Advertisement

Guru Bhavana: ಅನುದಾನ ಕೊರತೆಗೆ ಮೇಲೆಳದ ಗುರು ಭವನ!

03:08 PM Sep 04, 2023 | Team Udayavani |

ಚಿಕ್ಕಬಳ್ಳಾಪುರ: ಹಲವು ವರ್ಷಗಳ ಕಾಲ ಪ್ರತಿಭಟನೆಯ ಹಾದಿ ಹಿಡಿದು ಗುರು ಭವನಕ್ಕೆ ಜಿಲ್ಲಾಡಳಿತದಿಂದ ನಿವೇಶನ ದಕ್ಕಿಸಿಕೊಂಡು ಜಿಲ್ಲೆಯ ಶಿಕ್ಷಕರಿಗೆ ಈಗ ಗುರು ಭವನ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತೆ ಹೋರಾಟ ನಡೆಸುವ ಅನಿರ್ವಾಯತೆ ಎದುರಾಗಿದೆ.

Advertisement

ಹೌದು, ನಗರದ ಹೊರ ವಲಯದ ಜಡಲತಿಮ್ಮನಹಳ್ಳಿಯಲ್ಲಿ ಗುರು ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಿ ಬರೊಬ್ಬರಿ 3 ವರ್ಷಗಳು ಕಳೆಯುತ್ತಾ ಬಂದರೂ, ಕಟ್ಟಡ ಕಾಮಗಾರಿಗೆ ಅನುದಾನದ ಕೊರತೆಯ ಪರಿಣಾಮ ಗುರುಭವನ ಸದ್ಯಕ್ಕೆ ಅಂತೂ ಮೇಲೆಳುವ ಲಕ್ಷಣಗಳು ಕಾಣುತ್ತಿಲ್ಲ. ಜಿಲ್ಲಾ ಕೇಂದ್ರವಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ಎಂದೂ ಗುರುಭವನ ನಿರ್ಮಾಣ ಆಗಬೇಕಿತ್ತಾದರೂ ಜಿಲ್ಲಾಡಳಿತ, ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಗುರುಭವನಕ್ಕೆ ನಿವೇಶನ ಪಡೆಯಲು ವರ್ಷಗಳು ಉರುಳಿದವು. ನಿವೇಶನ ಸಿಕ್ತು ಕಟ್ಟಡ ಕಾಮಗಾರಿ ಬೇಗ ಮುಗಿಯಬಹುದೆಂಬ ಶಿಕ್ಷಕರ ನಿರೀಕ್ಷೆ ಹುಸಿಯಾಗಿದ್ದು, ನಿರ್ಮಾಣ ಹಂತದಲ್ಲಿರುವ ಗುರು ಭವನಕ್ಕೆ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಳ್ಳುವಂತಾಗಿದೆ.

ಸದ್ಯ ತಳ ಮಟ್ಟದ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು ಮೊದಲ ಹಂತದ ಕಟ್ಟಡ ಕಾಮಗಾರಿಗೆ ಪಿಲ್ಲರ್‌ಗಳು ಹಾಕಿ ಬಿಡಲಾಗಿದೆ. ಗುರು ಭವನದಲ್ಲಿ ಸಮುದಾಯ ಭವನದ ಮಾದರಿಯಲ್ಲಿ ಶಿಕ್ಷಕರಿಗೆ ಅನುಕೂಲವಾಗುವಂತೆ ಬೃಹತ್‌ ಸಭಾಂಗಣ, ಸಾಕಷ್ಟು ಕೊಠಡಿಗಳು, ಶೌಚಾಲಯ ಸೌಲಭ್ಯವನ್ನು ಒದಗಿಸಲುವ ಯೋಜನೆ ರೂಪಿಸಲಾಗಿದೆ.

