ಮಣಿಪಾಲ: ಕಟ್ಟಡ ಕಾಮಗಾರಿ ವೇಳೆ ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕುಕ್ಕೆಹಳ್ಳಿಯ ರಘುರಾಮ ಕುಲಾಲ್ (50) ಸಾವನ್ನಪ್ಪಿರುವವರು.
ಮಣಿಪಾಲ ಈಶ್ವರನಗರದಲ್ಲಿರುವ ಕಟ್ಟಡವೊಂದರ 4ನೇ ಮಹಡಿಯ ಕೆಲಸ ನಡೆಯುತ್ತಿದ್ದು, ಒಂದು ತಿಂಗಳಿನಿಂದ 10 ಮಂದಿ ಕೆಲಸ ಮಾಡುತ್ತಿದ್ದರು.
ಮೃತ ರಘುರಾಮ ಹಾಗೂ ಅವರ ಸಹೋದರ ಪದ್ಮನಾಭ ಅವರೂ ಈ ತಂಡದಲ್ಲಿದ್ದರು. ಮೇ 23ರಂದು ರಘುರಾಮ ಕುಲಾಲ್ ಅವರು 4ನೇ ಮಹಡಿಯ ಹೊರಗಡೆ ಗೋಡೆಯ ಗಾರೆ ಕೆಲಸ ಮಾಡುತ್ತಿದ್ದರು.
ಈ ವೇಳೆ ಸರಿಯಾದ ಸುರಕ್ಷತ ಕ್ರಮಗಳನ್ನು ಕಟ್ಟಡದ ಮಾಲಕರು ಹಾಗೂ ಗುತ್ತಿಗೆದಾರರು ವಹಿಸದ ಕಾರಣ ರಘುರಾಮ ಅವರು ಕಟ್ಟಡದ ಹೊರಭಾಗದಲ್ಲಿದ್ದ ಪ್ಯಾರಾಪೀಟ್ ಮೇಲೆ ಕಾಲು ಇಡುವಾಗ ಕಾಲು ಜಾರಿ ಕೆಳಕ್ಕೆ 50 ಅಡಿ ಆಳಕ್ಕೆ ಬಿದ್ದಿದ್ದರು.
ಕೂಡಲೇ ಅವರ ಸಹೋದರ ಪದ್ಮನಾಭ ಹಾಗೂ ಕೆಲಸದವರು ಕೆಳಕ್ಕೆ ಹೋಗಿ ನೋಡಿದಾಗ ರಘುರಾಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ವೈದ್ಯರು ಪರೀಕ್ಷಿಸಿ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.