Advertisement

ಮಟಕರೆಯಲ್ಲಿ ಶವಗಳ ಸಂಸ್ಕಾರಕ್ಕಿಲ್ಲ ಸ್ಮಶಾನ!

04:12 PM May 07, 2022 | Team Udayavani |

ಎಚ್‌.ಡಿ.ಕೋಟೆ: ಗುಂಡಿ ತೆಗೆದಾಗೆಲ್ಲಾ ಬಹುತೇಕ ಅಸ್ತಿಪಂಜರಗಳೇ ದೊರೆಯುತ್ತವೆ. ನದಿ ಪಾತ್ರದಲ್ಲಿ ಪ್ರವಾಹ ಬಂತೆಂದರೆ ಹೂತ್ತಿಟ್ಟ ಹೆಣಗಳೇ ಮೇಲೆದ್ದು ಬರುತ್ತವೆ. ಇದು ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 5 ಕಿ.ಮೀ. ಅಂತರದಲ್ಲಿರುವ ಎಚ್‌.ಮಟಕರೆ ಗ್ರಾಮದಲ್ಲಿ ಕಂಡು ಬರುವ ದೃಶ್ಯ.

Advertisement

ಎಚ್‌.ಮಟಕೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಸೂಕ್ತ ಸ್ಥಳವಿಲ್ಲದ ಕಾರಣ ಪ್ರತಿ ಬಾರಿ ಹೆಣಗಳನ್ನು ಹೂಳಬೇಕಾದರೆ ಕಪಿಲಾ ನದಿ ತೀರದಲ್ಲೇ ಹೂಳಬೇಕು. ನದಿಯಿಂದ ಪ್ರವಾಹ ಬಂದರೆ ಶವಸಂಸ್ಕಾರ ಮಾಡಿದ ಜಾಗದ ಗುರುತೇ ಸಿಗೋಲ್ಲ.

ಹಲವಾರು ಬಾರಿ ಶವಸಂಸ್ಕಾರಕ್ಕೆ ಗುಂಡಿ ತೆಗೆಯುವಾಗ ಮೊದಲೇ ಹೂತ್ತಿದ್ದ ಮೃತದೇಹಗಳ ಅಸ್ತಿಪಂಜರ ದೊರೆತಿರುವ ನಿದರ್ಶನಗಳು ಸಾಕಷ್ಟಿವೆ. ಮಳೆಗಾಲದಲ್ಲಿ ನದಿ ತೀರದಲ್ಲಿ ಶವ ಸಾಗಿಸುವುದು ಕಷ್ಟಕರವಾಗುತ್ತದೆ. ಇನ್ನು ನದಿಯಲ್ಲಿ ನೀರು ತುಂಬಿಕೊಂಡಾಗ ನದಿ ದಡದಲ್ಲಿಯೂ ಜಾಗ ಇಲ್ಲದೆ ಶವ ಸಂಸ್ಕಾರಕ್ಕೆ ಪ್ರಯಾಸ ಪಡಬೇಕಾದ ಅನಿವಾರ್ಯತೆ ಒದಗುತ್ತದೆ. ಸಂಬಂಧಪಟ್ಟ ತಾಲೂಕು ಆಡಳಿತ ಕೂಡಲೆ ಇತ್ತ ಗಮನ ಹರಿಸಿ ಸ್ಮಶಾನದ ಜಾಗಕ್ಕೆ ಕ್ರಮವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಮಶಾನ ಜಾಗದಲ್ಲಿವೇ ವಾಸದ ಮನೆಗಳು: ಗ್ರಾಮ ದಲ್ಲಿ ಸ್ಮಶಾನದ ಜಾಗವನ್ನು ತಾಲೂಕು ಆಡಳಿತ ಗುರುತಿಸಿಕೊಟ್ಟಿದೆ. ಆದರೆ ಸ್ಮಶಾನ ಜಾಗದಲ್ಲಿ ಬಹುವರ್ಷ ಗಳಿಂದ ವಾಸದ ಮನೆಗಳಿದ್ದು, ಜಾಗ ಅತಿಕ್ರಮಣ ವಾಗಿದೆಯೇ ಅಥವಾ ಜಾಗವೇ ಅದಲು ಬದಲಾಗಿ ದೆಯೇ ಅನ್ನುವ ಅನುಮಾನ ಗ್ರಾಮಸ್ತರನ್ನು ಕಾಡುತ್ತಿದೆ. ಗುಂಡಿಯಿಂದ ಮೇಲೆ ಬರುವ ಶವಗಳು: ಕೆರೆ ತೀರ ದಲ್ಲಿ ಮಳೆಗಾಲ ಹೊರತು ಪಡಿಸಿ ಇನ್ನುಳಿದ ಕಾಲದಲ್ಲಿ ಶವಗಳ ಸಂಸ್ಕಾರ ಮಾಡಲಾಗುತ್ತದೆ. ಮಳೆ ಆರಂಭ ಗೊಂಡು ನದಿಯಲ್ಲಿ ಹೆಚ್ಚಿನ ನೀರು ತುಂಬಿ ಹರಿದಾಗ ಹೂತ್ತಿಟ್ಟ ಶವಗಳು ಗುಂಡಿಯಿಂದ ಹೊರಬಂದಿರುವ ಸಾಕಷ್ಟು ನಿದರ್ಶನಗಳಿವೆ ಅನ್ನುವ ಮಾತುಗಳು ಗ್ರಾಮಸ್ಥರಿಂದ ವ್ಯಾಪಕವಾಗಿ ಕೇಳಿ ಬರುತ್ತವೆ.

