Advertisement

ಮೂಲಸೌಕರ್ಯ ಕೊರತೆಯೇ ಸವಾಲು

08:52 PM Aug 13, 2021 | Team Udayavani |

ಗುತ್ತಿಗಾರು: ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಗ್ರಾಮ ಮಡಪ್ಪಾಡಿ. ಗ್ರಾಮ ದೊಡ್ಡದಾದರೂ ಜನವಸತಿ ಪ್ರದೇಶ ತುಂಬಾ ಕಡಿಮೆ. ಗ್ರಾಮದ ಬಹುತೇಕ ಭಾಗವನ್ನು ಅರಣ್ಯವೇ ಆವರಿಸಿರುವುದರಿಂದ ಇಲ್ಲಿ ಸಮಸ್ಯೆಗಳೇ ಹೆಚ್ಚು. ಹೆಚ್ಚಿನ ಜನವಸತಿ ಪ್ರದೇಶಗಳು ಅರಣ್ಯ ಗಡಿಯಲ್ಲಿ ಮತ್ತು ಅದರ ಸುತ್ತಮುತ್ತಲು ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.

Advertisement

ಮಡಪ್ಪಾಡಿ ಸುಳ್ಯ ತಾಲೂಕಿನ ಗ್ರಾಮವಾದರೂ ಈ ಭಾಗದಲ್ಲಿ ಅಭಿವೃದ್ಧಿಯ ಕೊರತೆಯೇ ಎದ್ದು ಕಾಣುತ್ತಿದೆ. ಸಂಪದ್ಭರಿತ ಗ್ರಾಮವಾದರೂ ಇಲ್ಲಿ ರೈತರ ಸಮಸ್ಯೆಗಳೇ ಅಧಿಕ. ಹಿಂದೆಲ್ಲ ಅರಸರಂತೆ ಉಣ್ಣುತ್ತಿದ್ದ ಮಡಪ್ಪಾಡಿ ಜನ ಇತ್ತಿಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ, ಅಡಿಕೆಗೆ ಭಾದಿಸಿರುವ ಹಳದಿ ರೋಗದಿಂದ ಕಂಗಾಲಾಗಿ ಹೋಗಿದ್ದಾರೆ. ಗ್ರಾಮದಲ್ಲಿ ಜನ ಕೃಷಿಯನ್ನೇ ನಂಬಿಕೊಂಡು ಜೀವಿಸುತ್ತಿದ್ದು, ಕಾಡು ಪ್ರಾಣಿಗಳ ಹಾವಳಿ, ಆನೆ ದಾಳಿಗೆ ತಮ್ಮ ಕೃಷಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಸರಿಯಾಗಿಲ್ಲ ರಸ್ತೆ ಸಂಪರ್ಕ :

ತಾಲೂಕಿನ ಮೂಲೆಯಲ್ಲಿರುವ ಮಡಪ್ಪಾಡಿಗೆ ಇದುವರೆಗೂ ಸರಿಯಾದ ರಸ್ತೆ ಸಂಪರ್ಕವಿಲ್ಲ. ಮಡಪ್ಪಾಡಿಯನ್ನು ಸಂಪರ್ಕಿಸುವ ಸೇವಾಜೆ ಮಡಪ್ಪಾಡಿ-ರಸ್ತೆ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಪ್ರತೀ ದಿನ ಈ ಭಾಗದ ಜನ ನಗರಪ್ರದೇಶಗಳನ್ನು ಸಂಪರ್ಕಿಸಲು ಹರಸಾಹಸವನ್ನೇ ಪಡಬೇಕಿದೆ. ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಸಾರಿಗೆ ಸಂಪರ್ಕವೂ ಅಭಿವೃದ್ಧಿಯಾಗಿಲ್ಲ. ಹೆಚ್ಚಿನ ಜನರು ಓಡಾಟಕ್ಕಾಗಿ ಸ್ವಂತ ವಾಹನವನ್ನೇ ಬಳಸುತ್ತಿದ್ದು, ಅವುಗಳ ನಿರ್ವಹಣೆಯೇ ಬಲುದೊಡ್ಡ ಸವಾಲು.

ನಾಟ್‌ ರೀಚೇಬಲ್‌ :

Advertisement

ಸುಮಾರು 450 ಕುಟುಂಬಗಳಿರುವ ಮಡಪ್ಪಾಡಿ ಗ್ರಾಮದಲ್ಲಿ ಇರುವುದು ಒಂದೇ ಒಂದು ಟವರ್‌. ಅದೂ ಮಡಪ್ಪಾಡಿ ಪೇಟೆಯಿಂದ ಒಂದು ಕಿ.ಮೀ. ದೂರದಲ್ಲಿ. ಈ ಟವರ್‌ನಿಂದ ಯಾವಾಗಲೂ ಸಿಗ್ನಲ್‌ ಸಿಗುವುದು ಅಪರೂಪ. ಕರೆಂಟ್‌ ಇದ್ದರೆ ಮೊಬೈಲ್‌ ಸಿಗ್ನಲ್‌, ಇಲ್ಲದಿದ್ದರೆ ನಾಟ್‌ ರಿಚೇಬಲ್‌. ಇದರಿಂದ ತುರ್ತು ಸಂದರ್ಭಗಳಲ್ಲಿ ಜನ ಸಂಪರ್ಕ ಸಾಧಿಸಲು ಗುಡ್ಡ, ಮರ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಂತೂ ಆನ್‌ಲೈನ್‌ ತರಗತಿಗಳು ನಡೆಯುತ್ತಿರುವ ಕಾರಣ ಹಲವು ವಿದ್ಯಾರ್ಥಿಗಳನ್ನು ಪಾಲಕರು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ.