ನಿರ್ಮಿಸಿದರೆ ರಾಜ್ಯಕ್ಕೆ ಮಾದರಿ: ಇಡೀ ರಾಜ್ಯಕ್ಕೆ ಮಾದರಿ ಆಗುವ ಗುರು ಭವನಕ್ಕೆ ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಕೆ.ಸುಧಾಕರ್‌ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 3 ಕೋಟಿ ಜತೆಗೆ ಸರ್ಕಾರದಿಂದ ಹೆಚ್ಚುವರಿಯಾಗಿ 2 ಕೋಟಿ ಅನುದಾನ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದ್ದರು. ಆದರೆ ಕಾಮಗಾರಿ ಆರಂಭದಲ್ಲಿ ಒಂದು ವರ್ಷ ಭರದಿಂದ ಸಾಗಿದರೂ ಈಗ ಅನುದಾನದ ಅಲಭ್ಯತೆಯ ಪರಿಣಾಮ ಕಾಮಗಾರಿ ಸದ್ದಿಲ್ಲದೇ ನಿಂತು ಹೋಗಿದ್ದು, ಸರ್ಕಾರ ಸದ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಹಣಕಾಸು ಸೌಲಭ್ಯ ಒದಗಿಸಲು ಪರದಾಡುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಆಗಬೇಕಿದ್ದ ಗುರು ಭವನಕ್ಕೆ ಅನುದಾನ ಒದಗಿಸುತ್ತಾ? ಈ ದಿಕ್ಕಿನಲ್ಲಿ ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಗಮನ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಗುರುಭವನ ನಿವೇಶನಕ್ಕಾಗಿ ದಶಕಗಳ ಹೋರಾಟ!: ವಿಪರ್ಯಾಸದ ಸಂಗತಿಯೆಂದರೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ರೂಪಗೊಂಡರೂ ಹಲವು ವರ್ಷಗಳ ಕಾಲ ನಗರದಲ್ಲಿ ಗುರುಭವನಕ್ಕೆ ಸೂಕ್ತ ನಿವೇಶನ ಸಿಕ್ಕಿರಲಿಲ್ಲ. ಅನೇಕ ವರ್ಷಗಳ ಕಾಲ ಗುರು ಭವನ ನಿರ್ಮಾಣಕ್ಕೆಂದು ನಿವೇಶನ ಒದಗಿಸುವಂತೆ ಶಿಕ್ಷಕರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕೊನೆಗೂ ಜಿಲ್ಲಾಡಳಿತ 2019 ರಲ್ಲಿ ಜಡಲತಿಮ್ಮನಹಳ್ಳಿ ಕೈಗಾರಿಕಾ ಪ್ರದೇಶದ ಸಮೀಪ ಗುರು ಭವನಕ್ಕೆ ನಿವೇಶನ ಕೊಟ್ಟಿತ್ತು. 2020 ರಲ್ಲಿ ಆಗಿನ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಗುರು ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ದಶಕಗಳ ಗುರು ಭವನದ ಕನಸಿಗೆ ಶ್ರೀಕಾರ ಹಾಡಿದರು. ಆದರೆ ಈಗ ಅನುದಾನದ ಕೊರತೆಯಿಂದ ಆರೇಳು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಗುರುಭವನ ಕಾಮಗಾರಿ ಮುಗಿಸಲು ಮತ್ತೆ ಶಿಕ್ಷಕರು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣ ಆದರೂ ಅಚ್ಚರಿ ಇಲ್ಲ.

Advertisement

ನಾನು ಹೊಸದಾಗಿ ಬಂದಿದ್ದೇನೆ. ಗುರು ಭವನದ ಕಡತ ನಾನು ಇನ್ನೂ ಪರಿಶೀಲಿಸಿಲ್ಲ. ಶಿಕ್ಷಕರ ಸಂಘದ ಪ್ರತಿನಿಧಿಗಳು ಹೇಳಿರುವ ಪ್ರಕಾರ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆಯೆಂಬ ಮಾಹಿತಿ ಇದೆ. ಇನ್ನೂ ಸರ್ಕಾರದಿಂದ 1.83 ಕೋಟಿ ಅನುದಾನ ಬಿಡುಗಡೆ ಬಾಕಿ ಇದೆ. -ಬೈಲಾ ಅಂಜಿನಪ್ಪ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಗುರುಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸುಮಾರು 2 ಕೋಟಿಯಷ್ಟು ಕಾಮಗಾರಿ ನಡೆದಿದೆ. ಆದರೆ ಇನ್ನೂ 3 ಕೋಟಿಯಷ್ಟು ಅನುದಾನ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ. ಕ್ಷೇತ್ರದ ಶಾಸಕರಿಗೆ, ಸಂಸದರಿಗೆ, ಸಚಿವರಿಗೆ ಹಾಗೂ ವಿಧಾನ ಪರಿಷತ್ತು ಸದಸ್ಯರಿಗೆ ಅನುದಾನ ಕೋರಿ ಮನವಿ ಸಲ್ಲಿಸಿದ್ದೇವೆ. ಅನುದಾನ ಕೊಡುವ ಭರವಸೆ ಸಿಕ್ಕಿದೆ. ಅನುದಾನ ಸಿಕ್ಕಿದ್ದರೆ ಇಷ್ಟೊತ್ತಿಗಾಗಲೇ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. -ಎ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಚಿಕ್ಕಬಳ್ಳಾಪುರ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next