Advertisement

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

11:54 AM Mar 19, 2024 | Team Udayavani |

ಮಂಗಳೂರು: ಮಂಗಳೂರಿನಲ್ಲಿರುವ ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿದ್ದು ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಕಾರಣರಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರದ ನಿವಾಸಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಸೋಮವಾರ ನಗರದ ಸುಮಾರು 65ರಿಂದ 70 ವರ್ಷದ ವ್ಯಕ್ತಿ ಸ್ಕೂಟರ್‌ ನಿಂದ ಬಿದ್ದು ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ವೆನ್ಲಾಕ್‌ಗೆ ಕರೆದುಕೊಂಡು ಹೋದಾಗ ತುರ್ತು ಚಿಕಿತ್ಸೆ ಸಿಗಲಿಲ್ಲ. ತುರ್ತು ಚಿಕಿತ್ಸಾ ವಿಭಾಗದಲ್ಲಿ 5 ಬೆಡ್‌ ಗಳು ಮಾತ್ರ ಇವೆ. ಅಲ್ಲಿ ಬೆಡ್‌ ಸಿಗದೆ ಹೊರಗಡೆ ಹಲವಾರು ರೋಗಿಗಳು ನರಳುತ್ತಾ ಚಿಕಿತ್ಸೆಗಾಗಿ ಕಾಯುತ್ತಿದ್ದರು. ಪೇಷೆಂಟ್‌ ಕಾರ್ಡ್‌ ಮಾಡಿಸುವುದಕ್ಕೂ ಅರ್ಧ ಗಂಟೆಗೂ ಅಧಿಕ ಸಮಯ ಕಾಯಬೇಕಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆ ಇದ್ದು ಖಾಸಗಿ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ಕೊಡುವ ಸ್ಥಿತಿ ಇದೆ.

ಹೃದಯಾಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಕೂಡಲೇ ಚಿಕಿತ್ಸೆ ಸಿಗದೆ ರೋಗಿಗಳು ಸಾಯುವ ಪರಿಸ್ಥಿತಿ ಇದೆ. ಬೆಡ್‌, ವ್ಹೀಲ್‌ ಚೇರ್‌ ಗಳ ಕೊರತೆಯೂ ಇದೆ. ರೋಗಿಗಳು ನೆಲದ ಮೇಲೆ ಕುಳಿತುಕೊಳ್ಳಬೇಕಾಗಿದೆ. ಸಚಿವರು ಜನರಿಗೆ ಆರೋಗ್ಯದ ಹಕ್ಕನ್ನು ಒದಗಿಸಿಕೊಡುವಲ್ಲಿ ವಿಫ‌ಲರಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕೂಡಲೇ ಆಸ್ಪತ್ರೆಗೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕು ಎಂದು ನಗರದ ಅಶೋಕ ನಗರ ನಿವಾಸಿ ಎಚ್‌. ಶಶಿಧರ ಶೆಟ್ಟಿ ಅವರು ಪಾಂಡೇಶ್ವರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next