್ತಿದೆ. ಯೂನಿಟ್‌-2ರಲ್ಲೂ ಮನೆಗಳ ನಿರ್ಮಾಣ ಆರಂಭಗೊಂಡಿವೆ. ಅಲ್ಲಿನ ಜನರಿಗೂ ಮೂಲ ಸೌಲಭ್ಯ ಕಲ್ಪಿಸಬೇಕು. ಸದ್ಯ ನವನಗರ ಯೂನಿಟ್‌-1ರಲ್ಲಿ ಒಟ್ಟು 18,567 ನಿವೇಶನಗಳಿದ್ದು, ಅದರಲ್ಲಿ 10,759 ಮನೆಗಳು ನಿರ್ಮಾಣಗೊಂಡಿವೆ. ಇನ್ನು ಅಂಗಡಿಗಳು, ಬ್ಯಾಂಕ್‌ಗಳು, ಚಿಕ್ಕ-ಪುಟ್ಟ ವ್ಯಾಪಾರಸ್ಥರನ್ನೊಳಗೊಂಡ ಇಡಿ ನವನಗರದಲ್ಲಿ ಸ್ವತ್ಛತೆ ಎಂಬುದು ಮರೀಚಿಕೆಯಾಗಿದೆ.

 

­ಘೋಷಣೆ ಅರ್ಥವೇನು?:  ನಗರಸಭೆ, ಕಸಮುಕ್ತ ನಗರ ಘೋಷಣೆ ಮಾಡಿದೆ. ಈ ಹಿಂದೆ ಬಯಲು ಶೌಚಮುಕ್ತ ಎಂದು ಘೋಷಣೆ ಮಾಡಿದ್ದು, ಇಂದಿಗೂ ಬಯಲು ಶೌಚ ಮುಕ್ತವಾಗಿಲ್ಲ. ಇದೀಗ ರಾಶಿ ರಾಶಿ ಕಸವಿದ್ದರೂ ಕಸಮುಕ್ತ ನವನಗರ ಘೋಷಣೆ ಮಾಡಿದ್ದು, ಘೋಷಣೆಯ ಅರ್ಥಕ್ಕೆ ಅಪಹಾಸ್ಯವಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಇಡೀ ನಗರ ಸ್ವಚ್ಛವಾಗಿಡಲಿ, ಆ ಬಳಿಕ ಕಸಮುಕ್ತ ನವನಗರ ಘೋಷಣೆ ಮಾಡಲಿ ಎಂಬುದು ಜನರ ಒತ್ತಾಯ.

 

­ಮುಗಿಯದ ಹಸ್ತಾಂತರ ಗೊಂದಲ:  ನವನಗರ ಯೂನಿಟ್‌-1ನ್ನು 133.84 ಕೋಟಿ ಅನುದಾನದೊಂದಿಗೆ ನಗರಸಭೆಗೆ ಹಸ್ತಾಂತರಿಸಲು ಕಳೆದ 2017ರ ಡಿಸೆಂಬರ್‌ 27ರಂದು ಹಸ್ತಾಂತರಿಸಲಾಗಿತ್ತು. 133.84 ಕೋಟಿ ಅನುದಾನವನ್ನು ಬ್ಯಾಂಕ್‌ವೊಂದರಲ್ಲಿ ನಗರಸಭೆ ಠೇವಣಿ ಇಟ್ಟಿತ್ತು. ಎರಡು ವರ್ಷದಲ್ಲಿ ಅದರ ಬಡ್ಡಿ ಹಣವೇ ಸುಮಾರು 8 ಕೋಟಿಯಷ್ಟಾಗಿತ್ತು. ಹಸ್ತಾಂತರಕ್ಕೆ ಪ್ರಭಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಬಿಜೆಎನ್‌ಎಲ್‌ನ 120ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಪುನಃ ಬಿಟಿಡಿಎ ವ್ಯಾಪ್ತಿಗೆ ನವನಗರ ಯೂನಿಟ್‌-1 ಹಾಗೂ 133.84 ಕೋಟಿ ಅನುದಾನ ಸಮೇತ ಹಿಂಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ನಗರಸಭೆಗೆ ನೀಡಿದ್ದ ಅನುದಾನವೂ ಮರಳಿ ಬಿಟಿಡಿಎಗೆ ನೀಡಲಾಗಿದೆ. ಬಿಟಿಡಿಎದಿಂದ 133.84 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದಕ್ಕೆ ಕೆಬಿಜೆಎನ್‌ಎಲ್‌ದಿಂದ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ 133.84 ಕೋಟಿ ಅನುದಾನ ಬಂದರೂ ಸದ್ಬಳಕೆಯಾಗುತ್ತಿಲ್ಲ. ಆದರೆ, ಚರಂತಿಮಠರು, 2018ರ ಚುನಾವಣೆಯಲ್ಲಿ ಪುನರಾಯ್ಕೆಯಾದ ಬಳಿಕ ಬಿಟಿಡಿಎ ಕಾರ್ಯ ಚಟುವಟಿಕೆಯಲ್ಲಿ ಚುರುಕು ತರುವ ಪ್ರಯತ್ನ ನಡೆಸಿದ್ದಾರೆ.

ಸ್ವಚ್ಛತೆಗಿಲ್ಲ ಆಸಕ್ತಿ :  ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಗೆ ಮುಳುಗಡೆಯಾದ ನಗರದ 521 ಮೀಟರ್‌ ವ್ಯಾಪ್ತಿಯ ಜನರಿಗೆ ನವನಗರ ಯೂನಿಟ್‌-1ರಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. 521 ಮೀಟರ್‌ ವ್ಯಾಪ್ತಿವರೆಗೆ ಒಟ್ಟು ಸುಮಾರು 4719 ಕಟ್ಟಡಗಳು ಮುಳುಗಡೆ ಆಗಿವೆ. ಬಾಡಿಗೆದಾರರು, ವ್ಯಾಪಾರಸ್ಥರು, ಕೈಗಾರಿಕೆ ವಲಯ ಹೀಗೆ ವಿವಿಧ ಹಂತದ ಪುನರ್ವಸತಿ ವ್ಯವಸ್ಥೆ ಕಲ್ಪಿಸಿ, ನವನಗರ ಯೂನಿಟ್‌-1 ನಿರ್ಮಾಣಗೊಂಡಿದ್ದು, ಸುಮಾರು 60 ಸಾವಿರಕ್ಕೂ ಅಧಿಕ ಜನಸಂಖ್ಯೆ ನವನಗರದಲ್ಲಿದೆ ಎಂದು ಅಂದಾಜಿಸಲಾಗಿದೆ. ಈ ಜನರಿಗೆ ರಸ್ತೆ, ಕುಡಿಯುವ ನೀರು, ಸ್ವತ್ಛತೆ ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸುವ ಹಾಗೂ ನಿರ್ವಹಿಸುವ ಹೊಣೆ ಬಿಟಿಡಿಎ ಮೇಲಿದೆ. ಆದರೆ, ಬಿಟಿಡಿಎ ರಸ್ತೆ-ಚರಂಡಿ ನಿರ್ಮಾಣ, ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ತೋರುವ ಆಸಕ್ತಿ, ನವನಗರ ನಿರ್ವಹಣೆಗೆ ತೋರುತ್ತಿಲ್ಲ ಎಂಬ ಬೇಸರ ಜನರಲ್ಲಿದೆ.

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next