ಹಳದಿರೋಗ : ಮಡಪ್ಪಾಡಿ ಗ್ರಾಮದ ಬಹುತೇಕ ಕೃಷಿಕರ ಬೆಳೆ ಅಡಿಕೆ. ಆದರೆ ಗ್ರಾಮದಲ್ಲಿ ಶೇ. 90ರಷ್ಟು ಭಾಗ ಅಡಿಕೆ ಹಳದಿ ರೋಗದಿಂದ ನಾಶವಾಗಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಪರಿಹಾರ, ಭರವಸೆಗಳು ಗಗನ ಕುಸುಮವಾಗಿದ್ದು, ಇನ್ನೂ ರೈತರು ನಿರೀಕ್ಷೆಯಲ್ಲಿದ್ದಾರೆ. ಗ್ರಾಮದ ಪೂಂಬಾಡಿ, ಗೋಳಾÂಡಿ, ಶೀರಡ್ಕ, ಕೇವಳ ಭಾಗಗಳಲ್ಲಿ ಅಡಿಕೆ ಸಂಪೂರ್ಣ ನಾಶವಾಗಿದ್ದು, ಜನ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ.

ನಕ್ಸಲ್‌ ಬಾಧಿತ ಗ್ರಾಮ :

ಮೂರು ವರ್ಷಗಳ ಹಿಂದೆ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಪ್ರದೇಶದಲ್ಲಿ ನಕ್ಸಲರ ಹೆಜ್ಜೆ ಗುರುತುಗಳು ಕಂಡಿದ್ದವು. ಈ ಸಂದರ್ಭದಲ್ಲಿ ಮಡಪ್ಪಾಡಿ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಅದಾದ ಬಳಿಕ ಮಡಪ್ಪಾಡಿ ಮತ್ತದೇ ತನ್ನ ಹಳೆಸ್ಥಿತಿಗೆ ತಲುಪಿದೆ. ಗ್ರಾಮದ ಜನರಿಗೆ ನೀಡಿದ ಭರವಸೆಗಳು ಕಮರಿ ಹೋಗಿದ್ದು, ಜನ ಇನ್ನೂ ಸೂಕ್ತ ಕ್ರಮ ಮತ್ತು ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ.

 

ಇತರ ಸಮಸ್ಯೆಗಳು

  • ತುರ್ತು ಆರೋಗ್ಯ ಸಮಸ್ಯೆಗಳಿಗೆ ದೂರದ ಗುತ್ತಿಗಾರು ಅಥವಾ ಸುಳ್ಯವನ್ನೇ ಅವಲಂಬಿಸಬೇಕಿದೆ.
  • ಮಡಪ್ಪಾಡಿ ಗ್ರಾಮ ಸುಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ 35 ಕಿ.ಮೀ. ದೂರದ ಸುಳ್ಯದಿಂದಲೇ ಪೊಲೀಸರು ಬರಬೇಕಿದೆ.
  • ಹಾಡಿಕಲ್ಲು ಕಿ.ಪ್ರಾ. ಶಾಲೆಗೆ ಶಿಕ್ಷಕರೇ ಸರಿಯಾಗಿ ಸಿಗದಿರುವುದು ಮತ್ತು ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವುದು.
  • ಮಳೆಗಾಲದಲ್ಲಿ ಮರಗಳು ಮುರಿಯುವುದರಿಂದ ಕಾಡಂಚಿನ ಜನವಸತಿ ಪ್ರದೇಶಗಳಿÉ ಆಗಾಗ್ಗೆ ಕೈಕೊಡುವ ವಿದ್ಯುತ್‌ ನಿಂದ ಸಮಸ್ಯೆ
  • ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಕೋವಿ ಲೈಸನ್ಸ್ ಸಿಗದಿರುವುದು.
  • ಗ್ರಾಮದ ವ್ಯಾಪ್ತಿಗೆ ಒಳಪಡುವ ಕೊಲ್ಲಮೊಗ್ರು ಭಾಗದ ಜನ ಯಾವುದಾದರೂ ಸರಕಾರಿ ಕೆಲಸಗಳಿಗೆ 25 ಕಿ.ಮೀ. ಸುತ್ತು ಬಳಸಿ ಮಡಪ್ಪಾಡಿಗೆ ತಲುಪಬೇಕಿದೆ.

 

 ಕೃಷ್ಣಪ್ರಸಾದ್‌ ಕೋಲ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next