ಸತ್ತ ವ್ಯಕ್ತಿ ಆತ್ಮಕ್ಕೆ ಮುಕ್ತಿ ಹೇಗೆ: ಜೀವಿತದ ಅವಧಿಯಲ್ಲಿ ಇಡೀ ಜೀವನ ಗೊಂದಲದ ಗೂಡಾಗಿ ಜಂಜಾಟದಲ್ಲಿ ಸಿಲುಕುವ ಮುನುಷ್ಯ ಇಹಲೋಕ ತ್ಯಜಿಸಿದಾಗ ಆತನ ಆತ್ಮಕ್ಕೆ ಮುಕ್ತಿ ದೊರೆಯಬೇಕೆಂದರೆ ಸಂಪ್ರದಾಯ ಬದ್ಧವಾಗಿ ಶವಸಂಸ್ಕಾರ ನೆರವೇರಬೇಕು ಅನ್ನುವುದು ನಂಬಿಕೆ. ಚಿರನಿದ್ದೆಗೆ ಜಾರಿದ ಮೃತದೇಹ ಹೂಳುವುದಕ್ಕೂ ಜಾಗ ಇಲ್ಲದೆ ಅರೆಬರೆಯಾಗಿ ಮಣ್ಣಲ್ಲಿ ಮಣ್ಣು ಮಾಡಿದರೂ ಮೃತದೇಹ ಹೊರ ಬಂದು ಗೊಂದಲಕ್ಕೆ ಕಾರಣವಾಗುತ್ತಿದೆ ಅಂದಾಗ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಲಭಿಸೋಲ್ಲ ಅನ್ನುವುದು ಹಿಂದೂ ಸಂಪ್ರದಾಯ. ಕೂಡಲೇ ಸಂಬಂಧ ಪಟ್ಟ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಎಚ್‌.ಮಟಕೆರೆ ಗ್ರಾಮದಲ್ಲಿ ಸ್ಮಶಾನದ ಜಾಗ ಗುರುತಿಸಿ ಚಿರನಿದ್ದೆಗೆ ಜಾರುವ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಎಚ್‌.ಮಟಕೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಲ ವಿಲ್ಲದೇ ಕಪಿಲಾ ನದಿ ತೀರದಲ್ಲಿ ಶವಗಳ ಸಂಸ್ಕಾರ ನೆರವೇರಿಸುತ್ತಿದ್ದಾರೆ. ಕೂಡಲೆ ಒತ್ತುವರಿ ಯಾಗಿರುವ ಸರ್ಕಾರಿ ಜಾಗ ಗುರುತಿಸಿ ತುರ್ತಾಗಿ ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಮಶಾನದ ಜಾಗ ಮಂಜೂರು ಮಾಡಲು ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. -ರತ್ನಂಬಿಕಾ, ತಹಶೀಲ್ದಾರ್‌

ಗ್ರಾಮದಲ್ಲಿ ಸ್ಮಶಾನವಿಲ್ಲದೇ ಮಳೆಯಾಗಲಿ, ಬಿಸಿಲಾಗಲಿ ಶವಗಳನ್ನು ನದಿ ತೀರದಲ್ಲೇ ಸಂಸ್ಕಾರ ಮಾಡಬೇಕು. ಮಳೆಗಾಲದಲ್ಲಿ ಹಲವು ಬಾರಿ ಹೂತ ಹೆಣಗಳು ಮೇಲೆ ಬಂದಿರುವ ಮತ್ತು ಮೃತದೇಹಗಳ ಅಸ್ತಿಪಂಜರಗಳು ಕಾಣಿಸಿಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಕೂಡಲೆ ತಾಲೂಕು ಸ್ಮಶಾನಕ್ಕೆ ಜಾಗ ನೀಡಿ ಶಾಶ್ವತ ಪರಿಹಾರ ನೀಡಬೇಕು. -ಬೈರಾಜು, ಗ್ರಾಮಸ್ಥ

 

– ಎಚ್‌.ಬಿ.ಬಸವರಾಜು.

Advertisement

Udayavani is now on Telegram. Click here to join our channel and stay updated with the latest news.

Next