Advertisement

ಶತಮಾನ ಕಂಡ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ

03:22 PM Mar 22, 2022 | Team Udayavani |

ಬ್ರಹ್ಮಾವರ: ಬಹುತೇಕ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೆ ಬ್ರಹ್ಮಾವರ ಸ.ಮಾ.ಹಿ. ಪ್ರಾಥಮಿಕ ಶಾಲೆ ಯಲ್ಲಿ ಬರೋಬ್ಬರಿ 584 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ತರಗತಿ ಕೋಣೆ ಹಾಗೂ ಪೀಠೊಪಕರಣಗಳ ತೀವ್ರ ಕೊರತೆ ಕಾಡುತ್ತಿದೆ.

Advertisement

1895ರಲ್ಲಿ ಪ್ರಾರಂಭಗೊಂಡು 127 ವರ್ಷಗಳ ಇತಿಹಾಸ ಹೊಂದಿದ ಶಾಲೆಯಾಗಿದೆ. 2019-20ರಲ್ಲಿ ನಿರ್ಮಿತಿ ಕೇಂದ್ರ ಅಡಿ ನಿರ್ಮಾಣಗೊಂಡ 4 ಕೊಠಡಿಗಳನ್ನು ಹೊರತುಪಡಿಸಿ ಉಳಿದವು ತೀರಾ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿದೆ. ಪ್ರಸ್ತುತ ಗಣೇಶೋತ್ಸವ, ಶಾರದೋತ್ಸವ ವೇದಿಕೆ ಸೇರಿದಂತೆ ಎಲ್ಲೆಂದರಲ್ಲಿ ತರಗತಿ ನಡೆಸಲಾಗುತ್ತಿದ್ದು ಮಳೆಗಾಲದಲ್ಲಿ ನೆನೆಯಬೇಕಾಗಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚಳ

2017-18ರಲ್ಲಿ 343 ವಿದ್ಯಾರ್ಥಿಗಳು, 18-19ರಲ್ಲಿ 373, 19-20ರಲ್ಲಿ 435, 20-21ರಲ್ಲಿ 474 ಮಂದಿ ಪ್ರಸ್ತುತ 584 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದೂರದ ಊರುಗಳಲ್ಲದೆ ಹೊರ ಜಿಲ್ಲೆಯಲ್ಲಿಂದಲೂ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಗುಣಮಟ್ಟದ ಬೋಧನೆ ಇದಕ್ಕೆ ಕಾರಣ.

ಕನ್ನಡ ಮತ್ತು ಆಂಗ್ಲ ಮಾಧ್ಯಮ ಸೇರಿ 17 ವಿಭಾಗಗಳಿವೆ. ಮುಂದಿನ ವರ್ಷ 19ಕ್ಕೆ ಏರಲಿದೆ. ಪ್ರಸ್ತುತ 11 ಕೊಠಡಿಗಳಿದ್ದು, 8 ಕೊಠಡಿಗಳ ತುರ್ತು ಆವಶ್ಯಕತೆಯಿದೆ.

Advertisement

ಮುಂದಿನ ಶೈಕ್ಷಣಿಕ ಸಾಲಿಗೆ ಈಗಾಗಲೇ 180 ಮಂದಿ ನೋಂದಾಯಿಸಿದ್ದಾರೆ. 65 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಬೋಧಿಸುವ ದುಃಸ್ಥಿತಿ ಇದೆ. ಸುಮಾರು 250 ವಿದ್ಯಾರ್ಥಿಗಳು ಸೂಕ್ತ ಪೀಠೊಪಕರಣಗಳಿಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೂ ನೆಲದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಇದರಿಂದ ಓದಲು, ಬರೆಯಲು ಕಷ್ಟವಾಗುತ್ತಿದೆ. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದುದರಿಂದ ಸಮಸ್ಯೆ ಅಷ್ಟೊಂದು ಬಾಧಿಸಿರಲಿಲ್ಲ. ಆದರೆ ಈ ವರ್ಷ ಗಂಭೀರ ಸ್ವರೂಪ ಪಡೆದಿದೆ. ಪ್ರಸ್ತುತ 14 ಶಿಕ್ಷಕರಿದ್ದು ಶಿಕ್ಷಕರ ಕೊರತೆಯೂ ಕಾಡುತ್ತಿದೆ.

ಆಮೆಗತಿ 55 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 3 ಕೊಠಡಿಗಳ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಹಣದ ಕೊರತೆಯಿಂದ ಆಮೆಗತಿಯಲ್ಲಿದೆ. ಒಂದು ಕೊಠಡಿಯ ಖರ್ಚನ್ನು ಬ್ರಹ್ಮಾವರ ಜಿ.ಎಸ್‌.ಬಿ. ಸಮಾಜದವರು ಪ್ರಾಯೋಜಿಸುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳು ನೆರವಿನ ಭರವಸೆ ನೀಡಿದ್ದಾರೆ. ಮೇ ತಿಂಗಳ ಒಳಗಾಗಿ ಕಟ್ಟಡ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಸರಕಾರ ತತ್‌ಕ್ಷಣ ಸ್ಪಂದಿಸಬೇಕಾಗಿ ಪೋಷಕರು ಮನವಿ ಮಾಡಿದ್ದಾರೆ. ‌

ತುರ್ತು ಅಗತ್ಯ

ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಹೆಚ್ಚುತ್ತಿದೆ. ಪೂರಕವಾಗಿ ಮೂಲ ಸೌಕರ್ಯದ ಅವಶ್ಯಕತೆಯಿದೆ. ಮುಂದಿನ ಶೈಕ್ಷಣಿಕ ವರ್ಷದ ಒಳಗಾಗಿ ತರಗತಿ ಕೊಠಡಿಗಳ ತುರ್ತು ಆವಶ್ಯಕತೆಯಿದೆ. -ಬಿ.ಎನ್‌. ದೇವ ಕುಮಾರಿ ಮುಖ್ಯ ಶಿಕ್ಷಕಿ

ದಾನಿಗಳ ಸಂಪರ್ಕ

ತರಗತಿ ಕೊಠಡಿಗಳ ನಿರ್ಮಾಣಕ್ಕೆ ಸರಕಾರದ ಅನುದಾನ ಪಡೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ. ಜತೆಗೆ ದಾನಿಗಳನ್ನು ಸಂಪರ್ಕಿಸಲಾಗಿದ್ದು ನೆರವಿನ ಭರವಸೆ ನೀಡಿದ್ದಾರೆ. ಈ ಕುರಿತು ಸಭೆ ಕರೆದು ಸಮಾಲೋಚಿಸಲಾಗುವುದು. -ಕೆ. ರಘುಪತಿ ಭಟ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next